ಮೋದಿಯವರನ್ನು ಹೊಗಳಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ, ಹೊಟ್ಟೆಯೂ ತುಂಬುವುದಿಲ್ಲ : ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೂ ಬರುವುದಿಲ್ಲ, ಆ ಪಕ್ಷದ ನಾಯಕರ ಹೊಟ್ಟೆಯೂ ತುಂಬುವುದಿಲ್ಲ ಎಂದು ಬಿಜೆಪಿ ಉಚ್ಚಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಎಂದು ವಾಗ್ದಾಳಿ ನಡೆಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಮಾತನಾಡಿದ ಅವರು, ಬಿಜೆಪಿ ಮಿತ್ರರು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದೇ, ಹೊಗಳಿದ್ದು. ಆದರೆ, ಅಧಿಕಾರ ಸಿಕ್ಕ ಸಂದರ್ಭದಲ್ಲಿ ಅವರ ನಡೆಯನ್ನು ತಮ್ಮ ಆಡಳಿತದಲ್ಲಿ ಅಳವಡಿಕೊಳ್ಳಲಿಲ್ಲ. ಜತೆಗೆ, ಭ್ರಷ್ಟಾಚಾರವೂ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಈ ಹಿಂದೆ ಬಿಜೆಪಿ ಪಕ್ಷವು ಚುನಾವಣೆಯಲ್ಲಿ ಸೋಲು ಕಂಡಿತು ಎಂದರು.
ಇತ್ತ ಈಗಿನ ಸರಕಾರದಲ್ಲಿ ನಾಯಕತ್ವ ಗೊಂದಲದಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸಿಎಲ್ಪಿ ಸಭೆಯಲ್ಲಿಯೂ ಕೂಡ ಇದೆ ಚರ್ಚೆ ಆಗಿದೆ. ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದ ಖ್ಯಾತಿ ಹೊಂದಿದ್ದಾರೆ. ಆದರೆ, ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಅಪಕೀರ್ತಿ ಪಡೆದುಕೊಂಡು ಹೋಗಬೇಡಿ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಸಂಘರ್ಷ ಆಗಬಾರದು. ಸಂಘರ್ಷ ಸದನದ ಹೊರೆಗೆ ಇರಬೇಕು. ರಾಜ್ಯ ಸರಕಾರ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವ ಭಾಷಣ ಮಾಡಿಸಿದೆ. ಗ್ಯಾರಂಟಿಗಳ ಬಗ್ಗೆ ಹೊಗಳುವುದನ್ನು ಮಾಡಿದೆ. ಅಭಿವೃದ್ಧಿ ಯೋಜನೆ ಸರಿಯಾಗಿ ಬಳಕೆ ಮಾಡದಿದ್ದರೆ ಮತ ಹಾಕಿದ ಜನರಿಗೆ ಅನ್ಯಾಯ ಮಾಡಿದಂತೆ ಎಂದು ಯತ್ನಾಳ್ ನುಡಿದರು.