ಹಿಂಸಾಚಾರ-ಪೀಡಿತ ಕೂಚ್ ಬೆಹಾರ್ ನಲ್ಲಿ ಪರಿಸ್ಥಿತಿ ಪರಿಶೀಲಿಸಿದ ಪಶ್ಚಿಮಬಂಗಾಳ ರಾಜ್ಯಪಾಲ ಆನಂದ ಬೋಸ್
ಕೂಚ್ ಬೆಹಾರ್ (ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ. ವಿ. ಆನಂದ ಬೋಸ್ ಅವರು ಪಂಚಾಯತ್ ಚುನಾವಣಾ ಪೂರ್ವ ಹಿಂಸಾಚಾರ ಪೀಡಿತ ಕೂಚ್ ಬೆಹಾರ್ ಜಿಲ್ಲೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿದರು. ಕೂಚ್ ಬೆಹಾರ್ ನಲ್ಲಿ ರಾತ್ರೋರಾತ್ರಿ ಘರ್ಷಣೆಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ದಿನ್ಹಟಾ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿದ್ದಾರೆ.
ಗಾಯಗೊಂಡವರಲ್ಲಿ ಟಿಎಂಸಿ ಅಭ್ಯರ್ಥಿಯ ಸಂಬಂಧಿಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೋಸ್ ಅವರು ತಂಗಿರುವ ಕೂಚ್ ಬಿಹಾರ್ ಸರ್ಕ್ಯೂಟ್ ಹೌಸ್ನಿಂದ ರಾತ್ರಿಯಿಡೀ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು ಹಾಗೂ ರಾಜ್ಯ ಚುನಾವಣಾ ಆಯುಕ್ತ ರಾಜೀವ ಸಿನ್ಹಾ, ಎಸ್ಪಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೂಚನೆಗಳನ್ನು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಾಜ್ಯಪಾಲರು ರವಿವಾರ ಬೆಳಿಗ್ಗೆ ಐದು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ದಿನ್ಹಟಾದಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದರು ಹಾಗೂ ಘರ್ಷಣೆಗಳು ನಡೆದ ಸ್ಥಳಕ್ಕೆ ಭೇಟಿ ನೀಡಬಹುದು" ಎಂದು ರಾಜಭವನದ ಹಿರಿಯ ಅಧಿಕಾರಿಯೊಬ್ಬರು ದೂರವಾಣಿಯಲ್ಲಿ ಪಿಟಿಐಗೆ ತಿಳಿಸಿದರು.
ವೈದ್ಯರೊಂದಿಗೆ ಸಂವಾದ ನಡೆಸಿ, ಗಾಯಾಳುಗಳ ಸ್ಥಿತಿಗತಿ ವಿಚಾರಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ರಾಜ್ಯಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಕೂಚ್ ಬೆಹಾರ್ನ ಡಿಎಂ ಮತ್ತು ಎಸ್ಪಿಗೆ ಕರೆ ಮಾಡಿದರು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧಿಗಳನ್ನು ಬಂಧಿಸುವಂತೆ ತಿಳಿಸಿದರು.