×
Ad

ಸಮೀಕ್ಷೆ ಮುಂದಕ್ಕೆ ಹಾಕಿ ಇಲ್ಲವೇ ಅವಧಿ ವಿಸ್ತರಿಸಿ : ಎಚ್.ಡಿ.ಕುಮಾರಸ್ವಾಮಿ

"15 ದಿನದಲ್ಲಿ ಆರೂವರೆ ಕೋಟಿ ಜನರ ಸಮೀಕ್ಷೆ ಹೇಗೆ ಸಾಧ್ಯ?"

Update: 2025-09-20 21:02 IST

ಬೆಂಗಳೂರು, ಸೆ. 20 : ಆತುರಾತುರವಾಗಿ ಸೆ.22ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮುಂದಕ್ಕೆ ಹಾಕಬೇಕು. ಇಲ್ಲವೇ ಕನಿಷ್ಠ ಮೂರು ತಿಂಗಳಾದರೂ ಅವಧಿ ವಿಸ್ತರಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರವನ್ನು ಒತ್ತಾಯ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಸಮೀಕ್ಷೆ ಬಗ್ಗೆ ನಮಗೇನೂ ತಕರಾರು ಇಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಕಾಲಕಾಲಕ್ಕೆ ಸಮೀಕ್ಷೆ ನಡೆಯಬೇಕು, ನಾನು ಬೇಡವೆನ್ನುವುದಿಲ್ಲ. ಆದರೆ, ಕೇವಲ 15 ದಿನದಲ್ಲಿ 6.5 ಕೋಟಿ ಜನರ ಸಮೀಕ್ಷೆ ಸಾಧ್ಯವೇ?. ಈಗ ನಾಡಹಬ್ಬ, ನವರಾತ್ರಿ ಸಂದರ್ಭ. ಸಮೀಕ್ಷೆ ನಡೆಸುವ ಅಂಗವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಸರಕಾರಿ ಅಧಿಕಾರಿ-ಸಿಬ್ಬಂದಿಗೆ ಹಬ್ಬ ಆಚರಣೆ, ಸಂಭ್ರಮ ಇರುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನವದುರ್ಗೆಯರನ್ನು ಪೂಜಿಸುವ ಈ ಕಾಲದಲ್ಲಿ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ನೆರವೇರಿಸಲೇಬೇಕಾದ ಧಾರ್ಮಿಕ ಕಾರ್ಯಗಳಿರುತ್ತವೆ. ಈ ಸಮಯದಲ್ಲಿ ಸಮೀಕ್ಷೆ ಹೇಗೆ ಸಾಧ್ಯ?. ಹೀಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ. ಮುಂದಕ್ಕೆ ಹಾಕಿ ಅಥವಾ ಸಮಯ ವಿಸ್ತರಿಸಿ. ಜನರಿಗೆ ಪ್ರಾಮಾಣಿಕ, ವಸ್ತುನಿಷ್ಠ, ಸತ್ಯನಿಷ್ಠ ಸಮೀಕ್ಷೆ ಬೇಕು. ಇಲ್ಲವಾದರೆ ಇದಕ್ಕೂ ಹಿಂದಿನ ಎರಡು ಸಮೀಕ್ಷಾ ವರದಿಗಳ ಗತಿಯೇ ಆಗಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜನರ ತೆರಿಗೆ ಹಣ ಪೋಲಾಗಬೇಕೆ?. ಇನ್ನೂ ಎಷ್ಟು ಕೋಟಿ ಖರ್ಚಾಗಬೇಕು?. ಕೊನೆಯ ಪಕ್ಷ 3 ತಿಂಗಳ ಕಾಲಾವಕಾಶ ಬೇಕೇಬೇಕು. ಹಂತ-ಹಂತವಾಗಿ ಸಮೀಕ್ಷೆ ನಡೆಸಿ. ಅದಕ್ಕೇನು ಸಮಸ್ಯೆ? ಆತುರಾತುರ ಸಮೀಕ್ಷೆ ಯಾರ ಆನಂದಕ್ಕೆ? ಎಲ್ಲರನ್ನೂ ಒಳಗೊಳ್ಳುವ, ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಆದರ್ಶ ಸಮೀಕ್ಷೆ ಅಗತ್ಯ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News