ಬೈಂದೂರು ತಾಲೂಕು ಆಸ್ಪತ್ರೆಗೆ ಪೀಠೊಪಕರಣಗಳ ಹಸ್ತಾಂತರ
ಬೈಂದೂರು, ಆ.16: ಖಿದ್ಮಾ ಫೌಂಡೇಶನ್ ಕುಂದಾಪುರ ಮತ್ತು ಬೈಂದೂರು ತಾಲೂಕು ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬೈಂದೂರು ಆಸ್ಪತ್ರೆಗೆ ರೋಗಿಗಳನ್ನು ಆಸೀನರಾಗಲು ಕುರ್ಚಿಗಳು ಮತ್ತು ಸ್ಟ್ರಕ್ಚರ್ ಟ್ರೋಲಿ ಹಸ್ತಾಂತರಿಸಲಾಯಿತು ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್ ಸಿ.ಸೌಕೂರ್ ಮಾತ ನಾಡಿ, ನಮ್ಮ ಆಸ್ಪತ್ರೆಗೆ ದಿನ ನಿತ್ಯ ಹಲವಾರು ರೋಗಿಗಳು ಸುತ್ತಮುತ್ತಲಿನ ಹಳ್ಳಿಗಳಿಂದ ಬರುತ್ತಾರೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಸಲಕರಣೆಗಳ ಕೊರತೆ ಇದೆ. ಈಗಾಗಲೇ ಬೈಂದೂರು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದೆ. ಆದರೆ ನಮ್ಮ ಆಸ್ಪತ್ರೆ ಇನ್ನೂ ತಾಲೂಕು ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸಲಾಗಿಲ್ಲ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಅಗತ್ಯವಿದೆ. ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಮಾತನಾಡಿದರು. ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೊಬಿ ಪಿ.ಸಿ. ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಫಯಾಜ್ ಅಲಿ ಬೈಂದೂರು, ಖಿದ್ಮಾ ಫೌಂಡೇಶನ್ನ ಉಪಾಧ್ಯಕ್ಷರಾದ ಮುಹಮ್ಮದ್ ಹಾರಿಸ್ ಗೋಳಿಹೊಳೆ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿ ಅಶ್ಫಾಕ್ ನಾಗೂರು, ಸದಸ್ಯರಾದ ಬೇದ್ರೆ ಇಬ್ರಾಹಿಂ ಕುಂದಾಪುರ, ಅಬ್ದುಲ್ ರಹ್ಮಾನ್ ಶೀರೂರು, ರಿಝ್ವಾನ್ ನಾಗೂರು, ಅಸ್ಲಮ್ ತಲ್ಲೂರು, ಇರ್ಫಾನ್ ನಾಗೂರು, ಹಸನ್ ಶಬ್ಬರ್ ಶೀರೂರು, ಜಲಾಲ್ ಶೇಖ್ ಕಂಡ್ಲೂರು, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.