‘ಶೇ.63ರಷ್ಟು ಭ್ರಷ್ಟಾಚಾರ’ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ : ಆರ್.ಅಶೋಕ್
"ಕರ್ನಾಟಕವು ಕಾಂಗ್ರೆಸ್ ಹೈಕಮಾಂಡ್ನ ಎಟಿಎಂ ಆಗಿದೆ"
ಬೆಂಗಳೂರು : ಉಪ ಲೋಕಾಯುಕ್ತ ನ್ಯಾಯಮೂರ್ತಿಗಳೆ ಶೇ.63ರಷ್ಟು ಭ್ರಷ್ಟಾಚಾರದ ವಿಚಾರ ಪ್ರಕಟಿಸಿ, ರಾಜ್ಯ ಸರಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದು, ನಿಮಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಗುರುವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಹೊರಿಸಿ ವಿಶೇಷ ತನಿಖಾ ದಳ (ಎಸ್ಐಟಿ) ಮಾಡಿದ್ದೀರಲ್ಲವೇ? ಈಗ ಶೇ.63ರಷ್ಟು ಭ್ರಷ್ಟಾಚಾರ ಸಂಬಂಧ ಯಾವ ಎಸ್ಐಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ. ಯಾವ, ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ ಇದೆ ಎಂಬುದು ಜಗಜ್ಜಾಹೀರಾಗಲಿ. ಭೋವಿ ನಿಗಮದ ಅಧ್ಯಕ್ಷರೆ ಎಕರೆಗೆ 25 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದರು. ವಾಲ್ಮೀಕಿ ನಿಗಮದ 187 ಕೋಟಿ ರೂ. ಸುಮಾರು 700 ಖಾತೆಗೆ ವರ್ಗಾಯಿಸಲಾಗಿತ್ತು. ಅದನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದು, ತನಿಖೆ ನಡೆಯುತ್ತಿದೆ. ಸಚಿವರ ರಾಜೀನಾಮೆಯೂ ಆಗಿದೆ. ಮುಡಾ ಹಗರಣದಲ್ಲಿ 14 ನಿವೇಶನ ಲೂಟಿ ಹೊಡೆದು ಅದನ್ನು ವಾಪಸ್ ಕೊಟ್ಟಿದ್ದೀರಿ ಎಂದು ಅವರು ತಿಳಿಸಿದರು.
ಬಾರ್ ಪರವಾನಿಗಿ ಪಡೆಯಲು 20 ಲಕ್ಷ ರೂ. ನೀಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ವರ್ಗಾವಣೆಯಲ್ಲಿ 90 ಕೋಟಿ ರೂ. ಹಗರಣ ನಡೆಯುತ್ತಿದೆ. 98 ಲಕ್ಷ ರೂ. ಮೌಲ್ಯದ ಕಸದ ಯಂತ್ರಕ್ಕೆ 2.5 ಕೋಟಿ ರೂ. ಕೊಟ್ಟು ಬಾಡಿಗೆಗೆ ಪಡೆಯುತ್ತಿದ್ದಾರೆ ಎಂದು ಅಶೋಕ್ ದೂರಿದರು.
ಕರ್ನಾಟಕವು ಕಾಂಗ್ರೆಸ್ ಹೈಕಮಾಂಡಿನ ಎಟಿಎಂ ಆಗಿದೆ. ಸೋನಿಯಾ, ರಾಹುಲ್ ಗಾಂಧಿಗೆ ದುಡ್ಡು ಕೊಡುವವರಿಗಷ್ಟೆ ಇಲ್ಲಿ ಅಧಿಕಾರ. ಯಾರು ಜಾಸ್ತಿ ಕೊಡುತ್ತಾರೋ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಮೊನ್ನೆ ಬಿಹಾರ ಚುನಾವಣೆಗೆ ಕರ್ನಾಟಕದಿಂದ ಸುಮಾರು 300 ಕೋಟಿ ಹಣ ಹೋಗಿದೆ. ಎಲ್ಲ ಸಚಿವರ ಉಪಾಹಾರ ಸಭೆ ನಡೆಸಿ 300 ಕೋಟಿ ರೂ. ಸಂಗ್ರಹಿಸಿ ಕೊಡಲಾಗಿದೆ. ಶಾಸಕ ವೀರೇಂದ್ರ ಪಪ್ಪಿ 50 ಕೆಜಿ ಚಿನ್ನ ಇಟ್ಟಿದ್ದರು. ಕಾಂಗ್ರೆಸ್ ಮನೆದೇವರೇ ಭ್ರಷ್ಟಾಚಾರ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಭ್ರಷ್ಟಾಚಾರಕ್ಕೆ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಈ ಸರಕಾರ ಶೇ.63ರಷ್ಟು ಭ್ರಷ್ಟಾಚಾರ ಮಾಡುವ ಅಲಿಬಾಬಾ ಮತ್ತು 34 ಜನ ಕಳ್ಳರ ಸರಕಾರ ಎಂದು ಹಾಲಿ ಉಪ ಲೋಕಾಯುಕ್ತರೆ ಹೇಳಿದ್ದಾರೆ. ಕಮಿಷನ್ ಕೊಡದೆ ಇಲ್ಲೇನೂ ನಡೆಯುವುದಿಲ್ಲ, ಕರ್ನಾಟಕ ಭ್ರಷ್ಟಾಚಾರದಲ್ಲಿ 5ನೇ ಸ್ಥಾನದಲ್ಲಿದೆ ಎಂದು ನ್ಯಾಯಮೂರ್ತಿಗಳ ಸಮ್ಮುಖದಲ್ಲೆ ಉಪ ಲೋಕಾಯುಕ್ತರು ಹೇಳಿಕೆ ನೀಡಿದ್ದಾರೆ ಎಂದು ಅಶೋಕ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರ ಪ್ರಕಾಶ್ ಹಾಜರಿದ್ದರು.