ಬಿಜೆಪಿಯವರದ್ದು ಮನುವಾದಿ ಮನಸ್ಥಿತಿ: ಮಲ್ಲಿಕಾರ್ಜುನ ಖರ್ಗೆ ಭಾಷಣ ನಡೆಸಿದ 'ಸ್ಥಳ ಶುದ್ಧೀಕರಣ' ಘಟನೆ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಆಕ್ರೋಶ

"ಮುಂದಿನ‌ ದಿನಗಳಲ್ಲಿ ಛಲವಾದಿ ನಾರಾಯಣ ಸ್ವಾಮಿ ‌ಅವರ ಕುರ್ಚಿಯನ್ನು ಶುದ್ಧೀಕರಣ ಮಾಡಿದರೂ ಅಚ್ಚರಿಪಡಬೇಕಿಲ್ಲ"

Update: 2026-08-19 13:42 IST

ಬೆಂಗಳೂರು : ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ತೆರಳಿದ್ದ ಸ್ಥಳವನ್ನು ಗಂಗಾಜಲ ಸಿಂಪಡಿಸಿ ಹೋಮ ಮಾಡುವ ಮೂಲಕ 'ಶುದ್ಧೀಕರಣ' ಮಾಡಿದ ಮನುವಾದಿ ಮನಸ್ಥಿತಿಯುಳ್ಳವರು ಬಿಜೆಪಿಯವರು. ಇದೀಗ ಸಚಿವ ಬಿ.ನಾಗೇಂದ್ರ ಅವರು ದಲಿತ ಎಂಬ ಕಾರಣಕ್ಕೆ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು ಹೇಳಿದ್ದಾರೆ.

ಸಚಿವ‌ ನಾಗೇಂದ್ರ ಅವರೊಂದಿಗೆ ಬುಧವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವರಾಜ್.ಎಸ್.ತಂಗಡಗಿ ಅವರು, ಖಂಡನಾ‌ ನಿರ್ಣಯದ ವೇಳೆ ಬಿಜೆಪಿಯ ಒಬ್ಬರು ಶಾಸಕರು ಧ್ವನಿ ಎತ್ತಲಿಲ್ಲ. ಇದೀಗ ನಾಗೇಂದ್ರ ಅವರು ದಲಿತರು ಎಂಬ ಕಾರಣಕ್ಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಚರ್ಚೆಗೆ ಬರಲಿ. ನಾಗೇಂದ್ರ ಅವರು ಓರ್ವ ದಲಿತ ಸಮುದಾಯಕ್ಕೆ ಸೇರಿದ ನಾಯಕ ಎಂಬ ಕಾರಣಕ್ಕೆ ಇಂತಹ ಆರೋಪ ಮಾಡುತ್ತಾ ಸದನದ ಕಲಾಪವನ್ನು ಹಾಳು ಮಾಡುತ್ತಿರುವ ಬಿಜೆಪಿಗರಿಗೆ ಜನ ತಕ್ಕ‌‌ ಪಾಠ ಕಲಿಸಲಿದ್ದಾರೆ‌.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ‌ಅವರ ಖುರ್ಚಿಯನ್ನು ಮುಂದಿನ‌ ದಿನಗಳಲ್ಲಿ ಶುದ್ಧೀಕರಣ ಮಾಡಿದರೂ ಅಚ್ಚರಿಪಡಬೇಕಿಲ್ಲ.‌ ಸಂವಿಧಾನವನ್ನೇ ಬದಲಾಯಿಸಬೇಕೆಂಬ ಮನಸ್ಥಿತಿ ಹೊಂದಿರುವ ಇಂತಹವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಬಿಜೆಪಿ‌ ಪಕ್ಷದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಏಳ್ಗೆಯನ್ನು ಸಹಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಆರೋಪ ಕೇಳಿ ಬಂದ ಕೂಡಲೇ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದರು. ಆರೋಪಿಯಾಗಿದ್ದರೆ ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ನೀಡುತ್ತಿದ್ದರೇ? ರಾಜ್ಯಪಾಲರು ಮತ್ತು ಸಂವಿಧಾನಕ್ಕಿಂತ ಬಿಜೆಪಿಗರು ದೊಡ್ಡವರೇ? ತಮ್ಮ ಬಳಿ ಯಾವುದೇ ದಾಖಲೆಗಳಿದ್ದರೆ ಸದನದ ಮುಂದೆ ಇಡಲಿ. ವಿಸ್ತೃತವಾಗಿ ಚರ್ಚೆ ನಡೆಯಲಿ. ರಾಜ್ಯದಲ್ಲಿ ಬರಗಾಲ ಇದ್ದು, ನಾಡಿನ ಜನತೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡದೆ ಕಲಾಪವನ್ನು ಹಾಳು ಮಾಡುತ್ತಿದ್ದಾರೆ.ಬರಗಾಲದ ಸಂದರ್ಭದಲ್ಲಿ ಪ್ರತಿಪಕ್ಷವಾಗಿ‌ ವಿಪಕ್ಷ ನಾಯಕರದ್ದು ಪ್ರಮುಖ‌ ಜವಾಬ್ದಾರಿ ಇದೆ. ನಾಡಿನ ಜನತೆಯ ಹಿತ ಕಾಯುವುದು ಎಲ್ಲರ ಕರ್ತವ್ಯ. ಅದನ್ನು ಬಿಟ್ಟು ಸದನದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News