Tumakuru | ಬಿಸಿಯೂಟ ವೇಳೆ ತಳ್ಳಾಟ : ಒಂದನೇ ತರಗತಿ ವಿದ್ಯಾರ್ಥಿನಿಯ ಎರಡು ಬೆರಳು ಕಟ್
ಸಾಂದರ್ಭಿಕ ಚಿತ್ರ
ತುಮಕೂರು ನಗರದ ಸಮೀಪದ ಗೂಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ವಿದ್ಯಾರ್ಥಿಗಳ ನಡುವೆ ತಳ್ಳಾಟ ನಡೆದ ಪರಿಣಾಮ, ಒಂದನೇ ತರಗತಿ ವಿದ್ಯಾರ್ಥಿನಿಯ ಎರಡು ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಫೆ.9 ರಂದು ಮಧ್ಯಾಹ್ನ ಬಿಸಿಯೂಟದ ಸಮಯದಲ್ಲಿ ಮಕ್ಕಳು ತಟ್ಟೆ-ಲೋಟ ಹಿಡಿದು ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಮಕ್ಕಳ ನಡುವೆ ತಳ್ಳಾಟ ಸಂಭವಿಸಿದೆ. ಬಾಗಿಲಿನ ಪಕ್ಕದಲ್ಲಿ ನಿಂತಿದ್ದ ಚಿನ್ಮಯಿದೇವಿ ಎಂಬ ವಿದ್ಯಾರ್ಥಿನಿ ತಾನು ಬೀಳುವುದನ್ನು ತಪ್ಪಿಸಿಕೊಳ್ಳಲು ಕಬ್ಬಿಣದ ಡೋರ್ ಸಂದಿಯಲ್ಲಿ ಕೈ ತೂರಿಸಿ ಗಟ್ಟಿಯಾಗಿ ಹಿಡಿದಿದ್ದಾಳೆ. ಹಿಂದಿನಿಂದ ಬಂದ ಮಕ್ಕಳು ಡೋರ್ ತಳ್ಳಿದ ಪರಿಣಾಮ, ಆಕೆಯ ಎರಡು ಬೆರಳುಗಳು ಬಾಗಿಲಿಗೆ ಸಿಲುಕಿ ತುಂಡಾಗಿವೆ ಎಂದು ತಿಳಿದು ಬಂದಿದೆ.
ಗಾಯಗೊಂಡ ವಿದ್ಯಾರ್ಥಿನಿಗೆ ಶಿಕ್ಷಕರು ಬ್ಯಾಂಡೇಜ್ ಹಾಕಿದರೂ, ತುಂಡಾಗಿ ಬಿದ್ದಿದ್ದ ಬೆರಳುಗಳನ್ನು “ಮಕ್ಕಳು ಗಾಬರಿಯಾಗುತ್ತಾರೆ” ಎಂದು ಗುಡಿಸಿ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಮಯೋಚಿತ ವೈದ್ಯಕೀಯ ನೆರವು ಸಿಗದೇ ಬಾಲಕಿಗೆ ಶಾಶ್ವತ ಅಂಗವೈಕಲ್ಯ ಉಂಟಾಗಿರುವ ಸಾಧ್ಯತೆ ಇದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಿಇಓ ಮತ್ತು ಡಿಡಿಪಿಐ ಅವರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ದಲಿತ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು ತಿಳಿಸಿದ್ದಾರೆ.