ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಗೊಂದಲ| ಹಣ ಪಾವತಿ ಕ್ರಮ ಸರಳೀಕರಣ ಅಗತ್ಯ: ಅಧಿಕಾರಿಗಳ ಅಭಿಪ್ರಾಯ

Update: 2026-08-12 21:00 IST

ಕುಂದಾಪುರ, ಆ.12: ವಿಬಿ-ಜಿ ರಾಮ್ ಜಿ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಇಲಾಖೆ, ಅರಣ್ಯ ಇಲಾಖೆಗಳ ಕಾಮಗಾರಿಗಳು ಸೇರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದ್ದು, ಇಲಾಖೆಗೆ ಲಾಗಿನ್ ಅಧಿಕಾರ ನೀಡಲಾಗಿಲ್ಲ. ಅದನ್ನು ಪಂಚಾಯತ್ ಮೂಲಕ ಅನುಷ್ಠಾನ ಗೊಳಿಸಲು ಸೂಚನೆ ನೀಡಲಾಗಿದೆ. ಯೋಜನೆ ಆರಂಭಿಕ ಹಂತದಲ್ಲಿ ಇರುವುದರಿಂದ ಸ್ವಲ್ಪ ಗೊಂದಲ ಇದ್ದು, ನಿಧಾನವಾಗಿ ಸರಿಯಾಗುತ್ತದೆ. ಪಾವತಿ ಮಾಡುವ ವಿಧಾನವನ್ನು ಸರಳೀಕರಣಗೊಳಿಸದರೆ ಉತ್ತಮ ಎಂದು ಜಿಪಂ ಸಹಾಯಕ ನಿರ್ದೇಶಕ ವಿಜಯ ಶ್ಯಾಮ್ ಹೇಳಿದ್ದಾರೆ.

ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರದ ವಿಬಿ-ಜಿ ರಾಮ್ ಜಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತಿದ್ದರು.

ನಮ್ಮ ಜಿಲ್ಲೆಗೆ ಲಾಭವಾಗುವ ಅನೇಕ ಕಾಮಗಾರಿಗಳು ಈ ಯೋಜನೆಯಲ್ಲಿ ಸೇರಿಕೊಂಡಿದೆ. ಶಾಲಾ ಕಟ್ಟಡ, ವಾಚನಾಲಯ, ಅಂಗನವಾಡಿ ಕಟ್ಟಡಗಳನ್ನು ಕೂಡ ನಿರ್ಮಿಸಬಹುದು. 60:40 ಅನುಪಾತವನ್ನು ಪಾಲಿಸುವುದು ಸ್ವಲ್ಪ ಕಷ್ಟವಾಗುತ್ತಿದೆ. ಕೆಲವು ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಇಟ್ಟಿದ್ದರೆ, ಕೆಲವು ಕಾಮಗಾರಿಗಳಿಗೆ ಕಡಿಮೆ ಮಾಡಲಾಗಿದೆ. ವೈಯಕ್ತಿಕ ಕಾಮಗಾರಿಗಳಿಗೆ ಎನ್‌ಎನ್‌ಎಂಎಸ್ ಆ್ಯಪ್ ತಂದಿರುವುದರಿಂದ ಸ್ವಲ್ಪ ಹೊಡೆತ ಬೀಳಲಿದೆ. ಈ ಆ್ಯಪ್ ಬಗ್ಗೆ ಮಾಹಿತಿ ನೀಡಿ ಜಾಗೃತಿ ನೀಡಿದರೆ ಉತ್ತಮವಾಗುತ್ತದೆ ಎಂದರು.

ನಿರ್ಬಂಧಗಳು ಹೆಚ್ಚಳ: ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಯೋಜನೆಯಲ್ಲಿ ನಿಯಮ ಬಿಗಿ ಮಾಡಿರುವುದು ಸೋರಿಕೆ ತಡೆಗಟ್ಟಲು ಹೊರತು ಕೆಲಸ ನಿಲ್ಲಿಸಲು ಅಲ್ಲ. ರಾಜ್ಯದಲ್ಲಿ ಮಾಡಿದ ನಿಯಮಗಳು ಕರಾವಳಿ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ನರೇಗಾದಲ್ಲಿ ಇಂತಹ ವ್ಯತ್ಯಾಸಗಳನ್ನು ಗಮನಿಸಿ ಹೇಳಿದಾಗ ನರೇಗಾದಲ್ಲಿ ಬದಲಾವಣೆ ಮಾಡಲಾಗಿತ್ತು. ಹೀಗಾಗಿ ವಿಬಿ-ಜಿ ರಾಮ್ ಜಿ ಯೋಜನೆಯ ವ್ಯತ್ಯಾಸಗಳನ್ನು ತಕ್ಷಣಕ್ಕೆ ಪಿಡಿಒಗಳು ಗಮನಿಸಿ, ತಾಪಂ ಇಓಗಳ ಗಮನಕ್ಕೆ ತರಬೇಕು. ಇಓಗಳು ಜಿಲ್ಲೆಗೆ ಆಗುವ ಸಮಸ್ಯೆಗಳ ಬಗ್ಗೆ ಆದಷ್ಟು ಬೇಗ ವರದಿ ಮಾಡಬೇಕು ಎಂದರು.

ವಿಬಿ-ಜಿ ರಾಮ್ ಜಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸ ಬೇಕು. ಪಂಚಾಯತ್ ಮಟ್ಟದಲ್ಲಿ ನೀರಿನ ಸಮಸ್ಯೆಗೆ ಈ ಯೋಜನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ನಮ್ಮ ಜಿಲ್ಲೆ ಮಟ್ಟಿಗೆ ಆಗಬೇಕಾದ ಮಾರ್ಪಾಡಿನ ಬಗ್ಗೆ ಬೇಡಿಕೆ ಸಲ್ಲಿಸಬೇಕು. ವಿಬಿ-ಜಿ ರಾಮ್ ಜಿಯಲ್ಲಿ ಕಾಮಗಾರಿಗಳ ಪಟ್ಟಿ ಹೆಚ್ಚಾಗಿದೆ, ದರವೂ ಹೆಚ್ಚಾಗಿದೆ. ಅದರೊಟ್ಟಿಗೆ ನಿರ್ಬಂಧವೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

ತಡವಾಗಿ ಮಂಜೂರಾತಿ: ಈ ವರ್ಷ ಕ್ರಿಯಾ ಯೋಜನೆ ಬಹಳಷ್ಟು ತಡವಾಗಿ ಮಂಜೂರಾತಿ ಆಗಿದೆ. ಅಂದಾಜು ಪಟ್ಟಿಗಳು ನಡೆಯುತ್ತಿದೆ. ನರೇಗಾದ ಕಾಮಗಾರಿಗಳನ್ನು ಈಗಲೂ ಮುಂದುವರಿಸಲಾಗಿದೆ. ನರೇಗಾದಲ್ಲಿ 266 ಕಾಮಗಾರಿಗಳಿದ್ದು, ವಿಬಿಜಿ 318 ಕಾಮಗಾರಿಗಳನ್ನು ನೀಡಲಾಗಿದೆ. ಕೈಬಿಡಲಾದ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದ ಕಾಮಗಾರಿಗಳನ್ನು ಗುರುತು ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕಿದೆ ಎಂದು ಸಹಾಯಕ ನಿರ್ದೇಶಕ ಸುರೇಶ ತಿಳಿಸಿದರು.

ಈ ಯೋಜನೆಯಲ್ಲಿ ಸಾರ್ವಜನಿಕ ತೋಡಿನ ಕೆಲಸ ನಿರ್ವಹಿಸಲು ಆಗುವುದಿಲ್ಲ. ಚರಂಡಿ ನಿರ್ಮಿಸಲು ಅವಕಾಶ ಇದೆ. ಎನ್‌ಎನ್‌ಎಂಎಸ್ ಆ್ಯಪ್‌ನ್ನು ಸಂಬಂಧಪಟ್ಟ ಮನೆಯವರು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರ ಜಿಪಿಎಸ್ ಫೋಟೋಗಳನ್ನು ತೆಗೆಯಬೇಕಿದೆ. ಇಂಗು ಗುಂಡಿ ರಚನೆಗೆ 24 ಸಾವಿರ ರೂ. ಇದ್ದ ಅನುದಾನವನ್ನು 11 ಸಾವಿರಕ್ಕೆ ಇಳಿಸಿ ಇದೀಗ 5 ಸಾವಿರ ನಿಗದಿಪಡಿಸಿದ್ದು, ಇದು ಯಾವುದಕ್ಕೂ ಸಾಕಾಗುದಿಲ್ಲ ಎಂದು ಅವರು ಹೇಳಿದರು.

ನರೇಗಾ ಕ್ಲೋಸ್ ಆಗುತ್ತದೆ ಎನ್ನುವಾಗ ಎಲ್ಲಾ ಬಿಲ್ ಎಂಟ್ರಿ ಆಗಿದ್ದು, ಆ ಸಂದರ್ಭ 60:40 ಅನುಪಾತ ಪಾಲಿಸುವಲ್ಲಿ ಉಲ್ಲಂಘನೆಯಾಗಿದೆ. ಹೀಗಾಗಿ 2- 3 ವರ್ಷದಿಂದ ನರೇಗಾದಲ್ಲಿ ಮಾಡಿದ ಕಾಮಗಾರಿಗಳ ಬಿಲ್ ಬಾಕಿ ಇದೆ. ಈ ಯೋಜನೆಯಲ್ಲಿ ಕಾಲು ಸಂಕ ರಚನೆಗೆ ಬೇರೆ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಕುಂದಾಪುರ ತಾಪಂ ಇಒ ಮಹೇಶ ಕೆ.ಜಿ., ಬೈಂದೂರು ತಾಪಂ ಇಒ ನಾಗಶಯನ, ನರೇಗಾ ಸಹಾಯಕ ನಿರ್ದೇಶಕ ರಾಜೇಶ್, ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿಗಳು, ಪಿಡಿಒಗಳು ಉಪಸ್ಥಿತರಿದ್ದರು.

ಅಳಲು ತೋಡಿಕೊಂಡ ಪಿಡಿಓಗಳು!

ಈ ಯೋಜನೆಯಡಿ ಇತರ ಇಲಾಖೆಗಳ ಕಾಮಗಾರಿಗಳನ್ನು ಸೇರಿಸಿ ಕೊಂಡಿದ್ದು, ಎಂಬಿ ಬರೆಯುವುದು ಮತ್ತು ತಾಂತ್ರಿಕ ಮಂಜೂರಾತಿಯನ್ನು ಸಂಬಂಧಪಟ್ಟ ಇಲಾಖೆಯವರು ನೀಡಿದರೂ, ಹಣ ಪಾವತಿಸಲು ಪಿಡಿಒ/ಆಡಳಿತಾಧಿಕಾರಿಗಳನ್ನು ಹಾಕಿದ್ದಾರೆ. 7 ದಿನದೊಳಗೆ ಹಣ ಪಾವತಿ ಮಾಡದೆ ವಿಳಂಬ ಮಾಡಿದರೆ, ವಿಳಂಬ ಪಾವತಿ ಎಂದು ಹಣವನ್ನು ಪಿಡಿಒ ಆಡಳಿತಾಧಿಕಾರಿಗಳು ಪಾವತಿಸಬೇಕಾಗುತ್ತದೆ. ಇಂತಹ ಅನೇಕ ತಾಂತ್ರಿಕ ಸಮಸ್ಯೆಗಳಿವೆ ಎಂದು ಸಭೆಯಲ್ಲಿ ಪಿಡಿಓಗಳು ತಮ್ಮ ಅಳಲನ್ನು ತೋಡಿ ಕೊಂಡರು.

ಎಲ್ಲಾ ಒತ್ತಡಗಳನ್ನು ಪಿಡಿಒಗಳ ಮೇಲೆ ಹಾಕಿದ್ದಾರೆ. ಇದರೊಳಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ದರೆ ಇನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯ. ವಿಬಿ ಜಿ ರಾಮ ಜಿ ಯೋಜನೆ ಬಹಳಷ್ಟು ಉತ್ತಮವಾಗಿದ್ದು, ಇದರಲ್ಲಿನ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದೆ ಎಂದು ಪಿಡಿಒ ಶೋಭಾ ಅಭಿಪ್ರಾಯಪಟ್ಟರು.

ಕೆ2 ಮೂಲಕ ಪಾವತಿಯಾಗಬೇಕಿರುವುದರಿಂದ ಪ್ರತಿಯೊಂದು ಸಂದರ್ಭದಲ್ಲಿ ಖಜಾನೆಗೆ ಹೋಗಿ ಬರಲು ಕಷ್ಟವಾ ಗುತ್ತಿದೆ. ಖಜಾನೆಯಲ್ಲಿ ಪಾವತಿ ವಿಳಂಬವಾದರೆ ಪಿಡಿಒ/ಆಡಳಿತಾಧಿಕಾರಿಗಳು ಹೊಣೆಗಾರರಾ ಗುತ್ತಾರೆ ಎಂದು ಪಿಡಿಒಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News