×
Ad

ಕುಮ್ಕಿ ಜಮೀನು ವಶಪಡಿಸಿ ಕೊರಗರಿಗೆ ವಿತರಿಸಿ: ಶ್ಯಾಮ್‌ರಾಜ್ ಬಿರ್ತಿ

Update: 2024-07-27 20:08 IST

ಉಡುಪಿ: ರಾಜ್ಯ ಸರಕಾರ ಜಿಲ್ಲೆಯಲ್ಲಿರುವ ಕುಮ್ಕಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಆ ಭೂಮಿಯನ್ನು ಕೊರಗ ಸಮುದಾಯಕ್ಕೆ ಹಂಚುವ ಕಾರ್ಯ ಮಾಡಬೇಕು. ಇಲ್ಲಿ 5 ಎಕರೆ ಭೂಮಿ ಹೊಂದಿರುವ ಭೂಮಾಲಿಕರು 15-20 ಎಕರೆ ಜಾಗವನ್ನು ಕುಮ್ಕಿ ಎಂದು ಹೇಳಿ ಊರೆಲ್ಲ ಬೇಲಿ ಹಾಕಿ ಸರಕಾರದ ಜಾಗವನ್ನು ಕಬಳಿಸಿದ್ದಾರೆ. ಆ ಜಾಗವನ್ನು ಸರಕಾರ ತನ್ನ ವಶಕ್ಕೆ ಪಡೆದು ಭೂ ರಹಿತ ಸಮುದಾಯವಾಗಿರುವ ಕೊರಗರಿಗೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಆಗ್ರಹಿಸಿದ್ದಾರೆ.

ಕೊರಗ ಸಮುದಾಯದ ಯುವಜನತೆಗೆ ಸರಕಾರಿ ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಕೃಷಿಭೂಮಿ ಹಕ್ಕುಪತ್ರ ಮಂಜೂರಾತಿಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳದ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಮಳೆಗಾಳಿ ಎನ್ನದೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆಯಿಂದ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡುತಿದ್ದರು.

ಹೊರಗಿನಿಂದ ಬಂದ ಆರ್ಯರು ಈ ದೇಶದ ಎಲ್ಲ ಭೂಮಿಯನ್ನು ಕಬಳಿಸಿದ್ದಾರೆ. ಇದರಿಂದ ಈ ದೇಶದ ಮೂಲನಿವಾಸಿ ಗಳಾದ ಬುಡುಕಟ್ಟು ಸಮುದಾಯ, ಆದಿ ದ್ರಾವಿಡರು, ದಲಿತರು ಇಲ್ಲಿ ನಮ್ಮದೇ ಭೂಮಿಗಾಗಿ ಹಗಲು ರಾತ್ರಿ ಮಳೆ ಚಳಿಯ ಮಧ್ಯೆಯೂ ಧರಣಿ ನಡೆಸುತ್ತಿರುವುದು ದುರಂತ ಎಂದ ಅವರು, ನಮ್ಮ ಹೆಸರಿನಲ್ಲಿ ಭೂಮಿ ಇಲ್ಲದಿದ್ದರೆ ಆತ್ಮವಿಶ್ವಾಸವೇ ಇಲ್ಲದಂತೆ ಆಗುತ್ತದೆ. ಉನ್ನತ ಶಿಕ್ಷಣ ಪಡೆದ ಕೊರಗ ಸಮುದಾಯದ ಯುವ ಜನತೆ ಈಗ ಬೀದಿ ಬದಿಯಲ್ಲಿ ಕಸ ಗುಡಿ ಸುವ ಅನಿವಾರ್ಯತೆ ಬಂದೊದಗಿದೆ ಎಂದು ಆರೋಪಿಸಿದರು.

ಮುಂದೆ ಈ ಹೋರಾಟವನ್ನು ರಾಜ್ಯಮಟ್ಟದಲ್ಲಿ ರೂಪಿಸುವ ಬಗ್ಗೆ ನಮ್ಮ ಸಂಘಟನೆಯ ರಾಜ್ಯ ಮುಖಂಡರಲ್ಲಿ ಮಾತುಕತೆ ನಡೆಸ ಲಾಗುವುದು. ಅಲ್ಲದೇ ಸಮಾಜ ಕಲ್ಯಾಣ ಸಚಿವರನ್ನು ಕೂಡ ಭೇಟಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಕೊರಗ ಸಮುದಾಯದವರು ಮುಂದಿಟ್ಟಿರುವ ಉದ್ಯೋಗ ಹಾಗೂ ಭೂಮಿ ಹಕ್ಕಿನ ಬೇಡಿಕೆಗಳು ಅತೀ ಅಗತ್ಯವಾದುದು. ಇದನ್ನು ಸರಕಾರ ಈಡೇರಿಸಲೇ ಬೇಕು. ಸರಕಾರಿ ಉದ್ಯೋಗಕ್ಕಾಗಿ ಸ್ಪಧಾರ್ತ್ಮಕ ಪರೀಕ್ಷೆಗಳಲ್ಲಿ ಇತರ ಬಲಿಷ್ಠ ಜಾತಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಕೊರಗ ಸಮುದಾಯಕ್ಕೆ ಸರಕಾರಿ ಉದ್ಯೋಗದಲ್ಲಿ ಶೇ.೧ರಷ್ಟಾದರೂ ಪ್ರತ್ಯೇಕ ಮೀಸಲಾತಿ ನೀಡಬೇಕು. ಸರಕಾರ ಈ ವಿಚಾರದಲ್ಲಿ ಅತೀ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ ವಕೀಲ, ದಸಂಸ ಮುಖಂಡ ಮಂಜುನಾಥ್ ಗಿಳಿಯಾರು ಮಾತನಾಡಿದರು. ದಲಿತ ಮುಖಂಡ ಶಂಕರ್‌ದಾಸ್ ಚೇಂಡ್ಕಳ ಹೋರಾಟದ ಗೀತೆ ಗಳನ್ನು ಹಾಡಿ ಧರಣಿನಿರತರನ್ನು ಹುರಿದುಂಬಿಸಿದರು.

ಧರಣಿಯಲ್ಲಿ ದಸಂಸ ಮುಖಂಡರಾದ ಶ್ರೀನಿವಾಸ ವಡ್ಡರ್ಸೆ, ಶ್ಯಾಂ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ, ಹರೀಶ್‌ಚಂದ್ರ ಬಿರ್ತಿ, ಶಿವಾನಂದ ಮೂಡಬೆಟ್ಟು, ಶಿವಾನಂದ ಬಿರ್ತಿ, ಶ್ರೀಧರ್ ಕುಂಜಿಬೆಟ್ಟು, ಕೊರಗ ಸಂಘಗಳ ಒಕ್ಕೂಟದ ಮುಖಂಡರಾದ ವಿನಯ ಅಡ್ವೆ, ದಿವಾಕರ ಕಳ್ತೂರು, ಪವಿತ್ರಾ ಮಧುವನ, ಕುಮಾರ್‌ದಾಸ್ ಮೊದಲಾದವರು ಉಪಸ್ಥಿತರಿದ್ದರು.

ಪಟ್ಟು ಸಡಿಲಿಸದ ಹೋರಾಟ!

ಜು.22ರಿಂದ ಆರಂಭಗೊಂಡ ಕೊರಗರ ಅಹೋರಾತ್ರಿ ಧರಣಿ ಸತ್ಯಾ ಗ್ರಹವು ಆರನೇ ದಿನವಾದ ಶನಿವಾರವೂ ಮುಂದು ವರೆದಿದೆ. ಧರಣಿನಿರತರು ಹಗಲು ರಾತ್ರಿ ಸ್ಥಳದಲ್ಲೇ ಊಟ ಉಪಹಾರ ತಯಾರಿಸಿ, ಪೆಂಡಲ್‌ನಲ್ಲೇ ಮಲಗಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಸಹಿತ ವಿವಿಧ ಅಧಿಕಾರಿಗಳು ಪ್ರತಿದಿನ ಸ್ಥಳಕ್ಕೆ ಬಂದು ಧರಣಿ ವಾಪಾಸ್ಸು ಪಡೆಯುವಂತೆ ಮನವಿ ಮಾಡಿದರೂ ಜಗ್ಗದ ಧರಣಿನಿರತರು, ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.

‘ಕೊರಗ ಸಮುದಾಯದ ಯುವಜನತೆ ಉನ್ನತ ಶಿಕ್ಷಣ ಪಡೆದರೂ ಉದ್ಯೋಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳಿಗೆ ಶಿಕ್ಷಣ ನೀಡಿ ಏನು ಪ್ರಯೋಜನ ಇಲ್ಲ ಎಂಬ ಭಾವನೆ ನಮ್ಮವರಲ್ಲಿ ಮೂಡುತ್ತಿದೆ. ಇಲ್ಲಿ ಅಸ್ಪಶ್ಯತೆ ತೀವ್ರವಾಗಿ ಇದೆ. ಈ ಹಿಂಸೆ, ಶೋಷಣೆ ಅನುಭವಿಸಿ ನಮಗೆ ಸಾಕಾಗಿದೆ. ನಾವು ಯಾವುದೇ ಕಾರಣಕ್ಕೂ ಹಿಂದಗೆದು ಕೊಳ್ಳುವುದಿಲ್ಲ. ಮುಖ್ಯಮಂತ್ರಿಯನ್ನು ಭೇಟಿ ಮಾಡಿಸುವ ಬಗ್ಗೆ ಉಸ್ತುವಾರಿ ಸಚಿವರು ಅಥವಾ ಉನ್ನತ ಅಧಿಕಾರಿಗಳು ಬಂದು ಭರವಸೆ ಕೊಡುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಒಕ್ಕೂಟ ಕರ್ನಾಟಕ -ಕೇರಳ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.

ಧರಣಿ ಸ್ಥಳಕ್ಕೆ ಶಾಸಕರ ಭೇಟಿ

ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಇಂದು ಭೇಟಿ ನೀಡಿ ಸಮುದಾಯದ ಬೇಡಿಕೆಗಳ ಬಗ್ಗೆ ಮುಖಂಡ ರೊಂದಿಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಕೊರಗ ಸಮುದಾಯದ ಬೇಡಿಕೆಗಳು ನ್ಯಾಯ ಸಮ್ಮತ ವಾಗಿದ್ದು, ಬೇಡಿಕೆಗಳ ಈಡೇರಿಕೆ ಶಾಸಕನಾಗಿ ನನ್ನ ಕರ್ತವ್ಯವಾಗಿದ್ದು, ಈ ಬಗ್ಗೆ ಪ್ರಾಮಾಣಿಕ ಪ್ರಯತ್ನದ ಭರವಸೆ ನೀಡಿದರು. ಅತೀ ಶೀಘ್ರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಎಲ್ಲಾ ಶಾಸಕರು ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದಾಗಿ ಶಾಸಕರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News