×
Ad

ಕಾರವಾರ | ಸಚಿವ ಮಂಕಾಳ ವೈದ್ಯ ವಿರುದ್ಧ ಸತೀಶ್ ಸೈಲ್ ಆಕ್ರೋಶ: ಕೆಡಿಪಿ ಸಭೆಯಿಂದ ಹೊರನಡೆದ ಶಾಸಕ

Update: 2026-03-02 14:51 IST

ಕಾರವಾರ: ನಗರದ ಜಿಪಂ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ(ಕೆಡಿಪಿ)ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮತ್ತು ಸ್ವಪಕ್ಷೀಯ ಶಾಸಕ ಸತೀಶ್ ಸೈಲ್ ಮಧ್ಯೆ ಭಿನ್ನಾಭಿಪ್ರಾಯ, ಆರೋಗ್ಯ ಇಲಾಖೆಯ ಚರ್ಚೆಯ ಸಂದರ್ಭದ ಔಷಧಿ ಕೊರತೆಯ ವಿಷಯ ವಿಕೋಪಕ್ಕೆ ತಿರುಗಿ ಶಾಸಕರು ಸಭೆಯಿಂದ ಹೊರನಡೆದ ಘಟನೆ ನಡೆಯಿತು.

ಸಭೆಯಲ್ಲಿ ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಕೆಲವು ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇದೆ ಎಂದು ಶಾಸಕ ಸತೀಶ್ ಸೈಲ್ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಡಿಎಚ್ಒ ಶಂಕರ ರಾವ್ ಸ್ಪಷ್ಟನೆ ನೀಡಲು ಮುಂದಾಗಿ, ಕೆಲವು ಕಡೆ ವೈದ್ಯರ ಕೊರತೆ ಇರಬಹುದು ಆದರೆ ಔಷಧಿಗಳ ಲಭ್ಯತೆ ಇದೆ ಎಂದು ಉತ್ತರಿಸಿದರು. ಇದನ್ನು ಬೆಂಬಲಿಸಿದ ಸಚಿವ ಮಂಕಾಳ ವೈದ್ಯ, ಜಿಲ್ಲೆಯಲ್ಲಿ ಔಷಧಿ ಕೊರತೆ ಇಲ್ಲ ಎಂದು ಪ್ರತಿಪಾದಿಸಿದರು. ಈ ಸಮರ್ಥನೆಯಿಂದ ಸಮಾಧಾನಗೊಳ್ಳದ ಶಾಸಕ ಸೈಲ್, ವಾಸ್ತವದಲ್ಲಿ ಔಷಧಿ ಕೊರತೆ ಇದೆ ಎಂದು ಏರಿದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಶಾಸಕರ ವರ್ತನೆಯಿಂದ ಆಕ್ರೋಶಗೊಂಡ ಸಚಿವರು, ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ, ಸುಮ್ಮನೆ ಕುಳಿತುಕೊಳ್ಳಿ ಎಂದು ಗದರಿಸಿದರು. ಇದರಿಂದ ಸಿಡಿಮಿಡಿಗೊಂಡ ಸತೀಶ್ ಸೈಲ್, "ನಾನು ಅಂಗೂಟಾ ಚಾಪ್ (ಅನಕ್ಷರಸ್ಥ) ಅಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರನಡೆದರು.

ಆರೋಗ್ಯ ಇಲಾಖೆಯ ವಿಷಯಕ್ಕೂ ಮುನ್ನ, ಸಾರಿಗೆ ಬಸ್ಗಳ ಕೊರತೆ ಮತ್ತು ಹಳೆಯ ವಿದ್ಯುತ್ ತಂತಿಗಳ ಬದಲಾವಣೆ ಕುರಿತಾದ ಚರ್ಚೆಯಲ್ಲೂ ಸಚಿವರು ಮತ್ತು ಶಾಸಕರ ನಡುವೆ ಅಭಿಪ್ರಾಯ ಭೇದಗಳು ಎದ್ದುಕಂಡಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News