ಅನರ್ಹ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಆರಂಭ : ಸಚಿವ ಕೆ.ಎಚ್.ಮುನಿಯಪ್ಪ
ಬೆಂಗಳೂರು, ಸೆ.17: ಅನರ್ಹ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಪ್ರಕ್ರಿಯೆ ಆರಂಭ ಆಗಿದ್ದು, ಇದು ಪೂರ್ಣಗೊಂಡ ಬಳಿಕ ಮುಂದಿನ ವರ್ಷ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಆನ್ಲೈನ್ನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವುದು ಕರ್ನಾಟಕ ರಾಜ್ಯ. ಶೇ.75 ರಷ್ಟು ಮಂದಿ ಬಿಪಿಎಲ್ ಪಟ್ಟಿಯಲ್ಲಿದ್ದಾರೆ. ಇದನ್ನು ಪರಿಷ್ಕರಣೆ ಮಾಡಲೇಬೇಕು ಬಿಪಿಎಲ್ ಹೊಂದಿರುವ ಅನರ್ಹರನ್ನು ಎಪಿಎಲ್ ಪಟ್ಟಿಗೆ ಸೇರಿಸುತ್ತೇವೆ ಹೊರತು ಯಾವುದೇ ಕಾರಣಕ್ಕೂ ಪಡಿತರ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದರು.
ಒಂದು ವೇಳೆ ಪರಿಷ್ಕರಣೆಯ ವೇಳೆ ಅರ್ಹರು ತಪ್ಪಿ ಹೋಗಿದ್ದರೆ ಅರ್ಜಿಕೊಡಬಹುದು. 24 ಗಂಟೆಯಲ್ಲೇ ಮತ್ತೆ ಬಿಪಿಎಲ್ ಕಾರ್ಡ್ ಕೊಟ್ಟು ಪಡಿತರ ನೀಡಲು ಆರಂಭಿಸಲಾಗುವುದು ಎಂದ ಅವರು, ಕೇಂದ್ರ ಸರಕಾರ ಮಾನದಂಡ ನೀಡಿದೆ. ಜೊತೆಗೆ ಕೇಂದ್ರವೇ ಪರಿಷ್ಕರಣೆ ಮಾಡಿ, 7 ಲಕ್ಷ ಕಾರ್ಡ್ಗಳನ್ನು ಬಿಪಿಎಲ್ ಪಟ್ಟಿಗಳಿಂದ ರದ್ದುಗೊಳಿಸುವಂತೆ ಆದೇಶ ನೀಡಿದೆ ಎಂದರು.