ಜಾತಿಯೆಂಬ ವಾಸ್ತವ ಮತ್ತು ಒಂದು ಸ್ವೀಕೃತಿಗೆ ಕಾಯುತ್ತಿರುವ ಜನರು...
ಊರ ಹೊರಗಿದ್ದ ‘ಕಾಲೋನಿ’ಯ ಆಚೆ ಊರಂಚಿನಲ್ಲಿ ಅಲ್ಲೊಂದು ಇಲ್ಲೊಂದರಂತೆ ಇದ್ದ ಮನೆ ಖರೀದಿಸಿ ಅಲ್ಲಿಗೆ ಬರುವುದಕ್ಕೆ ಶುರುಮಾಡಿ ಕೆಲವು ತಿಂಗಳುಗಳಾಗಿತ್ತು. ಮನೆಯಂಗಳದಲ್ಲಿ ಪುಸ್ತಕವೊಂದನ್ನು ಓದುತ್ತಾ ಕುಳಿತಿದ್ದಾಗ ಆ ವ್ಯಕ್ತಿ ಬಂದರು. ಗರಿಗರಿಯಾದ ಹೊಸ ಬಟ್ಟೆ ತೊಟ್ಟುಕೊಂಡಿದ್ದರು. ಅವರ ಅಣ್ಣನ ಮಗನದು ಮದುವೆ-ಕೊಳ್ಳೇಗಾಲದಲ್ಲಿ. ಊರಿಂದ ಆಗ ಬಸ್ಸು ಹೊರಡುವುದರಲ್ಲಿತ್ತು. ಅಷ್ಟು ದೂರದ ಮದುವೆಗೆ ಕರೆಯಲು ಬಂದಿರಲಿಲ್ಲ. ಮುಂದಿನ ರವಿವಾರ ಇಲ್ಲೇ ಇನ್ನೂರು ಅಡಿ ದೂರದಲ್ಲಿ ಅವರ ಅಣ್ಣ ಕಟ್ಟಿಸಿರುವ ಹೊಸ ಮನೆಯೊಂದರ ಮುಂದೆ ಕರ್ನರೆ(ಬೀಗರ ಊಟ)ಗೆ ಹೇಳಿ ಹೋಗಲು ಬಂದಿದ್ದರು. ಮುಂದಿನ ವಾರ ಊರಿಗೆ ಬಂದರೆ ಖಂಡಿತ ಬರುತ್ತೇನೆ ಎಂದು ಹೇಳಿದೆ.
ಕರ್ನರೆಯ ದಿನ ಹನ್ನೊಂದು ಗಂಟೆಯಷ್ಟು ಹೊತ್ತಿಗೆ ಮತ್ತೆ ಬಂದು ನೆನಪಿಸಿದರು. ‘‘ಬರುತ್ತೇನೆ ಬಿಡಿ ನೆನಪಿತ್ತು’’ ಎಂದು ಹೇಳಿದೆ. ಮಧ್ಯಾಹ್ನದ ಮೇಲೆ ಒಂದಷ್ಟು ಬೇರೆ ಕೆಲಸವಿತ್ತು, ಹಾಗಾಗಿ ಒಂದೂಕಾಲಷ್ಟು ಹೊತ್ತಿಗೆ ಕರ್ನರೆಗೆ ಹೋಗಿ ಊಟ ಮಾಡಿಕೊಂಡು ಹೊರಟುಬಿಡುವ ಎಂದುಕೊಂಡೆ. ಅವರ ಮನೆಯ ಬಳಿ ಹೋದೆ, ಇನ್ನೂ ಮುದ್ದೆ ತಿರುವುತ್ತಿದ್ದದ್ದು ರಸ್ತೆಯಿಂದಲೇ ಕಾಣಿಸುತ್ತಿತ್ತು. ಊಟಕ್ಕಿನ್ನೂ ಕುಳಿತಿರಲಿಲ್ಲ. ಹಾಗೇ ಕಣ್ಣಾಡಿಸಿದೆ. ನನ್ನನ್ನು ಎರಡೆರಡು ಸಲ ಕರೆದು ಹೋಗಿದ್ದವರೂ ಕಾಣಿಸಲಿಲ್ಲ. ಅವರನ್ನು ಬಿಟ್ಟರೆ ಅಲ್ಲಿದ್ದ ಇನ್ಯಾರ ಮುಖ ಪರಿಚಯವೂ ಇಲ್ಲ. ಏನೋ ಊಟ ಈಗಾಗಲೇ ಶುರುವಾಗಿಬಿಟ್ಟಿದ್ದರೆ ಹೋಗಿ ಕುಳಿತು ಊಟ ಮಾಡಿಕೊಂಡು ಹೊರಡಬಹುದಿತ್ತು. ಅವರಲ್ಲಿ ಇದ್ದರೋ ಇಲ್ಲವೋ ಅನ್ನೋದು ಮುಖ್ಯವಾಗಿರಲಿಲ್ಲ! ಈಗಲ್ಲಿ ಹೋಗಿ ಶಾಮಿಯಾನದ ಕೆಳಗೆ ಕೂರಬೇಕು. ಇದು ಯಾರು ಎಂದು ಗಮನಿಸುವ ಕುತೂಹಲದ ಕಣ್ಣುಗಳಿಗೆ ಆಹಾರವಾಗಬೇಕು. ಇದೆಲ್ಲ ಯಾಕೆ ಬೇಕು ಎಂದು ಹಾಗೇ ಹೊರಟುಬಿಟ್ಟೆ.
ಇದೆಲ್ಲ ಆಗಿ ವರ್ಷದ ಮೇಲೇ ಆಗಿರಬೇಕು. ಮತ್ತೊಂದು ರವಿವಾರ. ವ್ಯಕ್ತಿಯೊಬ್ಬರು ಮನೆಯ ಗೇಟು ಬದಿಗೆ ಸರಿಸಿ ಒಳಬಂದರು. ಏನೆಂದು ಕೇಳಿದೆ. ‘‘ಮಧ್ಯಾಹ್ನ ಒಂದ್ ಊಟ ಇಟ್ಕಂಡಿದೀವಿ, ನಮ್ ಅಣ್ಣನಿಗೆ ಎಪ್ಪತ್ತು ವರ್ಷ ತುಂಬಿರೋದಕ್ಕೆ, ಬರಬೇಕು’’ ಅಂದರು. ಎಲ್ಲಿ ಎಂದು ಕೇಳಿದ್ದಕ್ಕೆ ‘‘ಅದೇ ಇಲ್ಲಿ ಮುಂದೆ ಹೋದ್ರೆ ಬಲಕ್ಕೊಂದು ಮನೆ ಇದ್ಯಲ್ಲ’’ ಎಂದು ಅವರು ಹೇಳುವಾಗಲೇ ನನಗೆ ಇವರು ವರ್ಷದ ಹಿಂದೆ ಕರ್ನರೆಗೆ ಕರೆದಿದ್ದವರಲ್ಲವಾ ಎಂದು ಜ್ಞಾನೋದಯವಾಗಿದ್ದು! ಕಪ್ಪಿದ್ದ ಕೂದಲೆಲ್ಲಾ ಬೆಳ್ಳಗಾಗಿದ್ದರಿಂದ ಗುರುತು ಹತ್ತಲಿಲ್ಲ! ವರ್ಷದಲ್ಲಿ ಬೆಳ್ಳಗಾಗಿದ್ದಲ್ಲ, ಡೈ ಹಾಕಲು ಇವತ್ತು ಸಮಯ ಸಿಗಲಿಲ್ಲವಷ್ಟೇ!. ‘‘ಬರ್ತೀನಿ ಬಿಡಿ’’ ಅಂದಿದ್ದಕ್ಕೆ ‘‘ನೀವ್ ಕರ್ನರೆಗೂ ಬರ್ತೀನಿ ಅಂತ ಹೇಳಿ ಬರಲೇ ಇಲ್ಲ. ಈ ಸಲ ಅಡುಗೆಗೆ ಸಿಟಿಯಿಂದ ಭಟ್ಟರನ್ನೇ ಕರೆಸಿದ್ದೀವಿ, ನೀಟಾಗಿ ಮಾಡ್ಸಿದೀವಿ’’ ಅಂತೆಲ್ಲ ಅಂದಾಗ ನನಗೆ ಇದೇನು ಹೇಳುತ್ತಿ ದ್ದಾರಲ್ಲ ಇವರು ಎಂದು ಗೊಂದಲವುಂಟಾದರೂ ಅವರು ಹೇಳಲು ಹೊರಟ ವಿಷಯ ಸುಮಾರಾಗಿ ಅರ್ಥವಾಯಿತು. ‘‘ಅಯ್ಯೋ ಹೋದಸಲ ಬಂದಿದ್ದೆ. ನೀವೆಲ್ಲೂ ಕಾಣಲಿಲ್ಲ ಅಂತ ಹೊರಟುಬಿಟ್ಟೆ. ಕೆಲಸ ಇತ್ತು ಸ್ವಲ್ಪ ಅವತ್ತು. ಇವತ್ತು ಇಲ್ಲೇ ಇರ್ತೀನಿ, ಖಂಡಿತ ಬರ್ತೀನಿ ಬಿಡಿ’’ ಎಂದು ಹೇಳಿದೆ. ಅವರಿಗಿನ್ನೂ ಅನುಮಾನ. ಗೇಟಿನಿಂದ ಹೊರ ಹೋಗುವಾಗ ‘‘ನಿಮ್ಮ ನಂಬರ್ ಕೊಡಿ’’ ಅಂದರು. ಕಳೆದ ಸಲ ಅವರ ನಂಬರ್ ಫೋನ್ನಲ್ಲಿ ಸೇವ್ ಮಾಡಿ ಕೊಂಡಿದ್ದೆ. ಮಿಸ್ಡ್ಕಾಲ್ ಕೊಟ್ಟೆ. ‘‘ಮರೀದೆ ಬರ್ಬೇಕು’’ ಎಂದು ಮತ್ತೊಮ್ಮೆ ನೆನಪಿಸಿ ಹೊರಟರು. ನಾನು ಗೇಟು ಹಾಕುವಾಗ ಎದುರಿನಿಂದ ಕಾರೊಂದು ಬಂತು. ‘‘ಎಲ್ಲಿಗೆ ಹೊರಟೆ?’’ ಅಂತ ಕಾರಲ್ಲಿದ್ದವರು ಅವರನ್ನು ಕೇಳಿದರು. ‘‘ಕರೆದು ಬರ್ತೀನಿ’’ ಎಂದವರು ಹೇಳಿದ್ದಕ್ಕೆ ‘‘ನೀ ಎಷ್ಟು ಸಲ ಕರೆದ್ರೂ ಅವರು ಯಾರೂ ಬರಲ್ಲ. ಸುಮ್ನೆ ಕಾರತ್ತು, ಊರಲ್ಲಿ ಕರೆದು ಬರೋಣ’’ ಎಂದರು. ‘‘ನಾನು ಕರೆದು ಬರುತ್ತೇನೆ, ನೀವು ಹೋಗಿರಿ’’ ಎಂದು ಕೈ ಸನ್ನೆ ಮಾಡಿ ಹೊರಟರವರು. ಕಾರು ಊರಿನ ಜನರ ಬಾಯಲ್ಲಿ ‘ಕಾಲೋನಿ’ಯಾಗಿದ್ದ ಊರ ಕಡೆಗೆ ಹೊರಟಿತು.
ಊಟಕ್ಕೆ ಹೋಗುವುದೋ ಬಿಡುವುದೋ ಎಂಬ ಗೊಂದಲ ಉಂಟಾಗಿದ್ದಕ್ಕೆ ಜಾತಿ ಖಂಡಿತ ಕಾರಣವಾಗಿ ರಲಿಲ್ಲ. ಊರ ಕಡೆ ಊಟಕ್ಕೆ, ಅದೂ ರವಿವಾರ ಮಧ್ಯಾಹ್ನ ಊಟಕ್ಕೆ ಕರೆದರೆ ಮಾಂಸದಡುಗೆಯೇ ಇರುತ್ತದೆ. ‘ಭಟ್ಟ’ರನ್ನೇ ಕರೆಸಿದ್ದೇವೆ ಎಂದು ಬೇರೆ ಅವರು ಅಂದು ಗೊಂದಲ ಹೆಚ್ಚಿಸಿದ್ದರು. ಮನೆಯಲ್ಲಿ ಈಗಾಗಲೇ ಕೋಳಿ ಸಾರು ತಯಾರಾಗುತ್ತಿತ್ತು. ರವಿವಾರದ ದಿನ ಮನೆಯಲಿದ್ದ ಕೋಳಿ ಊಟ ಬಿಟ್ಟು ಬರೀ ತರಕಾರಿ ತಿನ್ನುವುದಾದರೂ ಹೇಗೆ? ‘ಭಟ್ಟ’ನೆನ್ನುವ ವಿಶೇಷಣ ಬಹಳಷ್ಟು ಸಲ ಜಾತಿ ಸೂಚಕವಾಗಿರದೆ ಅಡುಗೆ ತಯಾರು ಮಾಡುವವರ ವೃತ್ತಿ ಸೂಚಕವಾಗಿಯೂ ಬಳಸಲ್ಪಡುತ್ತದೆ. ‘‘ನಿನ್ನೆ ಸಂಜೆ ಮನೆ ಮುಂದೆ ಅಷ್ಟೊಂದೆಲ್ಲ ಸೊಪ್ಪು ಹರವಿಕೊಂಡಿದ್ರು, ಮಾಂಸದೂಟಾನೇ ಇರ್ತದೆ ಬಿಡಿ’’ ಎಂದು ಮನೆಯಲ್ಲಿ ಸ್ವಲ್ಪ ಧೈರ್ಯ ತುಂಬಿದರು. ಊಟಕ್ಕೆ ಹೋಗದಿದ್ದರೆ ‘‘ಊರಲ್ಲಿರುವ ಇತರ ಜನರಂತೆಯೇ ಈ ಯಪ್ಪಾನೂ’’ ಅಂತ ಬಯ್ಕಂಡು ಬೇಸರ ಪಟ್ಟುಕೊಳ್ಳುತ್ತಾರೆ. ವೆಜ್ಜೋ ನಾನ್ವೆಜ್ಜೋ ಹೋಗದೆ ಇರುವುದಂತೂ ತಪ್ಪು. ಅಕಸ್ಮಾತ್ ವೆಜ್ಜಾಗಿದ್ದರೆ ಅನ್ನುವ ಆತಂಕದಲ್ಲಿ ಅರ್ಧ ಲೋಟ ಕೋಳಿ ಸಾರು ಕುಡಿದು ಎರಡೇ ಎರಡು ತುಂಡು ಕೋಳಿ ಫ್ರೈ ತಿಂದು ಹೊರಟೆ. ಕರೆದವರು ಮನೆ ಮುಂದಿನ ಅಂಗಳದಲ್ಲೇ ಸಿಕ್ಕಿದರು. ಊಟವಿನ್ನೂ ಶುರುವಾಗಿರಲಿಲ್ಲ. ‘‘ಇನ್ನೊಂದು ಹತ್ತು ನಿಮಿಷ, ಶುರುಮಾಡಿಬಿಡ್ತೀವಿ’’ ಅಂದರು. ದೂರದಲ್ಲಿ ಬೇಯಿಸಿದ ಮೊಟ್ಟೆಯನ್ನು ಅರ್ಧಕ್ಕೆ ಕತ್ತರಿಸಿ ಅಗಲವಾದ ತಟ್ಟೆಯಲ್ಲಿ ಜೋಡಿಸಿಡುತ್ತಿದ್ದರು. ಅಲ್ಲಿಗೆ ಮಾಂಸದೂಟವೇ ಅಂತ ಖಾತ್ರಿಯಾಯ್ತಲ್ಲ, ಮನಸ್ಸಿಗೊಂದು ಸಮಾಧಾನ. ‘‘ಸರಿ, ಸ್ವಲ್ಪ ಕೆಲಸ ಇದೆ. ಇನ್ನರ್ಧ ಘಂಟೆ ಬಿಟ್ಟು ಬರ್ತೀನಿ’’ ಎಂದ್ಹೇಳಿ ಹೊರಟೆ. ‘‘ಮರೀದೆ ಬರಬೇಕು’’ ಎಂದು ಕರೆದವರ ಧ್ವನಿಯಲ್ಲಿ ಅನುಮಾನದ ಎಳೆಯಿದ್ದದ್ದು ಸುಳ್ಳಲ್ಲ.
ಹೇಳಿದಂತೆ ಅರ್ಧ ಘಂಟೆಯ ನಂತರ ಹೋದಾಗ ನನ್ನ ಕರೆದವರ ಮುಖದಲ್ಲಿ ಧನ್ಯತಾ ಭಾವ. ಇಂಜಿನಿಯರಿಂಗ್ ಮುಗಿಸಿ ಕೆಲಸ ಮಾಡುತ್ತಿರುವ, ಬೇರೆ ಬೇರೆ ಡಿಗ್ರಿ ಮುಗಿಸಿಕೊಂಡು ಸಹಕಾರಿ ಬ್ಯಾಂಕು, ಕೆಎಂಎಫ್ಡೈರಿ, ವಿಧಾನಸೌಧದಲ್ಲಿ ಕೆಲಸದಲ್ಲಿರುವ, ಬ್ಯುಸಿನೆಸ್ ಮಾಡುತ್ತಿರುವ, ಖಾಸಗಿ ವಲಯದಲ್ಲಿ ಮ್ಯಾನೇಜರ್ ಆಗಿರುವ ತಮ್ಮ ಬಂಧು ಬಳಗದವರನ್ನು ಪರಿಚಯಿಸಿದರು. ಪುಣ್ಯಕ್ಕೆ ನನ್ನ ಓರಗೆಯವರಾದ ‘ಹಳ್ಳಿ ಬಿಟ್ಟು’ ನಗರ ಸೇರಿರುವ ಅವರು ಯಾರಿಗೂ ‘ಕಾಲೋನಿಯ’ ಹೊರಗಿದ್ದ ಊರಿನಿಂದ ಬಂದ ನನ್ನ ಕಂಡು ಧನ್ಯತಾ ಭಾವ ಮೂಡಲಿಲ್ಲ. ಹೊಸ ಪರಿಚಯದವರೊಡನೆ ಎಷ್ಟು ಕಷ್ಟ ಸುಖ ಮಾತಾಡಬೇಕೋ ಅಷ್ಟು ಮಾತನಾಡಿ ಊಟಕ್ಕೆ ಕೂರಿಸಿದರು.
‘ಕಾಲೋನಿಯ’ ಹೊರಗಿದ್ದ ಊರಿನಿಂದ ಯಾರೆಂದರೆ ಯಾರೂ ಬಂದಿರಲಿಲ್ಲ. ಇದೇ ಊರಿನಲ್ಲಿ ಹುಟ್ಟಿ ಬೆಳೆದು ವಾಸಿಸುತ್ತಿದ್ದರೆ ಬಹುಶಃ ನಾನೂ ಬರುತ್ತಿರಲಿಲ್ಲವೇನೋ ಎಂದು ಯೋಚಿಸುತ್ತ ಮೊಟ್ಟೆ, ಕೋಳಿ ಸಾರು, ಬೋಟಿ ಗೊಜ್ಜು, ಮುದ್ದೆ, ಎರಡು ಪೀಸ್ ಕಬಾಬು, ಬಿರಿಯಾನಿ, ಅನ್ನ, ತಿಳಿಸಾರು, ರುಚಿಯಾಗಿದ್ದ ಪಾಯಸ ವನ್ನು ಇನ್ನೊಂದು ಕಪ್ ಕೇಳಿ ಹಾಕಿಸಿಕೊಂಡು ತಿಂದು ಮುಗಿಸಿ ಊರ ಆಚೆಗಿದ್ದ ‘ಕಾಲೋನಿ’ಯ ಹೊರಗಿದ್ದ ಊರಂಚಿನ ಮನೆಯ ಕಡೆಗೆ ಹೊರಟೆ.