ಅನಂತಮೂರ್ತಿ ಕುರಿತ ಸಂಶೋಧನೆ: ಪ್ರೊ.ವರದೇಶ ಹಿರೇಗಂಗೆಗೆ ಡಾಕ್ಟರೇಟ್
ಉಡುಪಿ, ಜೂ.26: ವಿಶ್ವಮಾನ್ಯರಾಗಿದ್ದ ಕನ್ನಡದ ಅಗ್ರಗಣ್ಯ ಕಾದಂಬರಿಕಾರ, ಲೇಖಕ ಹಾಗೂ ಚಿಂತಕರಾಗಿದ್ದ ಪ್ರೊ. ಯು.ಆರ್. ಅನಂತಮೂರ್ತಿ ಅವರ ‘ಶೈಕ್ಷಣಿಕ ತತ್ವಜ್ಞಾನ’ದ (ಪಿಲಾಸಫಿ ಆಫ್ ಎಜ್ಯುಕೇಷನ್) ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲದ ಪ್ರೊ.ವರದೇಶ ಹಿರೇಗಂಗೆ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್(ಮಾಹೆ) ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಪ್ರಸ್ತುತ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸಸ್ನ (ಜಿಸಿಪಿಎಎಸ್) ಮುಖ್ಯಸ್ಥ ರಾಗಿರುವ ಪ್ರೊ. ವರದೇಶ್ ಹಿರೇಗಂಗೆ ಇವರು, ಸದ್ಯ ಆಂಧ್ರಪ್ರದೇಶದ ಅಪೋಲೋ ವಿಶ್ವವಿದ್ಯಾಲಯದ ಕುಲಪತಿ ಗಳಾಗಿರುವ ಡಾ.ಎಚ್.ವಿನೋದ್ ಭಟ್ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದರು.
ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಾಗಿರುವ ಪ್ರೊ.ಅನಂತಮೂರ್ತಿ ತಮ್ಮ ವೃತ್ತಿಜೀವನದಲ್ಲಿ ಮೈಸೂರು ವಿಶ್ವವಿದ್ಯಾಲಯ ದಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ರಾಗಿ ಹಾಗೂ ನಾಲ್ಕು ವರ್ಷ ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಗಳಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರೊ.ಹಿರೇಗಂಗೆ ಅವರು ತನ್ನ ಸಂಶೋಧನಾ ಪ್ರಬಂಧವನ್ನು ಪೌರಾತ್ಯ ಹಾಗೂ ಪಾಶ್ಚಿಮಾತ್ಯ ದೃಷ್ಠಿಕೋನಗಳ ಹಿನ್ನೆಲೆ ಯೊಂದಿಗೆ ಪ್ರೊ.ಯುಆರ್ಎ ಅವರ ಆತ್ಮಕಥೆ, ಶಿಕ್ಷಣದ ಕುರಿತ ಅವರ ಮಾತು ಮತ್ತು ಲೇಖನಗಳು, ಘಟಿಕೋತ್ಸವ ಭಾಷಣಗಳು, ತರಗತಿಯಲ್ಲಿನ ಅವರ ಉಪನ್ಯಾಸಗಳು ಮತ್ತು ಸಂದರ್ಶನಗಳನ್ನು ಆಧರಿಸಿ ಸಿದ್ಧಪಡಿಸಿದ್ದಾರೆ.
ಸಂಶೋಧನೆಯು ಪ್ರೊ.ಮೂರ್ತಿಯವರ ಪ್ರಸಿದ್ಧ ಪರಿಕಲ್ಪನೆಗಳಾದ ‘ಆಧುನಿಕತೆ, ಸಮಾನತೆ ಮತ್ತು ಆಧ್ಯಾತ್ಮಿಕತೆ’ ಇವುಗಳ ಆಚೆಗೆ ಹೋಗಿ ಇವರ ತಾತ್ವಿಕತೆಯನ್ನು ‘ಕೋ ಎಗೆಲೆಟೇರಿಯನ್ ಅದ್ವೈತಿಸಂ’ಎಂದು ಗುರುತಿಸುತ್ತದೆ. ಅವರ ಶೈಕ್ಷಣಿಕ ಪರಿಕಲ್ಪನೆಗಳಾದ ‘ಸಮಾನತೆ, ಶ್ರೇಷ್ಠತೆ ಮತ್ತು ವಿಸ್ತರಣೆ’ ಇವುಗಳ ಆಚೆಗೆ ಹೋಗಿ ಶಿಕ್ಷಣದ ಉದ್ದೇಶ, ಪಠ್ಯ ಕ್ರಮ, ಶೈಕ್ಷಣಿಕ ವಿಧಾನಗಳು, ಶಿಕ್ಷಕ, ಶೈಕ್ಷಣಿಕ ಮಾಧ್ಯಮ ಮತ್ತು ಶೈಕ್ಷಣಿಕ ಮುಂದಾಳತ್ವದ ಪಾತ್ರವನ್ನು ವಿಶ್ಲೇಷಿಸುತ್ತದೆ.
ಡಾ.ಯುಆರ್ಎ ಅವರ ಚಿಂತನೆಯಲ್ಲಿ ಸಾಮಾನ್ಯವಾಗಿ ಗುರುತಿಸಲಾಗುವ ಸಮಾಜವಾದ ಮತ್ತು ಅಸ್ತಿತ್ವವಾದಿ ನೆಲೆಗಳ ಆಚೆಗೆ ಹೋಗಿ, ಸಂಶೋಧನೆ ಅವರ ಯೋಚನೆಯಲ್ಲಿ ಗಾಂಧೀಜಿ, ಗುರುದೇವ ಠಾಗೋರ್ ಮತ್ತು ಡಾ. ಅಂಬೇಡ್ಕರ್ ಚಿಂತನೆಯ ಅಂಶಗಳನ್ನು ಪ್ರೊ.ಹಿರೇಗಂಗೆ ಗುರುತಿಸಿದ್ದಾರೆ.
ಆರಂಭದ ಕೆಲವು ವರ್ಷಗಳ ಕಾಲ ಬೆಂಗಳೂರು ಮತ್ತು ಮಂಗಳೂರಿನಲ್ಲಿ ವರದೇಶ್ ಹಿರೇಗಂಗೆ ಪತ್ರಕರ್ತರಾಗಿದ್ದುರು. ಬಳಿಕ ಮಾಹೆಯ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಂಮ್ಯುನಿಕೇಷನ್ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಸಂಶೋಧನಾ ಮಾರ್ಗದರ್ಶಿ ಡಾ.ಎಚ್. ವಿನೋದ್ ಭಟ್ ಅವರು ಮುಂಚೆ ಮಾಹೆಯ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.