ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದೆ, ಆದರೆ ಎಸ್.ಎಂ.ಕೃಷ್ಣ ಸಿಎಂ ಆದರು : ಹುದ್ದೆ ಕೈತಪ್ಪಿದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತು
ಮಲ್ಲಿಕಾರ್ಜುನ ಖರ್ಗೆ (PTI)
ವಿಜಯಪುರ : ‘ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ, ನನ್ನ ಪ್ರಯತ್ನಗಳ ಫಲವಾಗಿ ಅಧಿಕಾರ ಪಡೆದುಕೊಂಡಿದ್ದೇನೆʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು
ರವಿವಾರ ವಿಜಯಪುರ ನಗರದ ಬಿಎಲ್ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1999ರಲ್ಲಿ ವಿಪಕ್ಷ ನಾಯಕನಾಗಿ ಹೋರಾಟ ಮಾಡಿದೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದೆ. ಆದರೆ, ನಾಲ್ಕು ತಿಂಗಳಲ್ಲಿ ಪಕ್ಷ ಸೇರಿದ ಎಸ್.ಎಂ.ಕೃಷ್ಣ ಸಿಎಂ ಆದರು. ರಾಜಕೀಯವಾಗಿ ಅವಕಾಶ ತಪ್ಪಿರುವ ಬಗ್ಗೆ ನನಗೆ ಬೇಸರವಿಲ್ಲ ಎಂದು ಅವರು ಹೇಳಿದರು.
ನಾನು ಸಣ್ಣ ಬಾಲಕನಾಗಿದ್ದಾಗ ರಝಾಕರಿಂದಾಗಿ ನನ್ನ ತಾಯಿ, ಸಹೋದರಿಯನ್ನು ಕಳೆದುಕೊಂಡೆ, ತಂದೆಯ ಆಸರೆಯಲ್ಲಿ ಬೆಳೆದೆ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹುದ್ದೆಯಿಂದ ಎಐಸಿಸಿ ಹುದ್ದೆವರೆಗೂ ಬಂದಿದ್ದೇನೆ. ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು ಮಾಡುವ ಕೆಲಸಗಳಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.