ವಾರದಲ್ಲಿ ಐದು ದಿನ ಬ್ಯಾಂಕಿಂಗ್ ವ್ಯವಸ್ಥೆಗೆ ಆಗ್ರಹಿಸಿ ಧರಣಿ

Update: 2026-08-12 21:06 IST

ಉಡುಪಿ, ಆ.12: ವಾರದಲ್ಲಿ ಐದು ದಿನಗಳು ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಸಂಘಟನೆಗಳ ಒಕ್ಕೂಟ(ಯುಎಫ್‌ಬಿಯು)ದ ನೇತೃತ್ವದಲ್ಲಿ ಬುಧವಾರ ಉಡುಪಿ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕಿನ ಎದುರು ಧರಣಿ ನಡೆಸಲಾಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಬ್ಯಾಂಕ್ ನೌಕರರ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ಎಐಬಿಎ ಜಂಟಿ ಕಾರ್ಯದರ್ಶಿ ಫಣೀಂದ್ರ, ಈಗಾಗಲೇ ರಿಸರ್ವ್ ಬ್ಯಾಂಕ್, ಎಲ್‌ಐಸಿ, ನಬಾರ್ಡ್‌ಗಳಲ್ಲಿ ವಾರಕ್ಕೆ ಐದು ಕೆಲಸದ ನಿಮಯವನ್ನು ಜಾರಿಗೆ ತರಲಾಗಿದೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅದರಲ್ಲಿ ಅನುಷ್ಠಾನಕ್ಕೆ ತರಲು ಕೇಂದ್ರ ಸರಕಾರ ಮೀನಮೇಷ ಮಾಡುತ್ತಿದೆ ಎಂದು ಆರೋಪಿಸಿದರು.

ಬ್ಯಾಂಕ್ ನೌಕರರು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ ಹಾಗೂ ಹೃದಯಾಘಾತಕ್ಕೆ ಒಳಗಾಗುತ್ತಿ ದ್ದಾರೆ. ಕೇಂದ್ರ ಸರಕಾರ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಈ ವ್ಯವಸ್ಥೆ ಜಾರಿ ಬರುತ್ತಿಲ್ಲ. ಕೂಡಲೇ ಈ ವ್ಯವಸ್ಥೆಯನ್ನು ಜಾರಿಗೆ ತರದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಅಖಿಲ ಭಾರತ ಬ್ಯಾಂಕ್ ಸಂಘಟನೆಗಳ ಒಕ್ಕೂಟದ ಉಡುಪಿ ಜಿಲ್ಲಾ ಸಂಚಾಲಕ ನಾಗೇಶ್ ನಾಯಕ್ ಮಾತನಾಡಿ, ವಾರದಲ್ಲಿ ಐದು ಕೆಲಸದ ಬಗ್ಗೆ ಒಪ್ಪಂದ ಆಗಿದ್ದರೂ ಕೇಂದ್ರ ಸರಕಾರ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಈ ಹೋರಾಟಕ್ಕೆ ಇಳಿದಿದ್ದೇವೆ. ಈಗಾಗಲೇ ರಿಸರ್ವ್ ಬ್ಯಾಂಕ್ ಸೇರಿದಂತೆ ಕೆಲವು ಇಲಾಖೆಗಳಲ್ಲಿ ವಾರದಲ್ಲಿ ಐದು ಕೆಲಸದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಬ್ಯಾಂಕಿನಲ್ಲಿ ಇದನ್ನು ಅನುಷ್ಠಾನಗೊಳಿಸಲು ಸರಕಾರ ಹಿಂದೇಟು ಹಾಕುತ್ತಿದೆ ಎಂದು ದೂರಿದರು.

ಧರಣಿಯಲ್ಲಿ ಬ್ಯಾಂಕ್ ನೌಕರ ಹಾಗೂ ಅಧಿಕಾರಿಗಳ ವಿವಿಧ ಸಂಘಟನೆ ಗಳಾದ ಎನ್‌ಸಿಬಿಇಯ ಮುಖಂಡರಾದ ಸುಪ್ರೀಯ, ಪ್ರಣವ್ ಪೈ, ಎಐಬಿಓಎಯ ಪ್ರಮುಖ ಹರೀಶ್ ಶೆಟ್ಟಿ, ಎಐಬಿಓಸಿಯ ಮುಖಂಡರಾದ ನಿರಂಜನ್, ಮರಿಯೋ ಮಥಾಯಸ್, ಎಐಬಿಓಎಯ ರವಿಶಂಕರ್, ಐಎನ್‌ಬಿಓಸಿಯ ಪ್ರಮೋದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News