×
Ad

ನ್ಯಾಷನಲ್ ಹೆರಾಲ್ಡ್ ಪ್ರಕರಣ | ಮೋದಿ ಸರಕಾರಕ್ಕೆ ದಿಲ್ಲಿ ಕೋರ್ಟ್‌ ಕಪಾಳಮೋಕ್ಷ : ಬಿ.ಕೆ.ಹರಿಪ್ರಸಾದ್‌

"ಸತ್ಯ ಮತ್ತು ನ್ಯಾಯ ಸೇಡಿನ ರಾಜಕೀಯವನ್ನು ಸೋಲಿಸಿದೆ"

Update: 2025-12-16 18:30 IST

ಬಿ.ಕೆ.ಹರಿಪ್ರಸಾದ್

ಬೆಂಗಳೂರು : ಸತ್ಯ ಮತ್ತು ನ್ಯಾಯ ಸೇಡಿನ ರಾಜಕೀಯವನ್ನು ಸೋಲಿಸಿದೆ. ಗಾಂಧಿ ಕುಟುಂಬವನ್ನು ರಾಜಕೀಯವಾಗಿ ಎದುರಿಸಲಾಗದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸುಳ್ಳು ಖಾಸಗಿ ದೂರನ್ನು ದಾಖಲಿಸಿ ತನಿಖಾ ಸಂಸ್ಥೆಗಳ ದುರಪಯೋಗ ಮಾಡಿಕೊಂಡಿರುವುದಕ್ಕೆ ದಿಲ್ಲಿ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ಈ ಸಂಬಂಧ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಇತರ ಐದು ಜನರ ವಿರುದ್ಧ ಜಾರಿ ನಿರ್ದೇಶನಾಲಯ(ಈ.ಡಿ) ಸಲ್ಲಿಸಿರುವ ಅಕ್ರಮ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದಿಲ್ಲಿ ನ್ಯಾಯಾಲಯ ನಿರಾಕರಿಸಿದ್ದು ಮಾತ್ರವಲ್ಲ, ಚಾರ್ಜ್ ಶಿಟ್ ಅನ್ನೇ ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಗಾಂಧಿ ಕುಟುಂಬದ ಮೇಲೆ ‘ಮೋ-ಶಾ’ ಜೋಡಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಮಾಡಿರುವ ಸುಳ್ಳು ಆರೋಪಗಳಿಗೆ ನ್ಯಾಯಾಲಯವೆ ತಕ್ಕ ಉತ್ತರ ಕೊಟ್ಟಿದೆ. ಬೆದರಿಕೆ, ಕಿರುಕುಳ, ಸೇಡಿನ ಅತ್ಯಂತ ಹೀನ ರಾಜಕಾರಣ ಮಾಡಿದ ಮೋ-ಶಾ ಜೋಡಿಗೆ ಇದೇ ಪ್ರಕರಣದಲ್ಲಿ ಕೋರ್ಟ್ ನೀಡಿರುವ ಒಂದೊಂದು ಹೇಳಿಕೆಗಳು ಕಪಾಳಮೋಕ್ಷವಾಗಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಸ್ವತಂತ್ರ ಚಳುವಳಿಯಲ್ಲಿ ಮಹತ್ತರ ಪಾತ್ರವಹಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮೇಲೆ ಆಧಾರ ರಹಿತ ಆರೋಪ ಮಾಡಿರುವ ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿ ಸರಕಾರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸೇಡಿನ ರಾಜಕೀಯವನ್ನು ಮುಂದುವರೆಸುತ್ತಲೆ ಬರುತ್ತಿರುವ ಮೋ-ಶಾಗಳಿಗೆ ನ್ಯಾಯಲಯ ಪಾಠ ಕಲಿಸಿದೆ, ಮುಂದೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News