×
Ad

ವಿಜಯಪುರ | ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಅನ್ನದಾತ : ಮಳೆ ಇಲ್ಲದೆ ಒಣಗಿದ ಮೂರು ಎಕರೆ ಕಬ್ಬು

Update: 2026-07-15 08:44 IST

ವಿಜಯಪುರ : ಒಂದೆಡೆ ಮಳೆಯ ಕೊರತೆಯಿಂದ ಕಬ್ಬಿನ ಬೆಳೆ ಒಣಗುತ್ತಿದ್ದರೆ, ಮತ್ತೊಂದೆಡೆ ಕಳೆದ ವರ್ಷ ಸಕ್ಕರೆ ಕಾರ್ಖಾನೆಗೆ ಪೂರೈಸಿದ ಕಬ್ಬಿನ ಬಿಲ್ ಇನ್ನೂ ಪಾವತಿಯಾಗಿಲ್ಲ. ಪ್ರಕೃತಿ ವಿಕೋಪ ಮತ್ತು ಕಾರ್ಖಾನೆಯ ವಿಳಂಬ ನೀತಿಯ ನಡುವೆ ಸಿಲುಕಿರುವ ತಿಕೋಟಾ ತಾಲೂಕಿನ ಇಟ್ಟಗಿಂಹಾಳ ಗ್ರಾಮದ ರೈತ ಸಿಕಂದರ ದೊಡ್ಡಮನಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಪ್ರಗತಿಪರ ರೈತರಾಗಿರುವ ಸಿಕಂದರ ದೊಡ್ಡಮನಿ ಅವರು ಕಳೆದ ವರ್ಷ ಉತ್ತಮ ಮಳೆಯ ನೆರವಿನಿಂದ ಕಬ್ಬಿನ ಉತ್ತಮ ಇಳುವರಿ ಪಡೆದಿದ್ದರು. ಆದರೆ ಪ್ರಸಕ್ತ ವರ್ಷ ಮಳೆ ಕೈಕೊಟ್ಟ ಪರಿಣಾಮ ಅವರ ಮೂರು ಎಕರೆ ಪ್ರದೇಶದಲ್ಲಿನ ಕಬ್ಬಿನ ಬೆಳೆ ಸಂಪೂರ್ಣ ಒಣಗಿ ಹಾಳಾಗಿದೆ.

ಬತ್ತಿದ ಕೆರೆ, ಬೋರ್‌ವೆಲ್, ಕುಸಿದ ಅಂತರ್ಜಲ ಕಬ್ಬಿನ ಬೆಳೆಯನ್ನು ಉಳಿಸಿಕೊಳ್ಳಲು ಬೋರ್‌ವೆಲ್ ನೀರನ್ನು ಆಶ್ರಯಿಸಬೇಕೆಂದರೂ ಗ್ರಾಮದಲ್ಲಿ ನೀರಿನ ಪರಿಸ್ಥಿತಿ ಗಂಭೀರವಾಗಿದೆ. ಜಮೀನಿನ ಸಮೀಪದಲ್ಲಿರುವ ಕೆರೆ ಸಂಪೂರ್ಣ ಬತ್ತಿಹೋಗಿದ್ದು, ಹನಿ ನೀರೂ ಉಳಿದಿಲ್ಲ. ಇದರ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

ಕಣ್ಣೆದುರೇ ಕಬ್ಬಿನ ಬೆಳೆ ಒಣಗುತ್ತಿರುವುದನ್ನು ನೋಡುತ್ತಾ ಅಸಹಾಯಕರಾಗಿ ಕಣ್ಣೀರು ಸುರಿಸುವುದನ್ನು ಹೊರತುಪಡಿಸಿ ಬೇರೆ ದಾರಿ ಉಳಿದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಳೆದ ವರ್ಷದ 1.80 ಲಕ್ಷ ರೂ. ಬಿಲ್ ಬಾಕಿ ಸಿಕಂದರ ದೊಡ್ಡಮನಿ ಅವರು ಕಳೆದ ವರ್ಷ ಸಕ್ಕರೆ ಕಾಖಾನೆರ್ಗೆ ಪೂರೈಸಿದ ಕಬ್ಬಿನ ಸುಮಾರು 1.80 ಲಕ್ಷ ರೂ.ಗಳ ಬಿಲ್ ಇನ್ನೂ ಪಾವತಿಯಾಗಿಲ್ಲ. ಬೆಳೆದ ಬೆಳೆಗೆ ಸಕಾಲದಲ್ಲಿ ಹಣ ದೊರೆಯದಿರುವುದರಿಂದ ಕುಟುಂಬದ ನಿರ್ವಹಣೆ ಮತ್ತು ಕೃಷಿ ಚಟುವಟಿಕೆಗಳನ್ನು ಮುಂದುವರಿಸುವುದೇ ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಕಳೆದ ವರ್ಷ ಕಷ್ಟಪಟ್ಟು ಬೆಳೆದ ಕಬ್ಬಿನ ಬಿಲ್ ಇನ್ನೂ ಬಂದಿಲ್ಲ. ಈ ವರ್ಷ ಮಳೆಯೂ ಇಲ್ಲ, ಬೋರ್‌ವೆಲ್‌ನಲ್ಲೂ ನೀರಿಲ್ಲ. ಹೀಗಾಗಿ ಬೆಳೆಯೆಲ್ಲ ಒಣಗಿಹೋಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸಬೇಕು’ ಎಂದು ಸಿಕಂದರ ದೊಡ್ಡಮನಿ ಒತ್ತಾಯಿಸಿದ್ದಾರೆ.

ಮಕ್ಕಳ ಶಿಕ್ಷಣಕ್ಕಾಗಿ ಸಾಲ ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಕಾರ್ಖಾನೆಯಿಂದ ಬಾರದ ಹಣದಿಂದ ರೈತ ಕುಟುಂಬದ ಬದುಕಿನ ಬಂಡಿ ಸಾಗಿಸುವುದು ಕಷ್ಟವಾಗಿದೆ. ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲಬಾರದು ಎಂಬ ಕಾರಣಕ್ಕೆ ಶಾಲಾ-ಕಾಲೇಜು ಶುಲ್ಕ ಪಾವತಿಸಲು ಸಿಕಂದರ ಅವರು ಸಾಲ ಪಡೆಯುವಂತಾಗಿದೆ.

ಕೃಷಿಯಿಂದ ನಿರೀಕ್ಷಿಸಿದ್ದ ಆದಾಯ ದೊರೆಯದಿರುವುದರಿಂದ ದಿನನಿತ್ಯದ ಖರ್ಚು, ಕೃಷಿ ಸಾಲ ಮತ್ತು ಮಕ್ಕಳ ಶಿಕ್ಷಣದ ವೆಚ್ಚವನ್ನು ನಿಭಾಯಿಸಲು ಕುಟುಂಬ ಪರದಾಡುತ್ತಿದೆ.

ಒಣಗಿದ ಕಬ್ಬಿನ ಬೆಳೆಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಹಣವನ್ನು ಶೀಘ್ರ ಪಾವತಿಸಲು ಜಿಲ್ಲಾಡಳಿತ ಮತ್ತು ಸರಕಾರ ಮಧ್ಯಪ್ರವೇಶಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಬೇಕು. ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಒದಗಿಸಿ, ಸಕ್ಕರೆ ಕಾರ್ಖಾನೆಗಳ ಬಾಕಿ ಬಿಲ್ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಖಾಜಾಮೈನುದ್ದೀನ್ ಪಟೇಲ್

contributor

Similar News