×
Ad

ಹೇಗಿದೆ ಸಾವಿರ ದಿನದ ಹಾದಿ?

Update: 2026-02-16 09:10 IST

ರಾಜ್ಯ ಸರಕಾರ ಸಾವಿರ ದಿನ ಪೂರೈಸಿದೆ. ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ 1,10,000 ಭೂರಹಿತರಿಗೆ ಹಕ್ಕುಪತ್ರ ನೀಡಿ ‘ಆರನೇ ಗ್ಯಾರಂಟಿ’ಯನ್ನೂ ನೀಡಿದೆ. ಹಾವೇರಿಯಲ್ಲಿ ಆಯೋಜಿಸಿದ್ದ ‘ಸಾರ್ಥಕ ಸಾವಿರ ದಿನ’ ಎಂಬ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನಮ್ಮದು ನುಡಿದಂತೆ ನಡೆಯುವ ಸರಕಾರ. ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಸರಕಾರ. ಅವರಿಗೆ ಶಕ್ತಿ ತುಂಬಲು ಮುಂದೆಯೂ ಕೆಲಸ ಮಾಡುತ್ತೇವೆ. ಈಗ ಪ್ರಣಾಳಿಕೆಯಲ್ಲಿ ಕೊಟ್ಟ 593 ಭರವಸೆಗಳ ಪೈಕಿ 243 ಭರವಸೆಗಳನ್ನು ಈಡೇರಿಸಿದ್ದೇವೆ’ ಎಂದು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತವರ ಸರಕಾರ ಸಾವಿರ ದಿನ ದಾಟಿದ ಹಾದಿಯನ್ನು ವಿಮರ್ಶೆಗೆ ಒಡ್ಡಬೇಕು.

ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಹಿಂದೊಮ್ಮೆ ‘ಸಿದ್ದರಾಮಯ್ಯರಿಗೆ ಡಿ.ಕೆ. ಶಿವಕುಮಾರ್ ಮಾಟ ಮಾಡಿಸಿದ್ದಾರೆ’ ಎಂದಿದ್ದರು. ಆ ಮೂಲಕ ಅವರು ‘ಸಿದ್ದರಾಮಯ್ಯ ಹಿಂದಿನಂತೆ ಲವಲವಿಕೆಯಾಗಿಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಪ್ರತಿಪಕ್ಷದ ನಾಯಕ ಆರ್. ಅಶೋಕ್ ‘ಸಿದ್ದರಾಮಯ್ಯನವರು ಮೊದಲಿನಂತಿಲ್ಲ’ ಎಂದು ಹೇಳಿದ್ದರು. ಈ ಮಾತುಗಳಿಗೆ ಶಾಸನಸಭೆ ಸಾಕ್ಷಿಯಾಗಿತ್ತು. ಅದೇ ಸದನದಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮೊನ್ನೆ ಮೊನ್ನೆ ‘ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ’ ಎಂದು ದೂರಿದರು. ಹಾಗಾಗಿ ಸಿದ್ದರಾಮಯ್ಯ ಲವಲವಿಕೆ ಕಳೆದುಕೊಂಡಿದ್ದು ಏಕೆ ಎನ್ನುವುದನ್ನು ನೋಡಿದರೆ ಉಳಿದಂತೆ ಈ ಬಾರಿ ಅವರ ಆಡಳಿತ ಹೇಗಿದೆ ಎನ್ನುವುದನ್ನು ಅರಿಯಲು ಸಹಕಾರಿಯಾಗಬಲ್ಲದು.

2013ರಿಂದ 2018ರವರೆಗಿನ ಮೊದಲ ಅವಧಿಯಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ಹೆಚ್ಚು ಪವರ್ ಸೆಂಟರ್‌ಗಳು ಇರಲಿಲ್ಲ. 2014ರ ಲೋಕಸಭಾ ಚುನಾವಣೆ ಸೋಲುತ್ತಿದ್ದಂತೆ ಹೈಕಮಾಂಡ್ ಕೂಡ ಸೊರಗಿ ಹೋಗಿತ್ತು. ಇವೆರಡು ವಿಚಾರಗಳು ರಾಜಕೀಯವಾಗಿ ಸಿದ್ದರಾಮಯ್ಯ ಕೈ ಬಲಪಡಿಸಿದ್ದವು. ಇದಲ್ಲದೆ ಜಿಎಸ್‌ಟಿ ಜಾರಿಯಾಗಿರಲಿಲ್ಲ. ರಾಜ್ಯಗಳಿಗೆ ಸಂಪನ್ಮೂಲ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಇವೆರಡು ಸಂಗತಿಗಳು ಹಣಕಾಸು ಖಾತೆಯನ್ನೂ ಹೊಂದಿದ್ದ ಸಿದ್ದರಾಮಯ್ಯಗೆ ಆನೆಬಲವನ್ನು ತಂದುಕೊಟ್ಟಿದ್ದವು.

ಇದರ ಪರಿಣಾಮವಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಅನ್ನಭಾಗ್ಯ ಯೋಜನೆ ಘೋಷಿಸಲು ಸಾಧ್ಯವಾಯಿತು. ಯಾರನ್ನೂ ಹೇಳದೆ ಕೇಳದೆ ಯೋಜನೆ ಘೋಷಣೆ ಮಾಡಿದರು ಎನ್ನುವ ದೂಷಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಯಿತು. ಅನ್ನಭಾಗ್ಯದ ಜೊತೆಗೆ ಅನ್ಯಭಾಗ್ಯಗಳನ್ನು ನೀಡುವುದಕ್ಕೂ ಸಾಧ್ಯವಾಯಿತು. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದ ಸರಕಾರ ಎನಿಸಿಕೊಳ್ಳಲು ಸಾಧ್ಯವಾಯಿತು.

ಆದರೀಗ? ರಾಜ್ಯದಲ್ಲೇ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಎಂಬ ಎರಡು ಪವರ್ ಸೆಂಟರ್‌ಗಳಿವೆ. ಕಾಂಗ್ರೆಸ್ ಮೂರನೇ ಬಾರಿ ಲೋಕಸಭಾ ಚುನಾವಣೆಯನ್ನು ಸೋತಿದ್ದರೂ ರಾಹುಲ್ ಗಾಂಧಿ ಮೊದಲಿಗಿಂತ ಪ್ರಭಾವಶಾಲಿಯಾಗಿದ್ದಾರೆ. ಹೈಕಮಾಂಡ್ ಕೇಳಿಯೇ ನಿರ್ಧರಿಸಬೇಕು ಎನ್ನುವುದನ್ನು ಯಾರೂ ಬಾಯಿಬಿಟ್ಟು ಹೇಳಿಲ್ಲದಿದ್ದರೂ ಅಂಥ ಅಲಿಖಿತ ನಿಯಮ ಮತ್ತೆ ಜಾರಿಗೆ ಬಂದಿದೆ. ಇಲ್ಲದಿದ್ದರೆ ಜಾತಿಗಣತಿ ವರದಿ ಕಸದ ಬುಟ್ಟಿ ಸೇರುತ್ತಿರಲಿಲ್ಲ. ದಲಿತ ನಾಯಕರ ಔತಣಕೂಟ ರದ್ದಾಗುತ್ತಿರಲಿಲ್ಲ. ಕೆ.ಎನ್. ರಾಜಣ್ಣ ಸಂಪುಟದಿಂದ ವಜಾ ಆಗುತ್ತಿರಲಿಲ್ಲ. ಸಚಿವ ಸಂಪುಟದ ಪುನರ್ ರಚನೆ ವಿಷಯ ನನೆಗುದಿಗೆ ಬೀಳುತ್ತಿರಲಿಲ್ಲ. ಅಧಿಕಾರ ಹಂಚಿಕೆಯ ವಿಷಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅನಿಶ್ಚಿತತೆ ‘ನಿಶ್ಚಿಂತೆಯಾಗಿ ಅಧಿಕಾರ ನಡೆಸಿ ಮಾತ್ರ ಗೊತ್ತಿದ್ದ’ ಸಿದ್ದರಾಮಯ್ಯ ಅವರನ್ನು ಹಲವು ಬಗೆಯಲ್ಲಿ ಚಿಂತೆಗೀಡುಮಾಡಿದೆ ಎನ್ನುವುದು ಸುಳ್ಳಲ್ಲ.

ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ಸುಮಾರು 45-50 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಇಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಎಂಥದೇ ಹಣಕಾಸು ತಜ್ಞ ಅಥವಾ ನುರಿತ ಆಡಳಿತಗಾರನಿಗೂ ಸವಾಲಿನ ಕೆಲಸವೇ. ಎದೆ ಉಬ್ಬಿಸಿ ನಡೆಯುತ್ತಿದ್ದ ಸಿದ್ದರಾಮಯ್ಯ ಅವರ ಬೆನ್ನು ಗ್ಯಾರಂಟಿಯ ಭಾರದಿಂದ ಬಗ್ಗಿ ಹೋಗಿದೆ. ಇದಲ್ಲದೆ ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯ ಸರಕಾರಕ್ಕೆ ಇದ್ದ ಬಲುದೊಡ್ಡ ಆದಾಯದ ಮೂಲ ಬತ್ತಿಹೋಗಿದೆ. ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರಕಾರ ತೆರಿಗೆ ಪಾಲಿನ ಮತ್ತು ಅನುದಾನ ಹಂಚಿಕೆ ವಿಷಯದಲ್ಲೂ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರಕಾರದ ಬಳಿ ತನ್ನ ಪಾಲಿನ ಹಣವನ್ನು ತನಗೆ ಕೊಡಿ ಎಂದು ಕೇಳಲು ಸುಪ್ರೀಂ ಕೋರ್ಟ್ ಕದ ಬಡಿಯಬೇಕಾದ ಪರಿಸ್ಥಿತಿ ಕೂಡ ಬಂದಿತ್ತು. ಒಟ್ಟಿನಲ್ಲಿ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಿದ್ದರಾಮಯ್ಯ ಅವರ ಕೈಗಳನ್ನು ಬಿಗಿಯಾಗಿ ಕಟ್ಟಿಹಾಕಲಾಗಿದೆ.

ರಾಜಕಾರಣದಲ್ಲಿ ಶಾಸಕರ ಬಲವಿದ್ದವನೇ ಶೂರ. ಶಾಸಕರ ಸದಾಭಿಪ್ರಾಯ ವೊಂದಿದ್ದರೆ ಸಮಸ್ಯೆಗಳು ದೂರ. ಅವರು ಎಷ್ಟೇ ಬಾರಿ ಭೇಟಿಯಾದರೂ ಕೊಡಲು ಅನುದಾನ ಇಲ್ಲ ಎಂದಾಗ ಸಿದ್ದರಾಮಯ್ಯ ಲವಲವಿಕೆಯಿಂದ ಇರಲು ಹೇಗೆ ಸಾಧ್ಯ? ಅಶೋಕ್ ಹೇಳಿದಂತೆ ಮೊದಲಿನಂತೆ ಇರಲು ಹೇಗೆ ಸಾಧ್ಯ? ಸುನೀಲ್ ಕುಮಾರ್ ಹೇಳಿದಂತೆ ಸಿದ್ದರಾಮಯ್ಯ ಅಸಹಾಯಕರಾಗದಿರಲು ಹೇಗೆ ಸಾಧ್ಯ? ದುಡ್ಡು ಕೊಡದ ದಂಡನಾಯಕನನ್ನು ಅನುಸರಿಸುವ ಸೈನಿಕರು ಇಂದಿನ ರಾಜಕಾರಣದಲ್ಲಿ ಯಾರಿದ್ದಾರೆ? ಇದರಲ್ಲಿ ರಾಜಕೀಯವೂ ಇದೆ. ಹಣಕಾಸಿನ ವಿಚಾರವೂ ಇದೆ.

ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲೆಂದೇ ದಾವಣಗೆರೆಯಲ್ಲಿ ಸಿದ್ದರಾಮಯ್ಯೋತ್ಸವ ನಡೆಸಲಾಗಿತ್ತು. ಉದ್ದೇಶ ಈಡೇರಲಿಲ್ಲ. ಆಗಲೇ ಅನುಭವಿ ರಾಜಕಾರಣಿ ಸಿದ್ದರಾಮಯ್ಯಗೆ ಹೈಕಮಾಂಡ್ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವುದು ಅನಿವಾರ್ಯ ಎನ್ನುವುದು ಗೊತ್ತಾಗಿಬಿಟ್ಟಿತ್ತು. ಗ್ಯಾರಂಟಿಗಳನ್ನು ಘೋಷಿಸಲು ಒಪ್ಪಿಕೊಂಡರು. ಐದು ಗ್ಯಾರಂಟಿಗಳ ಜಾರಿ ಭಾರವಾಗುತ್ತದೆ ಎನ್ನುವ ಅಂದಾಜು ಅವರಿಗಿರಲಿಲ್ಲ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆಯೇ ಸರಕಾರ ಬಂದಾಗ ಅನಿವಾರ್ಯವಾಗಿ ಹೈಕಮಾಂಡ್ ಕೈಗೆ ಹಗ್ಗ ಕೊಟ್ಟು ಬಿಟ್ಟಿದ್ದರು. ಅದರ ಪರಿಣಾಮ ಸಿದ್ದರಾಮಯ್ಯ ಅವರ ಮೇಲೆ ಮಾತ್ರವಲ್ಲ ಸರಕಾರದ ಮೇಲೂ ಆಗುತ್ತಿದೆ.

ಅವರೇ ಹೇಳಿದಂತೆ ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಸರಕಾರ. ಅವರಿಗೆ ಶಕ್ತಿ ತುಂಬುವುದು, ಗ್ಯಾರಂಟಿಗಳನ್ನು ಪರಿಷ್ಕರಿಸುವುದು, ಅನಗತ್ಯ ವೆಚ್ಚ ಕಡಿಮೆ ಮಾಡುವುದು, ಕರ್ನಾಟಕದಿಂದ 100 ರೂಪಾಯಿಗಳ ತೆರಿಗೆಯನ್ನು ಪಡೆದು ರಾಜ್ಯಕ್ಕೆ 13ರಿಂದ 14 ರೂಪಾಯಿ ವಾಪಸ್ ಕೊಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಹೋರಾಡುವುದು (ನ್ಯಾಯಯುತವಾದ ರಾಜ್ಯದ ಪಾಲು ಸಿಕ್ಕರೆ ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲಿದೆ), ದ್ವೀಪಗಳಂತೆ ಕೆಲಸ ಮಾಡುತ್ತಿರುವ ಇಲಾಖೆಗಳನ್ನು ಬೆಸೆಯುವುದು, ಪಕ್ಷ ಮತ್ತು ಸರಕಾರದ ನಡುವೆ ಸಮನ್ವಯತೆ ಸಾಧಿಸುವುದು ಸೇರಿದಂತೆ ಸಿದ್ದರಾಮಯ್ಯ ಮಾಡಬೇಕಾದ ಕೆಲಸಗಳು ದಂಡಿ ದಂಡಿ ಇವೆ.

ಆದರೂ ಇವೆಲ್ಲದರ ನಡುವೆಯೂ ಈ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದಾಗಿ ಇಡೀ ದೇಶದಲ್ಲಿ ಜಿಡಿಪಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ತೆರಿಗೆ ಸಂಗ್ರಹದಲ್ಲಿ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ, ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಎರಡನೇ ಸ್ಥಾನ ತಲುಪಿದೆ. 20 ಸಾವಿರ ಪೌರ ಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಿದೆ. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ (ಖಈಎ) ಸೂಚ್ಯಂಕದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇದಲ್ಲದೆ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತೀ ಬಡ ಕುಟುಂಬಕ್ಕೂ ಪ್ರತೀ ತಿಂಗಳಿಗೂ ಕನಿಷ್ಠ ಐದಾರು ಸಾವಿರ ರೂಪಾಯಿ ಹೋಗುತ್ತದೆ. ಅಂದರೆ ಇದು ಬಡವರ ಸರಕಾರ. ಬಡವರ ಮಕ್ಕಳು ಬೆಳೆಯಬೇಕು ಎನ್ನುವ ಸರಕಾರ. ಬಡವರ ಸರಕಾರ ಮಾತ್ರವಲ್ಲ, ಮಧ್ಯಮ ವರ್ಗದ ಸರಕಾರ ಕೂಡ ಹೌದು. ಅನ್ನಭಾಗ್ಯ ಯೋಜನೆಯನ್ನು ಬಿಟ್ಟರೆ ಉಳಿದ ಯಾವುದೇ ಗ್ಯಾರಂಟಿ ಯೋಜನೆಗಳಿಗೆ ಬಿಪಿಎಲ್ ಕಾರ್ಡು ಹೊಂದಿರುವವರು ಮಾತ್ರ ಆರ್ಹರು ಎಂಬ ಷರತ್ತು ಇಲ್ಲ. ಮಧ್ಯಮ ವರ್ಗದ ಕುಟುಂಬಗಳು ಕೂಡ ಪ್ರತೀ ತಿಂಗಳಿಗೂ ಕನಿಷ್ಠ ಐದಾರು ಸಾವಿರ ರೂಪಾಯಿ ಪಡೆಯುತ್ತಿವೆ.

ವಿರೋಧಿಗಳ ಬಾಯಿ ಮುಚ್ಚಿಸಲು, ವೀರಾವೇಶದಲ್ಲಿ ಮುನ್ನುಗ್ಗಲು ‘ನಮ್ಮದು ಬಡವರ ಸರಕಾರ, ಮಧ್ಯಮ ವರ್ಗದವರ ಸರಕಾರ’ ಎನ್ನುವುದಕ್ಕಿಂತ ಬೇರೆ ಯಾವ ಅಸ್ತ್ರ ಬೇಕಿತ್ತು? ಆದರೆ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚುವ ವಿಷಯವಾಗಲಿ, ಕಾಲ್ತುಳಿತವಾಗಲಿ, ಮಂಗಳೂರಿನಲ್ಲಿ ಕೋಮುಗಲಭೆಯಾಗಲಿ, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವ ವಿಚಾರವೇ ಇರಲಿ ಎಲ್ಲಾ ಸಮಸ್ಯೆಗಳಿಗೂ ಸಿದ್ದರಾಮಯ್ಯ ಅವರೇ ಉತ್ತರಿಸಬೇಕು. ಅದರಲ್ಲೇ ಕಳೆದುಹೋಗಿರುವ ಅವರಿಗೂ ‘ನಮ್ಮದು ಬಡವರ ಸರಕಾರ, ಮಧ್ಯಮ ವರ್ಗದವರ ಸರಕಾರ’ ಎಂದು ಹೇಳಬೇಕು ಎನಿಸುತ್ತಿಲ್ಲ. ಗ್ಯಾರಂಟಿ ಸಚಿವರುಗಳೇ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿಲ್ಲ. ಇತರ ಸಚಿವರಿಗೂ ಇದು ಅರ್ಥವಾಗುವುದಿಲ್ಲ.

ಸರಕಾರ ಎಂದರೆ ಸಿದ್ದರಾಮಯ್ಯ ಮಾತ್ರ ಅಲ್ಲ. ಅವರೊಬ್ಬರ ಸಾಧನೆಯೇ ಸರಕಾರದ ಸಾಧನೆಯಾಗುವುದಿಲ್ಲ. ಅವರವರ ಇಲಾಖೆಗಳಲ್ಲಿ ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್ ಸಾಧನೆಗಳನ್ನೂ ಕಡೆಗಣಿಸುವಂತಿಲ್ಲ. ಆದರೂ ಸರಕಾರದ ಭಾಗವಾಗಿರುವ ಇತರರು ಜನ ಇಟ್ಟಿದ್ದ ನಿರೀಕ್ಷೆಗಳನ್ನು ಯಾವ ಪ್ರಮಾಣದಲ್ಲಿ ಮಾಡಬೇಕಾಗಿತ್ತೋ ಆ ಪ್ರಮಾಣದಲ್ಲಿ ನಿಜ ಮಾಡಿಲ್ಲ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈಗ 999 ದಿನ ಮೌನವಾಗಿದ್ದು ಸಾವಿರದ ದಿನ ಮಾತ್ರ ಮಾತನಾಡಿದರೆ ಜನರನ್ನು ತಲುಪಲು ಸಾಧ್ಯವೇ?

ಈಗ ಮಾತು ಬಲ್ಲವರ ಕಾಲ. ಮಾತನಾಡುವುದಿದ್ದರೆ ಸಾವಿರ ದಿನವೂ ಮಾತನಾಡಬೇಕು.

ಆಫ್ ದಿ ರೆಕಾರ್ಡ್!

ಮೊನ್ನೆ ಮೊನ್ನೆ ಸಂಸತ್ ಭವನದ ಆವರಣದಲ್ಲಿ ಪ್ರಹ್ಲಾದ್ ಜೋಶಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ರಾಹುಲ್ ಗಾಂಧಿ ‘ಬನ್ನಿ ಜೊತೆಯಾಗಿ ಮಾತನಾಡೋಣ’ ಎನ್ನುವ ರೀತಿಯಲ್ಲಿ ಕರೆದರು. ಪ್ರಹ್ಲಾದ್ ಜೋಶಿ ತಪ್ಪಿಸಿಕೊಂಡು ಹೋದರು. ಜೊತೆಯಾಗಿ ಮಾತನಾಡುವುದು ಬೇಡ, ಕಡೆ ಪಕ್ಷ ರಾಹುಲ್ ಗಾಂಧಿ ಮಾತನಾಡಿಸಿದಾಗ ನಗುಮುಖದೊಂದಿಗೆ ಕೈ ಕುಲುಕಬಹುದಿತ್ತಲ್ಲವೇ? ಅಷ್ಟರ

ಮಟ್ಟಗಿನ ಸೌಜನ್ಯವೂ ಇಲ್ಲದಿದ್ದರೆ ರಾಜಕಾರಣ ಸಹ್ಯ ಎನಿಸಿಕೊಳ್ಳಲು ಸಾಧ್ಯವೇ? ಎಲ್ಲಾ ಪಕ್ಷದ ರಾಜಕಾರಣಿಗಳು ಒಳಗೊಳಗೆ ಚೆನ್ನಾಗಿರುತ್ತಾರೆ, ಬಹಿರಂಗವಾಗಿ ಕಚ್ಚಾಡುತ್ತಾರೆ ಎನ್ನುವ ಭಾವನೆಯ ನಡುವೆಯೂ ನಮ್ಮ ನಡುವಿನ ರಾಜಕಾರಣಿಗಳ ಮಧ್ಯೆ ಆರೋಗ್ಯಕರ ಸಂಬಂಧ, ಸಂವಾದ ಇರಲಿ ಎಂದು ಬಯಸುವವರೂ ಇದ್ದಾರೆ. ಇದನ್ನೂ ಅರ್ಥ ಮಾಡಿಕೊಳ್ಳಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಧರಣೀಶ್ ಬೂಕನಕೆರೆ

contributor

Similar News