ಧ್ವಜ ವಿವಾದವಲ್ಲ: ಸಂಘ ಪರಿವಾರಿಗರ ದೂರಗಾಮಿ ಚಿತಾವಣೆ, ದಳದ ಅಪಾಯಕಾರಿ ಅವಕಾಶವಾದ

ಸಂಘಿಗಳ ದೃಷ್ಟಿ ಇರುವುದು ಕೇವಲ ತಕ್ಷಣದ ಚುನಾವಣಾ ಪ್ರಯೋಜನವಲ್ಲ. ಈ ಭಾಗದಲ್ಲಿ ಶತಮಾನಗಳಿಂದ ಬೇರುಬಿಟ್ಟಿರುವ ಸೌಹಾರ್ದ ಹಾಗೂ ಅಬ್ರಾಹ್ಮಣ ಶೂದ್ರ ಸಂಸ್ಕೃತಿಯನ್ನು ಕೊಂದು ಈ ಭಾಗದಲ್ಲಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರದ ದಿಗ್ವಿಜಯ ಸಾಧಿಸುವುದು ಅವರ ದೂರಗಾಮಿ ಉದ್ದೇಶ. ಅದಕ್ಕಾಗಿಯೇ ಅವರು ಇತಿಹಾಸದ ಬೇರು ಕಳೆದುಕೊಂಡ ಮಂಡ್ಯದ ಮಣ್ಣಿನ ಮಕ್ಕಳನ್ನು ದಾರಿ ತಪ್ಪಿಸಿ ಹಳ್ಳಿಹಳ್ಳಿಯಲ್ಲಿ ಹನುಮಧ್ವಜ ಹಾರಿಸುವ ಯೋಜಿತ ತಯಾರಿ ನಡೆಸುತ್ತಿದ್ದಾರೆ.

Update: 2024-01-31 05:00 GMT

ಈ ದೇಶದ ಎಚ್ಚೆತ್ತ ಬಹುಜನರನ್ನು ಶತಾಯಗತಾಯ ಮತ್ತೊಮ್ಮೆ ಬ್ರಾಹ್ಮಣೀಯ ಗುಲಾಮತನದ ಚೌಕಟ್ಟಿಗೆ ತರಲು ಹಿಂದುತ್ವದ ರಾಜಕಾರಣ ಮಾಡುತ್ತಿರುವ ಸಂಘಪರಿವಾರ-ಬಿಜೆಪಿ ಮತ್ತದರ ಅಂಗಸಂಸ್ಥೆಗಳು ಇದೀಗ ತಮಗೆ ಈವರೆಗೆ ದಕ್ಕದ ಮಂಡ್ಯದಲ್ಲಿ ತಮ್ಮ ಕರಾಳ ಕುತಂತ್ರವನ್ನು ಪ್ರಾರಂಭಿಸಿವೆ. 

ಅದರ ನಿಚ್ಚಳ ಉದಾಹರಣೆಯೇ ಕೆರಗೋಡಿಗೆ ಅವರು ಹಚ್ಚಿರುವ ಬೆಂಕಿ. ಇದು ಶ್ರೀರಂಗಪಟ್ಟಣದಲ್ಲಿ ಕೋಮುವ್ಯಾಧಿ ಭಟ್ಟರ ಕೋಮು ಪ್ರಚೋದಕ ಭಾಷಣದ ತರುವಾಯದಲ್ಲಿ ಸಂಭವಿಸಿರುವುದು ಕಾಕತಾಳೀಯವೇನಲ್ಲ. ಕೆರಗೋಡಿನಲ್ಲಿ ಧ್ವಜ ಸ್ತಂಭ ಸ್ಥಾಪನೆ, ಧ್ವಜಾರೋಹಣ ಪರವಾನಿಗೆ ಪಡೆಯಲು ಒಂದು ವರ್ಷದಿಂದ ವ್ಯವಸ್ಥಿತವಾಗಿ ಪ್ರಯತ್ನ ನಡೆಯುತ್ತಿತ್ತು ಎಂಬುದನ್ನು ಗಮನಿಸಿದರೆ ಈ ವ್ಯವಸ್ಥಿತ ಹುನ್ನಾರಗಳು ಸ್ಪಷ್ಟವಾಗುತ್ತದೆ. 

2023ರ ಚುನಾವಣೆಗೆ ಸ್ವಲ್ಪ ಮುಂಚೆಯೂ ಬಹಳ ಯೋಜಿತವಾಗಿ ಹಿಂದುತ್ವವಾದಿ ಸಂಘಟನೆಗಳು ಮಂಡ್ಯದಲ್ಲಿ, ಅದರಲ್ಲೂ ಶ್ರೀರಂಗಪಟ್ಟಣದಲ್ಲಿ ಕೋಮು ಗಲಭೆಗೆ ಮುಂದಾಗಿದ್ದವು. ಆ ಮೂಲಕ ಹಿಂದೂ ವೋಟುಗಳನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸಿದ್ದವು. ಸಂಘಿಗಳಿಗೆ ಅದರಲ್ಲಿ ಯಶಸ್ಸೂ ಸಿಕ್ಕಿತ್ತು. ಇಡೀ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚು ವೋಟು ಸಿಕ್ಕಿದ್ದು ಶ್ರೀರಂಗಪಟ್ಟಣದಲ್ಲಿ. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮೆ ಬಹಳ ಯೋಜಿತವಾದ ಕೋಮು ಧ್ರುವೀಕರಣದ ಪ್ರಯತ್ನ ಪ್ರಾರಂಭವಾಗಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಜೊತೆ ಹಿಂದುತ್ವವಾದಿ ಮೈತ್ರಿ ಮಾಡಿಕೊಂಡ ಮೇಲೆ ಸಂಘ ಪರಿವಾರಕ್ಕೆ ಈ ಭಾಗದಲ್ಲಿ ಬೇಕಾಗಿದ್ದ ಕಾಲ್ಬಲವೂ ಸಿಕ್ಕಂತಾಗಿದೆ. ಭಟ್ಟರ ಶ್ರೀರಂಗಪಟ್ಟಣದ ಭಾಷಣ, ಕೆರಗೋಡು ಕುತಂತ್ರ ಎಲ್ಲವೂ ಅದರ ಭಾಗಗಳೇ. 

ಆದರೆ ಸಂಘಿಗಳ ದೃಷ್ಟಿ ಇರುವುದು ಕೇವಲ ತಕ್ಷಣದ ಚುನಾವಣಾ ಪ್ರಯೋಜನವಲ್ಲ. ಈ ಭಾಗದಲ್ಲಿ ಶತಮಾನಗಳಿಂದ ಬೇರುಬಿಟ್ಟಿರುವ ಸೌಹಾರ್ದ ಹಾಗೂ ಅಬ್ರಾಹ್ಮಣ ಶೂದ್ರ ಸಂಸ್ಕೃತಿಯನ್ನು ಕೊಂದು ಈ ಭಾಗದಲ್ಲಿ ಬ್ರಾಹ್ಮಣೀಯ ಹಿಂದೂ ರಾಷ್ಟ್ರದ ದಿಗ್ವಿಜಯ ಸಾಧಿಸುವುದು ಅವರ ದೂರಗಾಮಿ ಉದ್ದೇಶ. ಅದಕ್ಕಾಗಿಯೇ ಅವರು ಇತಿಹಾಸದ ಬೇರು ಕಳೆದುಕೊಂಡ  ಮಂಡ್ಯದ ಮಣ್ಣಿನ ಮಕ್ಕಳನ್ನು ದಾರಿ ತಪ್ಪಿಸಿ ಹಳ್ಳಿಹಳ್ಳಿಯಲ್ಲಿ ಹನುಮಧ್ವಜ ಹಾರಿಸುವ ಯೋಜಿತ ತಯಾರಿ ನಡೆಸುತ್ತಿದ್ದಾರೆ.

ಅಬ್ರಾಹ್ಮಣ ರಾಜಕಾರಣ ಮೂಡಿಸಿದ್ದ ಸೌಹಾರ್ದ    

ಹಾಗೆ ನೋಡಿದರೆ ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಮಂಡ್ಯ ಜಿಲ್ಲೆಯು ಸಂಘಿಗಳ ಕೋಮುವಾದಿ ಪ್ರಭಾವಕ್ಕೆ ಅಷ್ಟಾಗಿ ಒಳಪಟ್ಟಿರಲಿಲ್ಲ. ಇಲ್ಲಿ ಜಾತಿ, ವರ್ಗ- ಲಿಂಗ ತಾರತಮ್ಯ ಇತ್ಯಾದಿಗಳಿದ್ದರೂ ಇಲ್ಲಿನ ಒಕ್ಕಲು ಸಮುದಾಯ ಟಿಪ್ಪು-ಹೈದರ್ ಆಡಳಿತದ ನೇರೆ ಫಲಾನುಭವಿಗಳೂ ಆಗಿದ್ದರಿಂದ ಕೋಮು ವೈಷಮ್ಯವಿರಲಿಲ್ಲ. ಹೀಗಾಗಿಯೇ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಉರಿಗೌಡ-ನಂಜೇಗೌಡರುಗಳನ್ನು ಹುಟ್ಟಿಸಿದರೂ ಜನರು ಒಪ್ಪಿಕೊಳ್ಳಲಿಲ್ಲ. ಇಲ್ಲಿನ ಒಕ್ಕಲು ಸಮುದಾಯದ ನೆನಪಿನಲ್ಲಿ, ಲಾವಣಿಗಳಲ್ಲಿ ಈಗಲೂ ಟಿಪ್ಪು ಮತ್ತು ಹೈದರ್ ಜನನಾಯಕರಾಗಿ ಜೀವಂತವಾಗಿ ಉಳಿದಿದ್ದಾರೆ. ಆನಂತರದಲ್ಲೂ ನಾಲ್ವಡಿ ಒಡೆಯರ್‌ರ ಕಾಲದಲ್ಲಿ ಹುಟ್ಟಿಕೊಂಡ ಶೂದ್ರ ಪ್ರಜ್ಞೆಯು ಸ್ಪಷ್ಟವಾಗಿ ಬ್ರಾಹ್ಮಣ ವಿರೋಧಿಯಾಗಿತ್ತು. 70-80-90ರ ದಶಕದಲ್ಲಿ ದಲಿತ ಚಳವಳಿ ಮತ್ತು ರೈತ ಚಳವಳಿಗಳು ಸೌಹಾರ್ದ ಮತ್ತು ಪ್ರಗತಿಪರತೆಯನ್ನು ಪ್ರಧಾನಧಾರೆ ಮೌಲ್ಯಗಳನ್ನಾಗಿ ಸ್ಥಾಪಿಸಿತ್ತು. ಕಾಂಗ್ರೆಸ್‌ನ ಯಾಜಮಾನ್ಯ ರಾಜಕಾರಣದ ವಿರುದ್ಧ ಇದ್ದ ಅಸಮಾಧಾನದ ಲಾಭವನ್ನು ದೇವೇಗೌಡರ ನೇತೃತ್ವದಲ್ಲಿ ಕಾಂಗ್ರೆಸೇತರ ರಾಜಕೀಯ ಶಕ್ತಿಯಾಗಿ ಹುಟ್ಟಿಕೊಂಡ ಜಾತ್ಯತೀತ ಜನತಾ ದಳ ಪಡೆದುಕೊಂಡಿತು. ದಳದ ನೆಲೆಯೂ ಒಕ್ಕಲಿಗ-ಮುಸ್ಲಿಮ್ ಮೈತ್ರಿಯ ಸಮೀಕರಣದ ಮೇಲೆಯೇ ಸಂಭವಿಸಿದ್ದರಿಂದ ಬಿಜೆಪಿಯ ಕೋಮುವಾದಿ ರಾಜಕಾರಣದ ಬೇಳೆ ಕಳೆದ ದಶಕದವರೆಗೆ ಹೆಚ್ಚು ಬೇಯುತ್ತಿರಲಿಲ್ಲ. 

ಬಲ್ಲಿದ ಶೂದ್ರರ ಬ್ರಾಹ್ಮಣೀಕರಣ ಮತ್ತು ಹಿಂದುತ್ವ ರಾಜಕಾರಣದ ಪ್ರವೇಶ 

ಆದರೆ ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಕಳೆದ ಒಂದೆರಡು ದಶಕಗಳಿಂದ ಮಂಡ್ಯ ಜಿಲ್ಲೆಯ ಮೇಲೂ ದೇಶದಲ್ಲಿ ಏರುಗತಿಯಲ್ಲಿ ಏರುತ್ತಿರುವ ಹಿಂದುತ್ವದ ಉನ್ಮಾದ ಯುವಜನತೆಯನ್ನು ಪ್ರಭಾವಿಸಲು ಪ್ರಾರಂಭಿಸಿದೆ. ಅದೇ ಸಮಯದಲ್ಲಿ ಸ್ವಾತಂತ್ರ್ಯ ಪೂರ್ವದ ಟಿಪ್ಪು-ನಾಲ್ವಡಿ ಸುಧಾರಣೆಗಳು, ಸ್ವಾತಂತ್ರ್ಯಾ ನಂತರದಲ್ಲಿ ಅಧಿಕಾರಶಾಹಿಯ ಅವಕಾಶಗಳು, ಹಸಿರು ಕ್ರಾಂತಿ ಇತ್ಯಾದಿಗಳು ಒಕ್ಕಲು ವರ್ಗಗಳಲ್ಲೂ ನಿಧಾನಕ್ಕೆ ಮೇಲ್ಚಲನೆ ಪಡೆಯುವ ಒಂದು ಸ್ತರವನ್ನು ಸೃಷ್ಟಿಸಿದೆ. ಅದು ನಿಧಾನವಾಗಿ ಬ್ರಾಹ್ಮಣೀಕರಣಗೊಳ್ಳುತ್ತಾ ಬಂದಿದೆ. ಇದರ ನಡುವೆ ಜಾರಿಯಾದ ಜಾಗತೀಕರಣದ ನೀತಿಗಳು ಈ ಸ್ತರಕ್ಕೆ ಹೊಸ ರಾಷ್ಟ್ರೀಯ ಅವಕಾಶಗಳನ್ನು ಒದಗಿಸಿದ್ದರಿಂದ ಈ ಸ್ಥರಕ್ಕೆ ಮೋದಿಯವರ ‘ಅಭಿವೃದ್ಧಿ-ಹಿಂದೂ ರಾಷ್ಟ್ರ ರಾಜಕಾರಣ’ ಅತ್ಯಂತ ಅಪ್ಯಾಯಮಾನವೂ ಆಗಿದೆ. ವಾಸ್ತವವಾಗಿ ಈ ಬಾರಿ ಚುನಾವಣೆಯಲ್ಲಿ ಕುಮಾರಸ್ವಾಮಿಯವರ ಜನತಾ ದಳ ಹೀನಾಯವಾಗಿ ಸೋತನಂತರ ಮುಸ್ಲಿಮ್ ವಿರೋಧಿ ನಿಲುವನ್ನು ತಳೆಯಲು ಮತ್ತು ಎನ್‌ಡಿಎ ಸೇರಲು ಈ ಸ್ತರವೇ ಅಪಾರ ಒತ್ತಡ ಹಾಕಲೂ ಪ್ರಾರಂಭಿಸಿತ್ತು. 

ಇದೇ ಅವಧಿಯಲ್ಲಿ ರೈತ ಮತ್ತು ದಲಿತ ಚಳವಳಿಯ ಬಿರುಸೂ ಕಡಿಮೆಯಾಗುತ್ತಿರುವುದರಿಂದ ಗ್ರಾಮೀಣ ಯುವಜನರಿಗೆ ಕೇಸರಿಯೂ ಮಾನ್ಯವೆನಿಸತೊಡಗಿದೆ. ಇಲ್ಲಿ ಕೋಮುವಾದ ಅಷ್ಟು ತೀವ್ರವಾಗಿರಲಿಲ್ಲವಾದ್ದರಿಂದ ಕೋಮು ಸೌಹಾರ್ದ ಚಟುವಟಿಕೆಗಳು ಬಿರುಸಿನಲ್ಲಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಬ್ರಾಹ್ಮಣವಾದಿ ಹಿಂದುತ್ವ ರಾಜಕಾರಣ ಮತ್ತು ಆರೆಸ್ಸೆಸ್ ಹಾಗೂ ಅದರ ಅಂಗ ಸಂಸ್ಥೆಗಳು ಹೆಚ್ಚು ಮಾನ್ಯತೆ ಪಡೆದುಕೊಳ್ಳಲು ಪ್ರಾರಂಭವಾಗಿ ವರ್ಷಗಳಾಗಿವೆ. 

ಸೆಕ್ಯುಲರ್ ಎಂದು ಹೇಳಿಕೊಳ್ಳುವ ಪಕ್ಷಗಳು ಮತ್ತು ಸಂಘಟನೆಗಳೂ ಹಿಂದುತ್ವದ ದ್ವೇಷ ರಾಜಕಾರಣವನ್ನು ಮುಖಾಮುಖಿ ಎದುರಿಸಿ ಬಯಲುಗೊಳಿಸದೆ ತಾವೂ ಅವರಿಗಿಂತ ಉತ್ತಮ ಹಿಂದುತ್ವವಾದಿ ಎಂಬ ಪೈಪೋಟಿಗೆ ಬಿದ್ದಿರುವುದರಿಂದ ಜನಮಾನಸದಲ್ಲಿ ಹಿಂದುತ್ವ ಇನ್ನಷ್ಟು ಮಾನ್ಯತೆ ಪಡೆದುಕೊಳ್ಳುತ್ತಿದೆ.  

ಇದೆಲ್ಲದರ ಒಟ್ಟು ಪರಿಣಾಮದ ಭಾಗವಾಗಿಯೇ ಸೆಕ್ಯುಲರ್ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಪೈಪೋಟಿಯಲ್ಲಿ ರಾಮಮಂದಿರ ಉದ್ಘಾಟಿಸುತ್ತಾರೆ. ರೈತ ಸಂಘದ ನೆಲೆಯಾದ ಮಂಡ್ಯದ ಪಾಂಡವಪುರದಲ್ಲಿ ಆರೆಸ್ಸೆಸ್ ತನ್ನ ಕಚೇರಿಯನ್ನು ಪ್ರಾರಂಭಿಸುತ್ತದೆ. ಅದರ ಉದ್ಘಾಟನೆಯಲ್ಲಿ  ರೈತ ಸಂಘದ ಯುವ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯನವರು ಕೂಡ ಯಾವುದೇ ಮುಜುಗುರವಿಲ್ಲದೆ ಭಾಗವಹಿಸುತ್ತಾರೆ. ಕುಮಾರಸ್ವಾಮಿಯವರ ದಳವಂತೂ ಆರೆಸ್ಸೆಸ್‌ನಲ್ಲಿ ಲೀನವಾಗಿದೆ. 

ಈ ಎಲ್ಲಾ ಪೂರಕ ವಾತಾವರಣವನ್ನು ಬಳಸಿಕೊಂಡು ಸಂಘ ಪರಿವಾರ ಈಗ ಮಂಡ್ಯದ ಮೇಲೆ ಯುದ್ಧ ಸಾರಿದೆ. ಅದಕ್ಕೆ ಧ್ವಜಸ್ತಂಭದ ಮೇಲೆ ಬೇಕೆಂದೇ ಅಕ್ರಮವಾಗಿ ಹನುಮ ಧ್ವಜವನ್ನು ಹಾರಿಸಿ ವಿವಾದಗೊಳಿಸಿದೆ. ಸಿ.ಟಿ. ರವಿಯಂತಹವರು ಸ್ವಾತಂತ್ರ್ಯ ಹೋರಾಟದ ಸೌಹಾರ್ದ ಹಾಗೂ ಸಮಾನತೆಯ ಆಶಯವಾಗಿ ರೂಪುಗೊಂಡ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜವೆಂದು ಅವಮಾನಿಸಿದರೂ ಮಂಡ್ಯದ ಜನರಿರಲಿ, ಇತರ ವಿರೋಧ ಪಕ್ಷಗಳು, ಮಾಧ್ಯಮಗಳೂ ಕೂಡ ಬಾಯಿ ಮುಚ್ಚಿಕೊಂಡಿವೆ. 

ಹೀಗಾಗಿ ರಾಷ್ಟ್ರಧ್ವಜದ ಇತಿಹಾಸ, ಅದರ ಅರ್ಥ ಮತ್ತು ಸಂಘಿಗಳ ಹುನ್ನಾರವನ್ನು ಅರಿಯದ ಮಂಡ್ಯದ ಯುವಜನತೆಯಲ್ಲಿ ದ್ವೇಷವನ್ನು ಬಿತ್ತಿ ಅವರನ್ನು ತಮ್ಮ ಬ್ರಾಹ್ಮಣೀಯ ರಾಷ್ಟ್ರದ ಯಜ್ಞಕ್ಕೆ ಆಹುತಿಗಳನ್ನಾಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ವಾತಂತ್ರ್ಯ ಹೋರಾಟದ ಕನಸು ಮತ್ತು ಅದಕ್ಕೆ ಸಂಘಪರಿವಾರ ಅಂದೂ ಮತ್ತು ಇಂದೂ ಮಾಡುತ್ತಿರುವ ದ್ರೋಹ, ಧ್ವಜ ವಿವಾದ ಹಿಂದೆ ಇರುವ ಅವರ ಹುನ್ನಾರಗಳನ್ನು ಅರ್ಥಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಧ್ವಜದ ಇತಿಹಾಸ ಮತ್ತು ಅದು ಹೇಳುವ ಬಂಧುತ್ವಕ್ಕೂ, ಸಂಘಿಗಳ ಭಗವಾಧ್ವಜದ ಇತಿಹಾಸ ಮತ್ತದರ ಬ್ರಾಹ್ಮಣತ್ವಕ್ಕೂ ಇರುವ ವ್ಯತ್ಯಾಸಗಳನ್ನು ಅರ್ಥಪಡಿಸುವ ಅಗತ್ಯವಿದೆ. 

ಭಾರತದ ಧ್ವಜ v/s ಭಗವಾಧ್ವಜ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕಾಂಗ್ರೆಸ್ ಎಲ್ಲಾ ಬಗೆಯ ಸ್ವಾತಂತ್ರ್ಯ ಹೋರಾಟಗಾರರ ವೇದಿಕೆಯಾಗಿ ಬದಲಾದ ಮೇಲೆ ಭಾರತದ ಸ್ವಾತಂತ್ರ್ಯ ಚಳವಳಿಗೊಂದು ಅರ್ಥಾತ್ ಸ್ವತಂತ್ರ ಭಾರತದ ಆಶಯಕ್ಕೊಂದು ಬಾವುಟವನ್ನು ರೂಪಿಸುವ ಪ್ರಯತ್ನಗಳು ಪ್ರಾರಂಭವಾದವು. ಈ ದೇಶದ ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶದ ಆಶಯವನ್ನು ಪ್ರತಿಬಿಂಬಿಸುವ ಧ್ವಜವೊಂದನ್ನು ರೂಪಿಸುವ ಪ್ರಯತ್ನಗಳು ಮೇಡಂ ಕಾಮೂ ಅವರ ಮುಂದೊಡಗಿನಿಂದ ಪ್ರಾರಂಭವಾಯಿತು. ಈ ಪ್ರಯತ್ನಗಳನ್ನು ಕಾಂಗ್ರೆಸ್ ಅಧಿವೇಶನಗಳಲ್ಲಿ ವೆಂಕಯ್ಯನವರು ಮುಂದುವರಿಸಿದರು. ಅದಾದ ನಂತರದಲ್ಲಿ ಇಂದಿನ ಭಾರತದ ಬಾವುಟಕ್ಕೆ ಅಂತಿಮ ರೂಪವನ್ನು ಕೊಟ್ಟು ರೂಪಿಸಿದ್ದು ಸುರಯ್ಯಾ ತ್ಯಾಬ್ಜಿ ಎಂಬ ಸುಶಿಕ್ಷಿತ ಮುಸ್ಲಿಮ್ ಮಹಿಳಾ ಹೋರಾಟಗಾರ್ತಿ. 

ಭಾರತದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ರೂಪಿತವಾದ ಆ ಬಾವುಟದಲ್ಲಿ ಕೇಸರಿ, ಹಸಿರುಗಳು ಈ ದೇಶದ ಎರಡು ಪ್ರಮುಖ ಧರ್ಮವಾದ ಹಿಂದೂ ಮತ್ತು ಮುಸ್ಲಿಮರನ್ನು ಹಾಗೂ ಬಿಳಿಯ ಬಣ್ಣವು ಇತರ ಎಲ್ಲಾ ಧರ್ಮೀಯರನ್ನು ಪ್ರತಿನಿಧಿಸುತ್ತಿತ್ತು. ಅದರ ಜೊತೆಗೆ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದಗಳ ಸಂಕೇತವಾಗಿಯೂ ಆ ಬಣ್ಣಗಳನ್ನು ಬಳಸಲಾಗಿತ್ತು. ವೆಂಕಯ್ಯನವರು ರೂಪಿಸಿದ್ದ ಧ್ವಜದಲ್ಲಿ ಮೂರೂ ಬಣ್ಣಗಳ ಹಿನ್ನೆಲೆಯಲ್ಲಿ ಚರಕವಿತ್ತು. ಆದರೆ ಚರಕವೋ ಕೇವಲ ಕಾಂಗ್ರೆಸ್ ಪಕ್ಷದ ಸಂಕೇತವಾಗಿ ಅರ್ಥವಾಗುವುದರಿಂದ ಅಂತಿಮ ವಿನ್ಯಾಸದಲ್ಲಿ ನಡುವಿನ ಬಿಳಿಯ ಬಣ್ಣದ ಮೇಲೆ ನೀಲಿ ಬಣ್ಣದ ಅಶೋಕ ಚಕ್ರವನ್ನು ಅಳವಡಿಸಿಕೊಳ್ಳಲಾಯಿತು.

ಇದಕ್ಕೆ ಪ್ರಧಾನ ಕಾರಣ ಭಾರತವು ತನ್ನ ಇತಿಹಾಸದಲ್ಲಿ ಅತಿಯಾಗಿ ಹೆಮ್ಮೆ ಪಡಬಹುದಾದದ್ದು ಹಾಗೂ ಭವಿಷ್ಯಕ್ಕೂ ರೂಢಿಸಿಕೊಳ್ಳಬೇಕಾದದ್ದು ಅಶೋಕನ ಬುದ್ಧಸತ್ವದ ಆಳ್ವಿಕೆಯನ್ನು ಎಂಬ ಗ್ರಹಿಕೆಯಾಗಿತ್ತು. ಅದರ ಜೊತೆಗೆ ಸಾರಾನಾಥದ ಬುದ್ಧ ಸ್ತೂಪದಲ್ಲಿರುವ ನಾಲ್ಕು ಸಿಂಹದ ತಲೆಗಳೂ ಕೂಡ ಮುಂದೆ ಸ್ವತಂತ್ರ ಭಾರತದ ಮುದ್ರೆಯಾಯಿತು. ಅಂದರೆ ಸಾರದಲ್ಲಿ ತ್ರಿವರ್ಣ ಧ್ವಜವನ್ನು ಸಕಲ ಧರ್ಮೀಯರ ಅಸ್ಮಿತೆಗಳನ್ನು ಮತ್ತು ಸಮಾನತೆಯ ಆಶಯಗಳನ್ನು ಒಳಗೊಳ್ಳುವ ಧ್ವಜವನ್ನಾಗಿ ರೂಪಿಸಲಾಯಿತು.  ಇದು ಸ್ವತಂತ್ರ ಭಾರತದ ಧ್ವಜದ ಸೌಹಾರ್ದ ಇತಿಹಾಸ. ಅದರ ಆಶಯಗಳಿಗೆ ತಕ್ಕ ಹಾಗೆ ಸ್ವತಂತ್ರ್ಯೋತ್ತರ ಭಾರತ ರೂಪುಗೊಂಡಿತೇ ಎನ್ನುವುದು ಬೇರೆ ವಿಷಯ. ಆದರೆ ಸ್ವತಂತ್ರ ಬಾವುಟದ ಹಿಂದಿದ್ದ ಆಶಯವಂತೂ ಸರ್ವಧರ್ಮೀಯರ ಶಾಂತಿಯ ತೋಟವಾಗಬೇಕೆಂಬ ಆಶಯವೇ ಅಗಿತ್ತು.

ಆರೆಸ್ಸೆಸ್‌ನ ಭಗವಾಧ್ವಜ-ಮನುವಿನ ವಿಜಯ ಪತಾಕೆ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರ್‌ರ ಹಿಂದೂ ಮಹಾ ಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಗೂಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂ-ಮಾಲಕ ಮತ್ತು ಬಂಡವಾಳಶಾಹಿಗಳ ಆಧಿಪತ್ಯವನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿತ್ತೆೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ- ಆರೆಸ್ಸೆಸ್ 1925ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರಿಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡಗೇವಾರರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು. 

ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣ ಚಳವಳಿ, ಇಂತಹ ಯಾವುದೇ ಹೋರಾಟಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ವ್ಯಕ್ತಿಗತ ನೆಲೆಯಲ್ಲಿ ಭಾಗವಹಿಸಬಹುದೇ ವಿನಾ ಸಂಘದ ಸದಸ್ಯರಾಗಿ ಭಾಗವಹಿಸಕೂಡದೆಂಬ ನಿರ್ದೇಶನವಿತ್ತಿದ್ದರು.

1928ರ ಸುಮಾರಿಗೆ ಆರೆಸ್ಸೆಸ್ ಭಗವಾಧ್ವಜವನ್ನು ತನ್ನ ಲಾಂಛನವನ್ನಾಗಿ ಸ್ವೀಕರಿಸಿತು. ಕೇಸರಿ ಬಣ್ಣದ ಹಾಗೂ ತ್ರಿಕೋನಾಕೃತಿಯ ಭಗವಾಧ್ವಜವನ್ನೇ ಆರೆಸ್ಸೆಸ್ ಏಕೆ ತನ್ನ ಬಾವುಟವನ್ನಾಗಿ ಸ್ವೀಕರಿಸಿತು? ಈ ಬಗ್ಗೆ ಹೆಡಗೇವಾರರ ಸಹಚರನಾಗಿದ್ದ ಎನ್. ಎಚ್. ಪಾಲ್ಕರ್ ಅವರು ತಮ್ಮ Saffron Flag ಪುಸ್ತಕದಲ್ಲಿ ಏಕೆ ಮತ್ತು ಹೇಗೆ ಭಗವಾಧ್ವಜವು ಆರೆಸ್ಸೆಸ್ ಆಶಯದ ಹಿಂದೂ ರಾಷ್ಟ್ರದ ಪ್ರತೀಕವಾಗಿದೆ ಎಂದು ವಿವರಿಸುತ್ತಾರೆ.

ಆರೆಸ್ಸೆಸ್ ಪ್ರಕಾರ ಭಗವಾಧ್ವಜವನ್ನು ವೇದಗಳ ಕಾಲದಲ್ಲಿ ಅರುಣಕೇತು ಎಂದು ಕರೆಯುತ್ತಿದ್ದರು.

ಆದರೆ ಆ ನಂತರ ಭಗವಾಧ್ವಜದ ಬಳಕೆಯು ಪ್ರಧಾನವಾಗಿ ಆಗಿರುವುದು ಬುದ್ಧ ಭಾರತದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ಸಾಧಿಸಲಾದ ಬ್ರಾಹ್ಮಣ್ಯದ ಪುನರುತ್ಥಾನದಲ್ಲಿ. ಅರ್ಥಾತ್ ಭಗವಾಧ್ವಜವು ಮಹಿಳೆ, ಶೂದ್ರ ಮತ್ತು ದಲಿತರ ಮೇಲೆ ಬ್ರಾಹ್ಮಣ್ಯದ ವಿಜಯದ ಪ್ರತೀಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಶಿವಸುಂದರ್

contributor

Similar News