ರಕ್ತಗತ

Update: 2024-01-28 05:17 GMT

ಇತ್ತೀಚೆಗೆ ನನಗೆ ಹೊಟ್ಟೆ ಬರಲು ಆರಂಭಿಸಿದೆ, ಹೆಚ್ಚು ದೂರವನ್ನು ಬೇಗ ಕ್ರಮಿಸಲು ಆಗುತ್ತಿಲ್ಲ, ಪ್ಯಾಂಟುಗಳು ಮತ್ತು ಷರಟುಗಳು ಟೈಟಾಗುತ್ತಿವೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ದಿನಾ ಬೆಳಗ್ಗೆ ಬೇಗ ಏಳಬೇಕು. ನಾಲ್ಕು ಕಿ.ಮೀ. ನಡೆಯಬೇಕು. ಬಿಡದೇ ವ್ಯಾಯಾಮ ಮಾಡಬೇಕು ಎಂದು ಹೊಸ ವರ್ಷದ ಸಂಕಲ್ಪ ಮಾಡಿಕೊಂಡೇನೋ ಆಯಿತು. ಆದರೆ ಒಂದೆರಡು ದಿನ ಮಾಡಬಹುದು. ಆದರೆ ಮತ್ತದೇ ನಿದ್ದೆ, ಮತ್ತದೇ ಆಲಸ್ಯ, ಮತ್ತದೇ ಬೇಜಾರು. ಹೋಗುತ್ತಾ ಅಂತಹ ಚಿಕ್ಕದಾಗಿರುವ ಶರ್ಟು ಮತ್ತು ಪ್ಯಾಂಟಿನ ರಗಳೆ ಬಿಟ್ಟು ಇನ್ನು ಮುಂದಿನ ಸೈಜಿನ ಉಡುಪುಗಳಿಗೆ ಹೋಗಿಬಿಡುವುದು.

ಹೀಗೇಕಾಗುತ್ತದೆ? ನಾವು ಯಾವುದೋ ಒಂದು ಸಂಕಲ್ಪವನ್ನು ಮಾಡಿಕೊಂಡಿದ್ದರೂ ಅದನ್ನು ಕಾರ್ಯರೂಪಕ್ಕೆ ತರದೇ ಇರುವ ವಿಧಿ ಯಾವುದು?

ಯಾವುದೋ ಒಂದು ಗುಣ, ಪ್ರತಿಭೆ, ದೌರ್ಬಲ್ಯ ಅಥವಾ ಸಾಮರ್ಥ್ಯ ಆ ವ್ಯಕ್ತಿಗೆ ರಕ್ತಗತವಾಗಿ ಬಂದಿದೆ ಎನ್ನುವುದನ್ನು ಬಹಳಷ್ಟು ಜನ ಆನುವಂಶೀಯವಾಗಿ ಬಳುವಳಿ ಪಡೆದಿರುವಂತಹ ಅರ್ಥದಲ್ಲಿ ಬಳಸುವರು. ಲೋಕರೂಢಿಯಾಗಿ ಆ ಮಾತು ಸರಿ.

ಮಾನಸಿಕವಾಗಿ ಮತ್ತು ಮನೋಜೈವಿಕ (ಬಯೋಸೈಕಾಲಜಿ ಅಥವಾ ನ್ಯೂರೋಸೈನ್ಸ್) ಅರ್ಥದಲ್ಲಿ ರಕ್ತಗತ ಎನ್ನುವುದನ್ನು ತಿಳಿಯಬೇಕಾಗಿರುವ ಬಗೆಯೇ ಬೇರೆ ಇದೆ. ನಮ್ಮ ಮೆದುಳು, ನರಮಂಡಲ ಮತ್ತು ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನುಗಳ ವ್ಯತ್ಯಾಸ ಹಾಗೂ ಮೆದುಳೂ ಒಳಗೊಂಡಂತೆ ದೇಹದ ಇತರ ಭಾಗಗಳಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳು ಕೂಡಾ ನಮ್ಮ ವರ್ತನೆ, ಆಲೋಚನೆ, ಚಟುವಟಿಕೆ ಮತ್ತು ಭಾವನೆಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಇದಕ್ಕೆ ಫಿಸಿಯಾಲಾಜಿಕಲ್ ಸೈಕಾಲಜಿ, ಬಿಹೇವಿಯರಲ್ ನ್ಯೂರೋ ಸೈನ್ಸ್ ಅಥವ ಸೈಕೋಬಯಾಲಜಿ ಎನ್ನುತ್ತಾರೆ.

ಮೆದುಳಿಗೆ ವಕ್ಕರಿಸಿಕೊಳ್ಳುವ ರೋಗಗಳು ಅಥವಾ ಉಂಟಾಗುವ ಗಾಯಗಳು ವ್ಯಕ್ತಿಯ ವರ್ತನೆ, ಭಾವನೆ ಮತ್ತು ವಿಚಾರಗಳ ಮೇಲೆ ಪ್ರಭಾವವನ್ನು ಬೀರುತ್ತವೆ.

ಅದೇ ರೀತಿಯಾಗಿ ವ್ಯಕ್ತಿಗಳು ಮಾಡುವ ಆಲೋಚನೆಗಳಿಂದ, ಅವರಲ್ಲಿ ಮೂಡುವ ಭಾವನೆಗಳ ತೀವ್ರತೆಯಿಂದ ಹಾಗೂ ನಿರತವಾಗಿ ತೋರುವ ವರ್ತನೆಗಳಿಂದಲೂ ಮೆದುಳಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಅವರ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಗಳನ್ನು ಉಂಟುಮಾಡುತ್ತವೆ ಮತ್ತು ಅದು ನರಗಳ ಮೂಲಕ ದೇಹದ ಇತರ ಜೀವಕೋಶಗಳಿಗೆ ಸಂಕೇತಗಳನ್ನು ಕಳುಹಿಸುತ್ತವೆ.

ಕೆಡುಕಿನ ಆಲೋಚನೆಗಳಾಗಲಿ, ಬೇಡದ ವರ್ತನೆಗಳಾಗಲಿ, ಸೋಮಾರಿತನವೇ ಮೊದಲಾದ ಜಡತ್ವದ ನಡವಳಿಕೆಗಳಾಗಲಿ, ಕೋಪ ಅಥವಾ ಆತಂಕದಂತಹ ಭಾವೋದ್ವೇಗಗಳೇ ಆಗಲಿ; ಶರೀರದ ಸಮಸ್ಯೆಯನ್ನು ಅಥವಾ ರೋಗಗಳನ್ನು ಹೆಚ್ಚಿಸುತ್ತವೆ.

ಭಯವೇ ಮೊದಲಾದ ಆತಂಕಗಳು ಮೆದುಳಿನಲ್ಲಿ ಉಂಟುಮಾಡುವ ರಾಸಾಯನಿಕ ಕ್ರಿಯೆಯಿಂದಾಗಿ ಯಾವುದೇ ಎದುರಾಗುವ ಪ್ರಸಂಗ ಹೆದರಿಸುವಂತಿದೆ ಎನ್ನುವಾಗ ಹೋರಾಡು ಅಥವಾ ಓಡು ರೀತಿಯ ಪ್ರತಿಕ್ರಿಯೆಯನ್ನು ಉಂಟು ಮಾಡುವುದಕ್ಕೆ ಮೆದುಳು ಪ್ರೇರೇಪಿಸುತ್ತದೆ.

ನಿರಂತರವಾಗಿ ಮಾಡುವಂತಹ ಒಂದೇ ಬಗೆಯ ನಕಾರಾತ್ಮಕ ಆಲೋಚನೆಗಳು ದೇಹದ ಸ್ನಾಯುಗಳ ಮೇಲೆ ಕೂಡಾ ಸೆಟೆದುಕೊಳ್ಳುವಂತಹ ಅಥವಾ ಕುಗ್ಗಿಸುವಂತಹ ಪರಿಣಾಮಗಳನ್ನು ಬೀರುತ್ತವೆ.

ನನಗೆ ಸುಸ್ತಾಗಿದೆ, ನನ್ನ ಕೈಯಲ್ಲಿ ಆಗಲ್ಲ, ಅಷ್ಟು ಕೆಲಸ ನನ್ನ ಶಕ್ತಿಗೆ ಮೀರಿದ್ದು, ಈ ಜೀವನ ತುಂಬಾ ಕಷ್ಟ, ಯಾರಿಗೆ ಬೇಕು ಈ ಗೋಳು, ಈ ಜನ ಸರಿ ಇಲ್ಲ... ಅಥವಾ ನಾನು ಇದನ್ನು ಮಾಡುವೆ, ಇದು ನನ್ನ ಕೈಯಲ್ಲಿ ಆಗತ್ತೆ, ಇವತ್ತು ಈ ಕೆಲಸ ಚೆನ್ನಾಗಿ ಆಗತ್ತೆ; ಇಂತಹ ನಕಾರಾತ್ಮಕವಾದ ಆಲೋಚನೆಗಳಾಗಲಿ, ಸಕಾರಾತ್ಮಕವಾದ ಆಲೋಚನೆಗಳಾಗಲಿ ಮೆದುಳಿನಲ್ಲಿ ಅದಕ್ಕೆ ತಕ್ಕಂತಹ ರಾಸಾಯನಿಕ ಕ್ರಿಯೆಗಳು ಉಂಟಾಗುತ್ತಿರುತ್ತವೆ ಮತ್ತು ಅದರಂತೆಯೇ ದೇಹದಲ್ಲಿನ ಇತರ ಜೀವಕೋಶಗಳಿಗೆ ಅದು ಸಂದೇಶಗಳನ್ನು ಮತ್ತು ಪ್ರೇರಣೆಗಳನ್ನು ಕೊಡುತ್ತಿರುತ್ತದೆ.

ಆಲೋಚನೆಗಳು ಮತ್ತು ಭಾವನೆಗಳು ನಮ್ಮ ಶರೀರದ ಜೈವಿಕವಾದ ಭಾಗಗಳೇ ಎಂದು ನಾವು ಎಂದಿಗೂ ಮರೆಯಕೂಡದು. ಮೆದುಳು ನಮ್ಮದೇ ಆದ ಆಲೋಚನೆಗಳಿಂದ ಮತ್ತು ಅಂತಹ ಆಲೋಚನೆಗಳನ್ನು ಹುಟ್ಟಿಸುವ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರಗಳಿಂದ ಸದಾ ಸಂಕೇತಗಳನ್ನು ಪ್ರೇರಣೆಗಳಾಗಿ ಅಥವಾ ಪ್ರಚೋದನೆಗಳಾಗಿ ಪಡೆಯುತ್ತಲೇ ಇರುತ್ತವೆ. ಯಾವಾಗ ಆ ಪ್ರಚೋದನೆಗಳು, ಆ ಪ್ರಚೋದನೆಗಳನ್ನು ಸ್ವೀಕರಿಸುವ ನಮ್ಮ ಆಲೋಚನೆಯ ಗ್ರಹಿಕೆಗಳು, ಅದರಿಂದ ಉಂಟಾಗುವ ಭಾವನೆಗಳು ಪದೇಪದೇ ಪುನರಾವರ್ತಿತವಾಗುತ್ತವೆಯೋ ಮೆದುಳೂ ಅದಕ್ಕೆ ತಕ್ಕಂತಹ ರಾಸಾಯನಿಕ ದ್ರವ್ಯಗಳನ್ನು ಉಂಟುಮಾಡಿ ದೇಹಕ್ಕೆ ಪ್ರಚೋದನೆಗಳನ್ನು ಕಳುಹಿಸುವುದು ಸಾಮಾನ್ಯವಾಗಿಬಿಡುತ್ತವೆ.

ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ಸತತವಾದ ಚಟುವಟಿಕೆಗಳ ರೂಢಿ ಸ್ಥಿರವಾದಂತೆ ಅದೇ ಆ ವ್ಯಕ್ತಿಯ ಸ್ವಭಾವ ಆಗುವುದು.

ಮೆದುಳಿನಲ್ಲಿ ಆಗುವ ಇಂತಹ ರಾಸಾಯನಿಕ ಪ್ರಕ್ರಿಯೆಯ ನಿರಂತರತೆಯನ್ನೇ ರಕ್ತಗತ ಎನ್ನುವುದು. ಹಿಂದಿನವರಿಗಿದ್ದ ಮಾಹಿತಿಯ ಕೊರತೆಯಿಂದಾಗಿ ಮೆದುಳಿನ ಈ ಪ್ರಭಾವವನ್ನು ರಕ್ತಗತ ಎನ್ನುತ್ತಿದ್ದರು. ಆ ಗುಣ ರಕ್ತದಲ್ಲೇ ಬಂದುಬಿಟ್ಟಿದೆ ಎನ್ನುವುದು ಇದನ್ನೇ.

ಯೇಸುವಿಗೆ ತಾನು ಬಂಧಿತನಾಗುವೆ, ತನಗೆ ಮುಂದೆ ಕೆಟ್ಟ ಪ್ರಮಾಣದ ತೊಂದರೆಗಳು ಕಾದಿವೆ ಎಂದು ತಿಳಿದಾಗ ಗೆತ್ಸೆಮನೆ ತೋಟದಲ್ಲಿ ವ್ಯಾಕುಲನಾಗುತ್ತಾನೆ ಮತ್ತು ಆತಂಕಕ್ಕೆ ಒಳಗಾಗುತ್ತಾನೆ. ಅವನ ಆ ಹೊತ್ತಿನ ಹಿಂಬಾಲಕರಲ್ಲಿ ಯಾರೂ ಹೇಳಿಕೊಳ್ಳುವ ಬುದ್ಧಿವಂತರಾಗಲಿ, ವಿದ್ಯಾವಂತರಾಗಲಿ, ಸಾಮಾಜಿಕವಾದ ಉನ್ನತ ಸ್ಥಾನಮಾನ ಇರುವವರಾಗಲಿ ಇರಲಿಲ್ಲ. ಎಲ್ಲರಿಗೂ ಪ್ರಾರಂಭದಿಂದಲೇ ಪಾಠ ಮಾಡಬೇಕಿತ್ತು. ತಾನು ತೊಂದರೆಗೆ ಒಳಗಾಗುತ್ತೇನೆ ಎಂದು ತಿಳಿದಾಗ ತನ್ನ ಶಿಷ್ಯರಿಗೆ ಹೇಳುತ್ತಾನೆ, ನಾನು ಪ್ರಾರ್ಥನೆ ಮುಗಿಸಿಬರುವವರೆಗೂ ಒಂದು ಗಂಟೆ ಎಚ್ಚರದಿಂದಿರಿ, ನಿದ್ರೆ ಹೋಗಬೇಡಿ ಎಂದು. ಆದರೆ ಯೇಸು ಪ್ರಾರ್ಥನೆ ಮುಗಿಸಿ ಬಂದಾಗ ಅವನ ಶಿಷ್ಯಂದಿರು ಗಾಢ ನಿದ್ರೆಯಲ್ಲಿ ಮುಳುಗಿದ್ದರು. ಯೇಸುವಿಗೆ ಬೇಸರವೂ ಮತ್ತು ಹತಾಶೆಯೂ ಆಗುತ್ತದೆ. ‘‘ಚೈತನ್ಯವೇನೋ ಮಾಡಲು ಬಯಸುವುದು ಆದರೆ ದೇಹವು ದುರ್ಬಲ’’ ಎಂದು ನೊಂದು ನುಡಿಯುತ್ತಾನೆ.

ಎಚ್ಚರವಿರಬೇಕೆಂದು ಮನಸ್ಸು ಬಯಸುವುದು. ಆದರೆ ನಿದ್ರೆಗೆ ಜಾರುವ ರೂಢಿಗೊಳಗಾಗಿರುವ ದೇಹವು ಮನಸ್ಸು ಬಯಸಿದಂತೆ ವರ್ತಿಸುವುದಿಲ್ಲ. ತನ್ನ ಹಳೆಯ ರೂಢಿಯಂತೆ ಮೆದುಳು ತನ್ನ ಸಂಕೇತಗಳನ್ನು ದೇಹಕ್ಕೆ ಕಳುಹಿಸುವುದು. ಮನಸ್ಸಿಗೆ ಹಳತರ ರೂಢಿ ಸದಾ ಶಕ್ತಿಶಾಲಿಯಾಗಿರುವುದು. ಆ ಹಳೆಯ ರೂಢಿಯನ್ನು ಮಂಕುಗೊಳಿಸುವಷ್ಟು ಅಥವಾ ಕಿರಿದುಗೊಳಿಸುವಷ್ಟು ಹೊಸ ರೂಢಿಯನ್ನು ರೂಪಿಸಿಕೊಂಡು ಅಭ್ಯಾಸ ಮಾಡುವುದು ಸಾಧ್ಯ. ಆದರೆ ಅಷ್ಟು ಸುಲಭವಲ್ಲ.

ನಮ್ಮ ಮೆದುಳಿಗೆ ಎಂತಹ ಪ್ರೇರಣೆಗಳನ್ನು ನಾವು ನಮ್ಮ ಆಲೋಚನೆ ಮತ್ತು ಭಾವನೆಗಳಿಂದ ನೀಡುತ್ತಿರುತ್ತೇವೆ, ಹೊರಗಿನಿಂದ ಎಂತೆಂತಹ ಪ್ರಚೋದನೆಗಳನ್ನು ಪಡೆಯುತ್ತಿರುತ್ತೇವೆ ಎಂದು ಗುರುತಿಸಿಕೊಳ್ಳುವುದೇ ರಕ್ತಗತವಾಗಿರುವ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುವಲ್ಲಿ ಇಡಬೇಕಾದ ಮೊಟ್ಟ ಮೊದಲ ಹೆಜ್ಜೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಯೋಗೇಶ್ ಮಾಸ್ಟರ್,

contributor

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ