BJP ಸೋಷಿಯಲ್ ಮೀಡಿಯಾ ಮುಖ್ಯಸ್ಥ ಹುದ್ದೆಯಿಂದ ಅಮಿತ್ ಮಾಳವೀಯ ಔಟ್: ಅವರ ಜಾಗಕ್ಕೆ ಬರಲಿರುವ ದೀಪಕ್ ಮ್ಹಸ್ಕೆ ಯಾರು?

Update: 2026-08-18 22:30 IST

 ದೀಪಕ್ ಮ್ಹಸ್ಕೆ  | Photo Credit : firstpost.com

ಹಳೆಯದಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ. BJP ಸೋಮವಾರ (ಆಗಸ್ಟ್ 17) ತನ್ನ ಸಂಘಟನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಕಳೆದ 11 ವರ್ಷಗಳಿಂದ BJP ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರ ಜಾಗಕ್ಕೆ ದೀಪಕ್ ಮ್ಹಸ್ಕೆ ಅವರನ್ನು ನೂತನ ರಾಷ್ಟ್ರೀಯ ಸೋಷಿಯಲ್ ಮೀಡಿಯಾ ಸಂಚಾಲಕರನ್ನಾಗಿ ನೇಮಿಸಿರುವುದು ಈ ಬದಲಾವಣೆಗಳಲ್ಲಿ ಅತಿ ದೊಡ್ಡದಾಗಿದೆ.

ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಮಾಳವೀಯ ಅವರು ಮ್ಹಸ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ಅವರ ನೇತೃತ್ವದಲ್ಲಿ ತಂಡವು ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ. "ನನ್ನ ನಂತರ BJPಯ ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಶ್ರೀ ದೀಪಕ್ ಮ್ಹಸ್ಕೆ ಜಿ ಹಾಗೂ ಸಹ ಸಂಚಾಲಕರಾದ ಶ್ರೀಮತಿ ಪ್ರೀತಿ ಗಾಂಧಿ ಜಿ, ಶ್ರೀ ಶಿವಾನಂದ ದ್ವಿವೇದಿ ಜಿ, ಶ್ರೀ ಅಲೋಕ್ ಭಟ್ ಜಿ ಮತ್ತು ಶ್ರೀ ಅರುಣ್ ಯಾದವ್ ಜಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ಕಳೆದ ಒಂದು ದಶಕದಲ್ಲಿ ಇವರೆಲ್ಲರೊಂದಿಗೆ ನಿಕಟವಾಗಿ ಕೆಲಸ ಮಾಡುವ ಭಾಗ್ಯ ನನಗಿತ್ತು. ಅವರ ನೇತೃತ್ವದಲ್ಲಿ BJPಯ ಡಿಜಿಟಲ್ ಸಂವಹನವು ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿದೆ ಹಾಗೂ ಸ್ಪಷ್ಟತೆ ಮತ್ತು ಸೃಜನಶೀಲತೆಯಿಂದ ದೇಶದ ಸಾರ್ವಜನಿಕ ಚರ್ಚೆಗಳನ್ನು ರೂಪಿಸುವುದನ್ನು ಮುಂದುವರಿಸಲಿದೆ ಎಂಬ ಭರವಸೆ ನನಗಿದೆ" ಎಂದು ಮಾಳವೀಯ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

ಮಾಳವೀಯ ಅವರ ಜಾಗಕ್ಕೆ ಮ್ಹಸ್ಕೆ ಅವರನ್ನು ತಂದಿರುವುದು ತೀವ್ರ ಕುತೂಹಲ ಮೂಡಿಸಿದೆ. ಏಕೆಂದರೆ ಇಲ್ಲಿಯವರೆಗೆ ಹೊರಗಿನವರಿಗೆ ಇವರ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅಷ್ಟೇ ಅಲ್ಲದೆ, ಸೋಮವಾರ (ಆಗಸ್ಟ್ 17) ನೀಡಲಾದ ಈ ಹೊಸ ಜವಾಬ್ದಾರಿಯ ಮಾಹಿತಿಯನ್ನು ಹೊರತುಪಡಿಸಿ, ಅವರ ಎಕ್ಸ್ ಖಾತೆಯಲ್ಲಿ ಬೇರೆ ಯಾವುದೇ ವಿವರಗಳು ಲಭ್ಯವಿಲ್ಲ.

►ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ

ಅಮಿತ್ ಮಾಳವೀಯ ಅವರ ಜಾಗಕ್ಕೆ BJPಯ ಹೊಸ ಸೋಷಿಯಲ್ ಮೀಡಿಯಾ ಉಸ್ತುವಾರಿಯಾಗಿ ನೇಮಕಗೊಂಡಿರುವ ದೀಪಕ್ ಮ್ಹಸ್ಕೆ ವಿಭಿನ್ನ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 1968ರಲ್ಲಿ ರಾಯ್ಪುರದಲ್ಲಿ ಜನಿಸಿದ ಮ್ಹಸ್ಕೆ ಅವರ ವೃತ್ತಿಜೀವನವು ಸಾಕಷ್ಟು ಕುತೂಹಲಕಾರಿಯಾಗಿದೆ. ಸಿಮೆಂಟ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಸರ್ಟಿಫಿಕೇಟ್ ಕೋರ್ಸ್ ಜೊತೆಗೆ ಅವರು ಕೆಮಿಸ್ಟ್ರಿಯಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ.

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ಗೆ (EIL) ಸಲ್ಲಿಸಲಾದ ಅವರ ವಿವರಗಳ ಪ್ರಕಾರ, ಅವರು ಕಾಲೇಜು ಕೆಮಿಸ್ಟ್ರಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಅವರು, ತೋಟಗಾರಿಕೆ ಮತ್ತು ಸಾವಯವ ಕೃಷಿಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಅವರು ರಸ್ತೆ ನಿರ್ಮಾಣ ಕ್ಷೇತ್ರದಲ್ಲೂ ಸ್ವಲ್ಪ ಕಾಲ ಕೆಲಸ ಮಾಡಿದ್ದರು.

ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆಯಲ್ಲಿ, ವಿಶೇಷವಾಗಿ ಚುನಾವಣಾ ಡೇಟಾ ಮತ್ತು ಸರಕಾರದ ಫಲಾನುಭವಿ ಯೋಜನೆಗಳ ಅಧ್ಯಯನದಲ್ಲಿ ಮ್ಹಸ್ಕೆ ಅವರಿಗೆ ವಿಶೇಷ ಆಸಕ್ತಿಯಿದೆ ಎಂದು ಹೇಳಲಾಗುತ್ತದೆ. ಅವರು ಸಿದ್ಧಪಡಿಸಿದ ವರದಿಗಳನ್ನು ಖಾಸಗಿ ಮತ್ತು ಸರಕಾರಿ ಸಂಸ್ಥೆಗಳು ಬಳಸಿಕೊಂಡಿವೆ ಎಂದು EIL ಪ್ರೊಫೈಲ್ ಉಲ್ಲೇಖಿಸಿದೆ.

ಮ್ಹಸ್ಕೆ 2009ರಲ್ಲಿ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಜನಸಂಘ ಮತ್ತು RSSನೊಂದಿಗೆ ಸಂಪರ್ಕ ಹೊಂದಿದ್ದ ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರಿಗೆ BJP ಆಯ್ಕೆ ಸಹಜವಾಗಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಅವರು ಛತ್ತೀಸ್ಗಢ BJPಯ IT ಸೆಲ್ ಮುಖ್ಯಸ್ಥರಾಗಿ ಮತ್ತು ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರ ಮತ್ತು ಡೇಟಾ ವಿಶ್ಲೇಷಣೆಯಲ್ಲಿ ಅವರು ತಮ್ಮ ಕೌಶಲ್ಯವನ್ನು ಬಳಸಿಕೊಂಡಿದ್ದಾರೆ. 'the print' ವರದಿಯ ಪ್ರಕಾರ, ಮ್ಹಸ್ಕೆ ಛತ್ತೀಸ್ಗಢದಲ್ಲಿ ಜಿಲ್ಲಾ ಮಟ್ಟದ ಫೇಸ್ಬುಕ್ ಖಾತೆಗಳನ್ನು ನಿರ್ವಹಿಸುವ ತಂತ್ರವನ್ನು ರೂಪಿಸಿದ್ದರು.

ಹೆಚ್ಚುವರಿಯಾಗಿ, ಮ್ಹಸ್ಕೆ ಅವರು ರಾಜ್ಯ ಸಚಿವ ದರ್ಜೆಯೊಂದಿಗೆ ಛತ್ತೀಸ್ಗಢ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ನ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

BJPಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದರೂ ಮ್ಹಸ್ಕೆ ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಅವರು ತಮ್ಮ ಕುಟುಂಬದ ಮೊದಲ ತಲೆಮಾರಿನ BJP ನಾಯಕರಾಗಿದ್ದರೆ, ಅವರ ಸಹೋದರ ತೇಜ್ ಪ್ರತಾಪ್ ಮ್ಹಸ್ಕೆ RSS ಜೊತೆ ಗುರುತಿಸಿಕೊಂಡಿದ್ದಾರೆ.

►ಮ್ಹಸ್ಕೆ ಮುಂದೆ ಇವೆ ದೊಡ್ಡ ಸವಾಲುಗಳು

ಅಮಿತ್ ಮಾಳವೀಯ ಅವರ ಜಾಗಕ್ಕೆ ಬರಲಿರುವ ಮ್ಹಸ್ಕೆ ಅವರಿಗೆ ಈಗ ರಾಷ್ಟ್ರೀಯ ಮಟ್ಟದಲ್ಲಿ BJPಯ ಸೋಷಿಯಲ್ ಮೀಡಿಯಾ ನಿರ್ವಹಿಸುವ ಜವಾಬ್ದಾರಿ ಸಿಕ್ಕಿದೆ. ಯುವಜನರನ್ನು BJPಯತ್ತ ಆಕರ್ಷಿಸುವುದು ಮತ್ತು ಅವರೊಂದಿಗೆ ಪಕ್ಷವನ್ನು ಜೋಡಿಸುವುದು ಮ್ಹಸ್ಕೆ ಅವರ ಮುಂದಿರುವ ಪ್ರಮುಖ ಸವಾಲಾಗಿದೆ.

ತಮ್ಮ ಹೆಸರು ಘೋಷಣೆಯಾದ ತಕ್ಷಣ, ಯುವಕರನ್ನು ಹೇಗೆ ತಲುಪುತ್ತೀರಿ ಎಂದು ಮ್ಹಸ್ಕೆ ಅವರನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, "ರೀಲ್ಸ್" ಮೂಲಕ ಸಂಪರ್ಕಿಸಲಾಗುವುದು, ಯುವಕರು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿದ್ದು, ಅದೇ ಮಾರ್ಗದಲ್ಲಿ ಪಕ್ಷವು ಅವರನ್ನು ತಲುಪಲು ಪ್ರಯತ್ನಿಸಲಿದೆ ಎಂದು ಹೇಳಿದರು.

ಚುನಾವಣೆ ಗೆಲ್ಲುವುದು ಮತ್ತು ಸಾರ್ವಜನಿಕ ಸೇವೆ ಮಾಡುವುದು ಪಕ್ಷದ ಆದ್ಯತೆಯಾಗಿದ್ದು, ತಮ್ಮ ತಂಡವು ಸೋಷಿಯಲ್ ಮೀಡಿಯಾವನ್ನು ಆ ಗುರಿಗಾಗಿ ಬಳಸಿಕೊಳ್ಳಲಿದೆ ಎಂದು ಅವರು ಹೇಳಿದರು. "BJPಯ ಆದ್ಯತೆಗಳು ಅತ್ಯಂತ ಸ್ಪಷ್ಟವಾಗಿವೆ. ಸಾರ್ವಜನಿಕ ಸೇವೆ ಮಾಡಲು ನಾವು ಚುನಾವಣೆಗಳನ್ನು ಗೆಲ್ಲಬೇಕು, ಮತ್ತು ನಮ್ಮ ಇಡೀ ತಂಡವು ಸೋಷಿಯಲ್ ಮೀಡಿಯಾ ಬಳಸಿ ಈ ನಿಟ್ಟಿನಲ್ಲಿ ಪೂರ್ಣಮನಸ್ಸಿನಿಂದ ಕೆಲಸ ಮಾಡುತ್ತದೆ. ಹಿಂದೆ ಬಂದಂತೆ ಮುಂದೆಯೂ ಸುಳ್ಳು ಪ್ರಚಾರಗಳು ಬರುತ್ತವೆ, ಆದರೆ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳು ಪ್ರಚಾರವು ಕ್ಷಣಿಕ ವಾತಾವರಣವನ್ನು ಸೃಷ್ಟಿಸಬಹುದೇ ಹೊರತು, ದೀರ್ಘಾವಧಿಯಲ್ಲಿ ನಾವು ಸರಿಯಾದ ಉತ್ತರಗಳನ್ನು ನೀಡುತ್ತಾ ಹೋದರೆ ಜನರ ಗೊಂದಲಗಳು ದೂರವಾಗುತ್ತವೆ. BJP ಖಂಡಿತವಾಗಿಯೂ ಅದೇ ಹಾದಿಯಲ್ಲಿ ಸಾಗಲಿದೆ" ಎಂದು ಅವರು ತಿಳಿಸಿದರು.

ತಮ್ಮ ಪೂರ್ವಾಧಿಕಾರಿ, ಆಕ್ರಮಣಕಾರಿ ಮಾಳವೀಯ ಅವರಿಗಿಂತ ಮ್ಹಸ್ಕೆ ಸೌಮ್ಯ ಸ್ವಭಾವದವರಂತೆ ಕಂಡರೂ, ಅವರನ್ನು ಬಲ್ಲವರು ಅವರು ತಕ್ಷಣದ ಸನ್ನಿವೇಶಕ್ಕೆ ಬೇಗ ಹೊಂದಿಕೊಳ್ಳಬಲ್ಲರು ಎಂದು ಹೇಳುತ್ತಾರೆ. ಉದಾಹರಣೆಗೆ, 2023ರ ಛತ್ತೀಸ್ಗಢ ವಿಧಾನಸಭೆ ಚುನಾವಣೆಯ ಸಮಯದಲ್ಲಿ, ಮ್ಹಸ್ಕೆ ಸೋಷಿಯಲ್ ಮೀಡಿಯಾದಲ್ಲಿ ಸೂಕ್ತ ಪೋಸ್ಟ್ಗಳು ಮತ್ತು ಚಿತ್ರಗಳ ಮೂಲಕ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ನಿರಂತರ ದಾಳಿ ನಡೆಸಿದ್ದರು.

►ಮ್ಹಸ್ಕೆ ಇನ್, ಮಾಳವೀಯ ಔಟ್

2015ರಿಂದ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದ ಅಮಿತ್ ಮಾಳವೀಯ ಅವರನ್ನು ರಾಷ್ಟ್ರೀಯ ಸೋಷಿಯಲ್ ಮೀಡಿಯಾ ಸಂಚಾಲಕ ಹುದ್ದೆಯಿಂದ BJP ಏಕಾಏಕಿ ಬದಲಾಯಿಸಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಹಿಂದೆ ಹಲವು ನಾಯಕರು ಬದಲಾಗಿದ್ದರೂ ಮಾಳವೀಯ ಈ ಹುದ್ದೆಯಲ್ಲಿ ಮುಂದುವರಿದಿದ್ದರು.

ಇದಕ್ಕೆ ಉತ್ತರ ಮಾಳವೀಯ ಅವರ ಆಕ್ರಮಣಕಾರಿ ಶೈಲಿಯಲ್ಲಿರಬಹುದು. BJPಯ ನಾಯಕರೊಬ್ಬರು 'ದಿ ಪ್ರಿಂಟ್'ಗೆ ತಿಳಿಸಿದಂತೆ, "ಎಲ್ಲಾ ಸಮಯದಲ್ಲೂ ಆಕ್ರಮಣಕಾರಿ ಶೈಲಿ ಕೆಲಸ ಮಾಡುವುದಿಲ್ಲ, ಸ್ವಲ್ಪ ತಾರ್ಕಿಕತೆಯೂ ಇರಬೇಕಾಗುತ್ತದೆ."

ಅಷ್ಟೇ ಅಲ್ಲದೆ, ಇತ್ತೀಚಿನ ಕೆಲವು ಘಟನೆಗಳ ವಿಚಾರದಲ್ಲಿ BJPಯ ಹಿರಿಯ ನಾಯಕರು ಮಾಳವೀಯ ಅವರ ಬಗ್ಗೆ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗಿದೆ. 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆ ಇವುಗಳಲ್ಲಿ ತೀರಾ ಇತ್ತೀಚಿನದ್ದು. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳ ಸಮಯದಲ್ಲಿ ಮಾಳವೀಯ ಅವರಿಗೆ Gen Z ಯುವಕರ ಗ್ರಹಿಕೆ ಕೊರತೆಯಿರುವುದು ಸ್ಪಷ್ಟವಾಗಿತ್ತು ಎಂದು ಪಕ್ಷದ ಹಲವು ನಾಯಕರು ಭಾವಿಸಿದ್ದಾರೆ.

BJPಯನ್ನು ಸಮರ್ಥಿಸಿಕೊಳ್ಳುವ ಬದಲು ಮಾಳವೀಯ ನಾಗರಿಕರನ್ನೇ ಟ್ರೋಲ್ ಮಾಡಲು ಮುಂದಾಗುತ್ತಾರೆ ಎಂಬ ಟೀಕೆಯೂ ಇದೆ. 2024ರ ಬಜೆಟ್ ಮಂಡನೆಯ ಸಮಯದಲ್ಲಿ RSS ಸಿದ್ಧಾಂತಿ ರತನ್ ಶಾರ್ದ ಇದನ್ನು ಎತ್ತಿ ತೋರಿಸಿದ್ದರು. ಆಸ್ತಿ ಮಾರಾಟದ ಮೇಲಿನ 'ಇಂಡೆಕ್ಸೇಶನ್' ಸೌಲಭ್ಯವನ್ನು ನಿರ್ಮಲಾ ಸೀತಾರಾಮನ್ ಹಿಂಪಡೆದ ನಂತರ, ಮಾಳವೀಯ ಎಕ್ಸ್ನಲ್ಲಿ "ಇಂದು ರಾತ್ರಿ ಪ್ರತಿಯೊಬ್ಬರೂ ಇಂಡೆಕ್ಸೇಶನ್ ತಜ್ಞರಾಗಿದ್ದಾರೆ" ಎಂದು ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಶಾರ್ದ, "#BJP IT Cell ನ ಈ ಧೋರಣೆ ಗಂಭೀರ ಸಮಸ್ಯೆಯಾಗಿದೆ. #Budget2024 ರ ಒಳ್ಳೆಯ ಅಂಶಗಳ ಬಗ್ಗೆ ಸರಳವಾದ ಸಂವಹನ ನಡೆಸುವ ಬದಲು, ಅವರು ನಾಗರಿಕರನ್ನೇ ಟ್ರೋಲ್ ಮಾಡಲು ಹೊರಟಿದ್ದಾರೆ. ಡಿಯರ್ ಅಮಿತ್ ಮಾಳವೀಯ, ಜನರ ಆತಂಕಕ್ಕೆ ಉತ್ತರಿಸಿ, ಅವರನ್ನು ಅವಮಾನಿಸಬೇಡಿ" ಎಂದು ಹೇಳಿದ್ದರು.

ಮುಂದಿನ ದಿನಗಳಲ್ಲಿ ಮ್ಹಸ್ಕೆ ನೇತೃತ್ವದಲ್ಲಿ BJPಯ ಸೋಷಿಯಲ್ ಮೀಡಿಯಾ ಕಾರ್ಯಾಚರಣೆಗಳು ಹೇಗೆ ಬದಲಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

Source: Firstpost.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News