ಹಾಕಿ ವಿಶ್ವಕಪ್ 2026 | ಅರ್ಜೆಂಟೀನಾ ವಿರುದ್ಧ ಭಾರತಕ್ಕೆ 3-5 ಅಂತರದ ಸೋಲು: ಸೆಮಿಫೈನಲ್ ಕನಸು ಭಗ್ನ
Photo credit : hockeyindia
ಆಮ್ಸ್ಟರ್ವೀನ್ : ಎಫ್ಐಎಚ್ ಹಾಕಿ ವಿಶ್ವಕಪ್ 2026ರ ಪೂಲ್ ಇ (Pool E) ಅಂತಿಮ ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ 3-5 ಗೋಲುಗಳ ಅಂತರದಿಂದ ಸೋಲನುಭವಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ. ನೆದರ್ಲೆಂಡ್ಸ್ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಆಧಾರದಲ್ಲಿ ಸೆಮಿಫೈನಲ್ ಗೆ ಪ್ರವೇಶಿಸುವ ಅರ್ಜೆಂಟೀನಾದ ಆಸೆ ಇನ್ನೂ ಜೀವಂತವಾಗಿದೆ.
2016ರ ರಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅರ್ಜೆಂಟೀನಾ ತಂಡವು ಪಂದ್ಯದುದ್ದಕ್ಕೂ ವೇಗದ ಆಟ ಪ್ರದರ್ಶಿಸಿತು. ಭಾರತದ ರಕ್ಷಣಾ ವಿಭಾಗದ ಗಂಭೀರ ಎಡವಟ್ಟುಗಳನ್ನು ಬಳಸಿಕೊಂಡು ಭಾರತದ ಮೇಲೆ ಒತ್ತಡ ಹೇರುತ್ತಲೇ ಹೋಯಿತು.
ಆರಂಭಿಕ ಆರು ನಿಮಿಷಗಳಲ್ಲಿ ಜೋಕ್ವಿನ್ ಟೊಸ್ಕಾನಿ ಮತ್ತು ನಿಕೋಲಸ್ ಡೆಲ್ಲಾ ಟೊರೆ ಅವರ ಗೋಲುಗಳ ನೆರವಿನಿಂದ ಅರ್ಜೆಂಟೀನಾ 2-0 ಮುನ್ನಡೆ ಸಾಧಿಸಿತು. ಆರಂಭದಲ್ಲೇ ಒತ್ತಡಕ್ಕೊಳಗಾದ ಭಾರತಕ್ಕೆ 10ನೇ ನಿಮಿಷದಲ್ಲಿ ಸುಖ್ಜೀತ್ ಸಿಂಗ್ ಗೋಲು ಅಲ್ಪ ನಿರಾಳತೆ ನೀಡಿತು.
ಆದರೆ ಅರ್ಜೆಂಟೀನಾದ ಅಬ್ಬರದ ಮುಂದೆ ಭಾರತದ ರಕ್ಷಣಾ ವಿಭಾಗವು ಎಡವಟ್ಟುಗಳಿಂದ ಚೇತರಿಸಿಕೊಳ್ಳಲೇ ಸಾಧ್ಯವಾಗಲಿಲ್ಲ. ಮೂರನೇ ಕ್ವಾರ್ಟರ್ ನಲ್ಲಿ ಟೊಮಾಸ್ ಡೊಮೆನೆ ಅರ್ಜೆಂಟೀನಾದ ಮುನ್ನಡೆಯನ್ನು ಹೆಚ್ಚಿಸಿದ್ದಲ್ಲದೆ, ಮತ್ತೊಂದು ಪೆನಾಲ್ಟಿ ಸ್ಟ್ರೋಕ್ ಅನ್ನೂ ಗೋಲಾಗಿ ಪರಿವರ್ತಿಸಿ ತಂಡದ ಪರ 4ನೇ ಗೋಲು ಗಳಿಸಿದರು. ಬಳಿಕ ಲ್ಯೂಕಾಸ್ ಟೊಸ್ಕಾನಿ ಗೋಲು ಗಳಿಸಿ ಸ್ಕೋರ್ ಅನ್ನು 5-1ಕ್ಕೆ ಕೊಂಡೊಯ್ದರು.
ಪಂದ್ಯದ ಕೊನೆಯ ಅವಧಿಯವರೆಗೂ ಅರ್ಜೆಂಟೀನಾ 4 ಗೋಲುಗಳ ಭರ್ಜರಿ ಮುನ್ನಡೆ ಸಾಧಿಸಿತ್ತು. ಕೊನೆಯ ಮೂರು ನಿಮಿಷಗಳಲ್ಲಿ ಭಾರತ ಎರಡು ಗೋಲುಗಳನ್ನು ಗಳಿಸಿ ಸೋಲಿನ ಅಂತರವನ್ನು ತಗ್ಗಿಸಿತು. ನಾಲ್ಕನೇ ಕ್ವಾರ್ಟರ್ ನ ಕೊನೆಯಲ್ಲಿ ಸುಖ್ಜೀತ್ ತಮ್ಮ ವೈಯಕ್ತಿಕ ಎರಡನೇ ಗೋಲು ಗಳಿಸಿದರು ಹಾಗೂ ಹಾರ್ದಿಕ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಅನ್ನು ಗೋಲಾಗಿ ಪರಿವರ್ತಿಸಿ ಗೋಲುಗಳ ಸಂಖ್ಯೆಯನ್ನು ಮೂರಕ್ಕೇರಿಸಿದರು.
ಪಂದ್ಯದಲ್ಲಿ ಭಾರತಕ್ಕೆ ಸತತ ಪೆನಾಲ್ಟಿ ಕಾರ್ನರ್ ಗಳು ಲಭಿಸಿದರೂ, ಹರ್ಮನ್ಪ್ರೀತ್ ಸಿಂಗ್ ಅವರ ಡ್ರ್ಯಾಗ್ಫ್ಲಿಕ್ ಗಳನ್ನು ಅರ್ಜೆಂಟೀನಾದ ರಕ್ಷಣಾ ಆಟಗಾರರು ಸಮರ್ಥವಾಗಿ ತಡೆದರು. ಯಶದೀಪ್, ಹಾರ್ದಿಕ್ ಮತ್ತು ಜರ್ಮನ್ಪ್ರೀತ್ ಅವರ ಪ್ರಯತ್ನದಿಂದ ಬಂದ ಮತ್ತೊಂದು ಪೆನಾಲ್ಟಿ ಕಾರ್ನರ್ ಕೂಡ ಗೋಲಾಗಿ ಪರಿವರ್ತನೆಯಾಗಲಿಲ್ಲ.
ಅಂತಿಮ ಸೈರನ್ ಮೊಳಗುವ ಮುನ್ನ ಹರ್ಮನ್ಪ್ರೀತ್ ಸಿಂಗ್ ಗಳಿಸಿದ ಪೆನಾಲ್ಟಿ ಕಾರ್ನರ್ ಭಾರತಕ್ಕೆ ಕೊನೆಯ ಅವಕಾಶವಾಗಿತ್ತು. ಆದರೆ ಅರ್ಜೆಂಟೀನಾದ ಗೋಲ್ಕೀಪರ್ ಟೊಮಾಸ್ ಸ್ಯಾಂಟಿಯಾಗೊ ಆ ಚೆಂಡನ್ನು ತಡೆದು ಭಾರತದ ಸೆಮಿಫೈನಲ್ ಆಸೆಗೆ ಸಂಪೂರ್ಣ ತೆರೆ ಎಳೆದರು.
ಈ ಪಂದ್ಯದ ಬಳಿಕ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದ ಭಾರತವೀಗ 7 ಮತ್ತು 8ನೇ ಸ್ಥಾನಕ್ಕಾಗಿ ಸ್ಪರ್ಧಿಸಲಿದೆ.