ಸರ್ಪಂಗಳ ಪ್ರಶಸ್ತಿಗೆ ಅಂಬಾಪ್ರಸಾದ್, ಕೃಷ್ಣಶೆಟ್ಟಿ ಆಯ್ಕೆ
ಉಡುಪಿ, ಅ.5: ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸಂಸ್ಮರಣಾರ್ಥ ಯಕ್ಷಗಾನ ಕಲಾಸಾಧಕ ಪ್ರಶಸ್ತಿಗೆ ತೆಂಕು ತಿಟ್ಟು ಯಕ್ಷಗಾನದ ಪ್ರಸಿದ್ಧ ಸ್ತ್ರೀವೇಷಧಾರಿ ಅಂಬಾಪ್ರಸಾದ ಪಾತಾಳ ಮತ್ತು ಯಕ್ಷಗಾನ ಕಲಾಸೇವಾ ಪುರಸ್ಕಾರ ಪ್ರಶಸ್ತಿಗೆ ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣಶೆಟ್ಟಿ ಆಯ್ಕೆಯಾಗಿದ್ದಾರೆ.
ಅಂಬಾಪ್ರಸಾದ್ ಪಾತಾಳ ತೆಂಕುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ಟರ ಪುತ್ರರಾಗಿದ್ದು ಯಕ್ಷಗಾನ ರಂಗದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಸಕ್ರಿಯರಾಗಿದ್ದಾರೆ. ಕನ್ನಡ ಪೌರಾಣಿಕ ಮತ್ತು ತುಳು ಸಾಮಾಜಿಕ ಪ್ರಸಂಗಗಳೆರಡರಲ್ಲಿಯೂ ಸ್ತ್ರೀ ವೇಷದ ಘನತೆಯನ್ನು ಮೆರೆಸಿ ಜನಮನ್ನಣೆ ಪಡೆದವರಾಗಿದ್ದಾರೆ.
ಬೆಳ್ತಂಗಡಿ ಕೃಷ್ಣಶೆಟ್ಟಿ ಇವರು ವೇಷಧಾರಿಯಾಗಿ, ಮದ್ದಲೆವಾದಕರಾಗಿ ವೃತ್ತಿಪರ ಮತ್ತು ಹವ್ಯಾಸಿರಂಗಗಳೆರಡರಲ್ಲೂ ತೊಡಗಿಸಿಕೊಂಡಿದ್ದು ಕಳೆದ ಮೂರು ದಶಕಗಳಿಂದ ಚಕ್ರತಾಳವಾದಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಯಕ್ಷಗಾನ ರಂಗದಲ್ಲಿ ಸುಮಾರು ಅರವತ್ತೈದು ವರ್ಷಗಳಿಂದ ಇವರು ಸಕ್ರಿಯರಾಗಿದ್ದಾರೆ.
ಉಡುಪಿಯ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಅಕ್ಟೋಬರ್ 7ರಂದು ಸಂಜೆ 6:30ರಿಂದ ಜರಗುವ ‘ಸಪರ್ಂಗಳ ಯಕ್ಷೋತ್ಸವ- 2023’ರಲ್ಲಿ ಪ್ರಶಸ್ತಿ ಪ್ರದಾನ, ಸಂಸ್ಮರಣ, ಯಕ್ಷಗಾನ ಪ್ರದರ್ಶನ ಕಾರ್ಯ ಕ್ರಮಗಳು ಜರಗಲಿವೆ.
ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರು ಸಾನ್ನಿಧ್ಯ ವಹಿಸಲಿದ್ದು, ಕಡಿಯಾಳಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ರವಿರಾಜ ಅಚಾರ್ಯ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಕಾರ್ಯಕ್ರಮದ ಸಂಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ.ಶೈಲಜಾ ಎಸ್. ಮತ್ತು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.