×
Ad

ಮೊಬೈಲ್ ಎಂಬ ವ್ಯಸನದಿಂದ ದೂರವಿರಿ: ಡಾ.ಪಿ.ವಿ.ಭಂಡಾರಿ

Update: 2025-08-01 20:51 IST

ಉಡುಪಿ, ಆ.1: ಜನತೆ, ಅದರಲ್ಲೂ ವಿಶೇಷವಾಗಿ ಯುವ ಜನತೆ ಮಾದಕ ಔಷಧ, ಅಮಲು ನೀಡುವ ಡ್ರಗ್ಸ್, ಮದ್ಯಪಾನ, ತಂಬಾಕು ಉತ್ಪನ್ನಗಳ ಸೇವನೆಯಂಥ ದುಶ್ಚಟಗಳಿಂದ ದೂರವಿರುವ ಜೊತೆಗೆ ಮೊಬೈಲ್ ಎಂಬ ವ್ಯಸನದಿಂದಲೂ ದೂರವಿರುವಂತೆ ಖ್ಯಾತ ಮನೋವೈದ್ಯ, ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ.ಭಂಡಾರಿ ಹೇಳಿದ್ದಾರೆ.

ನಗರದ ಅಜ್ಜರಕಾಡಿನಲ್ಲಿರುವ ಐ.ಎಂ.ಎ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ ಕರಾವಳಿ, ವಿದ್ಯಾರತ್ನ ನರ್ಸಿಂಗ್ ಕಾಲೇಜು ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ನಡೆದ ವ್ಯಸನ ಮುಕ್ತ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.

ಒಮ್ಮೆ ದುಶ್ಚಟದ ಚಕ್ರವ್ಯೆಹದಲ್ಲಿ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟ. ಅನೇಕ ಜನರು ದುಶ್ಚಟ ಗಳಿಂದಲೇ ತಮ್ಮ ಪ್ರಾಣಗಳನ್ನು ಕಳೆದು ಕೊಂಡರೆ, ಅನೇಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾರೆ. ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಒಬ್ಬರಿಂದ ಸಮಾಜ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಆಧುನಿಕ ಯುಗದಲ್ಲಿ ಮೊಬೈಲ್‌ನ ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್‌ಗಳನ್ನು ನಿರಂತರವಾಗಿ ನೋಡುವುದು ಸಹ ಒಂದು ವ್ಯಸನವಾಗಿದೆ. ಇದರಿಂದ ದೂರವಿರಬೇಕು. ಅಗತ್ಯಕ್ಕೆ ಎಷ್ಟು ಬೇಕೊ ಅಷ್ಟೇ ಮೊಬೈಲ್ ಬಳಕೆ ಮಾಡಬೇಕು. ಅಲ್ಲದೇ ಅವುಗಳಲ್ಲಿ ಹಾಕುವ ಮಾಹಿತಿಗಳು ಸಹ ಬಹುತೇಕ ಸುಳ್ಳು ಗಳಿಂದ ಕೂಡಿರುತ್ತವೆ. ಆದ್ದರಿಂದ ಅವುಗಳಿಗೆ ಮಾರು ಹೋಗಬಾರದು ಎಂದು ಅವರು ಕಿವಿಮಾತು ಹೇಳಿದರು.

ದೇಹಕ್ಕೆ ಹಾನಿಕರವಾಗುವ ಮದ್ಯಪಾನ, ತಂಬಾಕು ಉತ್ಪನ್ನಗಳು, ಅಮಲು ಬರುವಂತಹ ಡ್ರಗ್ಸ್ ಸೇರಿ ದಂತೆ ಯಾವುದೇ ದುಶ್ಚಟದಿಂದ ದೂರವಿರಬೇಕು. ಆರೋಗ್ಯವಂತರು ಎಂದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವುದು. ಇದನ್ನು ಹೊಂದಲು ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಖ್ಯಾತ ಮೂಳೆರೋಗ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ ಕರಾವಳಿ ಅಧ್ಯಕ್ಷ ಡಾ.ಕೆ ಸುರೇಶ್ ಶೆಣೈ ಮಾತನಾಡಿ ಜನಸಾಮಾನ್ಯರು ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಿ, ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಕಳೆದ 70ನೇ ದಶಕದಲ್ಲಿ ಜೋಳಿಗೆ ಅಭಿಯಾನದ ಮೂಲಕ ಜನರಲ್ಲಿದ್ದ ದುಶ್ಚಟಗಳನ್ನು ಭಿಕ್ಷೆಯ ರೀತಿಯಲ್ಲಿ ಜೋಳಿಗೆಗೆ ಹಾಕಿಸಿಕೊಂಡು ಅವರ ಮನಃಪರಿರ್ತಿಸಿ, ಪ್ರತಿಜ್ಞೆ ಪಡೆದು ದುಶ್ಚಟಗಳಿಂದ ದೂರ ಉಳಿಯುವಂತೆ ಮಾಡಿ, ವ್ಯಸನಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯ ಜೀವನ ಮಾಡುವ ಸಮಾಜಮುಖಿ ಕಾರ್ಯವನ್ನು ಮಾಡಿದ್ದರು ಎಂಬುದನ್ನು ವಿವರಿಸಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ಸಮಾಜದ ಜನರಲ್ಲಿದ್ದ ವ್ಯಸನ, ದುಶ್ಚಟಗಳನ್ನು ದೂರ ಮಾಡಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮಾಡಿದ ಕೆಲಸವನ್ನು ತಿಳಿಸಿ, ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಬಂದಂತಹ ಸಂದರ್ಭದಲ್ಲಿ ನೂರಾರು ಗಂಜಿಕೇಂದ್ರಗಳನ್ನು ತೆರೆದಿರುವುದನ್ನು, ಅವರ ವಿವಿಧ ಸಮಾಜಮುಖಿ ಕಾರ್ಯಗಳನ್ನು ವಿವರಿಸಿದರು.

ವಿದ್ಯಾರತ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ಸಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ಸಿಟಿ ಎಜುಕೇಷನ್ ಟ್ರಸ್ಟ್‌ನ ಆಡಳಿತ ಅಧಿಕಾರಿ ರವಿಪಾಲನ್, ವಿದ್ಯಾರತ್ನ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಕೆ ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾಲೇಜಿನ ಸಹಾಯಕ ಉಪನ್ಯಾಸಕಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರೆ, ರಂಜಿತಾ ವಂದಿಸಿದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News