×
Ad

ಗೋಕರ್ಣ: ದುಬ್ಬನಸಶಿಯಲ್ಲಿ ಅನಧಿಕೃತ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ; ಬಿಗಿ ಪೊಲೀಸ್ ಬಂದೋಬಸ್ತ್

24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ

Update: 2026-03-09 13:55 IST

ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದ್ದ ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತವು ದಿಟ್ಟ ಕ್ರಮಕ್ಕೆ ಮುಂದಾಗಿದೆ.

ಅರಬ್ಬಿ ಸಮುದ್ರ ತೀರದ ದುಬ್ಬನಸಶಿ ಮತ್ತು ನಡುಮಸ್ಕೇರಿ ಭಾಗಗಳಲ್ಲಿ ಕಾನೂನುಬಾಹಿರವಾಗಿ ತಲೆಎತ್ತಿದ್ದ ಒಟ್ಟು 44 ರೆಸಾರ್ಟ್‌ಗಳನ್ನು ತೆರವುಗೊಳಿಸುವಂತೆ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ. ಈ ಪೈಕಿ 16 ರೆಸಾರ್ಟ್ ಮಾಲೀಕರು ಈಗಾಗಲೇ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವ ಕಾರಣ ಅವುಗಳ ತೆರವು ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಉಳಿದ 28 ರೆಸಾರ್ಟ್‌ಗಳಲ್ಲಿ 7 ರೆಸಾರ್ಟ್‌ಗಳನ್ನು ಮಾಲೀಕರು ಸ್ವಯಂಪ್ರೇರಿತರಾಗಿ ತೆರವುಗೊಳಿಸುತ್ತಿದ್ದರೆ, ಬಾಕಿ ಇರುವ 21 ರೆಸಾರ್ಟ್‌ಗಳನ್ನು ತಾಲೂಕು ಆಡಳಿತವೇ ಸೀಜ್ ಮಾಡಿ ನಿಯಮಾನುಸಾರ ನೆಲಸಮಗೊಳಿಸಲಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಈ ಬೃಹತ್ ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದುಬ್ಬನಸಶಿ, ಗಂಗೆಕೊಳ್ಳ ಹಾಗೂ ಭಾವಿಕೊಡ್ಲ ಗ್ರಾಮಗಳಲ್ಲಿ ಮಾರ್ಚ್ 9ರ ಬೆಳಿಗ್ಗೆಯಿಂದ 24 ಗಂಟೆಗಳ ಕಾಲ ಬಿಎನ್ಎಸ್ 163 (BNS 163) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಸಹಾಯಕ ಆಯುಕ್ತ ಶ್ರವಣಕುಮಾರ್ ಆದೇಶಿಸಿದ್ದಾರೆ.

ಒಂದೆಡೆ ಆಡಳಿತ ಮಂಡಳಿ ತೆರವು ಕಾರ್ಯಾಚರಣೆಗೆ ಸಜ್ಜಾಗಿದ್ದರೆ, ಇನ್ನೊಂದೆಡೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತಮ್ಮ ಜೀವನೋಪಾಯಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ರೆಸಾರ್ಟ್ ಮಾಲೀಕರು ಮತ್ತು ಕಾರ್ಮಿಕರು ದುಬ್ಬನಸಶಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಅವರು, ರೆಸಾರ್ಟ್ ತೆರವುಗೊಳಿಸಲು ಬಿಡುವುದಿಲ್ಲ ಎಂದು ಘೋಷಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಇದರಿಂದಾಗಿ ಗೋಕರ್ಣದ ಕರಾವಳಿ ತೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News