ಸ್ವಾಗತಾರ್ಹ ಜಾತಿ ಗಣತಿ: ಬಂಡವಾಳ ಶಾಹಿ- ಬ್ರಾಹ್ಮಣ ಶಾಹಿ ಚೌಕಟ್ಟು ಮುರಿಯದ ಸಾಮಾಜಿಕ ನ್ಯಾಯದ ಮಿತಿ

ಬಿಹಾರ ಸರಕಾರ ಜಾತಿ ಗಣತಿಯ ಜೊತೆಜೊತೆಗೆ ನಡೆಸಿರುವ ಜಾತಿವಾರು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯೂ ಹೊರಬಂದಾಗ ಕಳೆದ 30-40 ವರ್ಷಗಳ ಹಿಂದುಳಿದ ವರ್ಗದ ರಾಜಕಾರಣ ಯಾವ್ಯಾವ ಜಾತಿಗಳಿಗೆ ಎಷ್ಟೆಷ್ಟು ಲಾಭ ತಂದುಕೊಟ್ಟಿವೆ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಅತ್ಯಂತ ಹಿಂದುಳಿದ ಜಾತಿಗಳು ಸಾಪೇಕ್ಷವಾಗಿ ಸೌಲಭ್ಯ ವಂಚಿತವೇ ಎಂಬುದು ನಮ್ಮ ಕರ್ನಾಟಕದ ಉದಾಹರಣೆಯನ್ನು ನೋಡಿದರೂ ಗೊತ್ತಾಗುತ್ತದೆ. ಇದರಿಂದಾಗಿಯೇ ಹಿಂದುಳಿದ ಜಾತಿಗಳಲ್ಲಿ ಪ್ರಬಲವಾದವರು ಜಾತಿ ಜನಗಣತಿಯನ್ನು ವಿರೋಧಿಸುವುದರಲ್ಲಿ, ಕರ್ನಾಟಕದ ಕುಮಾರಸ್ವಾಮಿಯಂಥವರು ಜಾತಿ ಗಣತಿಯಿಂದ ಜಾತಿ ವೈಷಮ್ಯ ಹೆಚ್ಚಾಗುತ್ತದೆ ಎಂದು ಸಬೂಬು ಹೇಳುವುದರ ಹಿಂದಿನ ಪಟ್ಟಭದ್ರ ಹಿತಾಸಕ್ತಿ ಇದೇ ಆಗಿದೆ. ಈ ಪ್ರಬಲ ಜಾತಿಗಳಲ್ಲಿನ ಜಾತಿ ಪ್ರತಿಷ್ಠೆ ಹಾಗೂ ಅತ್ಯಂತ ಹಿಂದುಳಿದವರ ಬಗೆಗಿನ ತಿರಸ್ಕಾರ ಧೋರಣೆಯೇ ಅವರನ್ನು ನವಬ್ರಾಹ್ಮಣರನ್ನಾಗಿಸಿ ಹಿಂದುತ್ವದ ಪ್ರತಿಪಾದಕರನ್ನಾಗಿ ಮಾಡುತ್ತದೆ.

Update: 2023-10-11 04:43 GMT

ಭಾಗ-1

ಬಿಹಾರದ ಮಹಾಘಟ ಬಂಧನ್ ಸರಕಾರ ಜಾತಿ ಜನಗಣತಿಯನ್ನು ನಡೆಸಿ ಮತ್ತದನ್ನು ಪ್ರಕಟಿಸಿ ದೇಶದ ರಾಜಕಾರಣದಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿದೆ. ಹೀಗಾಗಿಯೇ ಇದು 1989ರಲ್ಲಿ ವಿ.ಪಿ. ಸಿಂಗ್ ಸರಕಾರ ಮಂಡಲ್ ಅಯೋಗದ ವರದಿಯನ್ನು ಜಾರಿ ಮಾಡಿ ಹುಟ್ಟುಹಾಕಿದ ರೀತಿ ಈ ವರದಿ ಕೂಡ ‘ಮಂಡಲ್-2.0’ ಸಂದರ್ಭವನ್ನು ಹುಟ್ಟುಹಾಕಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಅದೇನೇ ಇರಲಿ. ಈ ದೇಶದಲ್ಲಿ ಜಾರಿಯಾಗಿರುವ ಮೀಸಲಾತಿ ಯೋಜನೆಗಳು ವಂಚಿತ ಸಮುದಾಯಗಳಿಗೆ ಅವುಗಳ ಜನಸಂಖ್ಯಾನುಸಾರ ಮತ್ತು ಆಯಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯ ಅನುಸಾರ ಲಭ್ಯವಾಗಬೇಕೆಂದರೆ ದೇಶದೊಳಗೆ ವಂಚಿತ ಜಾತಿಗಳ ಗಣತಿ ಮತ್ತವುಗಳ ಸಾಪೇಕ್ಷ ಹಿಂದುಳಿರುವಿಕೆಗಳ ಸರ್ವೇ ಅತ್ಯಗತ್ಯ. ಅದು ಸಾಮಾಜಿಕ ನ್ಯಾಯದ ಮೊದಲ ಹೆಜ್ಜೆ. ಆದರೆ ಮೀಸಲಾತಿಯನ್ನು ವಿರೋಧಿಸುವ, ಚುನಾವಣಾ ರಾಜಕಾರಣದ ಭಾಗವಾಗಿ ಮಾತ್ರ ಅದನ್ನು ಅನಿವಾರ್ಯವಾಗಿ ಒಪ್ಪಿಕೊಂಡಿರುವ ಪಟ್ಟಭದ್ರ ಜಾತಿ ಹಿತಾಸಕ್ತಿಗಳೇ ಈಗ ಜಾತಿಗಣತಿಯನ್ನು ಕೂಡ ಪ್ರಬಲವಾಗಿ ವಿರೋಧಿಸುತ್ತಿವೆ. ಹೀಗಾಗಿ ಏತಕ್ಕೆ ಸ್ಥಾಪಿತ ಹಿತಾಸಕ್ತಿಗಳು ಜಾತಿಗಣತಿ ಮತ್ತು ಮೀಸಲಾತಿಯನ್ನು ಮತ್ತು ಒಳಮೀಸಲಾತಿಯನ್ನು ವಿರೋಧಿಸುತ್ತವೆ ಎಂಬುದನ್ನು ಕೂಡ ಬಿಹಾರದ ಜಾತಿ ಗಣತಿಯ ಫಲಿತಾಂಶಗಳು ಸ್ಪಷ್ಟವಾಗಿ ಬಯಲು ಮಾಡಿದೆ.

ಇದೀಗ ಕಾಂಗ್ರೆಸ್ ಪಕ್ಷ ಮತ್ತು ಬಹುಪಾಲು ವಿರೋಧ ಪಕ್ಷಗಳು ದೇಶಾದ್ಯಂತ ಜಾತಿ ಜನಗಣತಿಯನ್ನು ಮಾಡಬೇಕೆಂಬ ಒಲವನ್ನು ಮತ್ತು ಆಗ್ರಹವನ್ನು ವ್ಯಕ್ತಪಡಿಸುತ್ತಿವೆ. 2013ರಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರಕಾರ ತಾನು ನಡೆಸಿದ ಕರ್ನಾಟಕ ರಾಜ್ಯದ ಜಾತಿ ಗಣತಿ ಮತ್ತು ಸಾಮಾಜಿಕ-ಅರ್ಥಿಕ ಸರ್ವೇ ವರದಿಯನ್ನು ತನ್ನದೇ ಪಕ್ಷದೊಳಗಿನ ಹಾಗೂ ಹೊರಗಿನ ಪ್ರಬಲ ಜಾತಿ ಆಸಕ್ತಿಗಳ ಒತ್ತಡಕ್ಕೆ ಬಲಿಯಾಗಿ ಪ್ರಕಟಿಸಲಿಲ್ಲ.

ಬಿಹಾರದ ವರದಿಗೆ ಸಿಕ್ಕಿರುವ ಬೆಂಬಲವು ಈ ಬಾರಿ ಪರಿಸ್ಥಿತಿಯನ್ನು ಬದಲಿಸಬಹುದೇ? ಕಾಂತರಾಜ್ ವರದಿಯನ್ನು ಅಂಗೀಕರಿಸಿದರೂ, 2024ರ ಚುನಾವಣೆಗೆ ಮುಂಚೆ ಅದರ ಸಂಪೂರ್ಣ ಶಿಫಾರಸುಗಳು ಬಯಲಾಗಬಹುದೇ? 2024ರ ಚುನಾವಣೆಯ ನಂತರದಲ್ಲಿಯೂ ಅದರ ಶಿಫಾರಸುಗಳಿಗೆ ಆಯಸ್ಸು ಇರುತ್ತದೆಯೇ ಎಂಬೆಲ್ಲ ಪ್ರಶ್ನೆಗಳು ಇದ್ದೇ ಇವೆ. ಮೀಸಲಾತಿ-ಒಳಮೀಸಲಾತಿಯಂತಹ ಸಾಮಾಜಿಕ ನ್ಯಾಯದ ವಿಷಯಗಳ ಬಗ್ಗೆ ಬಿಜೆಪಿ ರೀತಿಯ ಬಹಿರಂಗ ತಾತ್ವಿಕ ವಿರೋಧಗಳನ್ನು ಇತರ ವಿರೋಧ ಪಕ್ಷಗಳು ವ್ಯಕ್ತಪಡಿಸುವುದಿಲ್ಲವಾದರೂ, ಅದರ ಬಗ್ಗೆ ಎಷ್ಟು ಬದ್ಧತೆ ಇದೆಯೆಂಬ ಪ್ರಶ್ನೆ ಇರುವುದರಿಂದ ಈ ಅನುಮಾನಗಳೂ ಉಳಿದುಕೊಳ್ಳುತ್ತವೆ.

ಜಾತಿ ವಿವರಗಳಿಲ್ಲದ ಜನಗಣತಿಗಳು, ಅರ್ಧ ಸತ್ಯಗಳು

ಈ ದೇಶದಲ್ಲಿ ಬ್ರಿಟಿಷರು 1871ರಲ್ಲಿ ಶುರು ಮಾಡಿದ ಮೊದಲ ಸೆನ್ಸಸ್‌ನಿಂದಲೂ ಜನಗಣತಿಯ ಜೊತೆಗೆ ಜಾತಿ ಜನಗಣತಿಯೂ ಪ್ರಾರಂಭವಾದವು. 1931ರಲ್ಲಿ ಬ್ರಿಟಿಷರು ಮಾಡಿದ ಕೊನೆಯ ಜನಗಣತಿಯವರೆಗೂ ಜಾತಿಯನ್ನೂ ಸರ್ವೇ ಮತ್ತು ಎಣಿಕೆ ಮಾಡಲಾಗುತ್ತಿತ್ತು. ಈ ಸೆನ್ಸಸ್‌ನ ಅಂಕಿಅಂಶಗಳು ಕೊಟ್ಟ ಗ್ರಹಿಕೆಗಳಿಂದಾಗಿ ದೇಶದಲ್ಲಿ ದಮನಕ್ಕೊಳಗಾದ ಜಾತಿಗಳು ರಾಜಕೀಯವಾಗಿ ಚೈತನ್ಯವಂತರಾಗಲು ಮತ್ತು ರಾಜಕಾರಣದ ಗುತ್ತೇದಾರಿಕೆ ಹಿಡಿದಿದ್ದ ಹಿಂದೂ ಮೇಲ್ಜಾತಿ ಪಟ್ಟಭದ್ರರಿಗೆ ಸವಾಲು ಹಾಕಲು ಶಕ್ತಿ ನೀಡಿತು ಹಾಗೂ ಜಾತಿಗಳ ಐಡೆಂಟಿಯನ್ನು ಗಟ್ಟಿ ಮಾಡಿತು.

ಹಾಗೆಂದು ಸೆನ್ಸಸೇ ಜಾತಿಯನ್ನು ಹುಟ್ಟುಹಾಕಿತು ಎಂಬ ಅತಿರೇಕವನ್ನು ಕೆಲವು ಸಮಾಜಶಾಸ್ತ್ರಜ್ಞರು ಮಾಡುತ್ತಾರಾದರೂ, ಭಾರತದ ಇತಿಹಾಸದಲ್ಲಿ ಅಲ್ಪಸ್ವಲ್ಪ ಜಾತಿ ಚಲನೆ ಇದ್ದದ್ದು ಮಧ್ಯಸ್ಥ ಜಾತಿಗಳಾದ ಶೂದ್ರ ವರ್ಣಗಳಿಗೆ ಸೇರಿದ ಜಾತಿಗಳ ನಡುವೆ ಮಾತ್ರ. ಉಳಿದಂತೆ ಮೇಲ್ ತುದಿಯಲ್ಲಿ ಯಾಜಮಾನ್ಯ ಬ್ರಾಹ್ಮಣ ಜಾತಿ ಹಾಗೂ ಅದರ ಕೆಳ ತುದಿಯಲ್ಲಿ ದಲಿತ ಜಾತಿಗಳು ಬ್ರಿಟಿಷರ ಸೆನ್ಸಸ್‌ಗೆ ಮುಂಚೆಯೇ ಘನೀಕೃತಗೊಂಡಿದ್ದವು. ಅಂಬೇಡ್ಕರ್ ಅವರು ಸವರ್ಣ ಹಿಂದೂ ರಾಜಕಾರಣಕ್ಕೆ ಸಮರ್ಥವಾಗಿ ಸವಾಲೆಸೆಯಲು ದಲಿತ ಅಸ್ಮಿತೆಯ ರಾಜಕಾರಣ ಬಳಸಿಕೊಳ್ಳಲು ಸಾಧ್ಯವಾದದ್ದು ಈ ಜಾತಿಗಣತಿಯಿಂದಲೇ.

ಸ್ವಾತಂತ್ರ್ಯಾನಂತರದಲ್ಲಿ 1951ರಿಂದ ಪ್ರಾರಂಭವಾದ ಸೆನ್ಸಸ್‌ನಿಂದ ಈವರೆಗೆ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನು ಮಾಡುತ್ತಿಲ್ಲ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದ ಉದ್ದಕ್ಕೂ ಅಸ್ಪಶ್ಯ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಸಂಘರ್ಷ ಜೀವಂತವಾಗಿದ್ದರಿಂದ ಸೆನ್ಸಸ್‌ನಲ್ಲಿ ದಲಿತ ಮತ್ತು ಆದಿವಾಸಿಗಳ ಜಾತಿ ಗಣತಿ ಮಾತ್ರ ಮುಂದುವರಿದಿದೆ. ಅದರ ಜೊತೆಗೆ ಲಿಂಗ ಹಾಗೂ ಧರ್ಮಾಧಾರಿತ ಜನಗಣತಿಯೂ ನಡೆಯುತ್ತಿದೆ.

ಹಿಂದುಳಿದ ಮೀಸಲಾತಿ ಮತ್ತು ಅಬ್ರಾಹ್ಮಣ ಪ್ರಭಾವಿಗಳ ಸಬಲೀಕರಣ

ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ ಭೂ ಸುಧಾರಣೆ, ಹಸಿರು ಕ್ರಾಂತಿ ಮತ್ತು ಇತರ ಯೋಜನೆಗಳು ಗ್ರಾಮೀಣ ಭಾರತದಲ್ಲಿ ನಿಧಾನವಾಗಿ ಭೂ ಒಡೆತನ ಹೊಂದಿದ್ದ ಶೂದ್ರ ಜಾತಿಗಳನ್ನು ಸಬಲೀಕರಿಸಿ ಮೇಲ್ಚಲನೆ ಹೊಂದಲು ಕಾರಣವಾದವು. ಆ ಆರ್ಥಿಕ ಸಬಲೀಕರಣದಿಂದ ಅಬ್ರಾಹ್ಮಣ ಪ್ರಭಾವಿ ಹಿಂದುಳಿದ ಜಾತಿಗಳ ಮೇಲ್ ಸ್ತರಗಳು ರಾಜಕೀಯ ಮತ್ತು ಆಡಳಿತದಲ್ಲೂ ಬ್ರಾಹ್ಮಣರ ಆಧಿಪತ್ಯವನ್ನು ಪ್ರಶ್ನಿಸಿ ತಮ್ಮ ಪಾಲು ಕೇಳಲಾರಂಭಿಸಿದವು. ಅದರ ಭಾಗವಾಗಿಯೇ 70-80ರ ದಶಕಗಳಲ್ಲಿ ಹಲವಾರು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೂ ಮೀಸಲಾತಿ ಜಾರಿಯಾಯಿತು.

1989ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ಸರಕಾರ ಕೇಂದ್ರ ಸರಕಾರದ ಉದ್ಯೋಗಗಳಲ್ಲೂ ಹಿಂದುಳಿದ ಜಾತಿಗಳಿಗೆ ಮಂಡಲ್ ಆಯೋಗದನ್ವಯ ಮೀಸಲಾತಿಯನ್ನು ಜಾರಿಗೊಳಿಸಿತು. ಅದಾದ ನಂತರದಲ್ಲಿ ಹಿಂದುಳಿದ ಜಾತಿಗಳಲ್ಲಿ ಮೇಲ್ಚಲನೆ ಹೊಂದುತ್ತಿದ್ದ ಜಾತಿಗಳು ರಾಜಕೀಯವಾಗಿಯೂ ಬಲಿಷ್ಠಗೊಂಡವು.

ಜಾತಿಗಣತಿಗೆ ಸುಪ್ರೀಂ ಕೋರ್ಟ್‌ನ ಪರೋಕ್ಷ ಆದೇಶ

1992ರಲ್ಲಿ ಸುಪ್ರೀಂ ಕೋರ್ಟಿನ ಒಂಭತ್ತು ನ್ಯಾಯಾಧೀಶರ ಪೀಠವು ಮಂಡಲ್ ವರದಿಯಾಧಾರಿತ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯಿತು ಮತ್ತು ಪ್ರತೀ ರಾಜ್ಯಗಳಲ್ಲಿ ಒಂದು ಶಾಶ್ವತ ಹಿಂದುಳಿದ ವರ್ಗದ ಆಯೋಗದ ನೇಮಕಾತಿಗೆ ಆದೇಶಿಸಿತು ಹಾಗೂ ಕಾಲಕಾಲಕ್ಕೆ ಹಿಂದುಳಿದ ಮೀಸಲಾತಿಯ ಪಟ್ಟಿಯನ್ನು ತಳಮಟ್ಟದ ಮಾಹಿತಿಯನ್ನು ಆಧರಿಸಿ ಪರಿಷ್ಕರಣೆ ಮಾಡಲು ಆದೇಶಿಸಿತು.

ಆ ನಂತರದಲ್ಲಿ ರಾಜ್ಯಗಳು ನೀಡಿದ ಹಿಂದುಳಿದ ವರ್ಗದ ಮೀಸಲಾತಿಯ ಪಟ್ಟಿಯ ಬಗ್ಗೆ ವಿವಾದ ಉಂಟಾದಾಗಲೆಲ್ಲಾ ಕೋರ್ಟ್‌ಗಳು ಮೀಸಲಾತಿ ಫಲವನ್ನು ಪಡೆದುಕೊಳ್ಳಲಿರುವ ಜಾತಿಗಳು ಹಿಂದುಳಿದಿವೆಯೇ ಮತ್ತು ಅವುಗಳ ಪ್ರಮಾಣಕ್ಕೆ ಅನುಸಾರವಾಗಿ ಪ್ರಾತಿನಿಧ್ಯ ಪಡೆದಿವೆಯೇ ಇಲ್ಲವೇ ಎಂಬ ಬಗ್ಗೆ ತಳಮಟ್ಟದ ವೈಜ್ಞಾನಿಕ ಮಾಹಿತಿ ಇದ್ದರೆ ಮಾತ್ರ ಅನುಮೋದಿಸಲು ಇಲ್ಲದಿದ್ದರೆ ತಿರಸ್ಕರಿಸಲು ಪ್ರಾರಂಭಿಸಿದವು.

2010ರಲ್ಲಿ ಯುಪಿಎ ಸರಕಾರ ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿದಿರುವಿಕೆಯ ಸರ್ವೇಗಳನ್ನು ನಡೆಸಿತಾದರೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲಿಲ್ಲ. ಅದಕ್ಕೆ ಒಂದು ಕಾರಣ ಜಾತಿಯನ್ನು ನಮೂದಿಸುವಾಗ ಉಪಜಾತಿಗಳ ಮತ್ತು ಬಳಿಗಳ ಹೆಸರನ್ನು ಹೇಳಿರುವುದರಿಂದ ಲಕ್ಷಾಂತರ ಹೆಸರುಗಳು ಜಾತಿಗಳ ಹೆಸರಲ್ಲಿ ನಮೂದಾಗಿವೆ ಎಂಬ ಒಂದು ಸಬೂಬನ್ನು ನೀಡಲಾಗುತ್ತಿದೆ. ಆದರೂ ಅದನ್ನೇ ಬಹಿರಂಗ ಪಡಿಸಲು ಏನು ಅಡ್ಡಿ?

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲಂತೂ ಜಾತಿ ಜನಗಣತಿಯನ್ನು ಮೂಲೆಗೆ ಸರಿಸಿತು. ಮಾತ್ರವಲ್ಲ. 2021ರ ಜುಲೈನಲ್ಲಿ ಸಂಸತ್ತಿಗೆ ನೀಡಿದ ಉತ್ತರವೊಂದರಲ್ಲಿ ತಮ್ಮ ಸರಕಾರ ಯಾವ ಕಾರಣಕ್ಕೂ ಜಾತಿ ಜನಗಣತಿ ಮಾಡುವುದಿಲ್ಲ ಎಂದು ಘೋಷಿಸಿತು. ಈ ಮಧ್ಯೆ ಬಿಹಾರದ ಜಾತಿ ಜನಗಣತಿಯ ಬಗ್ಗೆ ಬಿಹಾರದ ಬಿಜೆಪಿ ಬೆಂಬಲ ವ್ಯಕ್ತಪಡಿಸಿದರೂ, ಬಿಜೆಪಿ ಹೈಕಮಾಂಡ್ ವಿರೋಧಿಸುತ್ತಿದೆ. ಜಾತಿ ಜನಗಣತಿಯು ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂಬ ನೆಪವೊಡ್ಡಿ ಬಿಹಾರದ ಜನಗಣತಿಯನ್ನು ವಿರೋಧಿಸಿ ಬಿಜೆಪಿ ಬೆಂಬಲಿಗರೇ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆದರೆ ಅದನ್ನು ಪಾಟ್ನಾ ಹೈಕೋರ್ಟ್ ಪುರಸ್ಕರಿಸದೇ ಇದ್ದಾಗ ಈಗ ಸುಪ್ರೀಂ ಕೋರ್ಟಿನಲ್ಲಿ ದಾವೆಯನ್ನು ಹೂಡಿದ್ದಾರೆ. ಹಾಲಿ ಸುಪ್ರೀಂ ಕೋರ್ಟ್ ಜಾತಿ ಜನಗಣತಿಗೆ ತಡೆಯಾಜ್ಞೆ ನೀಡದೆ ಮುಂದಿನ ವಿಚಾರಣೆಯನ್ನು 2024ರ ಜನವರಿಗೆ ಮುಂದೂಡಿದೆ.

ಸಾರಾಂಶದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಪಟ್ಟಂತೆ ಈವರೆಗೆ ಕೋರ್ಟ್‌ಗಳು ಜಾತಿ ಜನಗಣತಿ ಮತ್ತು ಜಾತಿವಾರು ಹಿಂದುಳಿದಿರುವಿಕೆಯ ಸರ್ವೇಯನ್ನು ಮಾಡಬೇಕೆಂದು, ಆ emಠಿiಡಿiಛಿಚಿಟ ಜಚಿಣಚಿ ಅಧರಿಸಿಯೇ ಮೀಸಲಾತಿ ಪ್ರಮಾಣ ನಿಗದಿ ಮಾಡಬೇಕೆಂದು ಆದೇಶಿಸುತ್ತಿತ್ತು ಎಂದಾಗಲಿಲ್ಲವೇ?

ಹಾಗಿದ್ದಲ್ಲಿ ಕೇಂದ್ರ ಸರಕಾರವೂ ಕಾಲಕಾಲಕ್ಕೆ ತನ್ನ ಮೀಸಲಾತಿಯನ್ನು ಪರಿಷ್ಕರಿಸುವ ಮುನ್ನ ದೇಶಾದ್ಯಂತ ಜಾತಿ ಜನಗಣತಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಏಕೆ ಕೇಂದ್ರ ಸರಕಾರಕ್ಕೆ ಆದೇಶಿಸಲಿಲ್ಲ ಎಂಬುದು ನಿಗೂಢವೇ. ಈಗಲಾದರೂ ತನ್ನದೇ ಆದೇಶದ ತಾರ್ಕಿಕ ಮುಂದುವರಿಕೆಯಾಗಿ ಸುಪ್ರೀಂ ಕೋರ್ಟ್ ದೇಶಾದ್ಯಂತ ಜಾತಿ ಜನಗಣತಿಯನ್ನು ಆದೇಶಿಸುವುದೇ?

ಒಟ್ಟಿನಲ್ಲಿ ಸಾಂವಿಧಾನಿಕವಾಗಿಯೂ ಮತ್ತು ಕೋರ್ಟ್‌ಗಳ ಆದೇಶಗಳ ಇತಿಹಾಸವನ್ನು ನೋಡಿದರೂ ಜಾತಿ ಜನಗಣತಿ ಮತ್ತು ಜಾತಿಗಳ ಹಿಂದುಳಿದಿರುವಿಕೆಯ ತಳಮಟ್ಟದ ಅಧ್ಯಯನಗಳು ಮೀಸಲಾತಿಯೆಂಬ ಸಾಮಾಜಿಕ ನ್ಯಾಯದ ಪರಿಣಾಮಕಾರಿ ಅನುಷ್ಠಾನಕ್ಕೆ ಅನಿವಾರ್ಯ. ಹಿಂದುಳಿದ ಜಾತಿಗಳ ಒಳಗೆ ಸೌಲಭ್ಯಗಳು ಕೆಲವು ಜಾತಿಗಳಿಗೆ ಮಾತ್ರ ಲಭ್ಯವಾಗದೆ ಕೆಳಗಿನವರೆಗೆ ಹರಿಯಲೂ ಇದು ಅತ್ಯಗತ್ಯ.

ಬಿಹಾರದ ಜಾತಿ ಜನಗಣತಿಯೂ ಅದನ್ನೇ ಮಾಡಿದೆ. ಈ ವರದಿಯು ಈವರೆಗೆ ಹಿಂದುಳಿದ ಮೀಸಲಾತಿಯ ಬಗ್ಗೆ ಇದ್ದ ಹಲವಾರು ಮಿಥ್ಯೆಗಳನ್ನು ಒಡೆದು ಹಾಕಿದೆ. ಮಂಡಲ್ 2.0 ರಾಜಕಾರಣವನ್ನು ಹುಟ್ಟು ಹಾಕಿ ಮತ್ತೊಮ್ಮೆ ಕಮಂಡಲದ (ಹಿಂದುತ್ವದ) ರಾಜಕಾರಣವನ್ನು ಹತ್ತಿಕ್ಕಬಹುದೆಂಬ ಆಶಯವನ್ನು ಹುಟ್ಟು ಹಾಕಿದೆ. ಹಾಗೂ ಇದರಿಂದ ಅತ್ಯಂತ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಗಬಹುದೆಂಬ ಆಶಾವಾದವನ್ನು ಹುಟ್ಟುಹಾಕಿದೆ. ಮೇಲಿನ ಮೂರೂ ಸಾಧ್ಯತೆಗಳನ್ನು ಎತ್ತಿಹಿಡಿಯುತ್ತಾ ಮತ್ತು ಪ್ರತಿಪಾದಿಸುತ್ತಾ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ.

ಆದರೆ ಮಂಡಲೋತ್ತರ ಜಾತಿ ರಾಜಕಾರಣ ಹಿಡಿದ ದಾರಿ, ಹಿಂದುತ್ವದ ಪುನರುತ್ಥಾನ ಮತ್ತು ಎಲ್ಲಾ ಪಕ್ಷಗಳ ಬೆಂಬಲದೊಂದಿಗೆ 1991ರ ನಂತರ ಭಾರತದ ಆರ್ಥಿಕತೆ ಹಿಡಿದಿರುವ ದಾರಿಗಳ ಹಿನ್ನೆಲೆಯಲ್ಲಿ ನೋಡಿದರೆ ಈ ಆಶಾವಾದವು ಗಟ್ಟಿ ಬುನಾದಿಯ ಮೇಲಿಲ್ಲ ಎಂಬುದನ್ನು ಸಾಬೀತು ಪಡಿಸುತ್ತವೆ.

ಕೊನೆಯ ಎರಡು ಅಂಶಗಳನ್ನು ಪರಿಶೀಲನೆ ಮಾಡುವ ಮುನ್ನ ಬಿಹಾರದ ಜಾತಿ ಜನಗಣತಿ ಬಯಲು ಮಾಡಿರುವ ಕೆಲವು ಸತ್ಯಗಳನ್ನು ಗಮನಿಸೋಣ.

ಬಿಹಾರದ ಜಾತಿಗಣತಿ ಮುಂದಿಟ್ಟಿರುವ ಕೆಲವು ಸತ್ಯಗಳು

ಶೇ. 63ಕ್ಕೆ ಶೇ. 27 ಮೀಸಲಾತಿ, ಶೇ. 15 ಜನಸಂಖ್ಯೆಗೆ ಶೇ. 10!

ಬಿಹಾರದ ಜಾತಿಗಣತಿಯ ವರದಿ ಪ್ರಕಟವಾಗಿದ್ದು, ಜಾತಿವಾರು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ವರದಿ ಬಯಲಾಗಬೇಕಿದೆ. ಆದರೂ ಜಾತಿವಾರು ಪ್ರಮಾಣದ ಬಗ್ಗೆ ಈ ವರದಿಯು ಕೊಟ್ಟಿರುವ ವಿವರಗಳು ಸ್ಫೋಟಕವಾಗಿವೆ.

ಮೊದಲನೆಯದಾಗಿ ಈ ವರದಿಯ ಪ್ರಕಾರ ಬಿಹಾರದ 13 ಕೋಟಿ ಜನಸಂಖ್ಯೆಯಲ್ಲಿ ಶೇ. 63ರಷ್ಟು ಜನತೆ ಹಿಂದುಳಿದ ಜಾತಿಗಳಿಗೆ ಸೇರಿದವರು. ಮಂಡಲ್ ವರದಿಯಲ್ಲಿ 1931ರ ಕೊನೆಯ ಜಾತಿ ಗಣತಿಯನ್ನು ಆಧರಿಸಿ ಮತ್ತು ಕೆಲವು ಸ್ಯಾಂಪಲ್ ಸರ್ವೇಗಳನ್ನು ಆಧರಿಸಿ ಈ ದೇಶದಲ್ಲಿ ಹಿಂದುಳಿದ ಜಾತಿಗಳ ಪ್ರಮಾಣವು ಶೇ. 52 ಇರಬಹುದು ಎಂದು ಅಂದಾಜಿಸಿತ್ತು. ಇಂದಿರಾ ಸಾಹನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಟ್ಟಾರೆ ಮೀಸಲಾತಿಯ ಪ್ರಮಾಣವು ಯಾವ ಕಾರಣಕ್ಕೂ ಶೇ. 50 ಅನ್ನು ದಾಟಬಾರದು ಎಂದು ಮೇಲ್ಮಿತಿ ವಿಧಿಸಿದ್ದರಿಂದ ಮತ್ತು ಸಾಂವಿಧಾನಿಕವಾಗಿ ಎಸ್‌ಸಿ ಮತ್ತು ಎಸ್‌ಟಿ ಗಳಿಗೆ ಈಗಾಗಲೇ ಶೇ. 23ರಷ್ಟು ಮೀಸಲಾತಿ ದಕ್ಕುತ್ತಿದ್ದರಿಂದ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣ ಶೇ. 27ಕ್ಕೆ ಮಿತಿಗೊಂಡಿತು. ಆ ನಂತರ ಎಲ್ಲಾ ರಾಜ್ಯಗಳಲ್ಲೂ ಇದೇ ಕಡೆದಿಟ್ಟ ಕಾನೂನಾಯಿತು.

ಆದರೆ ಬಿಹಾರದ ಜನಗಣತಿಯ ಪ್ರಕಾರ ಹಿಂದುಳಿದ ಜಾತಿಗಳ ಜನಸಂಖ್ಯೆ ಶೇ. 52 ಅಲ್ಲ. ಬದಲಿಗೆ ಶೇ. 63ರಷ್ಟು. ಅಂದರೆ ಶೇ. 11ರಷ್ಟು ಜಾಸ್ತಿ. ಆದರೂ ಶೇ. 50ರ ಮೇಲ್ಮಿತಿ ಕಾರಣದಿಂದ ಅವರಿಗೆ ದಕ್ಕುತ್ತಿರುವ ಮೀಸಲಾತಿ ಕೇವಲ ಶೇ. 27. ಆದರೆ ಬಿಹಾರದ ಜನಗಣತಿ ತೋರಿಸಿಕೊಟ್ಟಿರುವಂತೆ ಮೇಲ್ಜಾತಿಗಳ ಜನಸಂಖ್ಯೆ ಕೇವಲ ಶೇ. 15. ಆದರೆ ಇತ್ತೀಚೆಗೆ ಜಾರಿಯಾದ ಇಡಬ್ಲ್ಯುಎಸ್ ಮೀಸಲಾತಿಯ ಕಾರಣದಿಂದ ಈ ಶೇ. 15ರಷ್ಟಿರುವ ಸಮುದಾಯಕ್ಕೆ ಶೇ. 10 ರಷ್ಟು ಮೀಸಲಾತಿ ಸಿಗುತ್ತದೆ. ಇದಕ್ಕಿಂತ ಸಾಮಾಜಿಕ ಅನ್ಯಾಯ ಮತ್ತೊಂದು ಇರಬಹುದೇ?

ಹಿಂದುಳಿದ ಜಾತಿಗಳ ವಿಷಯದಲ್ಲಿ ಜನಸಂಖ್ಯಾ ಪ್ರಮಾಣದ ತಳಮಟ್ಟದ ಅದ್ಯಯನ ಇತ್ಯಾದಿ ವೈಜ್ಞಾನಿಕ ಮಾಹಿತಿಗಳನ್ನು ಆಗ್ರಹಿಸುವ ಸುಪ್ರೀಂ ಕೋರ್ಟ್ ಮೇಲ್ಜಾತಿ ಮೀಸಲಾತಿ ವಿಷಯದಲ್ಲಿ ಅವುಗಳ ಜನಸಂಖ್ಯಾ ಪ್ರಮಾಣದ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲದಿದ್ದರೂ, ಅವರಿಗೆ ಕೊಡುವ ಮೀಸಲಾತಿ ಶೇ. 50ರ ಮೇಲ್ಮಿತಿಯನ್ನು ಮೀರುತ್ತಿದ್ದರೂ ಲೆಕ್ಕಕ್ಕಿಡದೆ ಮೇಲ್ಜಾತಿಗಳಿಗೆ ಮೋದಿ ಸರಕಾರ ನೀಡಿದ್ದ ಶೇ.10 ರಷ್ಟು ಮೀಸಲಾತಿಯನ್ನು ಪುರಸ್ಕರಿಸಿತು.

ಆದರೆ ಬಿಹಾರದ ಜನಗಣತಿಯು ಇದು ಎಷ್ಟು ಅನ್ಯಾಯಯುತ ಮತ್ತು ತಾರತಮ್ಯದಿಂದ ಕೂಡಿದೆ ಎಂಬುದನ್ನು ತೋರಿಸುತ್ತದೆ. ಮೇಲ್ಜಾತಿಗಳಿಗೆ ಪ್ರತೀ ಮೂವರಲ್ಲಿ ಇಬ್ಬರಿಗೆ ಮೀಸಲಾತಿ ಅವಕಾಶ ಸಿಕ್ಕರೆ, ಹಿಂದುಳಿದ ಜಾತಿಗಳಲ್ಲಿ ಪ್ರತೀ ಮೂವರಲ್ಲಿ ಒಬ್ಬರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಇದು ಈಗಾಗಲೇ ಇರುವ ತಾರತಮ್ಯವನ್ನು ಹಿಗ್ಗಿಸುವ ಕ್ರಮವೇ ಆಗಿದೆ.

ಆದ್ದರಿಂದ ಬಿಹಾರದ ಜನಗಣತಿಯನ್ನು ಆಧರಿಸಿ ಸಾಮಾಜಿಕ ನ್ಯಾಯವಾದಿಗಳು:

1. ಸುಪ್ರೀಂ ಕೋರ್ಟ್ ಮೀಸಲಾತಿಯ ಮೇಲೆ ಅವೈಜ್ಞಾನಿಕವಾಗಿ ವಿಧಿಸಿರುವ ಶೇ. 50ರ ಮೇಲ್ಮಿತಿಯನ್ನು ಕಿತ್ತುಹಾಕಲೂ ಹಾಗೂ

2. ಮೇಲ್ಜಾತಿ ಮಧ್ಯಮವರ್ಗಕ್ಕೆ ಜನಸಂಖ್ಯಾ ಅನುಪಾತಕ್ಕಿಂತ ಹೆಚ್ಚಿಗೆ ನೀಡಿರುವ ಶೇ. 10ರ ಮೀಸಲಾತಿಯನ್ನು ಮರುಪರಿಶೀಲಿಸಲು ಆಗ್ರಹಿಸಬೇಕಿದೆ.

ಹಿಂದುಳಿದ ವರ್ಗಗಳಿಗಿಂತ ಅತ್ಯಂತ ಹಿಂದುಳಿದ ವರ್ಗ ಹೆಚ್ಚು

ಬಿಹಾರ ಜಾತಿಗಣತಿ ಹೊರತಂದಿರುವ ಮತ್ತೊಂದು ಮುಖ್ಯ ಅಂಶ ಒಟ್ಟಾರೆಯಾಗಿ ಹಿಂದುಳಿದ ವರ್ಗಗಳ ಪ್ರಮಾಣ ಜನಸಂಖ್ಯೆಯ ಶೇ. 63ರಷ್ಟಿದ್ದರೂ, ಅದರಲ್ಲಿ ಅತ್ಯಂತ ಹಿಂದುಳಿದವರ ಪ್ರಮಾಣ ಶೇ. 36. ಸಾಪೇಕ್ಷವಾಗಿ ಈ ಸಮುದಾಯಗಳಿಗಿಂತ ಮುಂದುವರಿದ ಹಿಂದುಳಿದ ಜಾತಿಗಳ ಪ್ರಮಾಣ ಶೇ. 27. ಅಂದರೆ ಸಾಪೇಕ್ಷವಾಗಿ ಬಲಿಷ್ಠ ಹಿಂದುಳಿದ ಜಾತಿಗಳಿಗಿಂತ ಅತ್ಯಂತ ಹಿಂದುಳಿದ ಜಾತಿಗಳ ಪ್ರಮಾಣ ಶೇ. 9ರಷ್ಟು ಜಾಸ್ತಿ. ಆದರೆ ಅಷ್ಟೇ ಪ್ರಮಾಣದಲ್ಲಿ ಅತ್ಯಂತ ಹಿಂದುಳಿದ ಜಾತಿಗಳಿಗೆ ಅವಕಾಶಗಳು ಲಭ್ಯವಾಗಿದೆಯೇ ಅಥವಾ ಅವು ಪ್ರಧಾನವಾಗಿ ಶೇ. 27 ರಷ್ಟಿರುವ ಸಾಪೇಕ್ಷವಾಗಿ ಮುಂದುವರಿದಿರುವ ಹಿಂದುಳಿದ ಜಾತಿಗಳಿಗೆ ದಕ್ಕಿದೆಯೇ ಎಂಬುದು ಸಾಮಾಜಿಕ ನ್ಯಾಯದ ರಾಜಕಾರಣ ಮುಂದಿಡಬೇಕಾದ ಹೆಜ್ಜೆಗಳನ್ನು ತೀರ್ಮಾನಿಸುತ್ತದೆ. ಪ್ರಾಯಶಃ ಇತರ ಎಲ್ಲಾ ರಾಜ್ಯಗಳಲ್ಲೂ ಅತ್ಯಂತ ಹಿಂದುಳಿದ ಜಾತಿಗಳ ಪ್ರಮಾಣ, ಈಗಾಗಲೇ ಹೆಚ್ಚಿನ ಸೌಲಭ್ಯ ಪಡೆಯುತ್ತಿರುವ ಹಿಂದುಳಿದ ಜಾತಿಗಳಿಗಿಂತ ಹೆಚ್ಚಿರುವ ಸಾಧ್ಯತೆಯೇ ಹೆಚ್ಚು. ಬಿಹಾರ ಸರಕಾರ ಜಾತಿ ಗಣತಿಯ ಜೊತೆಜೊತೆಗೆ ನಡೆಸಿರುವ ಜಾತಿವಾರು ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಯೂ ಹೊರಬಂದಾಗ ಕಳೆದ 30-40 ವರ್ಷಗಳ ಹಿಂದುಳಿದ ವರ್ಗದ ರಾಜಕಾರಣ ಯಾವ್ಯಾವ ಜಾತಿಗಳಿಗೆ ಎಷ್ಟೆಷ್ಟು ಲಾಭ ತಂದುಕೊಟ್ಟಿವೆ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಅತ್ಯಂತ ಹಿಂದುಳಿದ ಜಾತಿಗಳು ಸಾಪೇಕ್ಷವಾಗಿ ಸೌಲಭ್ಯ ವಂಚಿತವೇ ಎಂಬುದು ನಮ್ಮ ಕರ್ನಾಟಕದ ಉದಾಹರಣೆಯನ್ನು ನೋಡಿದರೂ ಗೊತ್ತಾಗುತ್ತದೆ. ಇದರಿಂದಾಗಿಯೇ ಹಿಂದುಳಿದ ಜಾತಿಗಳಲ್ಲಿ ಪ್ರಬಲವಾದವರು ಜಾತಿ ಜನಗಣತಿಯನ್ನು ವಿರೋಧಿಸುವುದರಲ್ಲಿ, ಕರ್ನಾಟಕದ ಕುಮಾರಸ್ವಾಮಿಯಂಥವರು ಜಾತಿ ಗಣತಿಯಿಂದ ಜಾತಿ ವೈಷಮ್ಯ ಹೆಚ್ಚಾಗುತ್ತದೆ ಎಂದು ಸಬೂಬು ಹೇಳುವುದರ ಹಿಂದಿನ ಪಟ್ಟಭದ್ರ ಹಿತಾಸಕ್ತಿ ಇದೇ ಆಗಿದೆ. ಈ ಪ್ರಬಲ ಜಾತಿಗಳಲ್ಲಿನ ಜಾತಿ ಪ್ರತಿಷ್ಠೆ ಹಾಗೂ ಅತ್ಯಂತ ಹಿಂದುಳಿದವರ ಬಗೆಗಿನ ತಿರಸ್ಕಾರ ಧೋರಣೆಯೇ ಅವರನ್ನು ನವಬ್ರಾಹ್ಮಣರನ್ನಾಗಿಸಿ ಹಿಂದುತ್ವದ ಪ್ರತಿಪಾದಕರನ್ನಾಗಿ ಮಾಡುತ್ತದೆ. ಆ ಅರ್ಥದಲ್ಲಿ ಈ ಪ್ರಬಲ ಜಾತಿಗಳ ಜಾತಿ ದುರಭಿಮಾನಿಗಳು ಬ್ರಾಹ್ಮಣ್ಯದ ಗೇಟ್ ಕೀಪರ್‌ಗಳಲ್ಲ. ಬದಲಿಗೆ ಸ್ಟೇಕ್ ಹೋಲ್ಡರ್‌ಗಳೇ ಆಗಿದ್ದಾರೆ.

ಈ ಸನ್ನಿವೇಶದಲ್ಲಿ ಜಾತಿ ಗಣತಿಯಿಂದ ಹೊರಬರುವ ಸತ್ಯಾಂಶಗಳಿಂದ ಹಿಂದುಳಿದ ವರ್ಗದ ರಾಜಕಾರಣ ಮತ್ತಷ್ಟು ಸಾಮಾಜಿಕ ನ್ಯಾಯದ ಕಡೆ ಚಲಿಸಬೇಕೆಂದರೆ ಅತ್ಯಂತ ಹಿಂದುಳಿದ ವರ್ಗಗಳಿಗೆ ಆಗಿರುವ ವಂಚನೆಯನ್ನು ಅಂಗೀಕರಿಸುವ ನ್ಯಾಯಪ್ರಜ್ಞೆಯನ್ನು ಪ್ರದರ್ಶಿಸಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಶಿವಸುಂದರ್,

contributor

Similar News