ಮಣಿಪಾಲ| ಪೆರಂಪಳ್ಳಿ ಮನೆಯ ಆವರಣದೊಳಗೆ ಚಿರತೆ ಪ್ರತ್ಯಕ್ಷ
ಮಣಿಪಾಲ: ನಾಯಿ ಬೇಟೆಗಾಗಿ ಚಿರತೆಯೊಂದು ಪೆರಂಪಳ್ಳಿಯ ಮನೆಯೊಂದರ ಕಾಂಪೌಂಡ್ ಒಳಗೆ ನುಗ್ಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಬೇಟೆಗಾಗಿ ಬಂದ ಚಿರತೆ, ಮನೆಯ ಹೊರಭಾಗದಲ್ಲಿದ್ದ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಆದರೆ ನಾಯಿ ಚಿರತೆಯಿಂದ ತಪ್ಪಿಸಿಕೊಂಡು ಹೋಗಿ ಜೀವ ಉಳಿಸಿಕೊಂಡಿದೆ. ರಾತ್ರಿ ನಾಯಿ ಬೊಗಳುತ್ತಿದ್ದುದನ್ನು ಗಮನಿಸಿದ ಮನೆ ಮಂದಿ ಚಿರತೆ ಇರಬೇಕೆಂಬ ಶಂಕೆಯಲ್ಲಿ ಮನೆಯ ಬಾಗಿಲು ತೆಗೆದಿರಲಿಲ್ಲ ಎಂದು ತಿಳಿದುಬಂದಿದೆ.
ಕೆಲವು ದಿನಗಳಿಂದ ಮಣಿಪಾಲ ಆಸುಪಾಸು ಚಿರತೆ ಓಡಾಟ ನಡೆಸುತ್ತಿದ್ದು ಈ ಹಿನ್ನೆಲೆಯಲ್ಲಿ ಬೆಳಗ್ಗೆ ಮನೆಯ ಸಿಸಿಟಿವಿ ಯನ್ನು ಪರಿಶೀಲಿಸಿದಾಗ ಚಿರತೆ ನಾಯಿಯ ಹಿಂದೆ ಓಡುತ್ತಿರುವ ದೃಶ್ಯ ಕಂಡುಬಂದಿದೆ. ರಾತ್ರಿ ಇಡೀ ಕಣ್ಮರೆಯಾಗಿದ್ದ ನಾಯಿ ಬೆಳಗ್ಗೆ ಬಂದಿದೆ.
ಈ ಘಟನೆಯಿಂದ ಮಣಿಪಾಲ, ಪೆರಂಪಳ್ಳಿ ಭಾಗದ ಜನರು ಭಯಭೀತರಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಚಲನವಲನ ಗಮನಿಸಲು ಮನೆ ಸಮೀಪ ಎರಡು ಕೆಮೆರಾ ಅಳವಡಿಸಿ ತೆರಳಿದ್ದಾರೆಂದು ತಿಳಿದುಬಂದಿದೆ.