ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ತಡೆಗೆ ಇಲಾಖೆ ಸಕ್ರಿಯ : ಐಜಿಪಿ ಡಾ.ಪಿ.ಎಸ್ ಹರ್ಷಾ ಎಚ್ಚರಿಕೆ
ಅಕ್ರಮ ದಂಧೆಕೋರರು ಎಷ್ಟೇ ಪ್ರಭಾವಿಗಳಿದ್ದರೂ ಮುಲಾಜಿಲ್ಲದೇ ಕ್ರಮ
ರಾಯಚೂರು: ಜಿಲ್ಲೆಯಲ್ಲಿ ಅಕ್ರಮ ಮರಳು ತಡೆಗಟ್ಟಲು ಎಸ್ ಪಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ. ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳೂ ಪರೋಕ್ಷವಾಗಿ ಭಾಗಿಯಾಗಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರ್ದೆಶಕ (ಐಜಿಪಿ) ಡಾ.ಪಿ.ಎಸ್ ಹರ್ಷಾ ಅವರು ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗ ಸೇರಿದಂತೆ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಕಾನೂನು ಬಾಹೀರವಾಗಿ ಸಾಗಣೆಗೆ ತಡೆಯಲು ವಿವಿಧ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುತ್ತಿದೆ. ಅಕ್ರಮದಲ್ಲಿ ಪ್ರಭಾವಿಗಳು, ಪೊಲೀಸ್ ಸಿಬ್ಬಂದಿ,ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪಗಳು, ಪತ್ರಿಕಾ ವರದಿಗಳಿಂದ ಮಾಹಿತಿ ಬಂದಿದ್ದು, ಪೊಲೀಸ್ ಸೇರಿ ಯಾವುದೇ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದರೆ ನಿಖರವಾಗಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ, ಅಕ್ರಮ ಮರಳುಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆಯ ಜೊತರ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಇಲಾಖೆಯ ಪಾತ್ರವೂ ಮುಖ್ಯವಾಗಿದೆ ಹೆಚ್ಚು ಕ್ರಿಯಾಶೀಲರಾಗಬೇಕು. ಟಾಸ್ಕ್ ಫೋರ್ಸ್ ಸಮಿತಿಯಲ್ಲಿರುವ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಚರ್ಚಿಸಲಾಗುವುದು ಎಂದರು.
ಶಾಸಕಿ ಜಿ ಕರೆಮ್ಮ ನಾಯಕಗೆ ಭದ್ರತೆ: ಅಕ್ರಮ ಮರಳು ಸಾಗಣೆ ತಡೆಗೆ ಮುಂದಾಗಿರುವ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ ಅವರಿಗೆ ಬೆದರಿಕೆ ಹಾಕಿದ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಆರಂಭವಾಗಿದೆ, ಪ್ರಕರಣದ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರಾದರೆ ಕ್ರಮ ಕೈಗೊಳ್ಳಲಿದ್ದಾರೆ. ಶಾಸಕಿ ಮಾತ್ರವಲ್ಲ ಸಾಮಾನ್ಯ ನಾಗರಿಕರಿಗೂ ಭದ್ರತೆ ಒದಗಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಅವರಿಗೆ ಅಗತ್ಯ ರಕ್ಷಣೆ ನೀಡಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪೊಲೀಸರಮೇಲೆ ಸವಾರಿ ಮಾಡಿದರೆ ಕಠಿಣ ಕ್ರಮ: ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ ಪೊಲೀಸ್ ಸಿಬ್ಬಂದಿ ಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ರಾವನೆ ಸಲ್ಲಿಸಲಾಗಿದೆ. ಬೇರೆ ಜಿಲ್ಲೆಯಷ್ಟು ತೀವ್ರ ವಿಕೋಪದ ಪರಿಸ್ಥಿತಿ ಇಲ್ಲ. ಪೊಲೀಸರ ಮೇಲಿನ ಒತ್ತಡ ನಿವಾರಣೆಗೆ ಅನೇಕ ಯೋಜನೆ ರೂಪಿಸಲಾಗಿದೆ. ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಅಡ್ಡಿಪಡಿಸುವುದು ಸಂಜ್ಞೆಯ ಅಪರಾಧವಾಗಿದೆ. ಪೊಲೀಸ್ ಇಲಾಖೆ ಪ್ರಜಾಪ್ರಭುತ್ವ ಭದ್ರವಾಗಿಡಲು ಕೆಲಸ ಮಾಡುವ ಒಂದು ವ್ಯವಸ್ಥೆ. ಖಾಕಿಯ ಮೇಲೆ ಸವಾರಿ ಮಾಡಲು ಯತ್ನಿಸಿದರೆ ಸುಮ್ಮನಿರಲ್ಲ, ಅವರು ರಾಜಕೀಯ ನಾಯಕರಾಗಲಿ, ಅಧಿಕಾರಸ್ಥರಾಗಿರಲಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳುತ್ತೇವೆ. ಪೊಲೀಸರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಭಯಮುಕ್ತವಾಗಿ ಕೆಲಸ ಮಾಡಬೇಕು ಏನೇ ಅಡ್ಡಿಆತಂಕಗಳಿದ್ದರೂ ಹಿರಿಯ ಅಧಿಕಾರಿಗಳ ನೆರವು ಸಿಗಲಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಶಸಕ್ತವಾಗಿದೆ. ಈಗ 10 ವರ್ಷದಲ್ಲಿ ಕಳ್ಳತನ ಆಗುವಷ್ಟು 6 ತಿಂಗಳಲ್ಲಿ ಸೈಬರ್ ಕಳ್ಳತನವಾಗುತ್ತಿವೆ. ಸೈಬರ್ ವಂಚನೆ ತಡೆಗೆ ಪೊಲೀಸರಿಗೆ ಆಧುನಿಕ ತಂತ್ರಜ್ಞಾನ ಸೇರಿ ಎಲ್ಲಾ ರೀತಿಯ ಸಹಾಯ ನೀಡಲಾಗಿದೆ. ಅನೇಕರಿಗೆ ತರಬೇತಿ ನೀಡಿದ್ದರಿಂದ ಪರಿಣಿತರಾಗಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಂಚನೆಗೊಳಗಾದವರು ಗೋಲ್ಡನ್ ಹವರ್( ಹಣ ಕಳೆದುಕೊಂಡ ಒಂದುತಾಸಿನೊಳಗಿನ ಅವಧಿ) ನಲ್ಲಿ ಸೈಬರ್ ಠಾಣೆಗೆ ಸಂಪರ್ಕಿಸಿದರೆ ಹಣ ವಾಪಸ್ ಸಿಗಲಿದೆ ತಡವಾಗಿದ್ದಲ್ಲಿ ರಿಕವರಿ ಕಷ್ಟ ಹೀಗಾಗಿ ಸಾರ್ವಜನಿಕರು ಹೆಚ್ಚು ಜಾಗರುಕರಾಗಬೇಕು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್ ಪಿ ಶಾಂತವೀರ ಮತ್ತಿತರರು ಇದ್ದರು