ಕವಿತೆಯ ಮಾತು-ಅಡಿಗರ ನೆನಪು: ಕಾರ್ಯಾಗಾರ
ಉಡುಪಿ, ಮಾ.8: ಯಕ್ಷ ರಂಗಾಯಣ ಕಾರ್ಕಳದ ವತಿಯಿಂದ ಇತ್ತೀಚೆಗೆ ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ಕವಿತೆಯ ಮಾತು - ಅಡಿಗರ ನೆನಪು’ ಒಂದು ದಿನದ ಕಾರ್ಯಾಗಾರ ನಡೆಯಿತು.
ಅತ್ತೂರು ಸೈಂಟ್ ಲಾರೆನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಉಪಾಧ್ಯ ಈ ಸಂದರ್ಭ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಗೋಪಾಲಕೃಷ್ಣ ಅಡಿಗರು ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಸಾರ್ವಕಾಲಿಕ ಮೌಲ್ಯಗಳನ್ನು ತಮ್ಮ ಬರವಣಿಗೆಯ ಮೂಲಕ ಜನರಿಗೆ ತಲುಪಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಅವರು ಸಾಹಿತ್ಯ ಲೋಕಕ್ಕೆ ಹೊಸ ಚೈತನ್ಯ ನೀಡಿದವರು ಎಂದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ವನಿತಾ ಶೆಟ್ಟಿ ಮಾತನಾಡಿ, ಗೋಪಾಲ ಕೃಷ್ಣ ಅಡಿಗರು ಯುಗ ಪ್ರಜ್ಞೆಯ ಕವಿ. ನವ್ಯ ಪ್ರಕಾರವನ್ನು ಜನಮನಗಳಿಗೆ ತಲುಪಿಸಿದ ಅವರ ಕುರಿತು ವಿದ್ಯಾರ್ಥಿ ಗಳು ತಿಳಿದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೊಂಡ 35 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾ ಯಿತು. ಯಕ್ಷ ರಂಗಾಯಣ ಕಾರ್ಕಳದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶೇಷ ಕರ್ತವ್ಯ ಅಧಿಕಾರಿ ಪೂರ್ಣಿಮಾ ಸ್ವಾಗತಿಸಿದರು.