×
Ad

‘ನ್ಯೂನತೆ ಚರ್ಚಿಸಿ, ಸಮನ್ವಯದಿಂದ ಪರಿಹರಿಸಿಕೊಳ್ಳೋಣ’ : ಸಭಾಪತಿ ಹೊರಟ್ಟಿ ಪತ್ರಕ್ಕೆ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯೆ

Update: 2025-09-09 21:38 IST

ಬಸವರಾಜ ಹೊರಟ್ಟಿ | ಯು.ಟಿ.ಖಾದರ್

ಬೆಂಗಳೂರು, ಸೆ. 9: ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಾರೆಂದು ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಬೇಸರಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ‘ಸಣ್ಣ-ಸಣ್ಣ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಚರ್ಚಿಸಿ ಸಮನ್ವಯದಿಂದ ಪರಿಹರಿಸಿಕೊಂಡು, ಕಾರ್ಯನಿರ್ವಹಿಸಿ ವಿಧಾನ ಮಂಡಲದ ಮತ್ತು ರಾಜ್ಯದ ಕೀರ್ತಿಗೆ ಭಾಜನರಾಗೋಣ’ ಎಂದು ಹೇಳಿದ್ದಾರೆ.

‘ಯಾವುದೇ ಕಾರ್ಯಕ್ರಮ ನಡೆದರೂ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಪುಸ್ತಕ ಮೇಳ, ಲೇಸರ್ ಲೈಟ್ ಅಳವಡಿಕೆ ಕುರಿತು ನನ್ನ ಅಭಿಪ್ರಾಯ ಪಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದರು.

ಇದಕ್ಕೆ ಪತ್ರದ ಮೂಲಕವೇ ಉತ್ತರಿಸಿರುವ ಸ್ಪೀಕರ್ ಯು.ಟಿ.ಖಾದರ್, ‘ವಿಧಾನ ಮಂಡಲದಿಂದ ಆಯೋಜಿಸಲ್ಪಡುವ ಎಲ್ಲ ಕಾರ್ಯಕ್ರಮಗಳನ್ನು ಸದಾ ಸೂಕ್ಷ್ಮವಾಗಿ ಗಮನಿಸಿ, ಆಗಾಗ ತಮಗೂ ತಿಳಿಸಿ, ಹಿರಿಯರಾದ ತಮ್ಮೊಂದಿಗೆ ಚರ್ಚಿಸಿ ನಿರ್ವಹಿಸಿದ್ದೇನೆ ಎಂಬುದು ನನ್ನ ನಂಬಿಕೆ. ಆದರೂ. ತಮ್ಮ ಪತ್ರವನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುತ್ತೇನೆ’ ಎಂದು ಹೇಳಿದ್ದಾರೆ.

‘ಮುಂದೆ ಸಣ್ಣ ಸಣ್ಣ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಚರ್ಚಿಸಿ ಸಮನ್ವಯದಿಂದ ಪರಿಹರಿಸಿಕೊಂಡು, ಕಾರ್ಯನಿರ್ವಹಿಸಿ, ವಿಧಾನ ಮಂಡಲದ ಮತ್ತು ರಾಜ್ಯದ ಕೀರ್ತಿಗೆ ಭಾಜನರಾಗೋಣವೆಂಬುದು ನನ್ನ ಆಶಯ’ ಎಂದು ಖಾದರ್ ಉಲ್ಲೇಖಿಸಿದ್ದಾರೆ.

ಹೊರಟ್ಟಿ ಪತ್ರದಲ್ಲಿ ಏನಿದೆ?: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕ ವಿಧಾನ ಮಂಡಲದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಮತ್ತು ಕರ್ನಾಟಕ ವಿಧಾನ ಸಭೆ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ನನ್ನ ಅಭಿಪ್ರಾಯ ಹಾಗೂ ತಮ್ಮ ಅಭಿಪ್ರಾಯವು ಆಗಿದೆ ಎಂದು ಭಾವಿಸಿರುತ್ತೇನೆ. ಎರಡೂ ಸದನ ಇರುವ ರಾಜ್ಯದಲ್ಲಿ ವಿಧಾನ ಮಂಡಲದಿಂದ ನಡೆಯುವ ಸಚಿವಾಲಯದ ಕಚೇರಿ ಕಾರ್ಯಕ್ರಮಗಳು ಸಹ ಇದೇ ದೃಷ್ಟಿಯಲ್ಲಿ ಹಾಗೂ ದಿಕ್ಕಿನಲ್ಲಿ ಸಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯಾದ ನನ್ನನ್ನು ಸೌಜನ್ಯಕ್ಕಾದರು ಅಧಿಕೃತ ಕಾರ್ಯಕ್ರಮದ ಬಗ್ಗೆ ರೂಪರೇಷಗಳನ್ನು ಸಿದ್ಧಪಡಿಸಲು ಸಂಪರ್ಕಿಸದೆ ಏಕಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಬೇಸರದ ಸಂಗತಿಯಾಗಿದೆ.

ಉದಾಹರಣೆಗೆ ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ತಾವು ಪುಸ್ತಕ ಮೇಳವನ್ನು ಆಯೋಜಿಸಿದ್ದು, ವಿಧಾನಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಯೋಜನೆ, 11ನೆ ಸಿಪಿಎ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್, ಭಾರತ ವಲಯದ ಸಮ್ಮೇಳನ ಆಯೋಜನೆ ಬಗ್ಗೆ ಮೇಲಿನ ಕಾರ್ಯಕ್ರಮಗಳ ರೂಪರೇಷೆಗಳನ್ನು ಮಾಡುವಲ್ಲಿ ನನ್ನನ್ನು ಸೌಜನ್ಯಕ್ಕಾದರು ಸಂಪರ್ಕಿಸಿ ಸಲಹೆ ಸೂಚನೆ ಕೇಳದೆ ಮುಂದುವರೆದು ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿಯನ್ನು ಏಕಪಕ್ಷಿಯವಾಗಿ ನಡೆಸುತ್ತಿರುವುದು ನಾನು ಮಾಧ್ಯಮಗಳ ಮೂಲಕ ಗಮನಿಸಿರುವೆ.

ಇದರ ಪರಿಣಾಮವಾಗಿ ನನ್ನ ಸುದೀರ್ಘ ರಾಜಕೀಯ ಹಿನ್ನೆಲೆ ಹಾಗೂ ಅನ್ಯ ರಾಜ್ಯಗಳ ಪೀಠಾಸೀನಾಧಿಕಾರಿಗಳ ನಿಕಟ ಸಂಪರ್ಕದಿಂದ ಹೊರ ರಾಜ್ಯದ ವಿಧಾನ ಪರಿಷತ್ ಹಾಗೂ ವಿಧಾನಸಭೆಯ ಪೀಠಾಸೀನಾಧಿಕಾರಿಗಳು, ಶಾಸಕರು ಹಾಗೂ ಗಣ್ಯರುಗಳೊಂದಿಗೆ 11ನೆ ಸಿಪಿಎ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್‍ಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹಾಗೂ ಆತ್ಮೀಯ ಮಾಹಿತಿ ವಿನಿಮಯ ಮಾಡುವಲ್ಲಿ ಮುಜುಗರ ಉಂಟಾಗುತ್ತಿದೆ.

ಇತ್ತೀಚೆಗೆ ತಾವು ಬಾರ್ಬಡೊಸ್‍ನಲ್ಲಿ ನಡೆಯುವ ಕಾಮನ್‍ವೆಲ್ತ್ ಕಾನ್ಸರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 21 ದಿನಗಳ ಅಧಿಕೃತ ಪ್ರವಾಸ ಪಟ್ಟಿಯನ್ನು ನನ್ನ ಸಲಹೆಯನ್ನು ಪಡೆಯದೆ ತಯಾರಿಸಿದ್ದು ಅನ್ಯ ಮೂಲಗಳಿಂದ ತಿಳಿದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ.

ನಾನು ಅಧಿಕೃತ ಕಾರ್ಯಕ್ರಮದಲ್ಲಿ ಅಧ್ಯಯನ ಪ್ರವಾಸ ಯಾವ ದೇಶಕ್ಕೆ ಹೋಗಬೇಕು ಎಂದು ನಿರ್ಧರಿಸುವ ಹಕ್ಕು ಇಲ್ಲವೆಂದು ಭಾಸವಾಗುತ್ತಿದೆ. ನಿಮಗೆ ಅನುಕೂಲವಾಗುವ ರೀತಿ ಕಾರ್ಯಕ್ರಮವನ್ನು ನಿರೂಪಿಸಿ ಒತ್ತಾಯ ಪೂರ್ವಕವಾಗಿ ನಾನು ಅದರಲ್ಲಿ ಭಾಗವಹಿಸುವಂತೆ ಮಾಡುವ ಸಂದಿಗ್ಧತೆಯ ಅವಶ್ಯಕತೆ ಏನು ಎನ್ನುವುದು ನನಗೆ ಒಗಟಾಗಿದೆ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯು.ಟಿ.ಖಾದರ್ ಉತ್ತರಿಸಿದ ಪತ್ರದಲ್ಲಿ ಏನಿದೆ?: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡೂ ಸದನಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದು, ಸಂಬಂಧಪಟ್ಟ ಸಚಿವಾಲಯದ ಕಚೇರಿ ಕಾರ್ಯಕ್ರಮಗಳು ಸಹ ಇದೇ ದೃಷ್ಟಿಯಿಂದ ಹಾಗೂ ದಿಕ್ಕಿನಲ್ಲಿ ಸಾಗಬೇಕೆಂಬ ತಮ್ಮ ಅಭಿಪ್ರಾಯಕ್ಕೆ ನಾನು ಸಂಪೂರ್ಣ ಸಹಮತಿಯನ್ನು ವ್ಯಕ್ತಪಡಿಸುವುದು ಮಾತ್ರವಲ್ಲದೆ ಇದು ನನ್ನ ಮೊದಲ ಆದ್ಯತೆಯಾಗಿದೆ.

ಪರಿಷತ್ತಿನ ಸಭಾಪತಿ ಅವರನ್ನು ಸೌಜನ್ಯಕ್ಕಾದರೂ ಸಂಪರ್ಕಿಸದೆ ಅಧಿಕೃತ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇತ್ತೀಚೆಗೆ ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮೇಳ ಆಯೋಜನೆಯ ಕುರಿತು ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಲಾಗಿತ್ತು. ಈ ಬಗ್ಗೆ ಮೇಳದ ರೂಪುರೇಷೆ ಇತ್ಯಾದಿಗಳನ್ನು ತಮ್ಮ ಆದ್ಯ ಗಮನಕ್ಕೆ ತರಲಾಗಿತ್ತು.

ಈ ಮೇಳವು ನಮ್ಮಿಬ್ಬರ ಜಂಟಿ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಿತು. ನಾವು ಇಬ್ಬರೂ ಸೇರಿ ರಾಜ್ಯಪಾಲರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ ರಾಜ್ಯಪಾಲು ನಮ್ಮಿಬ್ಬರೊಂದಿಗೆ ಪುಸ್ತಕ ಮೇಳವನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದ ವಿಚಾರಕ್ಕೂ ತಾವು ಸಾಕ್ಷಿಯಾಗಿದ್ದೀರಿ. ಹಾಗೇ, ವಿಧಾನ ಸೌಧ ಕಟ್ಟಡಕ್ಕೆ ಲೇಸರ್ ದೀಪ ಅಳವಡಿಸುವ ಯೋಜನೆ ಸರಕಾರ ಮತ್ತು ಲೋಕೋಪಯೋಗಿ ಇಲಾಖೆಯ ಸಹಕಾರದಿಂದಲೇ ನಡೆದಿದೆ.

11ನೆ ಸಿಪಿಎ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಅಸೋಷಿಯೇಷನ್ ಸಮ್ಮೇಳನದ ಆಯೋಜಿಸಲು ಲೋಕಸಭಾ ಸಚಿವಾಲಯದಿಂದ ಕೋರಿಕೆ ಬಂದಿದ್ದು, ಇದಕ್ಕೆ ನಾವಿಬ್ಬರು ಸೇರಿ ಒಪ್ಪಿಗೆಯನ್ನು ನೀಡಿರುತ್ತೇವೆ. ತದನಂತರ ಸಮ್ಮೇಳನದ ಆಯೋಜನೆ ಕುರಿತು ನಾನು ಸ್ವತಃ ತಮ್ಮ ಕೊಠಡಿಗೆ ಆಗಮಿಸಿ ಪರಸ್ಪರ ಚರ್ಚಿಸಿದ ನಂತರ ಹೋಟೆಲ್ ತಾಜ್ ವೆಸ್ಟ್ ಎಂಡ್‍ನಲ್ಲಿ ನಡೆಸಲು ನಿರ್ಧಾರ ಕೈಗೊಂಡಿದ್ದೇವೆ. ಜೊತೆಗೆ, ಸಮ್ಮೇಳನದ ಪ್ರತಿನಿಧಿಗಳಿಗೆ ನಾವು ಇಬ್ಬರೂ ಸೇರಿ ಆಹ್ವಾನ ನೀಡಿದ್ದೇವೆ.

ಸಮ್ಮೇಳನದ ವಿವರ ಹಾಗೂ ವೇಳಾಪಟ್ಟಿ ಲೋಕಸಭಾ ಸಚಿವಾಲಯದ ಮೂಲಕ ನಿರ್ವಹಿಸಲಾಗುತ್ತಿದೆ. ಶಿಷ್ಠಾಚಾರ ಹಾಗೂ ಇತರ ಕಾರ್ಯಗಳಿಗೆ ಉಭಯ ಸಚಿವಾಲಯಗಳ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. ಹೀಗಾಗಿ, ಈ ಕಾರ್ಯಕ್ರಮ ಏಕಪಕ್ಷೀಯ ನಿರ್ಧಾರವಲ್ಲ ಎಂಬುದು ನನ್ನ ಭಾವನೆ.

ಜತೆಗೆ, ಸಮ್ಮೇಳನ ಕುರಿತು ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಆದರೆ ಅಧಿವೇಶನದ ಕಾರ್ಯಕಲಾಪಗಳ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸಮ್ಮೇಳನದ ಬಗ್ಗೆ ಕೇಳಿದ ಪ್ರಶ್ನೆಗೆ ಮಾತ್ರ ಮಾಹಿತಿ ನೀಡಲಾಗಿದೆ.

ಬಾರ್ಬಡೋಸ್‍ನಲ್ಲಿ ನಡೆಯುವ 68ನೆ ಕಾಮನ್‍ವೆಲ್ತ್ ಪಾರ್ಲಿಮೆಂಟರಿ ಕಾನ್ಸರೆನ್ಸ್‌ ಗೆ ವಿಧಾನಸಭಾ ಕಾರ್ಯದರ್ಶಿ ಸಲ್ಲಿಸಿದ ಕಡತದಲ್ಲಿ, ತಾವು ಪ್ರತಿನಿಧಿಯಾಗಿ ಹಾಗೂ ನಾನು ವೀಕ್ಷಕರಾಗಿ ಭಾಗವಹಿಸುವುದಕ್ಕೆ ನಾವು ಇಬ್ಬರೂ ಒಪ್ಪಿಗೆ ನೀಡಿದ್ದೇವೆ. ಆದುದರಿಂದ, ವಿಧಾನ ಮಂಡಲದಿಂದ ಆಯೋಜಿಸಲ್ಪಡುವ ಎಲ್ಲ ಕಾರ್ಯಕ್ರಮಗಳನ್ನು ಸದಾ ಸೂಕ್ಷ್ಯವಾಗಿ ಗಮನಿಸಿ, ಆಗಾಗ ತಮಗೂ ತಿಳಿಸಿ, ಹಿರಿಯರಾದ ತಮ್ಮೊಂದಿಗೆ ಚರ್ಚಿಸಿ ನಿರ್ವಹಿಸಿದ್ದೇನೆ ಎಂದು ಖಾದರ್ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News