×
Ad

ಉಡುಪಿ: ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತ ಮಲೆಕುಡಿಯ ಸಮುದಾಯ

Update: 2025-04-18 22:27 IST

ಉಡುಪಿ, ಎ.18: ಕರ್ನಾಟಕ ಪಶ್ಚಿಮ ಘಟ್ಟದಲ್ಲಿರುವ ಅರಣ್ಯ ಪ್ರದೇಶ ಗಳಲ್ಲಿ ಬುಡಕಟ್ಟು ಸಮುದಾಯ ವಾದ ಮಲೆಕುಡಿಯರಿಗೆ ಮೂಲಭೂತ ಸೌಕರ್ಯ ಎಂಬುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಲೆಕುಡಿಯ ಸಮುದಾಯ ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಶತಮಾನಗಳಿಗೂ ಅಧಿಕ ಸಮಯದಿಂದ ವಾಸಿಸುತ್ತಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದಟ್ಟ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಇವರು ಈಗಲೂ ರಸ್ತೆ, ವಿದ್ಯುತ್, ಪಡಿತರ ಚೀಟಿ, ಶುದ್ಧ ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಮಲೆಕುಡಿಯ ಸಮುದಾಯದ ಮುಖಂಡರಾಗಿರುವ ಗಂಗಾಧರ ಗೌಡ ಹೇಳುವಂತೆ ಒಟ್ಟಾರೆ ಯಾಗಿ 2500 ಮಲೆಕುಡಿಯ ಕುಟುಂಬಗಳು ರಾಜ್ಯದಲ್ಲಿದ್ದು, ಇದರಲ್ಲಿ ಶೇ.90-95ರಷ್ಟು ಈಗಲೂ ಅತಂತ್ರ ಬದುಕು ಸಾಗಿಸುತಿದ್ದಾರೆ.

ರಾಜ್ಯದಲ್ಲೀಗ ಜಾತಿಗಣತಿಯಲ್ಲಿ ಪ್ರಸ್ತಾಪವಾಗಿರುವ ತಮ್ಮ ಸಂಖ್ಯೆಗಳ ಕುರಿತು ಪ್ರತಿಯೊಂದು ಸಮುದಾಯವೂ ಚರ್ಚಿಸುತ್ತಿದೆ. ಆದರೆ ಮಲೆಕುಡಿಯರಿಗೆ ತಮ್ಮ ಸಂಖ್ಯೆಯ ಲೆಕ್ಕಾಚಾರವೂ ಇದ್ದಂತಿಲ್ಲ. ಪಶ್ಚಿಮ ಘಟ್ಟದ ತಪ್ಪಲಿನ ಅರಣ್ಯದಂಚಿನಲ್ಲಿ ವಾಸವಾಗಿರುವ ಮಲೆಕುಡಿಯ ಸಮುದಾಯ ಸಂಖ್ಯೆಯಲ್ಲಿ ಜಾಸ್ತಿಯೇನಿಲ್ಲ. ಅಲ್ಲದೆ ಇವರಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಕಾಡುತ್ಪತ್ತಿ ಇವರ ಕುಲಕಸುಬು. ಕಾಡಂಚಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಇವರನ್ನು ಸರಕಾರವೂ ಮರೆತಂತಿದೆ.

ಇವರ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮಳೆಗಾಲ ಬಂತೆಂದರೆ ಆತಂಕ ಶುರುವಾಗುತ್ತದೆ. ಮಳೆಗಾಲದಲ್ಲಿ ಕತ್ತಲು ವಾಸ ತಪ್ಪಿದ್ದಲ್ಲ. ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಎರಡು ಕುಟುಂಬಳಿಗೆ, ಈದು ಗ್ರಾಮ ಪಂಚಾಯಿತಿಯ ಕನ್ಯಾಲು ಮಲೆಕುಡಿಯ ಹಾಡಿಯಲ್ಲಿ 11 ಕುಟುಂಬಗಳಿಗೆ, ಹೆಬ್ರಿ ತಾಲೂಕಿನ ವರಂಗ ಪಂಚಾಯಿತಿ ವ್ಯಾಪ್ತಿಯ ಮೊರಂಟೆಬೈಲಿನ ಮೂರು ಕುಟುಂಬಗಳಿಗೆ, ಪೀತು ಬೈಲು, ತಿಂಗಳಮಕ್ಕಿಯ ತಲಾ ಮೂರು ಕುಟುಂಬಳಿಗೆ ಹಾಗೂ ತೆಂಗುಮಾರಿನ ಒಂದು ಕುಟುಂಬಕ್ಕೆ ಇನ್ನೂ ವಿದ್ಯುತ್ ಸಂಪರ್ಕ ಲಭಿಸಿಲ್ಲ.

ವರಂಗ ಪಂಚಾಯಿತಿ ವ್ಯಾಪ್ತಿಯ ಮೊರಂಟೆಬೈಲಿನಲ್ಲಿ ವಾಸವಿರುವ ಮೂರು ಮಲೆಕುಡಿಯ ಕುಟುಂಬ ಗಳು ತೀರಾ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿವೆ. ಅವರ ಮನೆಗಳು ಇರುವಲ್ಲಿಗೆ ಕಚ್ಚಾ ರಸ್ತೆ ಕೂಡ ಇಲ್ಲ. ದಟ್ಟಾರಣ್ಯದ ಕಾಲು ದಾರಿಯಲ್ಲೇ ಸಾಗಬೇಕಾಗಿದೆ. ಇಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಬಡಿಗೆಗೆ ಜೋಲಿ ಕಟ್ಟಿ ಕಾಡುದಾರಿಯಲ್ಲಿ ಹೊತ್ತೊಯ್ಯ ಬೇಕು. ಮಕ್ಕಳ ಶಾಲೆ ಮೂರು ಕಿ.ಮೀ. ದೂರದಲ್ಲಿದ್ದು ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕರೆದೊಯ್ಯಬೇಕು. ಕಾಡುಪ್ರಾಣಿಗಳ ಹಾವಳಿಯೂ ಈ ಭಾಗದಲ್ಲಿ ಹೆಚ್ಚು.

ಒಂದು ರೀತಿ ಮುಖ್ಯವಾಹಿನಿಯಿಂದ ದೂರದಲ್ಲಿ ವಾಸಿಸುತ್ತಿರುವ ಈ ಸಮುದಾಯ ಹಲವು ಬಾರಿ ಮೂಲ ಭೂತ ಸೌಕರ್ಯಗಳಿಗಾಗಿ ಮನವಿ ಸಲ್ಲಿಸಿವೆ. ಸ್ಥಳೀಯಾಡಳಿತದಿಂದ ಹಿಡಿದು ಮುಖ್ಯಮಂತ್ರಿಗಳ ತನಕ ಮನವಿ ಪತ್ರ ಸಲ್ಲಿಸಿದ್ದಾಗಿದೆ. ಆದರೂ ನಮ್ಮ ಬೇಡಿಕೆ ಈಡೇರಿಲ್ಲ ಅನ್ನುತ್ತಾರೆ ಗಂಗಾಧರ ಗೌಡ.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಆದಿವಾಸಿಗಳ ಸಹಿತವಾಗಿ ಮಲೆಕುಡಿಯ ಕುಟುಂಬಗಳು ಶತಮಾನ ಗಳಿಂದ ವಾಸಿಸುತ್ತಿವೆ. ಆದರೆ ಈ ಕುಟುಂಬಗಳು ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿವೆ. ನಾವು ಹಲವು ಬಾರಿ, ಹಲವು ಆಯಾಮಗಳಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ.ಆದರೆ ಯಾವುದೇ ನಿರೀಕ್ಷಿತ ಫಲ ನೀಡಿಲ್ಲ ಎನ್ನುತ್ತಾರೆ ಅವರು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅರಣ್ಯ, ಪುಷ್ಪಗಿರಿ ವನ್ಯಧಾಮ, ಮೀಸಲು ಅರಣ್ಯ ಪ್ರದೇಶಗಳಲ್ಲಿರುವ ಮಲೆಕುಡಿಯರ ಕುರಿತಂತೆ ಸರಕಾರ ಒಂದು ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡು ಆ ಪ್ರದೇಶದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು. ಆ ಸ್ಥಳದ ಕುಟುಂಬಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸೂಚನೆ ನೀಡಬೇಕು ಎಂದು ಗಂಗಾಧರ ಗೌಡ ಒತ್ತಾಯಿಸಿದರು.

ಮಲೆಕುಡಿಯ ಸಮುದಾಯ ಕಷ್ಟದ ಬದುಕು ಸಾಗಿಸುತ್ತಿದೆ. ಇವರಿಗೆ ಮೂಲಭೂತ ಸೌಕರ್ಯದೊಂದಿಗೆ ಉದ್ಯೋಗದ ಸಮಸ್ಯೆ ಬಗ್ಗೆಯೂ ಸರಕಾರ ಗಮನ ಹರಿಸಬೇಕಾಗಿದೆ. ಅರಣ್ಯ ಇಲಾಖೆಯಲ್ಲಿ ಅರಣ್ಯ ಬುಡುಕಟ್ಟು ಮೀಸಲಾತಿ ಎಂಬುದಿದ್ದು, ಇದರಲ್ಲಿ ಶೇ.50ರಷ್ಟು ಮಲೆಕುಡಿಯರಿಗೆ ಮೀಸಲಾಗಿದೆ. ಇದನ್ನು ಅವರಿಗೆ ನೀಡಬೇಕು. ಅಲ್ಲದೇ ಕಂದಾಯ, ಆರೋಗ್ಯ, ಐಟಿಡಿಪಿ ಸೇರಿದಂತೆ ವಿವಿಧ ಇಲಾಖೆಗಳಲ್ಲೂ ಅರಣ್ಯ ಬುಡಕಟ್ಟು ಮೀಸಲಾತಿಯನ್ನು ನಮಗೆ ನೀಡಬೇಕು ಎಂದವರು ಸರಕಾರವನ್ನು ಒತ್ತಾಯಿಸಿದರು.

ಕುದುರೆಮುಖ ರಾ.ಉದ್ಯಾನವನದಲ್ಲಿರುವ ಮಲೆಕುಡಿಯರು ಸ್ವಇಚ್ಛೆಯಿಂದ ಹೊರಹೋಗಲು ಅರಣ್ಯ ಇಲಾಖೆ ನೀಡುವ ಪ್ಯಾಕೇಜ್ ಸಾಕಾಗುವುದಿಲ್ಲ. ಹೊಸ ಪ್ಯಾಕೇಜ್‌ನ್ನು ಸರಕಾರ ಘೋಷಿಸಬೇಕು. ಇದರೊಂದಿಗೆ ಅರ್ಜಿ ವಿಲೇವಾರಿಯ ಸರಳೀಕರಣವನ್ನೂ ಸರಕಾರ ಮಾಡಬೇಕು ಎಂದು ಗಂಗಾಧರ ಗೌಡ ಸಲಹೆ ನೀಡಿದರು.







 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News