ಎಸ್ಸಿಎಸ್ಟಿ ಆರೋಗ್ಯ ವಿಮಾ ಯೋಜನೆ: ದಲಿತ ಮುಖಂಡರಿಂದ ಸಭೆ ಬಹಿಷ್ಕಾರ
ಉಡುಪಿ, ಆ.12: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆರೋಗ್ಯ ವಿಮಾ ಯೋಜನೆಯ ಅವ್ಯವಸ್ಥೆಯ ಬಗ್ಗೆ ಚರ್ಚಿಸಲು ಉಡುಪಿ ನಗರಸಭೆ ಕಚೇರಿಯಲ್ಲಿ ಬುಧವಾರ ಕರೆಯಲಾದ ಸಭೆಯನ್ನು ಬಹಿಷ್ಕರಿಸಲಾಗಿದೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ.
ಈ ಹಿಂದೆ ನಡೆದ ಜಿಲ್ಲಾಧಿಕಾರಿಗಳ ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡರು ನಗರಸಭೆಯ ದಲಿತರ ಆರೋಗ್ಯ ವಿಮಾಯೋಜನೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆದಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಪೌರಾಯುಕ್ತರಿಗೆ ದಲಿತ ಮುಖಂಡರ ಸಭೆಯನ್ನು ಕರೆದು ಸಮಸ್ಯೆಯನ್ನು ಪರಿಹರಿಸುವಂತೆ ಆದೇಶಿಸಿದ್ದರು.
ಅದರಂತೆ ಪೌರಾಯುಕ್ತ ಮಹಾಂತೇಶ ಹಂಗರಗಿ ಆ.12ರಂದು ಬೆಳಗ್ಗೆ 11ಗಂಟೆಗೆ ಸಭೆಯನ್ನು ಕರೆದಿದ್ದರು. ಸಭೆ ಕರೆದ ಪೌರಾಯುಕ್ತರು ದಲಿತ ಮುಖಂಡರನ್ನು ತಮ್ಮ ಛೇಂಬರ್ನಲ್ಲಿ ಕೂರಿಸಿ ಮೇಲ್ಛಾವಣಿಯಲ್ಲಿ ಶಾಸಕರ ಮತ್ತು ಮಾಜಿ ನಗರಸಭೆಯ ಸದಸ್ಯರನ್ನು ಕರೆದು ಸಭೆ ನಡೆಸಿದರು. ಎಚ್ಡಿಫ್ಸಿ ಕಂಪೆನಿಗೆ ನೀಡಿರುವ ಆರೋಗ್ಯ ಕಾರ್ಡ್ನ್ನು ರದ್ಧುಗೊಳಿಸು ವಂತೆ ಜಿಲ್ಲಾಧಿಕಾರಿಗಳ ಕುಂದುಕೊರೆತ ಸಭೆಯಲ್ಲಿ ಹೇಳಿರುವುದರ ವಿರುದ್ಧ ಪೌರಾಯು ಕ್ತರು ಈ ಸಭೆ ನಡೆಸಿದ್ದಾರೆ ಎಂದು ದಲಿತ ಮುಖಂಡ ಜಯನ್ ಮಲ್ಪೆ ಆರೋಪಿಸಿದ್ದಾರೆ.
ಸಭೆ ಕರೆದು ಸುಮಾರು ಎರಡು ಗಂಟೆಗಳ ಕಾಲ ಛೇಂಬರ್ಗೆ ಬಾರದೆ ಪೌರಾಯುಕ್ತರು ದಲಿತ ಮುಖಂಡರಿಗೆ ಅವಮಾನ ಮಾಡಿದ್ದಾರೆ. ದಲಿತ ಮುಖಂಡರ ನೋವನ್ನು ವಿಚಾರಿಸದ ಶಾಸಕರು, ಕೇವಲ ಅವ್ಯವಸ್ಥೆಯ ವಿಮಾ ಕಂಪೆನಿಗೆ ಬೆಂಬಲವಾಗಿ ನಿಂತು ಪೌರಾಯುಕ್ತರ ಮೂಲಕ ದಲಿತ ಮುಖಂಡರಿಗೆ ಅವಮಾನ ಮಾಡಿಸಿರುವುದು ಖಂಡನೀಯ. ಹಾಗಾಗಿ ಮುಖಂಡರು ಈ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸುತ್ತ ಉಡುಪಿ ನಗರಸಭೆಯಲ್ಲಿ ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದ ವಿಮಾ ಕಂಪೆನಿಯ ಯಾವುದೇ ಕಛೇರಿ ಇರುವುದಿಲ್ಲ. ರೋಗಿಗಳು ತಮ್ಮ ಚಿಕಿತ್ಸೆ ಬಗ್ಗೆ ಬಿಲ್ ಕ್ಲೈಮ್ ಮಾತನಾಡಿದರೆ ಈ ಕಂಪೆನಿಯ ಸಿಬ್ಬಂದಿಗಳು ಉಢಾಫೆಯಲ್ಲಿ ಉತ್ತರಿಸುತ್ತಾರೆ. ವಿಮಾ ಕಂಪೆನಿಯವರು ನೀಡಿರುವ ಹೆಲ್ತ್ ಕಾರ್ಡ್ನಲ್ಲಿ ಮನೆ ನಂಬರ್, ಕುಟುಂಬದ ಸದಸ್ಯರ ವಿವರ ಇರುವುದಿಲ್ಲ, ವಾರ್ಡ್ನ ಹೆಸರು ಇರುವುದಿಲ್ಲ. ಹಾಗಾಗಿ ಆ ವಿಮಾ ಕಂಪೆನಿಯನ್ನು ಬದಲಾಯಿಸಬೇಕು ಎಂದು ನಮ್ಮ ಒತ್ತಾಯವಾಗಿದೆ ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಗಣೇಶ್ ನೆರ್ಗಿ, ಮಾಜಿ ನಗರಸಭೆ ಅಧ್ಯಕ್ಷ ಯುವರಾಜ್ ಪುತ್ತೂರು, ಮಾಜಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಮುಖಂಡರಾದ ಹರೀಶ್ ಸಲ್ಯಾನ್, ಶಿವಾನಂದ ಮೂಡುಬೆಟ್ಟು, ದಲಿತ ಕಲಾಮಂಡಳಿಯ ಶಂಕರ್ದಾಸ್, ಸುಂದರಿ ಪುತ್ತೂರು, ದಿನೇಶ್ ಜವನೆರಕಟ್ಟೆ ಹಾಜರಿದ್ದರು.
‘ಆರೋಗ್ಯ ಕಾರ್ಡ್ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಶಾಸಕರು ಹಾಗೂ ಮಾಜಿ ನಗರಸಭೆ ಸದ ಸ್ಯರು ಭಾಗವಹಿಸಿದ್ದರು. ಹಾಗಾಗಿ ದಲಿತ ಮುಖಂಡರು ಸಭೆಗೆ ಹಾಜರಾಗಿರಲಿಲ್ಲ. ಆದುದರಿಂದ ಮುಂದೆ ನಗರಸಭೆ ಮಾಜಿ ಸದಸ್ಯರನ್ನು ಬಿಟ್ಟು ಕೇವಲ ದಲಿತ ಮುಖಂಡರ ಸಭೆಯನ್ನು ಶೀಘ್ರವೇ ಕರೆದು ಆರೋಗ್ಯ ಕಾರ್ಡ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’
-ಮಹಾಂತೇಶ್ ಹಂಗರಗಿ, ಪೌರಾಯುಕ್ತರು