ಮಾಹೆಯಿಂದ ಮುಕ್ತ ಕಲೆಗಳ ಅಧ್ಯಯನಕ್ಕೆ ಪ್ರೋತ್ಸಾಹ: ಡಾ.ಮಧು
ಉಡುಪಿ, ಮೇ 27: ಮಣಿಪಾಲ ಅಕಾಡೆಮಿ ಆಫ್ ಹೈಯರ ಎಜ್ಯುಕೇಷನ್ (ಮಾಹೆ) ಮುಕ್ತ ಕಲೆಗಳು (ಲಿಬರಲ್ ಆರ್ಟ್ಸ್) ಮತ್ತು ಸಾಮಾಜಿಕ ವಿಜ್ಞಾನ (ಸೋಷಿಯಲ್ ಸಾಯನ್ಸ್) ವಿಷಯಗಳ ಅಧ್ಯಯನ ವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದ್ದು, ಈ ದಿಕ್ಕಿನಲ್ಲಿ ಪ್ರಯತ್ನ ಪ್ರಾರಂಭಗೊಂಡಿದೆ ಎಂದು ಮಾಹೆ ವಿವಿಯ ಸಹ ಕುಲಪತಿ ಡಾ.ಮಧು ವೀರರಾಘವನ್ ಹೇಳಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ನ ‘ಸರ್ವೋದಯ’ ವಾರ್ಷಿಕೋತ್ಸವ ಮತ್ತು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಶೋಧನೆ ಎನ್ನುವುದು ಎಲ್ಲ ಜ್ಞಾನಶಾಖೆಗಳ ಮೂಲಮಂತ್ರವಾಗ ಬೇಕಾಗಿದ್ದು, ಇದು ಕಲೆ ಮತ್ತು ಸಾಮಾಜಿಕ ವಿಜ್ಞಾನಗಳ ಕ್ಷೇತ್ರಕ್ಕೂ ಅನ್ವಯಿಸುತ್ತದೆ ಎಂದು ಡಾ.ಮಧು ನುಡಿದರು.
ಈ ನಿಟ್ಟಿನಲ್ಲಿ ಗಾಂಧಿಯನ್ ಸೆಂಟರ್ನ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಇಲ್ಲಿಯ ವಿದ್ಯಾರ್ಥಿಗಳ ಸಂಶೋಧನೆಗಳು, ಇದೀಗ ಮುಕ್ತಾಯ ಗೊಂಡ ಎರಡು ತಿಂಗಳ ಸಂಗೀತ ಮತ್ತು ನೃತ್ಯ ಶಿಕ್ಷಣವನ್ನು ಹೊಗಳಿದರು.
ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಇಲ್ಲಿಯ ಕೋರ್ಸ್ ಗಳಾದ ಏಕಾಸೊಫಿ, ಏಸ್ತೆಟಿಕ್ಸ್, ಪೀಸ್ ಸ್ಟಡೀಸ್ ಹಾಗೂ ಆರ್ಟ್ ಮೀಡಿಯಾಗಳ ಕುರಿತು ವಿವರಗಳನ್ನು ನೀಡಿದರು.
ಎರಡು ತಿಂಗಳ ಭರತನಾಟ್ಯ ಶಿಕ್ಷಣವನ್ನು ನೀಡಿದ ನೃತ್ಯಕಲಾವಿದೆ ಡಾ. ಭ್ರಮರಿ ಶಿವಪ್ರಕಾಶ್ ಮತ್ತು ಸಂಗೀತ ಕಲಾವಿದೆ ಶ್ರಾವ್ಯ ಬಾಸ್ರಿ ಇವರು ‘ಇದು ಕಲೆಯನ್ನು ಎಲ್ಲರೆಡೆಗೆ ಕೊಂಡೊಯ್ಯುವ ಪ್ರಯತ್ನ’ ಎಂದರು. ಕಾರ್ಯಾಗಾರದಲ್ಲಿ ಪಾಲ್ಗೊಂಡವರು ಈ ಕುರಿತು ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಅಲ್ಲದೇ ತಾವು ಕಲಿತ ನೃತ್ಯ ಮತ್ತು ಸಂಗೀತವನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದರು.
ವಿದ್ಯಾರ್ಥಿಗಳಾದ ವೆಲಿಕಾ, ಶ್ರವಣ್, ಚಿನ್ಮಯೀ, ಸಾತ್ವಿಕ್, ಆಕರ್ಷಿಕ ಮತ್ತು ಆಲಿಸ್ ಈ ಸಂದರ್ಭದಲ್ಲಿ ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ ಇತ್ಯಾದಿ ವಿಷಯಗಳ ಕುರಿತ ತಮ್ಮ ಸಂಶೋಧನೆ ಮಂಡಿಸಿದರು. ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರ್ವಹಿಸಿದರು.
ಜಿಯೋಪೊಲಿಟಿಕ್ಸ್ ಮುಖ್ಯಸ್ಥೆ ಡಾ.ವಿಜಯಲಕ್ಷ್ಮಿ , ಡಾ. ಸುಧೀರ್ ರೆಡ್ಡಿ, ಡಾ. ರವೀಂದ್ರನಾಥನ್, ಡಾ. ರೇಸ್ಮಿ ಭಾಸ್ಕರನ್ ಅಲ್ಲದೇ ಅನೇಕ ಕಲಾಸಕ್ತರು ಭಾಗವಹಿಸಿದ್ದರು.