×
Ad

ಕಳಸಾ-ಬಂಡೂರಿ ಯೋಜನೆಗೆ ಸಹಕರಿಸುವಂತೆ ಗೋವಾ ಅರಣ್ಯ ಸಚಿವರಿಗೆ ಈಶ್ವರ್ ಖಂಡ್ರೆ ಮನವಿ

Update: 2025-09-20 19:04 IST

ಬೆಂಗಳೂರು, ಸೆ.20 : ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ಯೋಜನೆಗೆ ಸಹಕರಿಸುವಂತೆ ಗೋವಾ ರಾಜ್ಯದ ಅರಣ್ಯ ಸಚಿವ ವಿಶ್ವಜೀತ್ ರಾಣೆ ಅವರಿಗೆ ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದರು.

ಶನಿವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ್ದ ಗೋವಾ ಅರಣ್ಯ ಸಚಿವರ ನಿಯೋಗದೊಂದಿಗೆ ನಡೆದ ಮಾತುಕತೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, ಅಭಿವೃದ್ಧಿ ಮತ್ತು ಮೂಲಸೌಕರ್ಯ ವಿಚಾರದಲ್ಲಿ ನೆರೆ ರಾಜ್ಯಗಳು ಪರಸ್ಪರ ಔದಾರ್ಯದಿಂದ ಇರಬೇಕು ಎಂದರು.

ಗೋವಾದಲ್ಲಿ ಶೇ.60ರಷ್ಟು ಅರಣ್ಯ ಪ್ರದೇಶವಿದ್ದರೂ ಆನೆ ಸಮಸ್ಯೆ ಇರಲಿಲ್ಲ. ಈಗ ಓಂಕಾರ ಎಂಬ ಪುಂಡಾನೆಯೊಂದು ಉಪಟಳ ನೀಡುತ್ತಿದ್ದು, ಬೆಳೆ ಹಾನಿ ಆಗುತ್ತಿದೆ. ಹೀಗಾಗಿ ಅದರ ಸೆರೆಗೆ ತರಬೇತಿ ಪಡೆದ ಕುಮ್ಕಿ ಆನೆಗಳು ಹಾಗೂ ತಜ್ಞರನ್ನು ಕಳುಹಿಸಿ ಸಹಕಾರ ನೀಡುವಂತೆ ಗೋವಾ ಸರಕಾರ ಮನವಿ ಮಾಡಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

ಆನೆ ಸೆರೆ ಕಾರ್ಯಾಚರಣೆಯ ಪ್ರಾವೀಣ್ಯತೆ ರಾಜ್ಯದ ಅರಣ್ಯ ಇಲಾಖೆಗೆ ಇದೆ. ನಮ್ಮಲ್ಲಿ ಪಳಗಿಸಿದ ಕುಮ್ಕಿ ಆನೆಗಳೂ ಇವೆ. ಗೋವಾ ಮನವಿ ಕುರಿತಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು, ಆನೆ ಸೆರೆಗೆ ಸಹಕರಿಸುವ ಸಂಬಂಧ ಗೋವಾ ಅರಣ್ಯ ಪ್ರದೇಶ ಮಹಾರಾಷ್ಟ್ರ ಗಡಿಯನ್ನೂ ಹಂಚಿಕೊಂಡಿರುವ ಕಾರಣ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಯೂ ಚರ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಅಂತರ್‌ ರಾಜ್ಯ ಸಂಬಂಧ ವರ್ಧನೆಗಾಗಿ ನಾವು ನೆರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದ ಅವರು, ತಾವು ಸಚಿವರಾದ ಬಳಿಕ ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಅರಣ್ಯ ಸಚಿವರೊಂದಿಗೆ ಸಭೆ ನಡೆಸಿದ್ದಲ್ಲದೆ, ಮಾನವ-ಆನೆ ಸಂಘರ್ಷ ಕುರಿತಂತೆ ಅಂತರ್‍ರಾಷ್ಟ್ರೀಯ ಸಮಾವೇಶವನ್ನೂ ಯಶಸ್ವಿಯಾಗಿ ಆಯೋಜಿಸಿದ್ದಾಗಿ ತಿಳಿಸಿದರು.

ಆನೆ ಕೊಡುವುದಿಲ್ಲ: ಪ್ರಸಕ್ತ ದಸರಾ ಮಹೋತ್ಸವ ನಡೆಯುತ್ತಿದ್ದು, ವಿಜಯದಶಮಿಯ ಬಳಿಕ, ಗೋವಾದ ಕಾನನದಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಗೋವಾ ರಾಜ್ಯಕ್ಕೆ ಪುಂಡಾನೆ ಹಿಡಿಯಲು ನಾವು ಸಹಕಾರ ನೀಡುತ್ತೇವೆಯೇ ಹೊರತು ಕುಮ್ಕಿ ಆನೆಗಳನ್ನು ನೀಡುತ್ತಿಲ್ಲ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.

ಗೋವಾ ಅರಣ್ಯ ಸಚಿವ ವಿಶ್ವಜೀತ್ ರಾಣೆ ಮಾತನಾಡಿ, ಓಂಕಾರ ಎಂಬ ಪುಂಡಾನೆ ಸೆರೆಗೆ ಸಹಕಾರ ನೀಡುವ ಭರವಸೆ ನೀಡಿರುವ ಕರ್ನಾಟಕಕ್ಕೆ ಮತ್ತು ಈಶ್ವರ ಖಂಡ್ರೆ ಅವರಿಗೆ ಧನ್ಯವಾದಗಳು. ಈ ಸಂಬಂಧ ಕರ್ನಾಟಕದೊಂದಿಗೆ ತಿಳುವಳಿಕೆ ಒಪ್ಪಂದ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಯೂ ಈ ಸಂಬಂಧ ಇಂದೇ ಮಾತನಾಡುವುದಾಗಿ ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆಯಲ್ಲಿ ನೈಪುಣ್ಯತೆ ಹೊಂದಿದೆ. ಗೋವಾ ಪುಟ್ಟ ರಾಜ್ಯ. ನಾವು ನೆರೆಯ ರಾಜ್ಯದೊಂದಿಗೆ ಸಹಬಾಳ್ವೆಯಿಂದ ಇದ್ದೇವೆ. ಮಹಾದಾಯಿ ನದಿ ವಿಚಾರದ ಬಗ್ಗೆ ಗೋವಾ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ವಿಶ್ವಜೀತ್ ರಾಣೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಆನೆ ಯೋಜನೆಯ ಎಪಿಸಿಸಿಎಫ್ ಮನೋಜ್ ರಾಜನ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News