×
Ad

ರಿಂಗ್ ರಸ್ತೆಯಲ್ಲಿ ನಿತ್ಯವೂ ಟ್ರಾಫಿಕ್‌ಜಾಮ್

ರಸ್ತೆ ದಾಟಲು ಸರ್ಕಸ್, ಜನರಿಗೆ ದಿನನಿತ್ಯ ಸಂಕಷ್ಟ

Update: 2026-02-12 14:48 IST

ವಿಜಯಪುರ: ನಗರದ ಸಾಯಿಪಾರ್ಕ್ ಬಳಿಯ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿದಿನವೂ ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ರಾಷ್ಟ್ರೀಯ ಹೆದ್ದಾರಿಯಿಂದ ಸ್ವಲ್ಪ ದೂರದಲ್ಲಿರುವ ಸಾಯಿಪಾರ್ಕ್ ಬಳಿಯ ರಿಂಗ್ ರಸ್ತೆಯಲ್ಲಿ ಯಾವುದೇ ರೀತಿಯ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಸಂಚಾರದ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸಾಯಿಪಾರ್ಕ್, ಲಕ್ಷ್ಮೀನಗರ, ಇಕ್ತಾ ನಗರ, ಇಬ್ರಾಹಿಂಪುರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ರಿಂಗ್ ರಸ್ತೆ ದಾಟಿ ಮುಂದಕ್ಕೆ ಸಾಗಲು ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಿಂಗ್ ರಸ್ತೆಯಿಂದ ಬರುವ ವೇಗದ ವಾಹನಗಳ ಮಧ್ಯೆ ರಸ್ತೆ ದಾಟುವುದು ಅಪಾಯಕಾರಿಯಾಗಿ ಪರಿಣಮಿಸಿದ್ದು, ಪಾದಚಾರಿಗಳು ಜೀವದ ಹಂಗು ತೊರೆದು ಸಂಚರಿಸಬೇಕಾಗಿದೆ.

ಸಂಚಾರ ನಿಯಂತ್ರಣ ವ್ಯವಸ್ಥೆಯ ವೈಫಲ್ಯದಿಂದ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿದ್ದು, ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಕಳೆದ ವರ್ಷ ಇದೇ ಸ್ಥಳದಲ್ಲಿ ರಸ್ತೆ ದಾಟುವ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿರುವುದರಿಂದ, ಸ್ಥಳೀಯರಲ್ಲಿ ಆತಂಕವೂ ಹೆಚ್ಚಾಗಿದೆ.

ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ವಾಹನದಟ್ಟಣೆ ತಡೆಯುವ ಯಾವುದೇ ಪ್ರಯತ್ನಗಳೂ ಕಂಡುಬರುತ್ತಿಲ್ಲ. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ತಮ್ಮದೇ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ರಸ್ತೆ ಮೂಲಕ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಸಂಚರಿಸುತ್ತಿದ್ದರೂ, ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನವಾಗಿದೆ.

ಇಷ್ಟೊಂದು ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್‌ನಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದರೂ, ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಿ, ಸಂಚಾರ ಪೊಲೀಸ್‌ರ ನಿಯೋಜಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಸ್ತೆ ದಾಟಲು ವಿದ್ಯಾರ್ಥಿಗಳ ಸಾಹಸ

ಸಾಯಿ ಪಾರ್ಕ್ ಬಳಿಯ ವಿವಿಧ ಶಾಲೆಗಳು ಇವೆ. ಸಾವಿರಾರು ವಿದ್ಯಾರ್ಥಿಗಳು ಈ ರಿಂಗ್ ರೋಡ್ ದಾಟಬೇಕಿದೆ. ಆದರೆ ನಿತ್ಯ ರಸ್ತೆ ದಾಟಬೇಕಾದರೆ ವಿದ್ಯಾರ್ಥಿಗಳು ಸಾಹಸ ಮಾಡಬೇಕಾಗುತ್ತದೆ. ಶಾಲೆಯ ಬಿಡುವ ಸಮಯದಲ್ಲಿ 20 ನಿಮಿಷ ನಿಲ್ಲುವ ಪರಿಸ್ಥಿತಿ ಉದ್ಭವವಾಗಿದೆ. ಇದರಿಂದ ವಿದ್ಯಾರ್ಥಿಗಳು ಜೀವಭಯದಿಂದ ನಿಧಾನವಾಗಿ ಸಂಚಾರ ಮಾಡುತ್ತಾರೆ. ಕೂಡಲೇ ಈ ಸಮಸ್ಯೆಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಬೇಕು ಎಂಬುದು ವಿದ್ಯಾರ್ಥಿಗಳ ಒತ್ತಾಯ.

ಬೆಳಗ್ಗೆಯಿಂದ ರಾತ್ರಿವರೆಗೂ ಲಕ್ಷ್ಮಿನಗರದಲ್ಲಿ ವಾಹನದಟ್ಟಣೆ ಉಂಟಾಗುತ್ತದೆ. ಇದರಿಂದ ಅಪಘಾತ ಪ್ರಮಾಣವು ಹೆಚ್ಚುತ್ತಿವೆ. ಆದರೆ ಎಲ್ಲ ಅಪಘಾತ ಘಟನೆಗಳ ಪ್ರಕರಣ ದಾಖಲಾಗುವುದಿಲ್ಲ. ನಗರದಲ್ಲಿ ಎಲ್ಲಿ ಸಂಚಾರ ಮಾಡಿದರೂ ಸಮಸ್ಯೆ ಆಗುವುದಿಲ್ಲ. ಆದರೆ ನಮ್ಮ ನಗರಕ್ಕೆ ಬಂದರೆ ಟ್ರಾಫಿಕ್ ನಲ್ಲಿ ಸಿಕ್ಕು ತೊಂದರೆ ಅನುಭವಿಸಬೇಕಾಗುತ್ತದೆ.

-ನಿತೀನ್ ಸೊಲ್ಹಾಪುರ ವಾಹನ ಸವಾರರು, ಲಕ್ಷ್ಮಿನಗರ

ಕಳೆದ ವರ್ಷ ಸಾಯಿ ಪಾರ್ಕನ ಯುವಕನೊಬ್ಬ ಟ್ರಾಫಿಕ್ ಸಮಸ್ಯೆಯಿಂದಾದ ಅಪಘಾತದಿಂದ ಮೃತ್ತಪಟ್ಟಿದ್ದಾನೆ. ಇಷ್ಟಾದರೂ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸುತ್ತಿಲ್ಲ. ಕೂಡಲೇ ಜಿಲ್ಲಾ ಪೊಲೀಸ್ ಇಲಾಖೆ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಸಾಯಿ ಪಾರ್ಕ್ ಒಬ್ಬರು ಅಥವಾ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಬೇಕು.

-ಎಸ್.ಎಚ್.ನದಾಫ್ ಸಾಯಿಪಾರ್ಕ್ ನಗರ ನಿವಾಸಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News