ಕುದುರೆಮುಖ ರಾ. ಉದ್ಯಾನವನ | ಪುನರ್ವಸತಿ ಪರಿಹಾರ ವಿಳಂಬ: 9 ಕುಟುಂಬಗಳಿಂದ ಕಾರ್ಕಳ ಡಿಸಿಎಫ್ ಕಚೇರಿಗೆ ಆಗಮಿಸಿ ಆಕ್ರೋಶ

Update: 2026-08-14 10:58 IST

ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನವಸತಿ ಪ್ರದೇಶಗಳಿಂದ ಸ್ವಯಂಪ್ರೇರಿತವಾಗಿ ಸ್ಥಳಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದರೂ ವರ್ಷಗಳಾದರೂ ಪರಿಹಾರ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಎಳನೀರು ಸುತ್ತುಗಟ್ಟು ಮಲವಂತಿಗೆ ಗ್ರಾಮದ 9 ಕುಟುಂಬಗಳ ಸದಸ್ಯರು ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು.

ಮಲವಂತಿಗೆ ಹಾಗೂ ನಾವೂರ ಗ್ರಾಮದ 9 ಕುಟುಂಬಗಳು 2018ರಿಂದ 2020ರ ಅವಧಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಲು ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿದ್ದವು. ಅರ್ಜಿಗಳ ಪರಿಶೀಲನೆ ಹಾಗೂ ಮೌಲ್ಯಮಾಪನದ ಬಳಿಕ ಒಟ್ಟು 6.28 ಕೋಟಿ ರೂ. ಪರಿಹಾರ ನೀಡಲು ಪ್ರಸ್ತಾವಿಸಲಾಗಿತ್ತು. 2025ರ ಡಿಸೆಂಬರ್ 17ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಪುನರ್ವಸತಿ ಪರಿಹಾರ ಪಾವತಿಗೆ ಅನುಮೋದನೆ ದೊರೆತಿದ್ದರೂ, ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಕುಟುಂಬಗಳು ದೂರಿವೆ.

ಈ ಕುರಿತು ಮಾತನಾಡಿದ ಸಿದ್ಧಾಪುರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಡಿ. ದಿನೇಶ್, ಕುಟುಂಬಗಳು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿ, ಮೌಲ್ಯಮಾಪನ ನಡೆಸಿ ಜಿಲ್ಲಾಡಳಿತದ ಅನುಮೋದನೆಯೊಂದಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪುನರ್ವಸತಿ ಯೋಜನೆಗೆ ಸುಮಾರು 400 ಕೋಟಿ ರೂ. ಅಂದಾಜಿಸಲಾಗಿದ್ದು, ಈ ಹಿಂದೆ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ 356 ಕುಟುಂಬಗಳಿಗೆ 142 ಕೋಟಿ ರೂ. ಪರಿಹಾರ ನೀಡಿ ಸ್ಥಳಾಂತರಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಜ್ಯೇಷ್ಠತೆಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಇತ್ತೀಚೆಗೆ ಅರಣ್ಯ ಸಚಿವರು ಹೆಚ್ಚುವರಿಯಾಗಿ 20 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ತಮಗೂ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್, ಮಂಗಳೂರು ಜಿಲ್ಲೆಗೆ ಮಾತ್ರ ಅನುದಾನ ನೀಡಲಾಗಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾದ ಬಳಿಕ ಈಗಾಗಲೇ ಅನುಮೋದನೆಗೊಂಡ ಅರ್ಜಿದಾರರಿಗೆ ಜ್ಯೇಷ್ಠತೆಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದರು.

ಇದೇ ವೇಳೆ ವನ್ಯಜೀವಿಗಳಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುವುದು. ಆದರೆ ಹವಾಮಾನ ವೈಪರೀತ್ಯದಿಂದ ಉಂಟಾಗುವ ಬೆಳೆ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪರಿಹಾರ ಹಣ ಬಿಡುಗಡೆ ಕುರಿತು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಇಲಾಖಾ ಮಟ್ಟದಲ್ಲಿ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಪರಿಹಾರ ಪಾವತಿಸಲಾಗುವುದು ಎಂದು ದಿನೇಶ್ ಭರವಸೆ ನೀಡಿದರು.

ಈ ವೇಳೆ ಕುದುರೆಮುಖ ವನ್ಯಜೀವಿ ವಿಭಾಗ ಸಹಾಯಕ ಅರಣ್ಯ‌ ಸಂರಕ್ಷಣಾಧಿಕಾರಿ ಲತಾ ಭಟ್, ಕಾರ್ಕಳ ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್ ಉಪಸ್ಥಿತರಿದ್ದರು. ಮಲವಂತಿಗೆ ಗ್ರಾಮದ 9 ಕುಟುಂಬದ ಸುಮಾರು 20 ಮಂದಿ ಕಚೇರಿಗೆ ಆಗಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News