×
Ad

ಎಫ್‌ಆರ್‌ಎಸ್ ಕ್ರಮ ನಿಲ್ಲಿಸಲು ಒತ್ತಾಯಿಸಿ ಕಪ್ಪು ದಿನಾಚರಣೆ

Update: 2025-08-22 21:00 IST

ಉಡುಪಿ, ಆ.22: ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಇಂದು ರಾಜ್ಯವ್ಯಾಪಿ ಎಫ್‌ಆರ್‌ಎಸ್ ಕ್ರಮ ನಿಲ್ಲಿಸಲು ಒತ್ತಾಯಿಸಿ ಕಪ್ಪು ದಿನಾಚರಣೆ ಹಾಗೂ ಎಲ್ಲಾ ತಾಲೂಕುಗಳಲ್ಲಿ ಮನವಿ ನೀಡಲು ಕರೆ ನೀಡಿದ್ದು ಅದರಂತೆ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾಯಕ್ ಅವರ ಮೂಲಕ ಕೇಂದ್ರ ಸಚಿವೆ ಅನುಪಮ ದೇವಿ ಅವರಿಗೆ ಮನವಿ ಸಲ್ಲಿಸಲಾಯಿತು.

ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಾಂಕಕ್ಕಿರುವ ಏಕೈಕ ಯೋಜನೆ ಐಸಿಡಿಎಸ್ ಮಾತ್ರ. ಈ ಯೋಜನೆಗೆ ಇಂದು 50 ವರ್ಷಗಳಾಗುತ್ತಾ ಬರುತ್ತಿದೆ. ಈ ಯೋಜನೆಯನ್ನು ಸರಳಿಕರಿಸಿ ಫಲಾನುಭಾವಿಗಳನ್ನು ಆಕರ್ಷಿಸಲು ಸರಕಾರಗಳು ಕ್ರಮಗಳನ್ನು ರೂಪಿಸಬೇಕಿತ್ತು. ಆದರೆ ಅದರ ಬದಲಾಗಿ ಸಂಕೀರ್ಣಗೊಳಿಸಲಾಗುತ್ತಿದೆ ಯಾವುದೇ ಸೌಲಭ್ಯಗಳನ್ನು ಕೊಡದೇ ಮುಖಚರ್ಯೆ ಗುರುತಿಸುವ ಕ್ರಮವನ್ನು ಅಳವಡಿಸಿದ್ದರಿಂದ ಕ್ಷೇತ್ರ ಮಟ್ಟದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ.

ಸರಕಾರಗಳು ಎಫ್‌ಆರ್‌ಎಸ್‌ನ್ನು ಕಡ್ಡಾಯಗೊಳಿಸುವ ಮೂಲಕ ಹಕ್ಕನ್ನು ನಿರಾಕರಿಸುತ್ತಿವೆ. ಎಫ್‌ಆರ್‌ಎಸ್ ಮೂಲಕ ಸಂಗ್ರಹಿಸುವ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ವಿಪರೀತ ಸೈಬರ್ ವಂಚನೆಗಳು ಹೆಚ್ಚುತ್ತಿದೆ. ಶೇ.60 ತನ್ನ ಪಾಲಿನ ವಂತಿಗೆಯನ್ನು ನೀಡಬೇಕಾದ ಕೇಂದ್ರ ಸರಕಾರ ನಿರ್ಬಂಧಗಳನ್ನು ಹಾಕುವ ಮುಖಾಂತರ ತನ್ನ ಪಾಲಿನ ಹಣ ಕಡಿಮೆ ಮಾಡಲು ಮುಂದಾಗಿದೆ.

ಚಟುವಟಿಕೆಗಳ ಆಧಾರದಲ್ಲಿ ಹಣ ಬಿಡುಗಡೆ ಮಾಡುವ ವಿಧಾನಗಳು ಮತ್ತು ಭಾರತದಲ್ಲಿ ಐಸಿಡಿಎಸ್ ಫಲಾನುಭಾವಿಗಳನ್ನು ಕಡಿಮೆ ತೋರಿಸಿ ಹಣ ಕಡಿತ ಮಾಡುವ ಯೋಜನೆ ಇದಾಗಿದೆ. ಎಫ್‌ಆರ್‌ಎಸ್ ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಖಾಯಂ ಮಾಡಬೇಕು. 2018ರಿಂದ ಅನ್ವಯವಾಗುವಂತೆ ವೇತನ ಹೇಚ್ಚಿಸಿ ಫಲಾನುಭಾವಿಗಳ ಘಟಕ ವೆಚ್ಚ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಿಯೋಗದಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭಾರತಿ ಸಿಐಟಿಯು ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸುನೀತ ನಟರಾಜ್, ಚಿತ್ರಕಲಾ ಕೆ., ಮಂಜುಳ, ಸುಮತಿ ಕೇದಾರ್, ಪ್ರೇಮಲತಾ, ಸರೋಜ, ಸುನಂದಾ ಕಾಂತಿ, ಸುಮತಿ ಆಚಾರ್ಯ, ಸುಮತಿ ಕನರ್ಪಾಡಿ ಉಪಸ್ಥಿತರಿದ್ದರು.

ಬ್ರಹ್ಮಾವರ ಮನವಿ: ಬ್ರಹ್ಮಾವರ ತಾಲೂಕಿನಲ್ಲಿ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಇಂದು ಸಮಗ್ರ ಶಿಶು ಅಭಿವೃದ್ಧಿ ಇಲಾಖೆಯ ಹಿರಿಯ ಮೆಲ್ವೀಚಾರಕಿ ಭಾಗೀರಥಿ ಮೂಲಕ ಮನವಿ ನೀಡಲಾಯಿತು.

ನಿಯೋಗದಲ್ಲಿ ತಾಲೂಕು ಅಧ್ಯಕ್ಷೆ ಜಯಲಕ್ಷ್ಮಿ, ಮುಖಂಡರಾದ ಶೈಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News