×
Ad

ಆರೆಸ್ಸೆಸ್ ವಿಚಾರದಲ್ಲಿ ಸಾರ್ವಜನಿಕ ಚರ್ಚೆಗೆ ಬನ್ನಿ: ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ಆಹ್ವಾನ

Update: 2025-10-13 17:31 IST

ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆಯವರು ನಿನ್ನೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆ ಮಾಡಲು ಆಹ್ವಾನಿಸುವುದಾಗಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಆರೆಸ್ಸೆಸ್ ನಕಾರಾತ್ಮಕ ಭಾವನೆಗಳನ್ನು ಬಿತ್ತುತ್ತದೆ; ಗಲಭೆ ಹುಟ್ಟುಹಾಕುತ್ತದೆ ಎಂಬ ಮಾತನ್ನು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 100 ವರ್ಷದ ಇತಿಹಾಸದಲ್ಲಿ ಆರೆಸ್ಸೆಸ್ ಸ್ವಯಂಸೇವಕರು ಭಯೋತ್ಪಾದನೆ ಮಾಡಿದ ಇತಿಹಾಸ ಇಲ್ಲ. ಸಮಾಜ ಪರಿವರ್ತನೆ ಮಾಡಿದ, ಭೂಕಂಪ, ಪ್ರವಾಹದಂಥ ಆಪತ್ತಿನ ಸಂದರ್ಭದಲ್ಲಿ ನೆರವಿಗೆ ನಿಂತ ನೂರಾರು ಉದಾಹರಣೆಗಳಿವೆ" ಎಂದು ವಿವರಿಸಿದರು.

ಆರೆಸ್ಸೆಸ್ ಪ್ರೇರಣೆಯಿಂದ ಚಾಲನೆಗೊಂಡ ಸಂಘಟನೆಗಳು ಇವತ್ತು ಜನಮನ್ನಣೆಯನ್ನು ಗಳಿಸಿವೆ. ಜನಪ್ರೀತಿಗೆ ಪಾತ್ರವಾಗಿ ತನ್ನದೇ ಆದ ಮನ್ನಣೆ ಪಡೆದುದನ್ನು ನೋಡಬಹುದು ಎಂದು ಹೇಳಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೆಸ್ಸೆಸ್ ಪ್ರೇರಣೆಯಿಂದ ಹುಟ್ಟಿದ ಸಂಘಟನೆ. ಭಾರತೀಯ ಮಜ್ದೂರ್ ಸಂಘ, ಭಾರತೀಯ ಜನತಾ ಪಾರ್ಟಿ ಕೂಡ ಆರೆಸ್ಸೆಸ್ ಪ್ರೇರಣೆಯಿಂದ ಹುಟ್ಟಿವೆ ಎಂದರು.

ನೀವು ಕಷ್ಟ ಪಟ್ಟಿಲ್ಲ; ಅಪ್ಪನ ರಾಜಕೀಯ ವಾರೀಸುದಾರಿಕೆ ಅಚಾನಕ್ಕಾಗಿ ತಮಗೆ ಸಿಕ್ಕಿದೆ. ಪರಿಶ್ರಮ ಪಟ್ಟು ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಜನಮನ್ನಣೆ ಪಡೆದು, ಜನಾಂದೋಲನದ ಮೂಲಕ ಜನನಾಯಕರಾದವರು ನೀವಲ್ಲ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದರು. ನಿಮಗೆ ರಾಜಕೀಯ ವಾರೀಸುದಾರಿಕೆಯ ಜೊತೆಗೇ ಬೇರೆ ಬೇರೆ ವಾರೀಸುದಾರಿಕೆ ಅಚಾನಕ್ಕಾಗಿ ತಮಗೆ ಸಿಕ್ಕಿವೆ. ಅದು ಸಿಕ್ಕಿರುವ ಅಹಂನಲ್ಲಿ ಅಸಂಬದ್ಧವಾಗಿ ಮಾತನಾಡುವಂತೆ ಅನಿಸುತ್ತಿದೆ ಎಂದು ಆಕ್ಷೇಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News