ಕಸದ ಕೇಂದ್ರವಾದ ಸಕಲೇಶಪುರದ ಸುಭಾಷ್ ಮೈದಾನ
ಸಕಲೇಶಪುರ : ಕಸದ ಕೇಂದ್ರವಾದ ಸಕಲೇಶಪುರದ ಸುಭಾಷ್ ಮೈದಾನ’’ ಎಂಬ ವಾರ್ತಾಭಾರತಿ ಪತ್ರಿಕಾ ವರದಿ ಆದರಿಸಿ ರಾಜ್ಯ ಸರಕಾರ ಸಮಸ್ಯೆ ಬಗೆಹರಿಸಲು ಪುರಸಭೆಗೆ ಆದೇಶಿಸಿತ್ತು, ಆದರೆ ಇದು ಕಾರ್ಯಗತವಾಗಲಿಲ್ಲ.
ತಳಮಟ್ಟದಲ್ಲಿ ಸಮಸ್ಯೆ ಪರಿಹರಿಸಬೇಕಾದ ಪುರಸಭೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಸಿದ್ದರಿಲ್ಲದ ಕಾರಣ ಸರಕಾರ ಆದೇಶ ಇವರಿಗೆ ಕಸಕ್ಕೆ ಸಮಾನವಾಗಿದೆ. ವಾರ್ತಾಭಾರತಿಯಲ್ಲಿ 20 ಎಪ್ರಿಲ್ 2025ರಂದು ಪ್ರಕಟವಾದ ಸುದ್ದಿಗೆ ರಾಜ್ಯ ಸರಕಾರದ ಕರ್ತವ್ಯಾಧಿಕಾರಿಗಳು ಪತ್ರ ಸಂಖ್ಯೆ ಸಿಎಂ/ಡಬ್ಲ್ಯೂಎಸ್ಡಿ/ಯುಡಿ/ಎ77/2025 (ದಿ.21-04-2025) ಮೂಲಕ ಪುರಸಭೆಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ವರದಿ ಯಲ್ಲಿ ಉಲ್ಲೇಖಿಸಿದ ವಾಸ್ತವಾಂಶಗಳನ್ನು ಪರಿಶೀಲಿಸಿ, ಸಮಸ್ಯೆ ಪರಿಹಾರ ಕ್ರಮಗಳನ್ನು ಕೈಗೊಂಡ ನಂತರ ಅನುಪಾಲನಾ ವರದಿಯನ್ನು ಸಚಿವ ಸಂಪುಟ ಕಚೇರಿಗೆ ಸಲ್ಲಿಸಲು ಆದೇಶವೂ ನೀಡಲಾಗಿತ್ತು.
ಆದರೆ, ಈ ಸೂಚನೆಗಳು ಕೇವಲ ಕಾಗದದಲ್ಲೇ ಸೀಮಿತವಾಗಿದೆ, ಕ್ರೀಡಾಂಗಣ ಮೈದಾನ ಸುತ್ತಮುತ್ತ ಪರಿಸ್ಥಿತಿ ಇನ್ನು ಗಬ್ಬುನಾರುತ್ತಿದೆ. ದಶಕಗಳ ಹಿಂದೆ ಈ ಪ್ರದೇಶ ಜಾತ್ರೆ, ಸಂತೆ, ಸಾರ್ವಜನಿಕ ಕಾರ್ಯಕ್ರಮಗಳು ಈಗ ವಿವಿಧ ಮಾದರಿಯ ಮದ್ಯಮ ವರ್ಗದ ಉದ್ದಿಮೆದಾರರ ಕೇಂದ್ರವಾಗಿತ್ತು. ಈಗ ಕಸದ ತಾಣವಾಗಿ ಮಾರ್ಪಟ್ಟಿದೆ. ದುರ್ವಾಸನೆ, ಕೀಟಗಳ ಕಾಟ ಹೆಚ್ಚಳವಾಗಿದೆ, ಇಲ್ಲಿಯ ನಾಗರಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಮೈದಾನದ ಸುತ್ತಮುತ್ತ ವ್ಯಾಪಾರ ನಡೆಸುವವರು, ವಾಹನ ನಿಲುಗಡೆ ಮಾಡಿಕೊಂಡಿರುವವರು ಈ ದುರ್ವಾಸನೆಯೊಂದಿಗೆ ರಾಜಿಮಾಡಿಕೊಂಡು ಅನಿವಾರ್ಯ ವಾಗಿ ಕುಟುಂಬದ ಹೊಟ್ಟೆ ಪಾಡಿಗೆ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.
ಪುರಸಭೆ ಸರಕಾರಕ್ಕೆ ಈ ಹಿಂದೆ ನೀಡಿದ ಪ್ರತಿಕ್ರಿಯೆ: ಮಾಳಲಿ ಗ್ರಾಮದಲ್ಲಿನ 2ನೇ ಹಂತದ ತ್ಯಾಜ್ಯ ನಿರ್ವಹಣಾ ಕೇಂದ್ರದ ಕಾಮಗಾರಿಗಳು ಪ್ರಗತಿಯಲ್ಲಿವೆ ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ. ಹಳೆಯ ಕಸದ ವಿಲೇವಾರಿಗಾಗಿ ಕ್ಲಸ್ಟರ್ ಮಾದರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಮೊದಲ ಟೆಂಡರ್ ಅನರ್ಹಗೊಂಡಿದ್ದು, ಎರಡನೇ ಟೆಂಡರ್ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ವಿವರ ನೀಡಿತ್ತು. ಆದರೆ ಮೈದಾನದಲ್ಲಿರುವ ಕಸದ ರಾಶಿ ಯಥಾಸ್ಥಿತಿಯಲ್ಲಿದೆ.
ಪುರಸಭೆ ಮುಖ್ಯಾಧಿಕಾರಿ ಮಹೇಶ್ವರ್ ಹೇಳುವುದೇನು?
ಮುಖ್ಯಮಂತ್ರಿಯವರ ಕಚೇರಿಯಿಂದ ಬಂದ ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಶೀಘ್ರದಲ್ಲೇ ವೈಜ್ಞಾನಿಕ ವಿಲೇವಾರಿ ಪ್ರಕ್ರಿಯೆ ಆರಂಭವಾಗುತ್ತದೆ.’’ ಆದರೆ ‘ಶೀಘ್ರದಲ್ಲೇ’ ಎಂಬ ಪದ ದಿನನಿತ್ಯ ಇವರಿಂದ ಪುನರಾವರ್ತನೆಯಾಗುತ್ತಿದೆ. ಕಸದ ಪ್ರದೇಶದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.
ವಾರ್ತಾಭಾರತಿ ಹಿಂದಿನ ವರದಿ ಸಂಬಂಧಿಸಿದಂತೆ ಪ್ರತಿ ಕ್ರಿಯಿಸುತ್ತಾ ಶಾಸಕ ಸಿಮೆಂಟ್ ಮಂಜು ಹೀಗೆ ಹೇಳಿದ್ದರು, ಪತ್ರಿಕಾ ವರದಿ ಆಧರಿಸಿ ಸರಕಾರ ಈಗಾಗಲೇ ಸೂಚನೆ ನೀಡಿರುವುದು ಸಂತೋಷದ ವಿಷಯ. ಸಚಿವರೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ. ಸ್ಪಂದನ ಸಿಗದಿದ್ದರೆ ಡಿಸಿ ಕಚೇರಿಯ ಎದುರು ಧರಣಿ ನಡೆಸುತ್ತೇನೆ.’’ ಹೀಗೆ ಹೇಳಿ ಆರು ತಿಂಗಳು ಕಳೆದರು ಏನೂ ಮಾಡಲಿಲ್ಲ.
ನಮಗೆ ಇದು ಹೆಮ್ಮೆ ಪ್ರದೇಶವಾಗಿತ್ತು . ಈಗ ಹತ್ತಿರ ಹೋಗಲು ಭಯ. ಆರೋಗ್ಯಕ್ಕೆ ಹಾನಿ, ದುರ್ವಾಸನೆ. ಸಾರ್ವಜನಿಕರ ಸಂಕಷ್ಟ ಯಾರಿಗೇಕೆ ಅರ್ಥವಾಗುವುದಿಲ್ಲ? ಸರಕಾರ ಸೂಚನೆ ಕೊಟ್ಟರೂ ಪುರಸಭೆ ಪಾಲಿಸುವುದಿಲ್ಲ ಏಕೆ ?
-ರವಿ ಕುಮಾರ್, ಅಧ್ಯಕ್ಷ, ನಾಗರೀಕ ಸಂರಕ್ಷಣಾ ವೇದಿಕೆ