ಸೇವೆಯ ಮೂಲಕ ಪರರ ಮುಖದಲ್ಲಿ ದೇವರನ್ನು ಕಾಣಬೇಕು: ಬಿಷಪ್ ಲೆಸ್ಲಿ ಕ್ಲಿಫರ್ಡ್ ಡಿಸೋಜ
ಫ್ಲಾವಿಯಾಗೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರ ಪ್ರದಾನ
ಶಿರ್ವ, ಜೂ.14: ಪರರ ಮುಖದಲ್ಲಿ ದೇವರನ್ನು ಕಾಣುವುದರ ಮೂಲಕ ಸಮಾಜದಲ್ಲಿ ಸೇವೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಈ ಮೂಲಕ ಸಂಘಟನೆಗಳು ಸಮಾಜದ ಇಂದಿನ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾದ ಅಗತ್ಯತೆ ಇದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಹೇಳಿದ್ದಾರೆ.
ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರವಿವಾರ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ದಿ.ಫ್ರಾನ್ಸಿಸ್ ದಾಂತಿ ಪುಸ್ತಕ ಪುರಸ್ಕಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿನಿತ್ಯ ಎಂಬಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿದ್ದು ಸಮುದಾಯ ಕೂಡ ಅದೇ ನಿಟ್ಟಿನಲ್ಲಿ ಮುಂದುವರೆಯಬೇಕಾದ ಅವಶ್ಯಕತೆ ಇದೆ. ಶಿಕ್ಷಣ ಸಂಸ್ಥೆಗಳು ಹಳೆಯ ಪದ್ದತಿಯನ್ನು ಕೈಬಿಟ್ಟು ಹೊಸ ಆವಿಷ್ಕಾರಗಳಿಗೆ ಹೊಂದಿಕೊಂಡು ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕವಯಿತ್ರಿ ಫ್ಲಾವಿಯಾ ಅಲ್ಬುಕರ್ಕ್ ಅವರ ಸಖಿ ಸೂಚಿಸಿದ ಸೌಗಂಧ ಕವನ ಸಂಕಲನಕ್ಕೆ 2025ನೇ ಸಾಲಿನ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಪುಸ್ತಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ರೋಜರಿ ಕ್ರೇಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಜೊನ್ಸನ್ ಡಿಆಲ್ಮೇಡಾ ಮಾತನಾಡಿದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಮೆಲ್ವಿನ್ ಆರಾನ್ಹ ವಹಿಸಿ ದ್ದರು. ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ವರದಿ, ವಾರ್ಷಿಕ ಮಹಸಭೆಯ ವರದಿ, ವಾರ್ಷಿಕ ಲೆಕ್ಕಪತ್ರ ಮಂಡನೆ, ಮಾನಸ ಸಂಸ್ಥೆ, ಸಶಕ್ತ ಸಮುದಾಯ ಸೇವಾ ಟ್ರಸ್ಟಿನ ವರದಿಯನ್ನು ಮಂಡಿಸಲಾಯಿತು.
2026-27ನೇ ಸಾಲಿನ ಕಥೊಲಿಕ್ ಸಭೆಯ ಡೈರಕ್ಟರಿ ಅನಾವರಣಗೊಳಿಸ ಲಾಯಿತು. ದಿವಂಗತ ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಶುಭಹಾರೈಸಿದರು ನಿವೃತ್ತ ಅಧ್ಯಾಪಕ ಆಲ್ಫೋನ್ಸ್ ಡಿಸೋಜ ಅವರ ಸಣ್ಣ ಕಥೆಗಳ ಸಂಗ್ರಹ ಘಡಿತಾಚೆ ಬುಳ್ಬುಳೆ ಪುಸ್ತಕ ಅನಾವರಣಗೊಳಿಸಲಾಯಿತು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಚರ್ಚಿನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್, ಉಪಾಧ್ಯಕ್ಷ ಜುಲಿಯಾನ್ ರೊಡ್ರಿಗಸ್, ಘಟಕಾಧ್ಯಕ್ಷೆ ಆಗ್ನೆಸ್ ಬಾರ್ಬೋಜ, ಶಾಲೆಯ ಪ್ರಾಂಶುಪಾಲ ವಂ.ರೊಲ್ವಿನ್ ಆರಾನ್ಹಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಗ್ಯಾರಿಫೀಲ್ಡ್ ಉರ್ಬಾನ್ ಲೂವಿಸ್, ನಿಯೋಜಿತ ಅಧ್ಯಕ್ಷ ಲೂವಿಸ್ ಡಿಸೋಜ, ಸಹಕಾರ್ಯದರ್ಶಿ ಸೋನು ಸಿಕ್ವೇರಾ, ಸಹ ಕೋಶಾಧಿಕಾರಿ ಪ್ರತಿಮಾ ಡಿಸೋಜ, ದಾಂತಿ ಸ್ಮಾರಕ ಟ್ರಸ್ಟಿನ ಸಂಚಾಲಕ ಆಲ್ಫೋನ್ಸ್ ಡಿಕೋಸ್ತಾ, ಕುಟುಂಬ ಸದಸ್ಯರಾದ ಚಾರ್ಲ್ಸ್ ದಾಂತಿ, ಮಾನಸ ಸಂಸ್ಥೆಯ ಅಧ್ಯಕ್ಷ ಜೋನ್ ಮಾರ್ಟಿಸ್, ವಲಯಾಧ್ಯಕ್ಷ ಜೊಯೇಲ್ ಆಲ್ಮೇಡಾ, ಶೈಲಾ ಡಿಆಲ್ಮೇಡಾ, ಜೆರಾಲ್ಡ್ ರೊಡ್ರಿಗಸ್, ಅಂತೋನಿ ಮಿರಾಂದಾ, ಜೋನ್ ಕಿರಣ್ ಲೂವಿಸ್, ಮಾಜಿ ಅಧ್ಯಕ್ಷರಾದ ವಾರ್ಲ್ಟ ಸಿರಿಲ್ ಪಿಂಟೊ, ಎಲ್ ರೋಯ್ ಕಿರಣ್ ಕ್ರಾಸ್ತಾ, ವಲೇರಿಯನ್ ಫೆರ್ನಾಂಡಿಸ್, ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಮೇಬಲ್ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಜುಲಿಯೆಟ್ ಡಿಸೋಜ ವಂದಿಸಿದರು.
‘ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿದ್ದು ಧರ್ಮಪ್ರಾಂತ್ಯಕ್ಕೆ ಒಂದು ಉತ್ತಮ ಹಾಗೂ ಸುಸಜ್ಜಿತ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಅಗತ್ಯತೆ ಎದ್ದು ಕಾಣುತ್ತಿದೆ. ಇದನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆ ಸಿದ್ದಪಡಿಸುವ ಕೆಲಸ ಆರಂಭವಾಗಿದ್ದು ಸಮುದಾಯದ ಸಹಕಾರ ಅಗತ್ಯವಾಗಿದೆ. ಉತ್ತಮ ಶಾಲೆ ಮತ್ತು ಆಸ್ಪತ್ರೆಯ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಿದೆ’
-ಅತಿ ವಂ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ, ಬಿಷಪ್