×
Ad

ಪರಿಶಿಷ್ಟ ಪಂಗಡಗಳಲ್ಲಿಯೂ ಒಳಮೀಸಲಾತಿ ಜಾರಿಯಾಗಲಿ: ಲಕ್ಷ್ಮಣ ಮಂಡಲಗೇರಾ

ವಾಲ್ಮೀಕಿ ಸಮುದಾಯದ ಯುವಕರು ಭೀಮನ ಮಾರ್ಗ ಹಿಡಿಯುವಂತಾಗಲಿ

Update: 2025-10-08 12:37 IST

ರಾಯಾಚೂರು : ವಾಲ್ಮೀಕಿ ಜಯಂತಿಯು ಈ ಮೊದಲು ಬೇಡ, ವಾಲ್ಮೀಕಿ, ನಾಯಕ ಸಮುದಾಯಗಳ ಆಚರಣೆಯಾಗಿತ್ತು. ಆದರೆ ವಾಲ್ಮೀಕಿ, ಬೇಡ, ನಾಯಕ ಸಮುದಾಯಗಳ ಜೊತೆಗೆ 50 ಬುಡಕಟ್ಟು ಸಮುದಾಯಗಳು ಸೇರ್ಪಡೆಯಾಗಿ, ಈಗ ಎಲ್ಲಾ ಸಮುದಾಯಗಳ ಜಯಂತಿಯಾಗಿ ಆಚರಣೆಯಾಗುತ್ತಿದೆ. ಇದರಲ್ಲಿಯೂ ಮುಂಚೂಣಿ ಪ್ರಭಲ ಜಾತಿಗಳಿಗೆ ಸೀಮಿತವಾದ ಮೀಸಲಾತಿ ಅರಣ್ಯವಾಸಿ, ಆದಿವಾಸಿ ಬುಡಕಟ್ಟು ಸಮುದಾಯಗಳಿಗೂ ಹಂಚಿಕೆಯಾಗಬೇಕು ಆಗ ಮಾತ್ರ ಆದಿವಾಸಿ ಬುಡಕಟ್ಟು ಜನಾಂಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮಣ ಮಂಡಲಗೇರಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಈಗಿರುವ ಮೀಸಲಾತಿ ಶೇ. 7 ರಷ್ಟು ಇದೆ. ಆದರೆ, ಪರಿಶಿಷ್ಠ ಪಂಗಡದಲ್ಲಿರುವ ಇನ್ನಿತರ ಕಾಡು ಮೇಡುಗಳಲ್ಲಿ ವಾಸಿಸುವ ಅರಣ್ಯವಾಸಿ, ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ಸಿಗದೆ ವಂಚಿತವಾಗಿವೆ. ಆದರೆ ಈಗಿರುವ 7% ಮೀಸಲಾತಿಯಲ್ಲಿ ಮತ್ತೆ ಕುರುಬ ಸಮುದಾಯವನ್ನು ಸೇರಿದರೆ ಅಲ್ಲಿರುವ ಆದಿವಾಸಿ ಅಲೆಮಾರಿ ಬುಡಕಟ್ಟು ಸಮುದಾಯಗಳು ಮೀಸಲಾತಿಯಿಂದ ಮತ್ತಷ್ಟು ಸಂಪೂರ್ಣ ವಂಚಿತವಾಗುವ ಸಾಧ್ಯತೆಯಿದೆ. ಈಗಿರುವ ಮೀಸಲಾತಿ ಆ ಸಮುದಾಯಗಳಿಗೆ ಸರಿಯಾಗಿ ಹಂಚಿಕೆಯಾಗುತ್ತಿಲ್ಲ, ಈಗ ಮತ್ತೆ ಬಲಿಷ್ಠ ಜಾತಿಗಳನ್ನು ಸೇರಿಸುವುದರಿಂದ ಮತ್ತಷ್ಟು ವಂಚಿತರಾಗುವ ಸಾಧ್ಯತೆ ಇದೆ ಹಾಗಾಗಿ ಮಾನ್ಯ ಸಿದ್ಧರಾಮಯ್ಯ ಸ್ವಜಾತಿ ಪ್ರೇಮ ಬಿಟ್ಟು ಸಾಮಾಜಿಕ ನ್ಯಾಯದ ಬಗ್ಗೆ ಯೋಚಿಸಬೇಕಿದೆ.

ಸಾಮಾಜಿಕ ಹರಿಕಾರ, ಅಹಿಂದ ನಾಯಕ ಎಂದು ಹೇಳುವ ಸಿದ್ದರಾಮಯ್ಯನವರೇ ಈಗಾಗಲೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹಂಚಿಕೆಯಲ್ಲಿ ನೀವು ಮಾಡಿರುವ ಮೋಸ ಯಾರೂ ಮರೆಯುವಂತಿಲ್ಲ, ಬಸವಣ್ಣನ ಮಾರ್ಗ ಅನುಸರಿಸುತ್ತೇನೆಂದು ಹೇಳುವ ನೀವು ಪ್ರಭಲ ಜಾತಿಗಳ ಸಚಿವರಿಗೆ ಮಂಡಿಯೂರಿ ಅಲೆಮಾರಿಗಳಿಗೆ ಸಿಗಬೇಕಾದ 1% ಮೀಸಲಾತಿ ಕಿತ್ತುಕೊಂಡಿದೀರಿ ಆದರಿಂದ ಅ ಸಮುದಾಯಗಳು ಮೀಸಲಾತಿಯಿಂದ ಮುಂದೆಯೂ ವಂಚಿತರಾಗಲು ದಾರಿ ಮಾಡಿಕೊಟ್ಟಿದೀರಿ. ಇದರಿಂದ ಅಲೆಮಾರಿಗಳನ್ನು ಬೀದಿಗೆ ತಳ್ಳಿದೀರಿ ಅವರಿಗೆ ಸಿಗಬೇಕಾದ 1% ಮೀಸಲಾತಿಗಾಗಿ ನ್ಯಾಯ ಕೇಳಲು ದೆಹಲಿ ತನಕ ಹೋಗುವಂತೆ ಮಾಡಿದಿರಿ ಈಗ ಪರಿಶಿಷ್ಟ ಪಂಗಡಗಳ ಮೀಸಲಾತಿಯ ವಿಚಾರದಲ್ಲೂ ಹಾಗೆ ಮಾಡದೇ ಎಚ್ಚರ ವಹಿಸಿರಿ, ಜಾತಿ ಪ್ರೇಮ ಬಿಟ್ಟು ಹೊರ ಬರಬೇಕೆಂದು ಈ ಮೂಲಕ ಎಚ್ಚರಿಕೆ ನೀಡಿದರು.

ವಾಲ್ಮೀಕಿ ಜಯಂತಿ ಬರೀ ವಾಲ್ಮೀಕಿ ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಗಳ ಜಯಂತಿಯಾಗಬೇಕು. ಮಹರ್ಷಿ ವಾಲ್ಮೀಕಿ ಒಬ್ಬ ಮಹಾನ್ ಆದಿ ಕವಿ. ರಾಮಾಯಣ ಮೂಲಕ ರಾಮನನ್ನು ಸೃಷ್ಟಿಸಿದ್ದು ಇದೇ ಕವಿ. ಆದರೆ ಇವತ್ತು ಅದೇ ರಾಮನ ಹೆಸರು ಹೇಳಿಕೊಂಡು ಅಧಿಕಾರ ಹಿಡಿದವರು ಸಮುದಾಯವನ್ನು ಎಲ್ಲಿ ಇಟ್ಟಿದ್ದಾರೆ ಎನ್ನುವುದನ್ನು ಸಮುದಾಯದ ಯುವಕರು, ಮುಖಂಡರು, ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.

ರಾಯಚೂರು ಜಿಲ್ಲೆಯಲ್ಲಿ ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರ ಇದ್ದರೂ ಸಮುದಾಯಗಳು ಅಭಿವೃದ್ಧಿ ಕಾಣದೆ ಇರುವುದು ದುರಂತ. ಸಮುದಾಯ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ನೂರಾರು ಕೋಟಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದರೂ ತುಟಿ ಬಿಚ್ಚದ ಸಮಾಜದ ಮುಖಂಡರು, ಸಮಾಜದ ಸಚಿವರು, ಶಾಸಕರು. ಮೀಸಲಾತಿ ಹೆಸರಿನಲ್ಲಿ ಅಧಿಕಾರ ಹಿಡಿದವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದನ್ನು ಸಮುದಾಯದ ಯುವಕರು ಪ್ರಶ್ನಿಸುವಂತಾಗಬೇಕು. ಶಿಕ್ಷಣ, ಸಂಘಟನೆಯಲ್ಲಿ ಮುಂದೆ ಬರಬೇಕು.

ಇವತ್ತು ನಕಲಿ ಜಾತಿಪ್ರಮಾಣ ಪತ್ರಗಳು ಹಿಡಿದು ಸಮುದಾಯಗಳನ್ನು ತುಳಿಯುವ ಕೆಲಸ ನಡೆಯುತ್ತಿದೆ ಆದರೆ ಇದರ ಬಗ್ಗೆ ಯಾರೂ ಮಾತಾಡಲು ತಯಾರಿಲ್ಲ. ಸಮಾಜದ ಯುವಕರು ಕೇಸರಿ ಭಯೋತ್ಪಾದಕರಿಂದ ಅಂತರ ಕಾಯ್ದುಕೊಂಡು ರಾಮನ ಜಪ ಬಿಟ್ಟು, ಇಂಥ ವಿಷಯಗಳ ಬಗ್ಗೆ ಜಾಗೃತಿ ಮಾಡಿಸುವ ಕೆಲಸಕ್ಕೆ ಮುಂದಾಗಬೇಕು. ಆರ್‌ಎಸ್ಎಸ್ , ಬಿಜೆಪಿಗಳಂತಹ ದೇಶದ್ರೋಹಿ ಸಂಘಟನೆಗಳ ಕಾಲಾಳುಗಳಾಗಿ ಬದುಕನ್ನು ಹಾಳು ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು.

ಯುವಜನರು ಅತಿ ಹೆಚ್ಚು ಈ ಸಮುದಾಯದಿಂದ ಹಿಂದೆ ಸರಿಯುತ್ತಿರುವುದರ ಬಗ್ಗೆ ಸಂಬಂದಪಟ್ಟವರು ಅಧ್ಯಯನ ನಡೆಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಸಮಾಜದ ಯುವಕರು ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟದ ಮಾರ್ಗಕ್ಕೆ ಮುಂದಾಗಬೇಕು ಆಗ ಮಾತ್ರ ಬುಡಕಟ್ಟು ಸಮುದಾಯಗಳು, ದಮನಿತ ಕುಟುಂಬಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News