ಭಟ್ಕಳ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಬಿತಾ ಪ್ರಶಸ್ತಿ ಪ್ರದಾನ

Update: 2026-08-10 19:31 IST

ಭಟ್ಕಳ: ರಾಬಿತಾ ಸೊಸೈಟಿ ಭಟ್ಕಳದ ವತಿಯಿಂದ 2026ನೇ ಸಾಲಿನ ರಾಬಿತಾ ಪ್ರಶಸ್ತಿ ಪ್ರದಾನ ಸಮಾರಂಭವು ಇಲ್ಲಿನ ಇಸ್ಲಾಮಿಯಾ ಆಂಗ್ಲೋ ಉರ್ದು ಹೈಸ್ಕೂಲ್‌ನ ಅಂಜುಮನ್ ಮೈದಾನದಲ್ಲಿ ರವಿವಾರ ಸಂಜೆ ನಡೆಯಿತು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉಸ್ಮಾನ್ ಹಸನ್ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿಯನ್ನು ನವಯತ್ ಕಾಲೋನಿಯ ಅಂಜುಮನ್ ಗರ್ಲ್ಸ್ ಹೈಸ್ಕೂಲ್ ಪಡೆದುಕೊಂಡರೆ, ಎಸ್.ಎಂ. ಸೈಯದ್ ಖಲೀಲುರ್ರಹ್ಮಾನ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಅಂಜುಮನ್‌ನಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆಯಿಷಾ ಮರ್ಫುವಾ ಸಿದ್ದಿಬಾಪಾ ಅವರಿಗೆ ನೀಡಲಾಯಿತು.

ಮುಖ್ಯ ಅತಿಥಿ ಹಾಗೂ ಶಿಕ್ಷಣ ತಜ್ಞ, ನಾಗರಿಕ ಸೇವಾ ಪರೀಕ್ಷಾ ಅಭ್ಯರ್ಥಿಗಳ ಮಾರ್ಗದರ್ಶಕ ಸಮೀರ್ ಅಹ್ಮದ್ ಸಿದ್ದೀಕಿ ಮಾತನಾಡಿ, ಕೃತಕ ಬುದ್ಧಿಮತ್ತೆ (ಎಐ) ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ ಎಂದರು. ಇಂದಿನ ವಿದ್ಯಾರ್ಥಿಗಳು ಉದ್ಯೋಗ ಹುಡುಕುವು ದಕ್ಕಿಂತ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸೃಜನಶೀಲತೆ, ಸಂಶೋಧನಾ ಮನೋಭಾವ, ಪ್ರಾಯೋಗಿಕ ಜ್ಞಾನ ಹಾಗೂ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಎಐ ಮೇಲೆ ಅತಿಯಾದ ಅವಲಂಬನೆ ಬೆಳೆಸಿಕೊಳ್ಳದೆ, ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತಿಸುವುದು, ಪ್ರಶ್ನಿಸುವುದು ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಭಟ್ಕಳದಲ್ಲಿ ಧಾರ್ಮಿಕ ಹಾಗೂ ಆಧುನಿಕ ಶಿಕ್ಷಣದ ಅಭಿವೃದ್ಧಿಗೆ ನಡೆಯುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಇಂತಹ ಚಟುವಟಿಕೆಗಳು ದೇಶದ ಇತರ ಭಾಗಗಳಿಗೂ ವಿಸ್ತರಿಸಬೇಕು ಎಂದರು.

ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಡಾ. ಅತೀಕುರ್ರಹ್ಮಾನ್ ಮುನೀರಿ ಸಂಸ್ಥೆಯ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ವಿವರಿಸಿ, ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಪ್ರಶಸ್ತಿಯು ಸಾಧನೆಯ ಅಂತ್ಯವಲ್ಲ, ಸಮಾಜದ ಒಳಿತಿಗಾಗಿ ತಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಬಳಸುವ ಹೆಚ್ಚಿನ ಜವಾಬ್ದಾರಿಯ ಆರಂಭವಾಗಿದೆ ಎಂದರು.

ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಕಾಜಿ ಮೌಲಾನಾ ಅಬ್ದುಲ್ ರಬ್ ನದ್ವಿ ಶಿಕ್ಷಣದ ಜತೆಗೆ ಉತ್ತಮ ಗುಣನಡತೆ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಖಲೀಫಾ ಜಮಾಅತ್ ಕಾಜಿ ಮೌಲಾನಾ ಖ್ವಾಜಾ ಮೊಯಿನುದ್ದೀನ್ ಮದನಿ ಪರಿಶ್ರಮ ಮತ್ತು ನಿರಂತರ ಪ್ರಯತ್ನಕ್ಕೆ ಒತ್ತು ನೀಡಿದರು. ರಾಬಿತಾ ಸೊಸೈಟಿ ಅಧ್ಯಕ್ಷ ಮುಹಮ್ಮದ್ ಫಾರೂಕ್ ಮುಸ್ಬ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಸಂಚಾಲಕ ಅಬ್ದುಲ್ ಸಲಾಂ ದಾಮ್ದಾ ಅಬು, ಅತ್ಯುತ್ತಮ ಶಾಲೆ ಹಾಗೂ ಶಿಕ್ಷಕ ಪ್ರಶಸ್ತಿಗಳನ್ನು ಘೋಷಿಸಿದರು.

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಅಧ್ಯಕ್ಷ ಯೂನಸ್ ಕಾಜಿಯಾ, ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ , ರಾಬಿತಾ ಸೊಸೈಟಿ ಖಜಾಂಚಿ ಮೌಲಾನಾ ಸಾಬಿರ್ ಅಲಿ ಅಕ್ಬರಾ ನದ್ವಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.



 


 


 


 


 


 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News