ಚಡಚಣ | ಜಾನುವಾರುಗಳ ಮೇಲೆ ದಾಳಿ; ಚಿರತೆ ಸೆರೆ ಹಿಡಿಯಲು ಗ್ರಾಮಸ್ಥರ ಒತ್ತಾಯ
ಚಡಚಣ : ಪದೇ ಪದೇ ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ತದ್ದೇವಾಡಿ ಗ್ರಾಮದ ಜನರಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದ್ದು, ರವಿವಾರ ಚಿರತೆ ದಾಳಿಯಿಂದ ಮತ್ತೊಂದು ಜಾನುವಾರು ಮೃತಪಟ್ಟಿರುವ ಘಟನೆ ನಡೆದಿದೆ.
ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ʼಸಾಕು ಪ್ರಾಣಿಗಳ ಮೇಲೆ ದಾಳಿಯಿಂದ ಜನ ಭಯಭೀತರಾಗಿದ್ದಾರೆ. ಸಾಕಷ್ಟು ಬಾರಿ ಅಧಿಕಾರ ಗಮನಕ್ಕೆ ತರಲಾಗಿದೆ. ಇಲ್ಲಿಯವರಗೆ ಚಿರತೆ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಮುಂದಾಗಬೇಕು. ಇಲ್ಲಿಯವರಗೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದೆ ಹೋರಾಟ ಮಾಡಲಾಗುವುದುʼ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.
"ಚಿರತೆ ಪತ್ತೆಗೆ ಇಲಾಖೆಯಿಂದ ತಂಡ ರಚನೆ ಮಾಡಲಾಗಿದೆ. ತದ್ದೇವಾಡಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಪತ್ತೆ ಹಚ್ಚಲು ಡ್ರೂನ್ ಕ್ಯಾಮೆರಾ ಕಾರ್ಯಾಚರಣೆ ನಡೆದಿದೆ. ಅದಷ್ಟು ಬೇಗ ಪತ್ತೆ ಹಚ್ಚಲಾಗುವುದು. ಹಾನಿಯಾದ ಜಾನುವಾರಗಳಿಗೆ ಪರಿಹಾರ ನೀಡಲಾಗುವುದು"
-ಎಸ್.ಜಿ.ಸಂಗಲಕ, ಅರಣ್ಯಾಧಿಕಾರಿ, ಇಂಡಿ