ವಿಜಯ್ ಹಝಾರೆ ಟ್ರೋಫಿ | ಕರ್ನಾಟಕ ತಂಡಕ್ಕೆ ಮರಳಿದ ಕೆ.ಎಲ್.ರಾಹುಲ್, ಪ್ರಸಿದ್ಧ ಕೃಷ್ಣ
ಕೆ.ಎಲ್.ರಾಹುಲ್ | Photo Credit : PTI
ಬೆಂಗಳೂರು: ಡಿಸೆಂಬರ್ 24ರಿಂದ ಪ್ರಾರಂಭಗೊಳ್ಳಲಿರುವ ವಿಜಯ್ ಹಝಾರೆ ಟ್ರೋಫಿಗೆ ಕರ್ನಾಟಕ ತಂಡವನ್ನು ಘೋಷಿಸಲಾಗಿದ್ದು, ಹಿರಿಯ ಆಟಗಾರರಾದ ಕೆ.ಎಲ್.ರಾಹುಲ್, ದೇವದತ್ತ ಪಡಿಕ್ಕಲ್ ಹಾಗೂ ಪ್ರಸಿದ್ಧ ಕೃಷ್ಣ ತಂಡಕ್ಕೆ ಮರಳಿದ್ದಾರೆ.
ಭಾರತೀಯ ತಂಡದಲ್ಲಿ ಆಡುವ ಆಟಗಾರರನ್ನು ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡಿಸಬೇಕು ಎಂಬ ಬಿಸಿಸಿಐ ನಿಯಮದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಸ್ಥಾನ ಪಡೆಯದ ಈ ಮೂವರು ಆಟಗಾರರನ್ನು ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಡಿ. 24ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲೇ ಇವರೆಲ್ಲ ಕಣಕ್ಕಿಳಿಯುವ ಸಾಧ್ಯತೆ ಇದೆ.
ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ತಂಡದೆದುರಿನ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೆ.ಎಲ್.ರಾಹುಲ್ ಹಾಗೂ ಪ್ರಸಿದ್ಧ ಕೃಷ್ಣ ಇಬ್ಬರೂ ಕರ್ನಾಟಕ ತಂಡದ ಭಾಗವಾಗಲಿದ್ದಾರೆ. ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕೆ.ಎಲ್.ರಾಹುಲ್, ಸುದೀರ್ಘ ಕಾಲದ ನಂತರ ದೇಶೀಯ ನಿಯಮಿತ 50 ಓವರ್ ಗಳ ಪಂದ್ಯಗಳಿಗೆ ಮರಳುತ್ತಿದ್ದಾರೆ. ಅವರ ಪುನರಾಗಮನದಿಂದ ಕರ್ನಾಟಕ ತಂಡದ ಬ್ಯಾಟಿಂಗ್ ಶಕ್ತಿ ಮತ್ತಷ್ಟು ಬಲಿಷ್ಠಗೊಂಡಿದೆ.