ವಿಜಯಪುರ | ಮಹಾ ಮಳೆಗೆ ತತ್ತರಿಸಿದ ಜನರು; ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪರ್ಕ ಕಡಿತ
ವಿಜಯಪುರ : ಮಹಾ ಮಳೆಗೆ ಭೀಮಾ ನದಿ ಅರ್ಭಟ ಮುಂದುವರೆದಿದೆ. ಮಹಾರಾಷ್ಟ್ರದ ಉಜನಿ, ಸಿನಾ, ವೀರ ಜಲಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಿಡಲಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ-ಕರ್ನಾಟಕ ನದಿಪಾತ್ರದ ಗ್ರಾಮಗಳ ಜನರಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಸಂದಿಸುವ ದಕ್ಷಿಣ ಸೋಲಾಪುರ ತಾಲೂಕಿನ ವಡಕಬಳಿ ಮಧ್ಯದ ಸಿನಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ನೀರು ರಾಷ್ಟ್ರೀಯ ರಸ್ತೆ ಜಲಾವೃತಗೊಂಡು, ಕರ್ನಾಟಕ-ಮಹಾರಾಷ್ಟ್ರ ಸಂಪರ್ಕ ಕಡಿತಗೊಂಡಿದೆ.
2.50 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬಿಡುಗಡೆ:
ಸಿನಾ, ಉಜನಿ, ವೀರ ಜಲಾಶಯದಿಂದ ಭೀಮಾನದಿಗೆ ಮಂಗಳವಾರ 2.50 ಲಕ್ಷ ಕ್ಯುಸೆಕ್ ಅಧಿಕ ನೀರು ಹರಿಬಿಡಲಾಗಿದೆ. ಸಿನಾ ಮಹಾನೀರಿಗೆ ಮಹಾರಾಷ್ಟ್ರದ ಅನೇಕ ಗ್ರಾಮಗಳು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದೆ. ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜ್ನಿಂದ ಕೆಲಗಡೆಯ ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಆಂತಕ ಕಾಡುತ್ತಿದೆ.
ಬೆಳೆ ಹಾನಿ:
ಭೀಮಾ ಪ್ರವಾಹದಿಂದ ಎರಡು ರಾಜ್ಯದ ನದಿ ತೀರದ ಕಬ್ಬು, ತೊಗರಿ, ಹತ್ತಿ, ಬಾಳೆ, ಸೇರಿದಂತೆ ವಿವಿಧ ಬೆಳೆಹಾನಿಯಾಗಿವೆ. ಮತಕ್ಷೇತ್ರ ಶಾಸಕರು ಹಾಗೂ ಅಧಿಕಾರಿಗಳು ಭೇಟಿ ಪರೀಶೀಲನೆ ನಡೆಸಿದ್ದಾರೆ.
ಸಂಪರ್ಕ ಕಡಿತ:
ದಕ್ಷಿಣ ಸೋಲಾಪುರ ತಾಲೂಕಿನ ವಡಕಬಳಿ, ಹತ್ತೂರ ಸೇತುವೆ ಬಳಿ ಸಿನಾನದಿ ಹರಿವು ಹೆಚ್ಚಿದ್ದು, ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ನುಗ್ಗಿ ಹಿನ್ನೆಲೆ ಕರ್ನಾಟಕ-ಮಹಾರಾಷ್ಟ ರಾಷ್ಟ್ರೀಯ ಹೆದ್ದಾರಿ ನಡುವಿನ ಸಂಪರ್ಕ ಕಡಿತಗೊಂಡಿದೆ. ರಸ್ತೆ ಉದ್ದಕ್ಕೂ ವಾಹನಗಳು ನಿಂತು ಬಿಟ್ಟಿವೆ.
ಪ್ರಯಾಣಿಕರ ಪರದಾಟ:
ಬುಧವಾರ ಬೆಳ್ಳಿಗೆಯಿಂದ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸಂಪೂರ್ಣ ಬಂದಾಗಿದೆ. ಹೀಗಾಗಿ ಸಾರಿಗೆ ಬಸ್ ರಾಜ್ಯದ ಗಡಿಯವರಗೆ ಮಾತ್ರ ಸಂಚಾರಿಸಲು ಅವಕಾಶವಿದೆ. ರಾಜ್ಯದ ಒಳಗೆ ಮತ್ತು ಹೊರ ಸಂಚರಿಸುವ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗುರುವಾರ ನೀರಿನ ಹರಿಯುವ ಮಟ್ಟ ಕಡಿಮೆಯಾಗುವ ಸಂಭವಿದೆ.