ಶಾಸಕ ಯಶಪಾಲ್ ಸುವರ್ಣ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ: ಕೆ.ಜಯಪ್ರಕಾಶ್ ಹೆಗ್ಡೆ

Update: 2026-07-30 21:01 IST

ಉಡುಪಿ, ಜು.30: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಪ್ರತಿಭಟನೆಯ ವೇಳೆ ಶಾಸಕ ಯಶಪಾಲ್ ಸುವರ್ಣ ಅವರು ಬಳಸಿದ ಮಾತುಗಳು ಅವರು ಹೊಂದಿರುವ ಸ್ಥಾನಕ್ಕೆ , ಜವಾಬ್ದಾರಿಗೆ ಗೌರವ ತರುವಂತದ್ದಲ್ಲ ಎಂದು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಶಾಸಕರ ಹೇಳಿಕೆ ವಿರುದ್ಧ ಕಾಂಗ್ರೆಸ್ ವತಿಯಿಂದ ನಾಳೆ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತು ಮಾಹಿತಿ ನೀಡಲು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೀಕೆ ಮಾಡುವ ಭರದಲ್ಲಿ ಜನಪ್ರತಿನಿಧಿಗಳು ಬಳಸುವ ಭಾಷೆಯ ಕುರಿತಂತೆ ಸದಾ ಎಚ್ಚರಿಕೆಯನ್ನು ಹೊಂದಿರಬೇಕು. ಇದು ನಮ್ಮ ಪಕ್ಷದ ನಾಯಕರಿಗೂ ಅನ್ವಯಿಸುತ್ತದೆ ಎಂದರು.

ಶಾಸಕರು ತಮ್ಮ ಭಾಷಣದ ವೇಳೆ ಬಾಬರಿ ಮಸೀದಿಯನ್ನು ದ್ವಂಸ ಮಾಡಿರುವುದನ್ನು ಒಪ್ಪಿಕೊಂಡಿರುವುದು ಹಾಗೂ ರಾಹುಲ್‌ಗಾಂಧಿ ಕುಟುಂಬ ವನ್ನು ದ್ವಂಸ ಮಾಡಿ ಎಂದಿರುವುದಕ್ಕೆ ಕಾನೂನು ಕ್ರಮವನ್ನು ಎದುರಿಸ ಬೇಕಾಗುತ್ತದೆ. ಇದಕ್ಕಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಗೂ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡಲು ಅವಕಾಶವಿದೆ. ನಮ್ಮ ಪಕ್ಷದ ನಾಯಕರ ಗಮನಕ್ಕೂ ಇದನ್ನು ತಂದಿದ್ದೇನೆ ಎಂದರು.

ವ್ಯಕ್ತಿಯೊಬ್ಬ ಯಾವುದೇ ಹೇಳಿಕೆ ನೀಡುವಾಗ ಅದು ಆತನ ಹಕ್ಕಾಗುತ್ತದೆ. ಆದರೆ ಬೇರೆಯವರ ಬಗ್ಗೆ ಮಾತನಾಡು ವಾಗ ಅದು ಕಾನೂನು ವ್ಯಾಪ್ತಿಗೆ ಬರುತ್ತದೆ. ಅದನ್ನು ಮೀರಿ ಹೋದಾಗ ಕಾನೂನಿನಲ್ಲಿ ಕ್ರಮ ತೆಗೆದು ಕೊಳ್ಳುವುದು ನಮ್ಮ ಹಕ್ಕಾಗುತ್ತದೆ ಎಂದು ಹೆಗ್ಡೆ ವಿವರಿಸಿದರು.

ತನ್ನ ಪಕ್ಷದ ಸಿದ್ಧಾಂತಗಳ ವಿಚಾರದಲ್ಲಿ ಹೋರಾಟ ನಡೆಸುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಯಾವುದೇ ನಾಯಕನ ಕುರಿತು ಮಾತನಾಡುವಾಗ ಜನಪ್ರತಿನಿಧಿಗಳು ಭಾಷೆಯ ಮೇಲೆ ಹಿಡಿತ ಹೊಂದಿದ್ದು, ಗೌರವಯುತ ವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ವಿಷಯಾಧಾರಿತ ಚರ್ಚೆಗಳೇ ನಡೆಯಬೇಕು. ವೈಯಕ್ತಿಕ ನಿಂದನೆ ಅಥವಾ ಅವಹೇಳನಾತ್ಮಕ ಹೇಳಿಕೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಅವರು ತಿಳಿಸಿದರು.

ಶಾಸಕ ಯಶಪಾಲ್ ಸುವರ್ಣ ಅವರು ತಾವು ಆಡಿದ ಮಾತುಗಳ ಬಗ್ಗೆ ಮರುಪರಿಶೀಲನೆ ಮಾಡಬೇಕಾದ ಅಗತ್ಯ ವಿದೆ ಎಂದು ಹೇಳಿದ ಹೆಗ್ಡೆ, ಮತದಾರರು ಕೂಡ ಇಂತಹ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಜನಪ್ರತಿ ನಿಧಿಗಳ ನಡೆ-ನುಡಿಯನ್ನು ಮೌಲ್ಯಮಾಪನ ಮಾಡಬೇಕು. ವಿಷಯಾಧಾರಿತ ಚರ್ಚೆಯಾಗಬೇಕೆ ಹೊರತು, ವೈಯಕ್ತಿಕ ಧ್ವೇಷದ ನಡೆ ಸರಿಯಲ್ಲ ಎಂದು ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು ಸಹ ಇವುಗಳ ಬಗ್ಗೆ ಗಮನ ಹರಿಸಬೇಕು. ಮತದಾರರು ತಾವು ಎಂಥ ಜನಪ್ರತಿನಿಧಿಯ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಜಯಪ್ರಕಾಶ್ ಹೆಗ್ಡೆ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News