×
Ad

ಆರೆಸ್ಸೆಸ್ ನ ಹಿಂದು ರಾಷ್ಟ್ರ ಆಶಯದ ವಿರುದ್ಧ ಪ್ರಾಣತ್ಯಾಗ ಮಾಡಿಯಾದರೂ ಭಾರತವನ್ನು ಉಳಿಸುತ್ತೇವೆ: ತುಹೀನ್ ದೇವ್

Update: 2025-01-31 10:13 IST

ರಾಯಚೂರು:  "ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿ, ಪನ್ಸಾರೆಯಂತಹ ಪ್ರಗತಿಪರರನ್ನು ಕೊಂದ ಆರೆಸ್ಸೆಸ್ ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿದೆ. ದೇಶವನ್ನು ಕಾರ್ಪೊರೇಟ್ ಕಂಪೆನಿಗಳ ಹಿಡಿತಕ್ಕೆ ನೀಡಿ ಹಿಂದೂ ರಾಷ್ಟ್ರವನ್ನು ಮಾಡಲು ಯೋಚಿಸುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಅವರನ್ನು ವಿರೋಧಿಸಬೇಕು ಎಂದು ಛತ್ತೀಸ್ ಗಡ ಜಾತಿ ನಿರ್ಮೂಲ ಚಳವಳಿಯ ರಾಷ್ಟ್ರೀಯ ಸಂಚಾಲಕ ತುಹೀನದೇವ ಕರೆ ನೀಡಿದ್ದಾರೆ.

 

ಜಿಲ್ಲೆಯ ಲಿಂಗಸೂರಿನಲ್ಲಿ ಆಯ್ದಕ್ಕಿ ಲಕ್ಕಮ್ಮ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ‘ಭಾರತದ ಸಂವಿಧಾನ ಒಪ್ಪದವರು ಭಾರತ ಬಿಟ್ಟು ತೊಲಗಿ, ಆರೆಸ್ಸೆಸ್ ನ ಹಿಂದೂ ರಾಷ್ಟ್ರ ವಿರೋಧಿ ಜನತಾ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 

"ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶವನ್ನು ಅದಾನಿ, ಅಂಬಾನಿಯಂತಹ ಕಾರ್ಪೊರೇಟ್ ಬಂಡವಾಳ ಶಾಹಿಗಳಿಗೆ ಬಲಿ ಕೊಡುತ್ತಿದ್ದಾರೆ. ಆರೆಸ್ಸೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಛತ್ತೀಸ್ ಗಡ, ರಾಜಸ್ಥಾನ ರಾಜ್ಯಗಳಲ್ಲಿ ಡಬಲ್ ಎಂಜಿನ್ ಸರಕಾರಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿವೆ. ಫ್ಯಾಶಿಸ್ಟ್, ಮನುವಾದಿ ಆಡಳಿತ ನಡೆಸುತ್ತಿದೆ. ಪ್ರಗತಿಪರ ಚಿಂತಕರನ್ನು ಕೊಲ್ಲುವ ಆರೆಸ್ಸೆಸ್ ದೇಶದಲ್ಲಷ್ಟೇ ಅಲ್ಲ, ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿದೆ. ಆರೆಸ್ಸೆಸ್ ಭಾರತವನ್ನು ಹಿಂದೂ ರಾಷ್ಟ್ರಮಾಡಲು ಹೊರಟಿದ್ದು, ನಾವು ಪ್ರಾಣ ತೆತ್ತಾದರೂ ಇದನ್ನು ಉಗ್ರವಾಗಿ ಹೋರಾಡಿ ಅವರ ಆಶಯ ಬುಡಮೇಲು ಮಾಡುತ್ತೇವೆ'' ಎಂದು ಹೇಳಿದರು.

 

ಕಾಗಿನೆಲೆಯ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಶ್ರೀ ಮಾತನಾಡಿ, ‘ಸಂವಿಧಾನ ಬದಲಿಸಿ ದೇಶದಲ್ಲಿ ಮನುವಾದಿ, ಸನಾತನ ಸಂವಿಧಾನ ಜಾರಿಗೊಳಿಸಲು ಹೊರಟಿರುವವರ ಕುತಂತ್ರ ಸಾಕಾರ ಗೊಳ್ಳದಂತೆ ನೋಡಿಕೊಳ್ಳಬೇಕಿದೆ ಎಂದರು. ‘ಸನಾತನವಾದಿಗಳು ರೈತರು, ಕಾರ್ಮಿಕರು ಹಾಗೂ ದಲಿತ, ಹಿಂದುಳಿದ ಅಲ್ಪಸಂಖ್ಯಾತರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ಮನುವಾದ ಅನುಷ್ಠಾನಗೊಳಿಸುವ ಪ್ರಯತ್ನಗಳು ನಡೆಸಿದ್ದಾರೆ. ಸಂವಿಧಾನ ಬದಲಿಸುವ ಹುನ್ನಾರ ನೋಡುತ್ತ ಸುಮ್ಮನೆ ಕುಳಿತರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

 

ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಕ್ರಾಂತಿಕಾರಿ ಹೋರಾಟಗಾರ ಆರ್.ಮಾನಸಯ್ಯ ಮಾತನಾಡಿ, ‘'ದೇಶದಲ್ಲಿ ಧರ್ಮ, ಜಾತಿ ಹೆಸರಿನಲ್ಲಿ ಜನ ಸಮುದಾಯಗಳ ನಡುವೆ ದ್ವೇಷ ಹರಡುವ ಕಾರ್ಯ ನಿರಂತರವಾಗಿ ನಡೆದಿದೆ'' ಎಂದರು.

"ಆರೆಸ್ಸೆಸ್ ಮೂಲ ಸೌಲಭ್ಯಗಳು ಒದಗಿಸುವ ಬದಲು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಅಲ್ಪಸಂಖ್ಯಾತ ಯುವಕರನ್ನು ಸೆಳೆದು ಅವರಿಂದ ಸಮಾಜದಲ್ಲಿ ಶಾಂತಿ ಕದಡುವ ಕೃತ್ಯಗಳನ್ನು ಮಾಡಿಸಿ ಬಡ ಯುವಕರನ್ನು ಜೈಲಿಗೆ ಅಟ್ಟಲಾಗುತ್ತಿದೆ. ಕೆಳ ವರ್ಗದ ಯುವಕರು ಮೋಹದ ಮಾತಿಗೆ ಮರಳಾಗಬಾರದು" ಎಂದರು.

 

ಸಂವಿಧಾನ ಬದಲಿಸುವ ಕೇಂದ್ರದ ಸರಕಾರ ನಡೆಯನ್ನು ತಡೆಯಲು ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಕ್ರಾಂತಿಕಾರಿ ಚಳವಳಿಗೆ ಮುಂದಾಗಬೇಕು ಎಂದವರು ಕರೆ ನೀಡಿದರು.

ಸಮಾವೇಶದಲ್ಲಿ ಪಂಡಿತ ಸೂಫಿ ಸೈಯದ್ ಭಾಷಾ, ಬೌದ್ಧ ಗುರು ಧಮ್ಮದೀಪ ಬಂತೇಜಿ, ವಾಲ್ಮೀಕಿ ಗುರುಪೀಠದ ವರದಾನೇಶ್ವರ ಶ್ರೀ, ಗ್ಯಾರಂಟಿ ಯೋಜನೆ ಜಿಲ್ಲಾ ಘಟಕದ ಅಧ್ಯಕ್ಷ ಪಾಮಯ್ಯ ಮುರಾರಿ, ಮೌಲಾನ ಮುಫ್ತಿ ಯೂನುಸ್, ಯಲಗಟ್ಟಾದ ಗಡವಡಕಿಮಠದ ಲಕ್ಷಮ್ಮಪ್ಪಯ್ಯ, ಫಾ.ರಾಬರ್ಟ್ ಪೌಲ್, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ, ಹನುಮಂತಪ್ಪ ಮನ್ನಾಪುರ, ಮುಹಮ್ಮದ್ ಅಮೀರ್ ಅಲಿ, ಎಚ್.ಎನ್.ಬಡಿಗೇರ, ವಿಜಯರಾಣಿ, ರಕ್ಮುಣಿ, ಬಿ.ರುದ್ರಯ್ಯ, ಎಚ್.ಬಿ.ಮುರಾರಿ, ಕಾಲಜ್ಞಾನ ಮಠದ ಶಿವಕುಮಾರ ಶ್ರೀ, ಲಿಂಗಪ್ಪ ಪರಂಗಿ, ಎಂ.ಗಂಗಾಧರ, ಖಾಲಿದ್ ಜಾವುಸ್, ಆದಿ ನಗನೂರು, ಮೋಹನ್ ಗೋಸ್ಲೆ, ಕುಪ್ಪಣ್ಣ ಹೊಸಮನಿ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News