15 ಗಂಟೆಯಲ್ಲೇ ಪೋಕ್ಸೊ ವಿಶೇಷ ಪಿಪಿ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ !
ಉಡುಪಿ, ಜು.17: ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈಟಿ. ರಾಘವೇಂದ್ರ ಸೇರಿದಂತೆ ಮನೋಜ್ ಹಾಗು ಸಂಜಯ್ ಎಂಬವರ ವಿರುದ್ಧ ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದ ಜಾತಿನಿಂದನೆ ಪ್ರಕರಣಕ್ಕೆ 15 ಗಂಟೆಯ ಅವಧಿಯಲ್ಲೇ ರಾಜ್ಯ ಉಚ್ಚ ನ್ಯಾಯಾಲಯ ಬುಧವಾರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಉಡುಪಿ ಮಹಿಳಾ ಠಾಣೆಯಲ್ಲಿ ಜು.15ರಂದು ದಾಖಲಾಗಿದ್ದ ಜಾತಿನಿಂದನೆ ಪ್ರಕರಣವನ್ನು ಪ್ರಶ್ನಿಸಿ ವೈ.ಟಿ ರಾಘವೇಂದ್ರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತುರ್ತು ವಿಚಾರಣೆ ನಡೆಸಿದ್ದ ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ಅವರಿದ್ದ ಪೀಠವು, ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ. ವೈ.ಟಿ ರಾಘವೇಂದ್ರ ಅವರ ಪರವಾಗಿ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದಿಸಿದ್ದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಪೋಕ್ಸೊ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ, ನಾನು ತಲೆಮರೆಸಿಕೊಂಡಿಲ್ಲ. ನನ್ನ ಕಚೇರಿಯಲ್ಲಿಯೇ ಇದ್ದೇನೆ. ಬಿಎನ್ಎಸ್ ಕಾಯ್ದೆ ಪ್ರಕಾರ 14 ದಿನಗಳ ಪ್ರಾಥಮಿಕ ತನಿಖೆಯನ್ನು ನಡೆಸಿ, ಪ್ರಕರಣ ದಾಖಲಿಸಬೇಕಿತ್ತು. ಪೊಲೀಸರು ಒತ್ತಡಕ್ಕೆ ಮಣಿದು ಏಕಾಏಕಿ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ. ಅಲ್ಲದೇ ನನ್ನ ಕಚೇರಿಯಲ್ಲಿ ಕೆಲಸವನ್ನು ಬಿಟ್ಟು 8 ವರ್ಷದ ಬಳಿಕ, ಅಂದು ಜಾತಿ ನಿಂದನೆ ಮಾಡಿದ್ದೇನೆ ಎಂದು ದೂರು ನೀಡಿದ್ದಾರೆ. ಇದೊಂದು ಸುಳ್ಳು ಪ್ರಕರಣ ಎಂದು ಅವರು ತಿಳಿಸಿದ್ದಾರೆ.