ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ; ಅಟಲ್ ಯೋಜನೆಯನ್ನು ವಿಸ್ತರಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ | Photo Credit : freepik
ಯೋಜನೆಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ಹೊಂದಿರಬೇಕು.
ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರ 2030-31ರವರೆಗೆ ವಿಸ್ತರಿಸಿದೆ. ಈ ಯೋಜನೆ 18ರಿಂದ 40 ವರ್ಷ ವಯಸ್ಸಿನವರಿಗೆ ಲಭ್ಯವಿದೆ. ಈ ಯೋಜನೆಯಲ್ಲಿ 60 ವರ್ಷದ ನಂತರ ತಿಂಗಳಿಗೆ 1000 ರೂ ದಿಂದ 5000 ರೂ.ವರೆಗೆ ಪಿಂಚಣಿ ಖಚಿತ. ಈ ಯೋಜನೆಯಡಿ 8.99 ಕೋಟಿಗೂ ಹೆಚ್ಚು ಜನ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿ ಕುಟುಂಬಕ್ಕೂ ಆರ್ಥಿಕ ಭದ್ರತೆ ಸಿಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
ಯೋಜನೆಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು.ಅರ್ಜಿದಾರರು ಯಾವುದೇ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಕಡ್ಡಾಯವಾಗಿ ಉಳಿತಾಯ ಖಾತೆಯನ್ನು ಹೊಂದಿರಬೇಕು. 2022 ಅಕ್ಟೋಬರ್ 1ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಭಾರತೀಯ ನಾಗರಿಕರು ಈ ಯೋಜನೆಗೆ ಹೊಸದಾಗಿ ಸೇರಲು ಅರ್ಹರಾಗಿರುವುದಿಲ್ಲ. ಒಂದು ವೇಳೆ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ 2022 ಅಕ್ಟೋಬರ್ 1 ರ ನಂತರ ಸೇರಿದ್ದು ಕಂಡುಬಂದಲ್ಲಿ, ಅವರ ಖಾತೆಯನ್ನು ಮುಚ್ಚಿ ಅಲ್ಲಿಯವರೆಗೆ ಸಂಗ್ರಹವಾದ ಮೊತ್ತವನ್ನು ಮರುಪಾವತಿಸಲಾಗುತ್ತದೆ.
ಕುಟುಂಬಕ್ಕೆ ಆರ್ಥಿಕ ಭದ್ರತೆ
ಈ ಯೋಜನೆಯ ಅಡಿಯಲ್ಲಿ ಚಂದಾದಾರರು ಮರಣ ಹೊಂದಿದ ಪಕ್ಷದಲ್ಲಿ, ಅವರ ಪತಿ ಅಥವಾ ಪತ್ನಿ (ಸಂಗಾತಿ) ಜೀವಿತಾವಧಿಯವರೆಗೆ ಅದೇ ಮೊತ್ತದ ಪಿಂಚಣಿಯನ್ನು ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಚಂದಾದಾರ ಮತ್ತು ಅವರ ಸಂಗಾತಿ ಇಬ್ಬರೂ ಮರಣ ಹೊಂದಿದರೆ, ಯೋಜನೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಅವರ ವಾರಸುದಾರರಿಗೆ ಅಥವಾ ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ. ಈ ವ್ಯವಸ್ಥೆಯು ಚಂದಾದಾರರ ನಿವೃತ್ತಿಯ ನಂತರ ಕೇವಲ ಅವರಿಗೆ ಮಾತ್ರವಲ್ಲದೆ, ಅವರ ಅನುಪಸ್ಥಿತಿಯಲ್ಲಿ ಕುಟುಂಬಕ್ಕೂ ಸುಸ್ಥಿರವಾದ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುತ್ತದೆ.
ಹೂಡಿಕೆ ಮತ್ತು ಪಿಂಚಣಿಯ ಮೊತ್ತ ಎಷ್ಟು?
ಒಬ್ಬ ವ್ಯಕ್ತಿಯು ತನ್ನ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿ ಪ್ರತಿ ತಿಂಗಳು 210 ರೂ. ಪಾವತಿಸುತ್ತಾ ಬಂದರೆ, ಅವರು 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ ಪಡೆಯಬಹುದು. ಈ ಹೂಡಿಕೆಯ ಮೂಲಕ ಸುಮಾರು 8.5 ಲಕ್ಷ ರೂ.ದಷ್ಟು ದೊಡ್ಡ ಮೊತ್ತದ ನಿಧಿಯನ್ನು ವೃದ್ಧಾಪ್ಯದ ಭದ್ರತೆಗಾಗಿ ಸೃಷ್ಟಿಸಲು ಸಾಧ್ಯವಿದೆ. ಒಂದು ವೇಳೆ ಚಂದಾದಾರರು ಪ್ರತಿ ತಿಂಗಳು 1,000 ರೂ. ಪಿಂಚಣಿ ಯೋಜನೆಯನ್ನು ಆರಿಸಿಕೊಂಡರೆ, ಅವರ ಮರಣದ ನಂತರ ಸಂಗಾತಿಗೆ 1,000 ರೂ. ಪಿಂಚಣಿ ಸಿಗುತ್ತದೆ ಮತ್ತು ಇಬ್ಬರ ಮರಣದ ನಂತರ ನಾಮನಿರ್ದೇಶಿತರಿಗೆ ಸುಮಾರು 1.7 ರೂ. ಲಕ್ಷ ಮೊತ್ತ ಹಿಂತಿರುಗಿಸಲಾಗುತ್ತದೆ. ಅದೇ ರೀತಿ, 5,000 ರೂ. ಪಿಂಚಣಿ ಯೋಜನೆಯಲ್ಲಿ ಚಂದಾದಾರರ ಮರಣದ ನಂತರ ಸಂಗಾತಿಗೆ 5,000 ರೂ. ಪಿಂಚಣಿ ಲಭ್ಯವಿದ್ದು, ಅಂತಿಮವಾಗಿ ನಾಮನಿರ್ದೇಶಿತರಿಗೆ ಅಂದಾಜು 8.5 ಲಕ್ಷ ರೂ.ದಷ್ಟು ದೊಡ್ಡ ಮೊತ್ತ ಸಿಗುತ್ತದೆ. ಈ ಯೋಜನೆಯು ಚಂದಾದಾರರು ಆಯ್ಕೆ ಮಾಡುವ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಅವರ ಕುಟುಂಬಕ್ಕೆ ಮತ್ತು ನಾಮನಿರ್ದೇಶಿತರಿಗೆ ಭರವಸೆಯ ಆರ್ಥಿಕ ನೆರವನ್ನು ಖಚಿತಪಡಿಸುತ್ತದೆ.
ಯೋಜನೆಗೆ ಸೇರುವುದು ಹೇಗೆ?
ಅಟಲ್ ಪಿಂಚಣಿ ಯೋಜನೆಗೆ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), HDFC, ICICI ನಂತಹ ಪ್ರಮುಖ ಬ್ಯಾಂಕುಗಳ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಆಪ್ಗಳ ಮೂಲಕ ನೀವು ನೇರವಾಗಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಮೊದಲು ನಿಮ್ಮ ಬ್ಯಾಂಕಿನ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ಗೆ ಲಾಗಿನ್ ಆಗಿ, ಅಲ್ಲಿರುವ "Social Security Schemes" ಅಥವಾ "Services" ವಿಭಾಗದಲ್ಲಿ 'Atal Pension Yojana' ಎಂಬ ಆಯ್ಕೆಯನ್ನು ಹುಡುಕಿ. ನಂತರ, ಯೋಜನೆಗೆ ಲಿಂಕ್ ಮಾಡಬೇಕಾದ ನಿಮ್ಮ ಉಳಿತಾಯ ಖಾತೆಯನ್ನು ಆರಿಸಿ ಮತ್ತು ನಿಮಗೆ ಬೇಕಾದ ಪಿಂಚಣಿ ಮೊತ್ತವನ್ನು ( 1,000 ರಿಂದ ರೂ. 5,000 ರೂ.) ಹಾಗೂ ವಂತಿಗೆ ಪಾವತಿಸುವ ಅವಧಿಯನ್ನು (ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ) ಆಯ್ಕೆ ಮಾಡಿ. ಅರ್ಜಿಯಲ್ಲಿ ನಿಮ್ಮ ನಾಮನಿರ್ದೇಶಿತರ (ವಾರಸುದಾರರ) ವಿವರಗಳನ್ನು ಭರ್ತಿ ಮಾಡಿ; ಸಾಮಾನ್ಯವಾಗಿ ಸಂಗಾತಿಯು ಮೊದಲ ನಾಮನಿರ್ದೇಶಿತರಾಗಿರುತ್ತಾರೆ. ಅಂತಿಮವಾಗಿ, ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಅಟಲ್ ಪಿಂಚಣಿ ಯೋಜನೆಯ ವಿಸ್ತರಣೆಯ ಪ್ರಮುಖ ಅಂಶಗಳು
ಕೇಂದ್ರ ಸರ್ಕಾರವು ಈ ಯೋಜನೆಯನ್ನು ಮುಂದಿನ 5 ವರ್ಷಗಳ ಕಾಲ, ಅಂದರೆ ಆರ್ಥಿಕ ವರ್ಷ 2030-31ರವರೆಗೆ ಮುಂದುವರಿಸಲು ನಿರ್ಧರಿಸಿದೆ. ಯೋಜನೆಯ ವಿಸ್ತರಣೆಯ ಜೊತೆಗೆ, ಆಡಳಿತಾತ್ಮಕ ವೆಚ್ಚಗಳು, ಜಾಗೃತಿ ಅಭಿಯಾನಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಭರಿಸಲು ಸರ್ಕಾರ ಹಣಕಾಸಿನ ನೆರವನ್ನು ನೀಡಲಿದೆ. ಇದು ಹಳ್ಳಿಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಸಹಕಾರಿಯಾಗಲಿದೆ. ಯೋಜನೆಯ ಅಡಿಯಲ್ಲಿ ಚಂದಾದಾರರು ತಮ್ಮ 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 1,000 ರೂ. ರಿಂದ 5,000 ರೂ. ವರೆಗೆ ಗ್ಯಾರಂಟಿ ಪಿಂಚಣಿಯನ್ನು ಪಡೆಯುತ್ತಾರೆ. ಇದು ಚಂದಾದಾರರು ಆಯ್ದುಕೊಳ್ಳುವ ಪಿಂಚಣಿ ಸ್ಲ್ಯಾಬ್ ಮತ್ತು ಅವರು ನೀಡುವ ಕೊಡುಗೆಯ ಮೇಲೆ ಅವಲಂಬಿತವಾಗಿರುತ್ತದೆ.
ಅಟಲ್ ಪಿಂಚಣಿಗೆ 8.66 ಕೋಟಿ ಚಂದಾದಾರರ ಸೇರ್ಪಡೆ
ಅಟಲ್ ಪಿಂಚಣಿ ಯೋಜನೆಯು ಕಳೆದ ಕೆಲವು ವರ್ಷಗಳಲ್ಲಿ ಅಪಾರ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದ್ದು, ಅಧಿಕೃತ ಅಂಕಿಅಂಶಗಳ ಪ್ರಕಾರ 2026ರ ಜನವರಿ 19ರ ವೇಳೆಗೆ ದೇಶಾದ್ಯಂತ ಸುಮಾರು 8.66 ಕೋಟಿಗೂ ಹೆಚ್ಚು ಚಂದಾದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.