×
Ad

ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ. ಸುರೇಶ್

"ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ"

Update: 2025-10-29 19:11 IST

ಡಿ.ಕೆ.ಸುರೇಶ್ (Photo: X/@DKSureshINC)

ಬೆಂಗಳೂರು: ನಮ್ಮ ಸಹೋದರ ಡಿ.ಕೆ.ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹೇಳಿದ್ದಾರೆ.

ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಉಪ ಮುಖ್ಯಮಂತ್ರಿ ಆಗಿ ಪಕ್ಷದ ಏಳಿಗೆಗೆ, ಘನತೆಗೆ ಚ್ಯುತಿ ಬರದಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದರು.

ಪಕ್ಷ ನಿಷ್ಠರಾಗಿ ಡಿ.ಕೆ.ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ಅವರು ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಗಮನ ಹರಿಸುತ್ತಿಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ ಎಂದು ಹೇಳಿದರು.

ನ.15ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ, ಎಐಸಿಸಿ ನಾಯಕರಿಗೆ ಕೇಳಬೇಕು ಎಂದರು.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಯಕರಾದ ಕೆ.ಎನ್.ರಾಜಣ್ಣ ತಮ್ಮ ಸಲಹೆಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತಿದ್ದಾರೆ ಎಂದರು.

ʼಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆʼ:

ರಾಜಕೀಯದಲ್ಲಿ 95-98 ವರ್ಷ ಆದವರೂ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಅದರಲ್ಲಿ ಯಾವ ತಪ್ಪೂ ಇಲ್ಲ. ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ಒಬ್ಬ ನಾಯಕನಿಗೆ ಇರಬೇಕಾದ ಎಲ್ಲ ಅವಕಾಶಗಳು ಅವರಿಗಿದೆ. ಎಲ್ಲರಿಗಿಂತ ಗಟ್ಟಿಯಾಗಿ, ಚೆನ್ನಾಗಿ ಓಡಾಡುತ್ತಿದ್ದಾರೆ. ದಿನನಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉತ್ತಮವಾಗಿ ಆಡಳಿತ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನಿಲ್ಲ ಎಂದರು.

ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಎನ್ನುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಇದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇದು ಎರಡೂವರೆ ವರ್ಷದ ವಿಚಾರವಲ್ಲ. ಐದು ವರ್ಷಗಳ ಕಾಲ ಕೆಲಸ ಮಾಡಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. 140 ಸ್ಥಾನಗಳನ್ನು ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಯಬೇಕು. ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷ ಹಾಗೂ ಸರಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಸುರೇಶ್ ಹೇಳಿದರು.

ನಾಯಕತ್ವ ಬದಲಾವಣೆಯ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆಡಳಿತ ನಡೆಸಿ ಅನುಭವವಿಲ್ಲ. ಸಂಸದನಾಗಿ ಇರುವುದೆ ಬೇರೆ. ಆಡಳಿತ ನಡೆಸುವುದೆ ಬೇರೆ ಎಂದರು.

ಆರೆಸ್ಸೆಸ್ ಕೆಲವು ಬದಲಾವಣೆ ಮಾಡಿಕೊಳ್ಳಬೇಕು:

ಆರೆಸ್ಸೆಸ್ ಪಥ ಸಂಚಲನಕ್ಕೆ ಸರಕಾರ ಯಾವುದೆ ಕಡಿವಾಣ ಹಾಕಿಲ್ಲ. ದೊಣ್ಣೆ ಹಿಡಿದುಕೊಂಡು ಮಾಡುವ ಪಥ ಸಂಚಲನಕ್ಕೆ ವಿರೋಧವಿದೆ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನ ಹಿಂದಿನ ಕಾಲದಲ್ಲಿ ಸರಿ ಎನಿಸುತ್ತಿತ್ತು. ಬೇರೆಯವರು ಇದೇ ಸಂದರ್ಭದಲ್ಲಿ ಲಾಠಿ ಹಿಡಿದು ಓಡಾಡುವುದಕ್ಕೆ ಅವಕಾಶ ನೀಡುತ್ತೀರಾ ಎನ್ನುವುದು ಇಲ್ಲಿನ ಪ್ರಶ್ನೆ ಎಂದು ಅವರು ಹೇಳಿದರು.

ಇವರು ದೊಣ್ಣೆ ಹಿಡಿದು ಓಡಾಡುತ್ತಾರೆ. ಬೇರೆ ಸಮುದಾಯ, ಸಂಘಟನೆಗಳು ಇದೇ ಕೆಲಸ ಮಾಡಿದರೆ ಆಗ ಏನಾಗುತ್ತದೆ ಎನ್ನುವುದನ್ನು ಚಿಂತನೆ ಮಾಡಬೇಕಾದ ಕಾಲವಿದು. ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಈ ಮೊದಲು ಆರೆಸ್ಸೆಸ್‍ನವರು ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಧರಿಸುತ್ತಿದ್ದಾರೆ. ಅಂದರೆ ಬದಲಾವಣೆಗಳನ್ನು ಅವರೂ ಸಹ ಮಾಡಿಕೊಳ್ಳಬೇಕು ಎಂದು ಸುರೇಶ್ ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News